ಬೊಮ್ಮನಹಳ್ಳಿಯಲ್ಲಿ ಅನಾವರಣಗೊಳ್ಳಲಿದೆ ರಾಜ್ಯದ ಮೊದಲ ಕಾರ್ ಪಾರ್ಕ್

ಬೆಂಗಳೂರು ಫೆಬ್ರವರಿ 25: ನೂರು ಅಡಿ ಎತ್ತರಕ್ಕೆ ಜೋಡಿಸಿಟ್ಟ ವಿಂಟೇಜ್ ಕಾರ್ ಗಳು. 3 ಸಾವಿರ ಜನರು ಒಟ್ಟಿಗೆ ಕುಳಿತು ಸಂಭ್ರಮಿಸಬಹುದಾದ ಅತ್ಯಾಧುನಿಕ ಸಾಮಗ್ರಿಗಳನ್ನು ಹೊಂದಿರುವ ಬಯಲು ರಂಗ ಮಂದಿರ. ಕಿವಿಗೆ ತಂಪು ನೀಡುವ ಹಕ್ಕಿಗಳ ಕಲವರವ. ಸಮುದ್ರದ ಮರಳಿನ ಮೇಲೆ ಮಕ್ಕಳಿಗೆ ಕುಣಿದಾಡಲು ಅವಕಾಶ ಮಾಡಿ ಕೊಡುವ ಸ್ಯಾಂಡ್ ಪಿಟ್, ಆಮೆಗಳ ಹಾಗೂ ಮೊಲಗಳ ಸದ್ದು.ಇವು ಫೆಬ್ರವರಿ 27 ರಂದು ಬೊಮ್ಮನಹಳ್ಳಿಯಲ್ಲಿ ಉದ್ಘಾಟನೆಯಾಗಲಿರುವ ರಾಜ್ಯದ ಮೊದಲ “ಕಾರ್ ಪಾರ್ಕ್” ನ ಹೈಲೈಟ್ಸ್.

ಸಾರ್ವಜನಿಕರಿಗೆ ಅನುಕೂಲವಾಗುವಂತಹದ್ದೇನಾದರೂ ನೀಡಲೇಬೇಕು ಎನ್ನುವ ಗುರಿ ಜನಪತ್ರಿನಿಧಿಗೆ ಇದ್ದರೆ ಹಲವಷ್ಟನ್ನು ಸಾಧಿಸಬಹುದು. ಕಸದಿಂದ ರಸ ಹಾಗೂ ಕಸದ ಕೊಂಪೆಯನ್ನು ಸ್ವರ್ಗಗೊಳಿಸಲು ತಮ್ಮ ತನು ಮನವನ್ನು ಮುಡಿಪಾಗಿಟ್ಟಿದ್ದಾರೆ ಬೊಮ್ಮನಹಳ್ಳಿ ಬಿಬಿಎಂಪಿ ಸದಸ್ಯ ರಾಮ್ ಮೋಹನರಾಜು.

ಕಸದ ಕ್ವಾರಿಯಲ್ಲಿ ಬಂಡೇಪಾರ್ಕ್, ಅಂತರಾಷ್ಟ್ರೀಯ ಗುಣಮಟ್ಟದ ಸವಲತ್ತುಗಳನ್ನು ಹೊಂದಿರುವ ಬೊಮ್ಮನಹಳ್ಳಿ ಹಿರಿಮೆಗೆ ಮತ್ತೊಂದು ಗರಿ ಕಾರ್ ಪಾರ್ಕ್‍ನ್ನು ಜೋಡಿಸಿದ್ದಾರೆ ಬಿಬಿಎಂಪಿ ಸದಸ್ಯರಾದ ರಾಮ್ ಮೋಹನರಾಜು ಅವರು.

ಪ್ರೆಸ್‍ಕ್ಲಬ್ ನಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಲವಾರು ವರ್ಷಗಳಿಂದ ಸಮರ್ಪಕವಾಗಿ ಬಳಕೆಯಾಗದೇ ಇದ್ದ ಜಾಗವನ್ನು ರಾಜ್ಯದಲ್ಲೆ ಹೆಸರುವಾಸಿ ಯಾಗುವಂತೆ ಮಾಡಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ಈ ಹಿನ್ನಲೆಯಲ್ಲಿ ಶಾಸಕರಾದ ಸತೀಶ್ ರೆಡ್ಡಿ, ಸಂಸದರಾಗಿದ್ದ ದಿವಂಗತ ಅನಂತ ಕುಮಾರ್ ಅವರ ಸಹಕಾರದಿಂದಾಗಿ ರಾಜ್ಯದಲ್ಲೇ ಇಲ್ಲದಂತಹ ಉದ್ಯಾನವನ್ನು ನಿರ್ಮಿಸಲು ಸಾಧ್ಯವಾಗಿದೆ. ವಾರ್ಡ್ ನ ಜನರು ಮೂಲಭೂತ ಸೌಕರ್ಯಗಳ ಜೊತೆಯಲ್ಲಿಯೇ ಆರೋಗ್ಯಕರವಾದ ಜೀವನ ಶೈಲಿಯನ್ನು ಬೆಳೆಸಿಕೊಳ್ಳುವಂತೆ ಮಾಡುವುದು ನಮ್ಮ ಗುರಿಯಾಗಿತ್ತು. ಯುವ ಜನರಲ್ಲಿ ಮೊಬೈಲ್ ಗೀಳನ್ನು ಬಿಡಿಸಿ ದೈಹಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕು. ಈ ಹಿನ್ನಲೆಯಲ್ಲಿ ಮಕ್ಕಳಾಟಕ್ಕೆ ಅಗತ್ಯವಾದ ಸಲಕರಣೆಗಳು. ಒಪನ್ ಜಿಮ್ ಹಾಗೂ ಕಲಾವಿದರ ಪ್ರೋತ್ಸಾಹಕ್ಕೆ ಬಯಲು ರಂಗಮಂದಿರವನ್ನು ಇಲ್ಲಿ ನಿರ್ಮಿಸಿದ್ದೇವೆ ಎಂದರು.

ಫೆಬ್ರವರಿ 27 ರಂದು ಉದ್ಘಾಟನೆಯಾಗಲಿರುವ ಈ ಕಾರ್ ಪಾರ್ಕ್ ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ, ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ, ಬಿಬಿಎಂಪಿ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ, ಬಿಬಿಎಂಪಿ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.

Related Articles

Comments (0)

Leave a Comment