ನೋ ಮೋರ್ ಬಿಎಂಟಿಸಿ ಎಂದ ತೇಜಸ್ವಿ ಸೂರ್ಯ,ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ತಿರುಗೇಟು
- by Suddi Team
- October 14, 2025
- 6 Views

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ,ಉದ್ಯಮಿ ಮೋಹನ್ ದಾಸ್ ಪೈ, ನೋ ಮೋರ್ ಬಿಎಂಟಿಸಿ ಹಾಗೂ ನೋ ಮೋರ್ ಮೊನೋಪೊಲಿ ಎಂದು ಹೇಳಿಕೊಂಡಿರುವುದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸಾರಿಗೆಯಲ್ಲಿ ಒಂದು ದಿನವೂ ಓಡಾಡದೇ, ಅದರ ಅನುಭವವೂ ಪಡೆಯದೆ, ಸಮಾಜದ ಎಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ನೀಡುವವರು ನಾವೇ ಎಂದುಕೊಂಡಿದ್ದಾರೆ ಹಾಗಾಗಿಯೇ ಸಾರ್ವಜನಿಕ ಸಾರಿಗೆ ಮುಚ್ಚಿ ಎನ್ನುವ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ತೇಜಸ್ವಿ ಸೂರ್ಯ ಮತ್ತು ಮೋಹನ್ ದಾಸ್ ಪ್ರೈ ರವರು ಖಾಸಗಿ ಕಂಪನಿಯಾದ ‘MovelnSync” ರವರು ( ಖಾಸಗಿ ಕಂಪನಿಯಾದ “Moveinsync” ರವರು ಕಾರ್ಖಾನೆ/ ಕಂಪನಿಗಳಿಗೆ ಬಾಡಿಗೆ ಆಧಾರದ ಮೇಲೆ ಕಾರು/ಶಟಲ್ ಬಸ್ಸುಗಳನ್ನು ಹಾಗೂ ಇತರೆ ಸಾರಿಗೆ ಸಂಬಂಧ ವ್ಯವಸ್ಥೆಗಳನ್ನು ಮಾಡಿಕೊಡುವ ಕಂಪನಿಯಾಗಿದೆ. ಇವರಿಗೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇರುವುದಿಲ್ಲ) ಖಾಸಗಿ ಕಂಪನಿಯಾದ “MovelnSync” ರವರ ಹಿಂದೆ ಇರುವ ಕಾಣದ ಕೈಗಳು ಯಾವುದು ಎನ್ನುವುದು ಗೊತ್ತಿಲ್ಲ. ಖಾಸಗಿ ಕಂಪನಿ ಆಯೋಜಿಸಿದ್ದ ಸಿಂಪೋಸಿಯಮ್ ನಲ್ಲಿ ಬಿಎಂಟಿಸಿ ಬಗ್ಗೆ, :No more BMTC”, “No more Monopoly” ಎಂದು ಭಾಷಣ ಬಿಗಿಯುವುದು ನಾಚಿಕೆಗೇಡು, ಸಾರಿಗೆ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಸಂಸ್ಥೆಗಳು ಆಯೋಜಿಸಿರುವ ಸಮ್ಮೇಳನಗಳಲ್ಲಿ ಮಾತನಾಡಿದರೆ ಎರಡೂ ಕಡೆಯಿಂದ ಸಮರ್ಪಕವಾದ ಮಾಹಿತಿ ದೊರಕುತ್ತದೆ. ಖಾಸಗಿಯವರ ಕಾರ್ಯಕ್ರಮದಲ್ಲಿ ಮಾತನಾಡಿದರೆ ಅವರು ಸರ್ಕಾರಿ ವ್ಯವಸ್ಥೆಯನ್ನು ದೂಷಿಸುವ ಪ್ರವೃತ್ತಿಯನ್ನೇ ಹೊಂದಿದ್ದು ಸಹಜವಾಗಿ ನಕಾರಾತ್ಮಕವಾಗಿಯೇ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.
