ವೀಕೆಂಡ್ ಪಬ್ ಬಾರ್ ಸಂಸ್ಕೃತಿ ಬಿಟ್ಟು ವೀಕೆಂಡ್ ಅಗ್ರಿಕಲ್ಚರ್ ಸಂಸ್ಕೃತಿ ಬೆಳೆಯಲಿ:ಬಿ.ಸಿ.ಪಾಟೀಲ್ ಕರೆ

ಕೋಲಾರ,ಜ.6:ನಗರದವರಲ್ಲಿ ಕೃಷಿಯತ್ತ ಆಕರ್ಷಣೆ ಹೆಚ್ಚಾಗುತ್ತಿದೆ‌.ವೀಕೆಂಡ್ ಪಬ್ ಬಾರ್ ಬಿಟ್ಟು ವೀಕೆಂಡ್ ಅಗ್ರಿಕಲ್ಚರ್ ಹುಟ್ಟುವಂತಾಗಬೇಕು.ರೈತರೊಂದಿಗೆ ನಾವಿದ್ದೇವೆ ಸರ್ಕಾರವಿದೆ ಎಂಬ ಸಂದೇಶ ಆತ್ಮವಿಶ್ವಾಸ ಮೂಡಿಸುವುದೇ ನನ್ನ ಗುರಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್.ವಡ್ಡಹಳ್ಳಿಯಲ್ಲಿ ಆಯೋಜಿಸಿದ್ದ “ರೈತರೊಂದಿಗೊಂದು ದಿನ” ವೇದಿಕೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಬಿ.ಸಿ.ಪಾಟೀಲ್ ಉದ್ಘಾಟಿಸಿ ಮಾತನಾಡಿದರು.

ರೈತರ ಮಕ್ಕಳಿಗೆ ಕೃಷಿ ಕಾಲೇಜುಗಳಲ್ಲಿ ಈಗಿರುವ ಶೇ.40 ಮೀಸಲಾತಿಯನ್ನು ಶೇ.50ಕ್ಕೆ ಏರಿಸುವ ಚಿಂತನೆ ತಮ್ಮದಾಗಿದೆ.ಅಲ್ಲದೇ ಆಕಸ್ಮಿಕವಾಗಿ ಮೃತಪಟ್ಟ ರೈತರ ಪರಿಹಾರವನ್ನೂ ಸಹ ಹೆಚ್ಚಿಸುವ ಉದ್ದೇಶವಿದ್ದು ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೃಷಿ ಹಾಳಾದರೆ ದೇಶ ಉಳಿಯುವುದಿಲ್ಲ.ಕೃಷಿಯನ್ನು ನಂಬದಿದ್ದರೆ ಬದುಕೇ ಇಲ್ಲ.ಸರ್ಕಾರವನ್ನು ರೈತರು ಹುಡುಕಿಕೊಂಡು ಹೋಗುವುದಲ್ಲ.ಸರ್ಕಾರವೇ ರೈತನ ಹತ್ತಿರ ಬರುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.ರೈತನನ್ನು ಆತ್ಮವಿಶ್ವಾಸಿಯನ್ನಾಗಿಸುವುದೇ ನನ್ನ ಉದ್ದೇಶ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಕೃಷಿ ಸಚಿವನಾದ ಆರಂಭದಲ್ಲಿ ಕೃಷಿ ತಜ್ಞರ ಅಧಿಕಾರಿಗಳ ಸಭೆ ನಡೆಸಿ ರೈತರ ಆತ್ಮಹತ್ಯೆ ಬಗ್ಗೆ ಚರ್ಚಿಸಿ ಕಾರಣ ಕೇಳಿದಾಗ ಸಮಗ್ರ ಕೃಷಿ ಪದ್ಧತಿ ಇದಕ್ಕೆ ಪರಿಹಾರ ಎಂಬ ಅಭಿಪ್ರಾಯ ಕೇಳಿಬಂದಿತು.ಕೋವಿಡ್ ಲಾಕ್ಡೌನ್‌ನಲ್ಲಿ ಕೃಷಿ ಚಟುವಟಿಕೆ ನಿಲ್ಲಬಾರದು ರೈತರಿಗೆ ಟೋಲ್‌ಗಳೆಲ್ಲ ಮುಕ್ತವಾಗಿ ತೆರೆದು ಕೃಷಿ ಚಟುವಟಿಕೆ ಮಳೆ ಬೆಳೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು.

