ಕೆಎಸ್‌ಆರ್‌ಟಿಸಿಯ ‘ಧ್ವನಿ ಸ್ಪಂದನ’ಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ: ನವದೆಹಲಿಯಲ್ಲಿ ‘ಗವರ್ನೆನ್ಸ್ ನೌ’ ಗೌರವ

ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ನವೀನ ಉಪಕ್ರಮವಾದ ‘ಧ್ವನಿ ಸ್ಪಂದನ’ ಯೋಜನೆಗೆ ರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದೆ. ನವದೆಹಲಿಯಲ್ಲಿ ನಡೆದ ‘ಗವರ್ನೆನ್ಸ್ ನೌ’ 12ನೇ ಪಿಎಸ್‌ಯು ಪ್ರಶಸ್ತಿ ಸಮಾರಂಭದಲ್ಲಿ ‘ಎಕ್ಸಲೆನ್ಸ್ ಇನ್ ಇನ್ನೋವೇಶನ್’ (Excellence In Innovation) ವಿಭಾಗದಲ್ಲಿ ನಿಗಮಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ನವದೆಹಲಿಯ ಹೋಟೆಲ್ ಎರೋಸ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೆಎಸ್‌ಆರ್‌ಟಿಸಿ ನಿರ್ದೇಶಕಿ (ಸಿ ಮತ್ತು ಜಾ) ಗಾಯಿತ್ರಿ ಕೆ.ಎಂ. ಅವರು ವ್ಯವಸ್ಥಾಪಕ ನಿರ್ದೇಶಕ ಕೈಲಾಶ್ ಅಧಿಕಾರಿ ಹಾಗೂ ಅಮಿತ್ ಸಾದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ನಿಗಮದ ಈ ಸಾಧನೆಗೆ ಸಾರಿಗೆ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಮೈಸೂರು ನಗರ ಸಾರಿಗೆಯ ಸುಮಾರು 200 ಬಸ್‌ಗಳಲ್ಲಿ ‘ಧ್ವನಿ ಸ್ಪಂದನ’ ಎಂಬ ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಅನ್ನು ಜರ್ಮನಿಯ ‘ಜಿಐಝಡ್’ (GiZ) ಸಂಸ್ಥೆಯ ಸಹಯೋಗದೊಂದಿಗೆ ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಈ ತಂತ್ರಜ್ಞಾನವು ವಿಶೇಷವಾಗಿ ದೃಷ್ಟಿ ವಿಕಲಚೇತನ ಪ್ರಯಾಣಿಕರಿಗೆ ಬಸ್‌ಗಳ ಗುರುತಿಸುವಿಕೆ ಮತ್ತು ಪ್ರಯಾಣದ ಹಾದಿಯನ್ನು ಸುಲಭಗೊಳಿಸಿದೆ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಮತ್ತು ಸಂಚಾರದ ಸ್ವಾತಂತ್ರ್ಯ ಹೆಚ್ಚಿರುವುದು ಈ ಪ್ರಶಸ್ತಿಗೆ ಪ್ರಮುಖ ಕಾರಣವಾಗಿದೆ.

 

Related Articles

Comments (0)

Leave a Comment