ಎಸ್.ಎಸ್.ಎಲ್.ಸಿ. ಫಲಿತಾಂಶ: ಧೈರ್ಯ ತೋರಿದ ಮಕ್ಕಳೇ ಕೊರೋನ ವಾರಿಯರ್ಸ್- ಸುರೇಶ್ ಕುಮಾರ್
- by Suddi Team
- August 10, 2020
- 12 Views

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಪ್ರಸರಣ ಕಾಲಘಟ್ಟದಲ್ಲಿ ಈ ವರ್ಷದ 10ನೇ ತರಗತಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿ ಈ ಬಾರಿ ಶೇ. 71.80 ಫಲಿತಾಂಶ ಲಭ್ಯವಾಗಿದೆ. ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಬೆಳಗ್ಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿ ಮಾತನಾಡಿದ ಅವರು, ಕೋವಿಡ್ ವಿಷಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜೂನ್ ಮತ್ತು ಜುಲೈನಲ್ಲಿ 10ನೇ ತರಗತಿ ಪರೀಕ್ಷೆಗಳಿಗೆ ಮನೆಯಿಂದ ಧೈರ್ಯವಾಗಿ ಬಂದು ಪರೀಕ್ಷೆಗೆ ಹಾಜರಾಗಿದ್ದು, ನಾಡಿನ ಎಲ್ಲ ಎಸ್.ಎಲ್.ಎಲ್.ಸಿ ಮಕ್ಕಳಿಗೆ ಮತ್ತು ಅವರ ಸಾಹಸಕ್ಕೆ ಹೃದಯ ಪೂರ್ವಕ ಅಭಿನಂದನೆಗಳು ಸಲ್ಲುತ್ತವೆ ಎಂದರು. ಈ ನಮ್ಮ ಮಕ್ಕಳೇ ನಿಜವಾದ ಕೊರೋನಾ ವಾರಿಯರ್ಸ್ ಎಂದು ಮಕ್ಕಳ ಧೈರ್ಯವನ್ನು ಶ್ಲಾಘಿಸಿದ ಸಚಿವರು, ಪರೀಕ್ಷಾ ಸಮಯದಲ್ಲಿ ಯಾವುದೇ ಒಂದು ಮಗುವೂ ಸಹ ಸಾರಿಗೆ ವ್ಯವಸ್ಥೆಯಿಲ್ಲದೇ ಪರೀಕ್ಷೆಗೆ ಹಾಜರಾದ ನಿದರ್ಶನಗಳಿಲ್ಲ. ಒಂದೇ ಮಗುವಿದ್ದರೂ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿತ್ತು ಎಂದರು.
ಎದೆಗುಂದದೇ ಪರೀಕ್ಷೆಗೆ ಹಾಜರಾದ ಮಕ್ಕಳು ಮತ್ತು ಇದಕ್ಕೆಲ್ಲಾ ಕಾರಣರಾದ ಶಿಕ್ಷಣ ಇಲಾಖೆ ಅಧಿಕಾರಿಗಳು, ಉಪಧ್ಯಾಯ ಸಮೂಹ ಹಾಗೂ ಪ್ರೌಢಶಿಕ್ಷಣ ಮಂಡಳಿ ಅಧಿಕಾರಿಗಳ ಕಾರ್ಯಕ್ಷಮತೆ ಮತ್ತು ದಕ್ಷತೆ ಕಾರಣವಾಗಿದ್ದು, ಅವರೆಲ್ಲರಿಗೂ ಕೃತಜ್ಞತೆಗಳು ಸಲ್ಲಬೇಕಿದೆ ಎಂದು ಅವರು ಹೇಳಿದರು.