ಜಗತ್ತಿಗೆ ಅನ್ನ ನೀಡುವ ಆತ್ಮಸ್ಥೈರ್ಯಿ.ಕೋಲಾರ ರೈತರ ಆತ್ಮಸ್ಥೈರ್ಯ ರಾಜ್ಯಕ್ಕೆ ಮಾದರಿಯಾಗಬೇಕೆಂಬ ಉದ್ದೇಶದಿಂದ ರೈತರೊಂದಿಗೊಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ರೈತರ ಕೃಷಿ ಲಾಭದಾಯಕವಾಗಬೇಕು. ನಾನು ರೈತನ ಮಗ.ಬರೀ ಬತ್ತ ಬೆಳೆದರೆ ಲಾಭಬರದು‌.ಕಬ್ಬು ವರ್ಷದ ಬೆಳೆ ಮಾತ್ರ ಎಂಬ ಅನುಭವವಿದೆ.ಸಮಗ್ರ ಕೃಷಿ ಮಾಡಿದ ರೈತ ಒಂದಲ್ಲ ಒಂದು ರೀತಿ ಲಾಭದಾಯಕವಾಗುತ್ತಾನೆ. ಮಂಡ್ಯದ ಲಕ್ಷ್ಮೀದೇವಮ್ಮ,ಕೋಲಾರದ ಅಶ್ವತ್ಥಮ್ಮ ಇವರುಗಳು ಭೂಮಿ ನಂಬಿ ಸಮಗ್ರಕೃಷಿಯನ್ನು ಅನುಸರಿಸಿ ಬದುಕನ್ನು ಬಂಗಾರವನ್ನಾಗಿಸಿಕೊಂಡಿದ್ದಾರೆ.ಕೃಷಿ ಇಲಾಖೆ ಸರ್ಕಾರ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ರೈತರಿಗೆ ಆತ್ಮಬಲ ತುಂಬಲು ಅವರ ಸಮಸ್ಯೆಗಳನ್ನು ಆಲಿಸಲು ಪರಿಹಾರ ಕಲ್ಪಿಸಲು ನಾನು ಕಾರ್ಯಕ್ರಮ ಆಯೋಜಿಸಿ ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ‌.ಯುವಕರು ಕಾಣದ ದೂರದ ಊರಿನಲ್ಲಿ ಕಾರ್ಖಾನೆಗೆ ಎಂದು ಬಂದು ಅನ್ನಕಾಣದೇ ನರಳುವುದಕ್ಕಿಂತ ಊರಿನಲ್ಲಿರುವ ಜಮೀನಿನಲ್ಲಿ ಭೂಮಿತಾಯಿಯನ್ನು ನಂಬಿ ಬದುಕಬೇಕೆಂದು ಸ್ಫೂರ್ತಿಯ ಮಾತುಗಳನ್ನಾಡಿದರು.

