ಕೆ.ಎಸ್.ಡಿ.ಎಲ್. ಉಪಕ್ರಮ: 2,168 ಅರಣ್ಯ ಸಿಬ್ಬಂದಿಗೆ ಸುರಕ್ಷಾ ಕಿಟ್ ವಿತರಣೆ
- by Suddi Team
- June 4, 2025
- 11 Views

ಮೈಸೂರು: ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (ಕೆಎಸ್ಡಿಎಲ್) ಸಿಎಸ್ಆರ್ ಉಪಕ್ರಮದ ಅಡಿಯಲ್ಲಿ ಮೈಸೂರು ಮತ್ತು ಚಾಮರಾಜನಗರ ಅರಣ್ಯ ವೃತ್ತಗಳ 2,168 ವನರಕ್ಷಕರು, ಕಾವಾಡಿಗಳು, ಮಾವುತರು ಮತ್ತು ಚಾಲಕರಿಗೆ ಸುರಕ್ಷಿತ ಕರ್ತವ್ಯ ನಿರ್ವಹಣೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬ್ಯಾಗ್, ಜರ್ಕೀನ್, ಶೂ ಮತ್ತು ನೀರಿನ ಬಾಟಲಿ ಇರುವ ಕಿಟ್ ಗಳನ್ನು ಬುಧವಾರ ಇಲ್ಲಿ ವಿತರಿಸಲಾಯಿತು.
ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಅರಣ್ಯ ಸಚಿವ ಈಶ್ವರ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ ಬಿ ಪಾಟೀಲ ಅವರು, ಕೆಎಸ್ಡಿಎಲ್ 2024-25ರಲ್ಲಿ ದಾಖಲಿಸಿದ 416 ಕೋಟಿ ರೂಪಾಯಿ ಲಾಭದಲ್ಲಿ 2 ಕೋಟಿ ರೂ.ಗಳನ್ನು ಈ ಸಿಎಸ್ಆರ್ ಕಾರ್ಯಕ್ರಮಕ್ಕೆ ವಿನಿಯೋಗಿಸಲಾಗಿದೆ ಎಂದರು.
ಅರಣ್ಯ ಇಲಾಖೆಯ ಕೆಳಹಂತದಲ್ಲಿರುವ ಮತ್ತು ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ 10 ಸಾವಿರ ಸಿಬ್ಬಂದಿಗೆ ಕಿಟ್ ಕೊಡಲಾಗುತ್ತಿದೆ. ನನ್ನ ಪುತ್ರ, ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ, ಕೆಳಹಂತದ ಅರಣ್ಯ ಸಿಬ್ಬಂದಿಯ ಕಷ್ಟಗಳ ಬಗ್ಗೆ ತಮ್ಮ ಗಮನ ಸೆಳೆದಿದ್ದೇ ಈ ರಚನಾತ್ಮಕ ಉಪಕ್ರಮಕ್ಕೆ ಪ್ರೇರಣೆಯಾಗಿದೆ. ಹೀಗಾಗಿ ಶಾಲೆಗಳ ಬಲವರ್ಧನೆಗೆ ಉಪಯೋಗಿಸಬೇಕು ಎಂದುಕೊಂಡಿದ್ದ ಹಣವನ್ನು ಇದಕ್ಕೆ ಮೀಸಲಿಟ್ಟು, ಕಿಟ್ ವಿತರಣೆ ಕಾರ್ಯಕ್ರಮ ರೂಪಿಸಲಾಯಿತು ಎಂದು ಅವರು ನುಡಿದಿದ್ದಾರೆ.
