ಮೈಸೂರು ಅರಸರು ನೆಟ್ಟಿರುವ ಮರದ ಫಲವನ್ನು ನಾವೆಲ್ಲರೂ ತಿನ್ನುತ್ತಿದ್ದೇವೆ; ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು:”ವಿದ್ಯುತ್ ಉತ್ಪಾದನೆ ಸೇರಿದಂತೆ ರಾಜ್ಯದ ಪ್ರಮುಖ ಸಂಸ್ಥೆಗಳ ಸ್ಥಾಪನೆಗೆ ಅಡಿಪಾಯ ಹಾಕಿಕೊಟ್ಟವರು ಮೈಸೂರಿನ ಒಡೆಯರು. ಇವರು ನೆಟ್ಟಿರುವ ಮರದ ಫಲವನ್ನು ನಾವೆಲ್ಲರೂ ತಿನ್ನುತ್ತಿದ್ದೇವೆ” ಎಂದು ಡಿಸಿಎಂ‌ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಅರಸು ಅಸೋಸಿಯೇಷನ್ ನ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಮೈಸೂರು ಅರಸರು ಹಾಗೂ ಅವರ ವಂಶಸ್ಥರು ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಜಾತ್ಯಾತೀತ, ಧರ್ಮಾತೀತವಾಗಿ ಕರ್ನಾಟಕವನ್ನು ಕಟ್ಟಿದ ಇತಿಹಾಸ ಅರಸು ಸಮುದಾಯಕ್ಕಿದೆ”.”ಅರಸು ಸಮುದಾಯವು ಗಾತ್ರದಲ್ಲಿ ಚಿಕ್ಕದಿರಬಹುದು. ಆದರೆ ಈ ರಾಜ್ಯಕ್ಕೆ ಅವರು ನೀಡಿರುವ ಕೊಡುಗೆ ಬಹು ದೊಡ್ಡದು. ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪರಾಜಮ್ಮಣ್ಣಿ, ಜಯಚಾಮರಾಜೇಂದ್ರ ಒಡೆಯರ್ ಅವರು ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನ್ನಂಬಾಡಿ ಕಟ್ಟೆ, ವಾಣಿವಿಲಾಸ ಸಾಗರ ಅಣೆಕಟ್ಟು, ಜೆ.ಸಿ. ಎಂಜಿನಿಯರ್ ಕಾಲೇಜು, ವಿಕ್ಟೋರಿಯಾ ಆಸ್ಪತ್ರೆ ಹೀಗೆ ಹಲವಾರು ಜನೋಪಕಾರಿ ಕೆಲಸಗಳಿಗೆ ಅಡಿಪಾಯ ಹಾಕಿಕೊಟ್ಟವರು ಮೈಸೂರು ಅರಸರು” ಎಂದು ಕೊಂಡಾಡಿದರು.

“ದೇವರಾಜ ಅರಸು ಅವರು ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ತಂದು ಲಕ್ಷಾಂತರ ಭೂ ರಹಿತ ಬಡವರ ಪರವಾಗಿ ನಿಂತರು. ಈ ತೀರ್ಮಾನ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ. ಒಬ್ಬ ಮನುಷ್ಯ ಯಾವಾಗ ಸಾಹುಕಾರನಾಗುತ್ತಾನೆ, ಯಾವಾಗ ಬಡವನಾಗುತ್ತಾನೆ ಎಂಬುದು ತಿಳಿಯಿವುದಿಲ್ಲ. ಅದಲು-ಬದಲು ಪ್ರಕ್ರಿಯೆ ಅನಿರೀಕ್ಷಿತ” ಎಂದರು.

“ದೇವರಾಜ ಅರಸು ಅವರಿಗೆ ಜಾತಿ ಇರಲಿಲ್ಲ. ಆದರೆ ನಾಯಕತ್ವದ ಗುಣವಿತ್ತು. ಆ ಗುಣ ಅವರನ್ನು ದೊಡ್ಡ ಮಟ್ಟಕ್ಕೆ ಬೆಳೆಸಿತು. ಹಿಂದುಳಿದ ಹಾಗೂ ಮೇಲ್ವರ್ಗದ ಎಲ್ಲ ರಾಜಕಾರಣಿಗಳನ್ನು ಬೆಳೆಸಿ ಭದ್ರ ಅಡಿಪಾಯ ಕೊಟ್ಟವರು ದೇವರಾಜ ಅರಸು”.”ಹಣ, ಐಶ್ವರ್ಯ ಎಷ್ಟೇ ಇದ್ದರೂ ಸರಳತೆಯನ್ನು ಕಾಪಾಡಿಕೊಂಡವರು ಅರಸು ಸಮುದಾಯದವರು. ಸಂಪತ್ತಿಗೆ ಬೆಲೆಕಟ್ಟಬಹುದು ಆದರೆ ಸರಳತೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇನ್ನೊಬ್ಬರಿಗೆ ಅನ್ಯಾಯವಾಗದ ರೀತಿಯಲ್ಲಿ ನಾವು ಬದುಕಬೇಕು. ಅದೇ ನಿಜವಾದ ಸರಳ ಧರ್ಮ” ಎಂದರು.

“ನನ್ನ ಗುರುಗಳಾದ ಅಜ್ಜಯ್ಯ ಅವರು ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಮಾತನ್ನು ಹೇಳಿದ್ದಾರೆ. ಈ ಮಾತಿನಂತೆಯೇ ನಾವೆಲ್ಲರೂ ನಡೆಯಬೇಕು” ಎಂದರು.

Related Articles

Comments (0)

Leave a Comment