ಜ.7 ರಂದು ವಿಧಾನಸೌಧದ ಮುಂಭಾಗ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಎಂಬ 40 ” ಕೃಷಿ ಸಂಜೀವಿನಿ” ವಾಹನಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ರೈತಸಂಪರ್ಕ ಕೇಂದ್ರಕ್ಕೆ ಕೃಷಿ ಸಂಜೀವಿನಿ ವಾಹನ ನೀಡುವ ಉದ್ದೇಶವಿದೆ. ಗ್ರಾ.ಪಂಚಾಯಿತಿಗಳಿಗೊಂದು ಮಣ್ಣುಪರೀಕ್ಷಾ ಕೇಂದ್ರ ಹೊಂದುವ ಉದ್ದೇಶ ಕರ್ನಾಟಕ ಸರ್ಕಾರದ್ದಾಗಿದ್ದು,ಕೇಂದ್ರಕ್ಕೆ‌ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ರೈತ ತನ್ನ ಬೆಳೆಯನ್ನು ಸಂಸ್ಕರಣೆ ಮಾಡಿ ತಾನೇ ಬೆಲೆ ನಿಗದಿಪಡಿಸಬೇಕು.ಜ.11 ರಿಂದ ಮೈಸೂರಿನಲ್ಲಿ ಪ್ರತಿ ಜಿಲ್ಲೆಯಿಂದ ಆಯ್ದ ರೈತರಿಗೆ ಒಟ್ಟು 500 ರೈತರಿಗೆ ಆಹಾರ ಸಂಸ್ಕರಣೆ ಮಾರ್ಕೇಟಿಂಗ್ ಮಾಡುವ ಒಂದು ವಾರಗಳ ಕಾಲ ತರಬೇತಿ ನೀಡಲಾಗುತ್ತಿದ್ದು,ರೈತರು ಇದರ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಸಂಸದ ಮುನಿಸ್ವಾಮಿ ಮಾತನಾಡಿ,
ಕೃಷಿ ಸಚಿವ ಬಿ.ಸಿ.ಪಾಟೀಲ್ ಒಬ್ಬ ಯಶಸ್ವಿ ಮಾದರಿ ಸಚಿವರಾಗಿದ್ದಾರೆ. ರೈತರೊಂದಿಗೊಂದು ದಿನ ಈ ಕಾರ್ಯಕ್ರಮ ಕೋಲಾರದ ಇತಿಹಾಸದಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಿದೆ.ಜನಪ್ರತಿನಿಧಿಗಳಿಗೆ ಬಲವಾದ ಇಚ್ಛೆ ಬೇಕು.ಇದನ್ನು ರೈತರಿಗಾಗಿ ಹಲವು ಉಪಯೋಗಿ ಕಾರ್ಯಕ್ರಮ-ಯೋಜನೆಗಳನ್ನು ರೂಪಿಸುವ ಮೂಲಕ ಬಿ.ಸಿ.ಪಾಟೀಲರು ಯಶಸ್ವಿಗೊಳಿಸಿದ್ದಾರೆ.
ರಾಜ್ಯ ಪ್ರವಾಸ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಪಣತೊಟ್ಟು ಕೃಷಿ ಸಚಿವ ರೈತ ಸಚಿವನಾಗಿ ಶ್ರಮವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕೋಲಾರ ಜಿಲ್ಲೆಯಲ್ಲಿ ರೈತರೊಂದಿಗೊಂದು ದಿನ ರೈತರಲ್ಲಿ ಹಬ್ಬದ ಉತ್ಸಾಹ ಮೂಡಿಸಿದೆ.ರೈತರಲ್ಲಿಯ ಈ ಹರ್ಷಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲರು ಕಾರಣರಾಗಿದ್ದಾರೆ‌. ಬಿ.ಸಿ.ಪಾಟೀಲರು ರಾಜ್ಯದಲ್ಲೆಡೆ ಕೋಲಾರ ಜಿಲ್ಲೆಯ ಮಾದರಿಯನ್ನು ಶ್ಲಾಘಿಸುತ್ತಿದ್ದಾರೆ.ಇಸ್ರೇಲ್‌ಗೆ ಕೃಷಿಯ ಬದಲಿಗೆ ನಮ್ಮದೇ ಕೋಲಾರದ ಮಾದರಿ ಸಮಗ್ರ ಕೃಷಿಯನ್ನೇ ಉದಾಹರಣೆ ನೀಡುತ್ತಾರೆ.ಕೋಲಾರದ ರೈತರು ಬಹಳ ಧೈರ್ಯಶಾಲಿಗಳು ಆತ್ಮಸ್ಥೈರಿಗಳು.ಸಮಗ್ರ ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ಈ ಕೋಲಾರದ ಕೃಷಿ ಮಾರುಕಟ್ಟೆ ಏಷ್ಯಾ ಖಂಡದಲ್ಲಿಯೇ ಎರಡನೇ ದೊಡ್ಡ ಮಾರುಕಟ್ಟೆ ಎಂಬ ಹೆಸರು ಪಡೆದಿದೆ ಎಂದರು.

ಹಿಂದೆ ರೈತರಿಗೆ ಸೌಲಭ್ಯಗಳು ಸಿಗಬೇಕಾದರೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು.ಅದನ್ನು ತೊಡೆದುಹಾಕುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯಬಿಜೆಪಿ ಸರ್ಕಾರಗಳು ಮಾಡಿಕೊಡುತ್ತಿವೆ. ಪ್ರಧಾನಿ ಮೋದಿ ಹಾಗೂ ಕೃಷಿ ಸಚಿವ ಬಿ‌.ಸಿ.ಪಾಟೀಲ್ ರಾಜ್ಯದ ರೈತರಿಗೆ ಪಿಎಂ ಸಿಎಂ ಕಿಸಾನ್ ಹಣ ಕಂತು ಯಶಸ್ವಿಪೂರ್ಣವಾಗಿ ಬಿಡುಗಡೆಯಾಗುವಂತೆ ಮಾಡಿದ್ದಾರೆ.ಕೃಷಿ ಮಸೂದೆ ತಿದ್ದುಪಡಿ ಮೂಲಕ ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.ರೈತ ಉತ್ಪಾದಕ ಸಂಘಗಳು ರೈತರಿಗೆ ನೆರವು ಮೂಡಿಸಿದ್ದು,ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಪುಟದ ಸದಸ್ಯರೆಲ್ಲ ರೈತರ ಬೆನ್ನಿಗೆ ನಿಂತಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ನಂಜೇಗೌಡ ಮಾತನಾಡಿ,ಬಿ.ಸಿ.ಪಾಟೀಲ್ ಸಚಿವರಾಗಿ 11 ತಿಂಗಳುಗಳ ಈ ಅವಧಿಯಲ್ಲಿ ನಾಲ್ಕುಬಾರಿ ಕೋಲಾರಕ್ಕೆ ಭೇಟಿಕೊಟ್ಟು ಇಲ್ಲಿನ ಕೃಷಿ ರೈತರನ್ನು ಅವಲೋಕಿಸಿದ್ದಕ್ಕೆ ಧನ್ಯವಾದಗಳು.ರೈತ ಕುಟುಂಬದಿಂದ ಬಂದಿರುವ ಬಿ.ಸಿ.ಪಾಟೀಲರು ಕೃಷಿ ಮಂತ್ರಿಗಳಾದ ಮೇಲೆ ರೈತರಿಗಾಗಿ ರಾಜ್ಯಾದ್ಯಂತ ಓಡಾಡುತ್ತಿದ್ದಾರೆ.ಕೊರೋನಾ ಸಂದರ್ಭದಲ್ಲಿಯೂ ರೈತರಿಗಾಗಿ ದುಡಿದವರು ಎಂದು ಮೆಚ್ಚಿದರು.

