ಎಲ್ಲಾರೂ ಸಂತೋಷವಾಗಿದೀರಾ? – ವಿದ್ಯಾರ್ಥಿಗಳಿಗೆ ಮೇಷ್ಟ್ರಾಗಿ ವಿಶ್ವಾಸ‌ ತುಂಬಿದ‌‌‌ ಸುರೇಶ್‌ಕುಮಾರ್

ತುಮಕೂರು:ರಜಾ ಇದ್ದ ಆರು ತಿಂಗಳು ಏನು‌ ಮಾಡ್ತಿದ್ರಿ? ಸಂವೇದಾ ಟೀವಿ ಪಾಠಗಳು ಚೆನ್ನಾಗಿದ್ವಾ? ಆರೋಗ್ಯ ಕೆಡಿಸಿಕೊಳ್ಳಕ್ಕೆ ನಿಮಗೆ ಹಕ್ಕೇ ಇಲ್ಲಾ‌‌ ಗೊತ್ತಾ? ಎಕ್ಸಾಂ ಬೇಕೋ ಬೇಡ್ವೋ? ಕೂಲಿ ಕಾರ್ಮಿಕನ ಮಗ  ಮಹೇಶ್ ಎಸ್ ಎಸ್.ಎಲ್.ಸಿ ಪರೀಕ್ಷೆಯಲ್ಲಿ 616 ಅಂಕ ತೆಗೆದದ್ದು ಯಾಕೆ ಮತ್ತು ಹೇಗೆ ಗೊತ್ತಾ? ಸುಧಾ ಮೂರ್ತಿ ಯಾರು ಗೊತ್ತಾ? ಹೀಗೆ ಪ್ರಶ್ನೆಗಳ ಮೇಲೆ‌ ಪ್ರಶ್ನೆ ಕೇಳುತ್ತಾ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಇಂದು ಮಕ್ಕಳಿಗೆ ಮತ್ತೊಮ್ಮೆ ಆಪ್ತ ಮೇಷ್ಟ್ರಾದರು.‌

ಇಂದು‌ ತುಮಕೂರಿನ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಹಲವಾರು ಶಾಲೆಗಳಿಗೆ ಬೆಳ್ಳಂಬೆಳಗ್ಗೆಯೇ‌  ಭೇಟಿ ಕೊಟ್ಟ ಸುರೇಶ್‌ಕುಮಾರ್ ಚೆನ್ನಾಗಿ ಓದಿ ಅಂತ ಪ್ರಾಮಿಸ್ ಮಾಡ್ತೀರಾ ಅಂತ ಮಕ್ಕಳನ್ನು ಪ್ರಶ್ನೆ ಮಾಡಿ ಅವರ ಮನಸೂರೆಗೊಂಡರು. ಎಕ್ಸಾಂ ಬೇಕೇ ಬೇಕು ಅಂದ ಮಕ್ಕಳಿಗೆ ಯಾಕೆ ಬೇಕೆಂದು ಕೇಳಿದ ಸುರೇಶ್ ಕುಮಾರ್ ಭವಿಷ್ಯಕ್ಕೆ ಓದೇ ಮುಖ್ಯ ಅಂದ ಮಕ್ಕಳ ಬೆನ್ತಟ್ಟಿದರು.

ಬಾಗಲಕೋಟೆಯ ಜಮಖಂಡಿ ಬಳಿಯ ಸಾವಳಗಿ ಗ್ರಾಮದ ಸಂಜು, ಕೂಲಿ ಕಾರ್ಮಿಕರ ಮಗನಾದ ಮಹೇಶ ಅಂಥಹ ಅಸಂಖ್ಯ ವಿದ್ಯಾರ್ಥಿಗಳ ಸಾಧನೆ ನಮ್ಮೆಲ್ಲರಿಗೆ ಪ್ರೇರೇಪಣೆ ನೀಡಬೇಕೆಂದು ಉದಾಹರಿಸಿದಾಗ ವಿದ್ಯಾರ್ಥಿಗಳು ರೋಮಾಂಚನಗೊಂಡರು. ಜಪಾನ್ ದೇಶ ಕೊರೋನಾ ಹೇಗೆ ಗೆದ್ದಿತು ಗೊತ್ತಾ ಎಂದು ಕೇಳಿ ಸ್ವಚ್ಛತೆಯ ಬಗ್ಗೆ ಪಾಠ ಮಾಡಿದರು. ಸಂತೋಷವಾಗಿರೋದು ಓದಿಗೆ ಅತೀ ಮುಖ್ಯ ಹೇಗೆ ಎಂದು ವಿವರಿಸಿದರು.

ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕುಗಳ ವಿವಿಧ ಶಾಲೆಗಳಿಗೆ ಬೆಳಗ್ಗೆಯಿಂದಲೇ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್, ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ, ಶಿಕ್ಷಕರಿಗೆ ಸೂಚನೆಗಳನ್ನು ನೀಡಿದರು.‌ ಅವರೊಂದಿಗೆ ಜಿಲ್ಲೆಯ ಶಿಕ್ಷಣ ಇಲಾಖಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು‌ ಉಪಸ್ಥಿತರಿದ್ದರು.

Related Articles

Comments (0)

Leave a Comment