ಮೌಲ್ಯಮಾಪನ ವಿವರ:
ಕೊರೊನಾ ಸಂದರ್ಭದಲ್ಲಿ ಮೌಲ್ಯಮಾಪನ ಕಾರ್ಯಗಳು ಅತ್ಯಂತ ಕ್ಲಿಷ್ಟಕರವಾಗಿದ್ದವು. ನಮ್ಮ ಇಲಾಖೆ ಈ ಸಂದರ್ಭವನ್ನು ಒಂದು ಸವಾಲಾಗಿ ಸ್ವೀಕರಿಸಿ, ಆರೋಗ್ಯ ಇಲಾಖೆ ನಿಗದಿಪಡಿಸಿದ ಮಾರ್ಗಸೂಚಿಗಳನ್ನು (ಎಸ್.ಓ.ಪಿ) ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಯಾವುದೇ ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ಸಮಸ್ಯೆ ಆಗದ ರೀತಿಯಲ್ಲಿ ವ್ಯವಸ್ಥೆಯನ್ನು ನಿರ್ವಹಿಸಿದೆ. ಪ್ರತಿ ಮೌಲ್ಯಮಾಪನ ಕೇಂದ್ರಗಳಲ್ಲೂ ಸ್ವಚ್ಚತೆಗೆ ಆದ್ಯತೆಯನ್ನು ನೀಡಿ, ನಿಗದಿತ ಸುರಕ್ಷಾ ಕ್ರಮಗಳನ್ನು ಅನುಸರಿಸಿ ಮೌಲ್ಯಮಾಪನ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ. ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ವಿಕೇಂದ್ರಿಕರಣಗೊಳಿಸಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 227 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಸಲಾಯಿತು. ಒಟ್ಟಾರೆ 52219 ಮೌಲ್ಯಮಾಪಕರು ನಡೆಸಿದ್ದಾರೆ. ಜುಲೈ 13 ರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಯಿತು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಎರಡು ದಿನ ತಡವಾಗಿ ಆರಂಭವಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿತು ಎಂದು ಸುರೇಶ್ ಕುಮಾರ್ ಹೇಳಿದರು.
ಮಕ್ಕಳು ಮತ್ತು ಪೋಷಕರಲ್ಲಿ ಮನವಿ:
ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ ಸಚಿವರು, ನಪಾಸಾದ ವಿದ್ಯಾರ್ಥಿಗಳು ಅಧೀರರಾಗುವ ಪ್ರಮೇಯವಿಲ್ಲ. ಪರೀಕ್ಷೆಯೆ ಜೀವನದ ಅಂತಿಮ ಗುರಿಯಲ್ಲ. ಪರೀಕ್ಷೆಯಲ್ಲಿ ನಪಾಸಾಗಿ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದವರ ಉದಾಹರಣೆಗಳು ನಮ್ಮ ಮುಂದಿವೆ. ಹಾಗೆಯೇ ಫೇಲಾದ ಮಕ್ಕಳು ವೇದನೆ ಇಲ್ಲವೇ ಖೇದ ಅನುಭವಿಸಬಾರದು. ಹಾಗೆಯೇ ಪೋಷಕರಾಗಲಿ ಮನಸ್ಸಿಗೆ ಬೇಸರ ಮಾಡಿಕೊಂಡು ಮಕ್ಕಳನ್ನು ಅವಹೇಳನ ಮಾಡದೇ ಮುಂದಿನ ಪೂರಕ ಪರೀಕ್ಷೆಯಲ್ಲಿ ಮಕ್ಕಳು ಉತ್ತೀರ್ಣರಾಗಲು ಸಮಾಧಾನದಿಂದಲೇ ಸಲಹೆ ನೀಡಬೇಕೆಂದು ಸಚಿವರು ಮನವಿ ಮಾಡಿದರು.
*ಈ ವರ್ಷ ಶೇ. 71.80 ಫಲಿತಾಂಶ*: ಈ ಬಾರಿ 811050 ವಿದ್ಯಾರ್ಥಿಗಳು ಪರೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ. ಈ ಪೈಕಿ 738471 ವಿದ್ಯಾರ್ಥಿಗಳು ಹೊಸಬರು, 50,576 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 15301 ಖಾಸಗಿ ವಿದ್ಯಾರ್ಥಿಗಳು, 6702 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ. ಒಟ್ಟಾರೆ 582816 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಸರಾಸರಿ ಫಲಿತಾಂಶ ಶೇ 71.80 ಇದೆ. ಕಳೆದ ಸಾಲಿನಲ್ಲಿ ಶೇ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು ಎಂದು ಸಚಿವರು ಫಲಿತಾಂಶದ ವಿವರಗಳನ್ನು ಒದಗಿಸಿದರು. 18,067 ಅಭ್ಯರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗುವ ಉದ್ದೇಶದಿಂದ ಜೂನ್-ಜುಲೈನಲ್ಲಿನ ಪರೀಕ್ಷೆಗೆ ಹಾಜರಾಗಿಲ್ಲ. ಈ ವಿದ್ಯಾರ್ಥಿಗಳನ್ನು ಮುಂದೆ ನೆಡಯುವ ಪೂರಕ ಪರೀಕ್ಷೆಯಲ್ಲಿ ಹೊಸ ಅಭ್ಯರ್ಥಿಗಳು (ಫ್ರೆಶ್ ಕ್ಯಾಂಡಿಡೇಟ್ಸ್ ) ಎಂದೇ ಪರಿಗಣಿಸಲಾಗುತ್ತದೆ. ಈ 18,067 ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗಲು ಮತ್ತೊಮ್ಮೆ ಪರೀಕ್ಷಾ ಅರ್ಜಿ ಮತ್ತು ಶುಲ್ಕ ತುಂಬ ಬೇಕಾದ ಅಗತ್ಯವಿಲ್ಲ ಎಂದೂ ಸಚಿವರು ಹೇಳಿದರು.