ಕೋಲಾರ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಮಾತನಾಡಿ,
ಕೃಷಿ ಇಲಾಖೆಯಿಂದ ಮಣ್ಣು ಜಮೀನು ನೀರು ಪರೀಕ್ಷೆಗೆ ಕೃಷಿ ಸಂಜೀವಿನಿ ವಾಹನ ಬಿಡುಗಡೆಗೊಳಿಸುತ್ತಿದ್ದು ರೈತರು ಇದರ ಲಾಭಪಡೆದುಕೊಳ್ಳಬೇಕು‌.ಕಡ್ಡಾಯವಾಗಿ ರೈತರು ಮಣ್ಣುಪರೀಕ್ಷೆ ಮಾಡಿಸಬೇಕು.ಅಂತರ್ಜಲ ಹೆಚ್ಚಳ ಮಾಡುವ ಉದ್ದೇಶವಿದೆ. ಕೋಲಾರ ಕೃಷಿಯನ್ನು ಬಿ.ಸಿ.ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಜಿಲ್ಲೆಯ ಕೃಷಿಗೆ ಇನ್ನಷ್ಟು ಅನುದಾನ ನೀಡಬೇಕು.ಜಿಲ್ಲೆಯ 111534 ರೈತರ ಖಾತೆಗೆ ನೇರವಾಗಿ ಪಿಎಂ ಕಿಸಾನ್ ಹಣ ವರ್ಗಾಯಿಸಲಾಗುತ್ತಿದೆ. ಟೊಮಾಟೋ ಸೇರಿದಂತೆ ಇತರೆ ತರಕಾರಿ ಬೆಳೆಗಳು ಹೊರರಾಜ್ಯ ಸೇರಿದಂತೆ ವಿದೇಶಕ್ಕೆ ರಫ್ತಾಗುತ್ತಿದೆ.ಕೋಲಾರ ಮಾದರಿ ಜಿಲ್ಲೆಯಾಗಿದೆ.ಜಿಲ್ಲೆಯಲ್ಲಿ ಟೊಮಾಟೋ ಸಂಸ್ಕರಣ ಘಟಕ ತೆರೆಯುವಂತೆ ಮನವಿ ಮಾಡಿದರು.

ತರಕಾರಿಗುಚ್ಛ ನೀಡಿ ವೇದಿಕೆಗೆ ಸಚಿವರನ್ನು ಬರಮಾಡಿಕೊಳ್ಳಲಾಯಿತು.ಸಮಗ್ರ ಕೃಷಿ, ಸಾವಯವ ಕೃಷಿ,ರೇಷ್ಮೆ,ಜೇನುಕೃಷಿ ಸೇರಿದಂತೆ ವಿವಿಧ ಕೃಷಿ ಪದ್ಧತಿಯಲ್ಲಿ ಸಾಧನೆಗೈದ ಪ್ರಗತಿಪರರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾಧಿಕಾರಿ ಸತ್ಯಭಾಮ ಸ್ವಾಗತಿಸಿ, ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು.ಮಾಲೂರು ಶಾಸಕ ನಂಜೇಗೌಡ, ಕೋಲಾರ ಜಿಲ್ಲಾ ಕೃಷಿ ಅಧಿಕಾರಿ ಉಪವಿಭಾಗಾಧಿಕಾರಿ ಸೋಮಶೇಖರ್, ಸಿಇಒ ನಾಗರಾಜ್, ಜಿ.ಪಂ,ತಾ.ಪಂ.ನಗರಸಭಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Comments (0)

Leave a Comment