ರಸ್ತೆ ಸಾರಿಗೆ ಲೋಕದ ಶಿಸ್ತಿನ ಸಿಪಾಯಿ ‘ಕೆಎಸ್‌ಆರ್‌ಟಿಸಿ’ ಮುಡಿಗೆ ‘ವಿಶ್ವ ತರಬೇತಿ’ ಗರಿ!

ಕೊಚ್ಚಿನ್ / ಬೆಂಗಳೂರು: ರಸ್ತೆಯಲ್ಲಿ ಕೆಂಪು ಬಸ್ಸನ್ನು ಕಂಡಾಗ ನಮಗೆ ನೆನಪಾಗುವುದು ಪ್ರಯಾಣಿಕರ ಸುರಕ್ಷತೆ. ಆದರೆ, ಆ ಸುರಕ್ಷತೆಯ ಹಿಂದೆ ಸಾವಿರಾರು ಕೈಗಳ ಕಠಿಣ ತರಬೇತಿ ಮತ್ತು ಶಿಸ್ತಿನ ಕಥೆಯಿದೆ. ಇಂದು ಆ ಶ್ರಮಕ್ಕೆ ಅಂತರಾಷ್ಟ್ರೀಯ ಮಟ್ಟದ ಮಾನ್ಯತೆ ಸಿಕ್ಕಿದೆ. ಕೇರಳದ ಕೊಚ್ಚಿನ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಪ್ರತಿಷ್ಠಿತ ‘World HRD Congress-2026’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ತರಬೇತಿಯೇ ಯಶಸ್ಸಿನ ಮಂತ್ರ:

ಸಾರಿಗೆ ಸಂಸ್ಥೆಯು ಕೇವಲ ಬಸ್ ಓಡಿಸುವುದಕ್ಕೆ ಸೀಮಿತವಾಗದೆ, ತನ್ನ ಸಿಬ್ಬಂದಿಯನ್ನು ವೃತ್ತಿಪರರನ್ನಾಗಿ ರೂಪಿಸುವಲ್ಲಿ ತೋರಿದ ಬದ್ಧತೆ ಈ ಪ್ರಶಸ್ತಿಗೆ ಕಾರಣ. ಕಳೆದ ಆರು ತಿಂಗಳಲ್ಲಿ ಬರೋಬ್ಬರಿ 12,000ಕ್ಕೂ ಹೆಚ್ಚು ಸಿಬ್ಬಂದಿಗಳು ತರಬೇತಿ ಕೇಂದ್ರಗಳಲ್ಲಿ ಪಳಗಿದ್ದಾರೆ. ಇಂಧನ ಉಳಿತಾಯದ ಪಾಠದಿಂದ ಹಿಡಿದು, ಅಪಘಾತಗಳನ್ನು ತಡೆಯುವ ‘ಸಿಮ್ಯುಲೇಟರ್’ ತರಬೇತಿಯವರೆಗೆ ಕೆಎಸ್‌ಆರ್‌ಟಿಸಿ ತೋರಿದ ‘ಹೈಟೆಕ್’ ಸ್ಪರ್ಶ ಇಂದು ವಿಶ್ವದ ಗಮನ ಸೆಳೆದಿದೆ.

ಸಾಮಾಜಿಕ ಕಳಕಳಿಯ ಪಥ:

ಈ ಯಶಸ್ಸಿನ ಕಥೆಯಲ್ಲಿ ಸಾಮಾಜಿಕ ನ್ಯಾಯದ ಎಳೆಯೂ ಇದೆ. ಪಿ.ಎಂ.ಅಜಯ್ ಯೋಜನೆ ಮತ್ತು ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದೊಂದಿಗೆ, ಸಮಾಜದ ಹಿಂದುಳಿದ ವರ್ಗದ ಯುವಕರಿಗೆ ಉಚಿತವಾಗಿ ಭಾರಿ ವಾಹನ ಚಾಲನಾ ತರಬೇತಿ ನೀಡಿ, ಅವರಿಗೆ ಬದುಕಿನ ಹಾದಿ ತೋರಿಸಿಕೊಟ್ಟ ಹೆಮ್ಮೆ ನಿಗಮಕ್ಕಿದೆ.

ಕೊಚ್ಚಿನ್‌ನ ವೇದಿಕೆಯಲ್ಲಿ ಕ್ಯಾಪ್ಟನ್ ಎಸ್.ಟಿ. ಶ್ರೀಧರನ್ ಅವರು ನೀಡಿದ ಈ ಪ್ರಶಸ್ತಿಯನ್ನು ನಿಗಮದ ಪರವಾಗಿ ಮಂಡಳಿ ಕಾರ್ಯದರ್ಶಿ ಡಾ.ಲತಾ ಟಿ. ಎಸ್. ಹಾಗೂ ಪ್ರಾಂಶುಪಾಲೆ ಎ. ಎಸ್. ಗೀತಾಂಜಲಿ ಸ್ವೀಕರಿಸಿದರು.

ಬಸ್ ಚಕ್ರಗಳಷ್ಟೇ ಅಲ್ಲ, ಸಿಬ್ಬಂದಿಯ ಕೌಶಲ್ಯವೂ ನಿರಂತರವಾಗಿ ಚಲನಶೀಲವಾಗಿರಬೇಕು ಎಂಬ ಕೆಎಸ್‌ಆರ್‌ಟಿಸಿಯ ಆಶಯಕ್ಕೆ ಈಗ ಜಾಗತಿಕ ಮುದ್ರೆ ಬಿದ್ದಿದೆ.

Related Articles

Comments (0)

Leave a Comment