ಕೆಎಸ್ಆರ್‌ಟಿಸಿ ನೌಕರರಿಗೆ ರಿಲೀಫ್: ಶಿಸ್ತು ಕ್ರಮದ ತೀವ್ರತೆ ಕಡಿತ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನೌಕರರಿಗೆ ನಿಗಮವು ದೊಡ್ಡ ಮಟ್ಟದ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. 2025ರ ಆಗಸ್ಟ್ 5 ರಂದು ನಡೆದಿದ್ದ ಮುಷ್ಕರದ ಸಂದರ್ಭದಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಹೂಡಲಾಗಿದ್ದ ಶಿಸ್ತು ಪ್ರಕರಣಗಳ ತೀವ್ರತೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ.

ಏನಿದು ಬದಲಾವಣೆ?

ಮುಷ್ಕರದ ದಿನದಂದು ಗೈರಾದ ನೌಕರರ ಮೇಲೆ ಈ ಹಿಂದೆ ನಿಯಮ-23ರ ಅಡಿಯಲ್ಲಿ (ಪ್ರಮುಖ ದಂಡನೆ/Major Penalty) ಆಪಾದನಾ ಪಟ್ಟಿಗಳನ್ನು ನೀಡಲಾಗಿತ್ತು. ಈಗ ನೌಕರರ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಇವುಗಳನ್ನು ನಿಯಮ-22ಕ್ಕೆ (ಲಘು ದಂಡನೆ/Minor Penalty) ಮಾರ್ಪಡಿಸುವಂತೆ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ತಕ್ಷಣದ ಜಾರಿ:

ಈ ಬದಲಾವಣೆಯ ಬಗ್ಗೆ ಕೂಡಲೇ ಎಲ್ಲಾ ವಿಭಾಗೀಯ ಕಚೇರಿಗಳು ‘ತಿದ್ದುಪಡಿ ಆದೇಶ’ (Corrigendum) ಹೊರಡಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಈ ಬಗ್ಗೆ ತೆಗೆದುಕೊಂಡ ಕ್ರಮಗಳ ಕುರಿತು ಕೇಂದ್ರ ಕಚೇರಿಗೆ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮತ್ತು ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.

ಈ ನಿರ್ಧಾರದಿಂದಾಗಿ ಮುಷ್ಕರದಲ್ಲಿ ಭಾಗವಹಿಸಿದ್ದ ಸಾವಿರಾರು ನೌಕರರ ಮೇಲಿನ ಕಠಿಣ ಕಾನೂನು ಕ್ರಮದ ಭೀತಿ ದೂರಾದಂತಾಗಿದೆ.

 

Related Articles

Comments (0)

Leave a Comment