19,086 ಮಕ್ಕಳು ಹಾಜರಿ ಕೊರತೆಯಂತಹ ಸಮಸ್ಯೆಗಳಿಂದ ಪರೀಕ್ಷೆಗೆ ಹಾಜರಾಗಲು ಅನರ್ಹತೆ ಪಡೆದಿದ್ದರು ಎಂದು ಸಚಿವರು ಹೇಳಿದರು.
ಶೇ. 77.74 ವಿದ್ಯಾರ್ಥಿನಿಯರು ಮತ್ತು ಶೇ. 66.41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಿಗೆ ಶೇ. 72.79, ಅನುದಾನಿತ ಶಾಲೆಗಳಿಗೆ ಶೇ. 70.60 ಮತ್ತು ಅನುದಾನ ರಹಿತ ಶೇ. 82.31 ಫಲಿತಾಂಶ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಶೇ. 73.41 ರಷ್ಟು ನಗರ ವಿದ್ಯಾರ್ಥಿಗಳು ಮತ್ತು 77.18 ಗ್ರಾಮೀಣ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 1550 ಶಾಲೆಗಳು ಶೇ.100 ಫಲಿತಾಂಶ ಪಡೆದಿದ್ದರೆ, 62 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ ಎಂದು ಸಚಿವರು ತಿಳಿಸಿದರು. ಪೂರ್ಣ 625 ಅಂಕಗಳನ್ನು 6 ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ಸಚಿವರು ವಿವರಿಸಿದರು.
*ಗ್ರೇಡಿಂಗ್ ಸಿಸ್ಟಂ*: ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಜಿಲ್ಲಾವಾರು ಅನಾರೋಗ್ಯಕರ ಪೈಪೋಟಿ ತಪ್ಪಿಸುವ ಸಲುವಾಗಿ ಈ ಬಾರಿಯಿಂದ ಜಿಲ್ಲೆಗಳಿಗೆ ಗ್ರೇಡಿಂಗ್ ಸಿಸ್ಟಂ ನೀಡಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
8 ಜಿಲ್ಲೆಗಳು ಎ- ಗ್ರೇಡ್, 20 ಜಿಲ್ಲೆಗಳು ಬಿ- ಗ್ರೇಡ್ ಮತ್ತು 4 ಜಿಲ್ಲೆಗಳು ಸಿ-ಗ್ರೇಡ್ ಪಡೆದಿವೆ. ಇಡೀ ಜಿಲ್ಲೆಯ ಒಟ್ಟು ಉತ್ತೀರ್ಣರಾದ ಮಕ್ಕಳ ಸಂಖ್ಯೆ (ಶೇ. 40) ಪರೀಕ್ಷೆಗೆ ಹಾಜರಾದ ಎಲ್ಲ ಮಕ್ಕಳು ತೆಗೆದುಕೊಂಡು ಒಟ್ಟಾರೆ ಅಂಕಗಳು (ಶೇ.40) ಮತ್ತು ಪ್ರಥಮ ಸ್ಥಾನ ಮತ್ತು ಅದರ ಮೇಲಿನ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ (ಶೇ.20) ಆಧರಿಸಿ ಗ್ರೇಡ್ ನೀಡಲಾಗಿದೆ ಎಂದು ಸಚಿವರು ವಿವರಿಸಿದರು
ಸೆಪ್ಟೆಂಬರ್ ನಲ್ಲಿ ಪೂರಕ ಪರೀಕ್ಷೆ:
ಇದೇ ಸೆಪ್ಟೆಂಬರ್ ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ವಿವರಿಸಿರುವಂತೆ ಅರ್ಜಿಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಬೇಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ: ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರತಿ ಹಾಗೂ ಮರುಮೌಲ್ಯಮಾಪನ ಶುಲ್ಕವನ್ನು ಪಾವತಿಸಲು online payment ಸೌಲಭ್ಯವನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಶಿಕ್ಷಣ ಆಯುಕ್ತ, ಡಾ. ಕೆ.ಜೆ.ಜಗದೀಶ್ ಹಾಗೂ ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕಿ ವಿ. ಸುಮಂಗಲಾ ಹಾಜರಿದ್ದರು.
Related Articles
Thank you for your comment. It is awaiting moderation.
Comments (0)