ಸಂಸದ ತೇಜಸ್ವಿ ಸೂರ್ಯ ಮತ್ತು ಮೋಹನ್ ದಾಸ್ ಪೈ ಮಾತುಗಳಿಂದ ಉಳ್ಳವರು ಯಾವಾಗಲೂ ದೀನದಲಿತರು, ದುರ್ಬಲರು, ಅಸಹಾಯಕರ ಮೇಲೆ ಅಸಹನೆ, ಅಹಂಕಾರ, ದರ್ಪ ತೋರಿಸುತ್ತಾರೆ ಎಂಬುದು ಜಗಜ್ಜಾಹೀರಾಗಿದೆ. ಖಾಸಗಿಯವರು ಬಸ್ಸುಗಳ ಕಾರ್ಯಾಚರಣೆಯನ್ನು ಸೇವೆಯಾಗಿ ಪರಿಗಣಿಸುವುದಿಲ್ಲ. ವ್ಯಾಪಾರ/ವ್ಯವಹಾರವಾಗಿ ನೋಡುತ್ತಾರೆ. ಯಾವ ಮಾರ್ಗದಲ್ಲಿ ಲಾಭ ಬರುತ್ತದೆಯೋ ಅಲ್ಲಿ ಮಾತ್ರ ಬಸ್ಸುಗಳ ಕಾರ್ಯಾಚರಣೆ ಮಾಡುತ್ತಾರೆ, ಆದರೆ ಜಗತ್ತಿನ ಯಾವುದೇ ಸಾರ್ವಜನಿಕ ಸಾರಿಗೆಯು ಲಾಭದ ದೃಷ್ಟಿಯಿಂದ ನಡೆಸುತ್ತಿಲ್ಲ. ಸರ್ಕಾರದಿಂದ ಸಾರ್ವಜನಿಕ ಸಾರಿಗೆಗೆ ದೊರಕುವ ಪ್ರೋತ್ಸಾಹ ಹಾಗೂ ಸೌಲಭ್ಯಗಳಿಂದ ಸಾರ್ವಜನಿಕರಿಗೆ ನೀಡುವ ಸೇವೆಯೆಂದು ಪರಿಗಣಿಸುತ್ತಾರೆ ಎಂದು ವಿವರಣೆ ನೀಡಿದರು.
Beyond Free Rides ಎಂಬ ಹೆಸರಿನಲ್ಲಿ Sustainable Mobility Network ನವರು ದೇಶದ 10 ನಗರಗಳಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಬಗ್ಗೆ ನಡೆಸಿರುವ ಅಧ್ಯಯನದ ವರದಿಯು ಬೆಂಗಳೂರಿನಲ್ಲಿ 23% ಮತ್ತು ಹುಬ್ಬಳ್ಳಿ ಧಾರವಾಡದಲ್ಲಿ 21% ಮಹಿಳಾ ಉದ್ಯೋಗಿಗಳ ಸಂಖ್ಯೆಯು ಶಕ್ತಿ ಯೋಜನೆಯಿಂದ ಹೆಚ್ಚಳವಾಗಿದೆಯೆಂದು ತಿಳಿಸಿದೆ. ಮತ್ತೊಂದು ವರದಿಯು ಶೇ.19 ಸ್ತ್ರೀಯರು ಮನೆಯಿಂದ ಹೊರಹೋಗಿ ಕೆಲಸ ಮಾಡಲು ಆರಂಭಿಸಿದ್ದಾರೆ ಎಂದು ತಿಳಿಸಿದೆ. ಇದರಿಂದ ರಾಜ್ಯದ ತಲಾ ಆದಾಯವು ಹೆಚ್ಚಳವಾಗಲು ಕಾರಣವಾಗಿದೆ ಎಂದರು.
ಶೂನ್ಯ ಅಭಿವೃದ್ಧಿ ಶೂರರಾದ ಬಿ.ಜೆ.ಪಿ ಯವರು ಅವರನ್ನು ಬೆಂಬಲಿಸುತ್ತಿರುವವರು ಟ್ವೀಟ್ ಮಾಡುವುದು, ಖಾಸಗಿ ಸಮ್ಮೇಳನಗಳಲ್ಲಿ ಮಾತನಾಡುವುದು ಬಿಟ್ಟರೆ ಇವರ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಯಾವ ಅಭಿವೃದ್ಧಿ ಕಾರ್ಯ ಮಾಡಿದೆ ನೋಡೋಣ. ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಂದು ಈಗ ಮುಚ್ಚಿಬಿಡಿ ಎಂದು ತಾನೆ ಅವರು ಹೇಳಬೇಕು? ಸಾರಿಗೆ ಸಂಸ್ಥೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಕುಟುಂಬದವರನ್ನು ಬೀದಿ ಪಾಲು ಮಾಡುವ ಮನಸ್ಥಿತಿಗೆ ಧಿಕ್ಕಾರವಿರಲಿ ಎಂದು ಹರಿಹಾಯ್ದರು.
