ಆಷಾಢ ಏಕಾದಶಿ: ಪಂಢರಪುರಕ್ಕೆ ರೈಲು ಸೇವೆ ತಾತ್ಕಾಲಿಕ ವಿಸ್ತರಣೆ

ಹುಬ್ಬಳ್ಳಿ: ಪಂಢರಪುರದಲ್ಲಿ ನಡೆಯುವ ಆಷಾಢ ಏಕಾದಶಿ ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಎರಡು ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಪಂಢರಪುರದವರೆಗೆ ವಿಸ್ತರಿಸಲು ನಿರ್ಧರಿಸಿದೆ.

ಇದರನ್ವಯ, ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ – ಮೀರಜ್ ಎಕ್ಸ್‌ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ಪಂಢರಪುರದವರೆಗೆ ವಿಸ್ತರಿಸಲಾಗಿದೆ. ಈ ರೈಲು  ಜುಲೈ 4 ರಿಂದ ಜುಲೈ 9 ರವರೆಗೆ ಕ್ಯಾಸಲ್ ರಾಕ್ ಮತ್ತು ಪಂಢರಪುರ ನಡುವೆ ಸಂಚರಿಸಲಿದೆ. ಕ್ಯಾಸಲ್ ರಾಕ್‌ನಿಂದ ವಿಜಯನಗರದವರೆಗಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿಸ್ತೃತ ಮಾರ್ಗದಲ್ಲಿ, ರೈಲು ಮೀರಜ್‌ಗೆ ಮಧ್ಯರಾತ್ರಿ 12:20ಕ್ಕೆ ಆಗಮಿಸಿ, 12:50ಕ್ಕೆ ಹೊರಟು, ಬೆಳಗಿನ ಜಾವ 03:00 ಕ್ಕೆ ಪಂಢರಪುರ ತಲುಪಲಿದೆ ಎಂದು ತಿಳಿಸಿದೆ.

ಅದೇ ರೀತಿ, ರೈಲು ಸಂಖ್ಯೆ 17331 ಮೀರಜ್ – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ಮೀರಜ್ ಬದಲು ಪಂಢರಪುರದಿಂದ ಹೊರಡುವಂತೆ ತಾತ್ಕಾಲಿಕವಾಗಿ ವಿಸ್ತರಿಸಲಾಗಿದೆ. ಈ ರೈಲು ಜುಲೈ 5 ರಿಂದ ಜುಲೈ 10 ರವರೆಗೆ ಪಂಢರಪುರದಿಂದ ಎಸ್ಎಸ್ಎಸ್ ಹುಬ್ಬಳ್ಳಿಗೆ ಸಂಚರಿಸಲಿದೆ. ಈ ರೈಲು ಪಂಢರಪುರದಿಂದ ಬೆಳಗಿನ ಜಾವ 04:00ಕ್ಕೆ ಹೊರಟು, 06:45ಕ್ಕೆ ಮೀರಜ್ ತಲುಪಿ, 07:15ಕ್ಕೆ ಅಲ್ಲಿಂದ ಹೊರಡಲಿದೆ. ವಿಜಯನಗರದಿಂದ ಹುಬ್ಬಳ್ಳಿಯವರೆಗಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದೆ.

Related Articles

Comments (0)

Leave a Comment