ಕಳೆದ 2 ವರ್ಷ 5 ತಿಂಗಳಿನಲ್ಲಿ ನಮ್ಮ ಸರ್ಕಾರ ಶೂನ್ಯ ನೇಮಕಾತಿಯಿಂದ 10000 ನೇಮಕಾತಿ, ಶೂನ್ಯ ಬಸ್ಸುಗಳ ಸೇರ್ಪಡೆಯಿಂದ – 5800 ಹೊಸ ಬಸ್ಸುಗಳ ಸೇರ್ಪಡೆ, ಹೊಸ ಘಟಕ/ ಬಸ್ ನಿಲ್ದಾಣಗಳ ನಿರ್ಮಾಣ, ಹತ್ತು ಹಲವು ಕಾರ್ಮಿಕ ಕಲ್ಯಾಣ ಯೋಜನೆಗಳು -ರೂ.1 ಕೋಟಿ ಅಪಘಾತ ವಿಮೆ. ನಗದು ರಹಿತ ವೈದ್ಯಕೀಯ ಸೌಲಭ್ಯ, ಜಾರಿ ಮಾಡಿದೆ ಎಂದರು.
ದೇಶದ ಸಾರಿಗೆ ವ್ಯವಸ್ಥೆಯನ್ನು ಅವಲೋಕಿಸಿದರೆ, ನಮ್ಮ ರಾಜ್ಯವೇ ಸಾರಿಗೆ ಸೇವೆಯಲ್ಲಿ ಅತ್ಯುತ್ತಮವಾಗಿದೆ. ದೇಶದ ಸರಾಸರಿಯೇ 1000 ಜನರಿಗೆ 1.2 ಬಸ್ಸುಗಳಿವೆ. ಬಿ.ಜೆ.ಪಿ ಆಡಳಿತ ವಿರುವ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಗುಜರಾತ್, ರಾಜಸ್ಥಾನ, ಒಡಿಶಾಗಳಲ್ಲಿ ಪ್ರತಿ ಸಾವಿರ ಜನರಿಗೆ ಲಭ್ಯವಿರುವ ಬಸ್ಸುಗಳ ಸಂಖ್ಯೆ ಕಡಿಮೆಯಿದೆ. ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಮತ್ತು ಮೋಹನ್ ದಾಸ್ ಪೈರವರುಗಳೇ, ಈ ಮೇಲ್ಕಂಡ ರಾಜ್ಯಗಳಲ್ಲಿ ಸಾರಿಗೆ ವ್ಯವಸ್ಥೆ ಬಲಪಡಿಸಲು ದೇಶದ ಪ್ರಧಾನ ಮಂತ್ರಿಗಳಿಗೆ ಸಲಹೆ ನೀಡಿ, ಸುಧಾರಣೆ ತನ್ನಿ ಎಂದು ಕುಟುಕಿದರು.
ತೇಜಸ್ವಿ ಸೂರ್ಯ ಮತ್ತು ಮೋಹನ್ ದಾಸ್ ಪೈ ರವರ ನಡೆ, ಮನೆಗೆ ಮಾರಿ – ಊರಿಗೆ ಉಪಕಾರಿ ಎಂಬಂತಿದೆ. ಎಲ್ಲರ ಮನೆಗಿಂತಲೂ ತಮ್ಮ ಮನೆ ಚೆನ್ನಾಗಿದೆ ಅದನ್ನು ಮನಗಾಣುವ ಬದಲು ದೂಷಿಸುವ ಪರಿಪಾಠ ಮಾರಕವಾದದ್ದು.ಒಂದು ಬೃಹತ್ ನಗರದ ಸರ್ವತೋಮುಖ ಬೆಳವಣಿಗೆಗೆ ಸಾರಿಗೆ ಮಹತ್ವದ ಪಾತ್ರ ವಹಿಸುತ್ತದೆ. ಜನರ ಸುಗಮ ಸಂಚಾರಕ್ಕಾಗಿ ವಿವಿಧ ಮಾದರಿಯ ಸಾರಿಗೆಗಳು ಅವಶ್ಯಕವೇ ಬಸ್ಸು, ಮೆಟ್ರೋ ಆಟೋ, ಟ್ಯಾಕ್ಸಿ, ಉಪನಗರ ರೈಲು ಎಲ್ಲಾ ಬೇಕು. ಆದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಮುಚ್ಚಿ ಬಿಡಬೇಕು ಎನ್ನುವುದು ಆಘಾತಕಾರಿ, ಅಪಾಯಕಾರಿ ಹಾಗೂ ವಿನಾಶಕಾರಿಯಾದ ಚಿಂತನೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ . No More Buses, More and More Buses ಅನ್ನಬೇಕು ಎಂದರು.
Related Articles
Thank you for your comment. It is awaiting moderation.
Comments (0)