ಕೆಎಸ್ಡಿಎಲ್ ಮೂಲಕ ಸದ್ಯದಲ್ಲೇ ಮಲ್ಲಿಗೆಯ ಪರಿಮಳವಿರುವ ಸುಗಂಧದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಪ್ರತೀ ಕಿಲೋಗೆ ಇದರ ಬೆಲೆ 2.60 ಲಕ್ಷ ರೂಪಾಯಿ ಇದೆ. ಇದರ ಜತೆಗೆ ಉತ್ತರ ಭಾರತ ಮತ್ತು ವಿದೇಶಿ ಮಾರುಕಟ್ಟೆಯ ಕಡೆಗೆ ಗಮನ ಹರಿಸಲಾಗಿದೆ. ಇಂತಹ ಉಪಕ್ರಮಗಳ ಮೂಲಕ ಸಂಸ್ಥೆಯ ವಹಿವಾಟನ್ನು ಇನ್ನು ಮೂರು ವರ್ಷಗಳಲ್ಲಿ 5 ಸಾವಿರ ಕೋಟಿ ರೂಪಾಯಿ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯಯ ಎಂಎಸ್ಐಎಲ್ ಮತ್ತು ಹುಬ್ಬಳ್ಳಿ ಎನ್ಜಿಇಎಫ್ ಕಾರ್ಖಾನೆಗಳನ್ನು ಕೂಡ ಬೆಳೆಸಲಾಗುವುದು ಎಂದು ಅವರು ಹೇಳಿದರು.
ಸಚಿವ ಈಶ್ವರ ಖಂಡ್ರೆ ಮಾತನಾಡಿ, ಕೆಎಸ್ಡಿಎಲ್ ತನ್ನ ಹೆಮ್ಮೆಯ ಉತ್ಪನ್ನವಾದ ಸ್ಯಾಂಡಲ್ ಸೋಪ್ ತಯಾರಿಕೆಗೆ ಗಂಧದ ಎಣ್ಣೆಯನ್ನು ಆಶ್ರಯಿಸಿದೆ. ಆದರೆ ಸದ್ಯಕ್ಕೆ ಇದಕ್ಕಾಗಿ ಆಸ್ಟ್ರೇಲಿಯಾ ಮತ್ತಿತರ ದೇಶಗಳನ್ನು ಅವಲಂಬಿಸಿದೆ. ಆದ್ದರಿಂದ ರಾಜ್ಯದಲ್ಲಿಯೇ ಗಂಧದ ಮರಗಳನ್ನು ಹೆಚ್ಚಾಗಿ ಬೆಳೆಸಲು ಸರಳ ನೀತಿಯನ್ನು ಜಾರಿಗೆ ತರಲಾಗುವುದು. ಅರಣ್ಯ ಇಲಾಖೆಯಿಂದ ನೆಡುತೋಪುಗಳಲ್ಲಿ ಗಂಧದ ಮರ ಬೆಳೆಸಲಾಗುವುದು. ಇನ್ನೊಂದು ವಾರದಲ್ಲಿ ಪಾಟೀಲರ ಜೊತೆ ಚರ್ಚಿಸಿ ಇದಕ್ಕೆ ಅಂತಿಮರೂಪ ನೀಡಲಾಗುವುದು ಎಂದರು.
ಜತೆಗೆ ಅರಣ್ಯ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ಈ ಸಿಬ್ಬಂದಿಗೆ ವೇತನದ ಜೊತೆಗೆ ಮಾಸಿಕ 2 ಸಾವಿರ ರೂ.ಗಳ ರಿಸ್ಕ್ ಅಲೋಯನ್ಸ್ ನೀಡಲು ಆದೇಶ ಹೊರಡಿಸಲಾಗಿದೆ. ಸೇನಾ ಮತ್ತು ಪೊಲೀಸ್ ಸಿಬ್ಬಂದಿಗೆ ಇರುವಂತೆ ಇವರಿಗೂ ಕ್ಯಾಂಟೀನ್ ಸೌಲಭ್ಯ ಕಲ್ಪಿಸುವ ಚಿಂತನೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಪೊಲೀಸ್ ಕ್ಯಾಂಟೀನ್ ಸೌಲಭ್ಯವನ್ನು ಅರಣ್ಯ ಸಿಬ್ಬಂದಿಗೂ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದಿದ್ದಾರೆ.
ಕೆಎಸ್ಡಿಎಲ್ ಸಂಸ್ಥೆಯು ಗುಣಮಟ್ಟದ ಉತ್ಪನ್ನಗಳ ಮೂಲಕ ಜನರನ್ನು ತಲುಪುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಇದಕ್ಕೆ ಕಳೆದ ಎರಡು ವರ್ಷಗಳಲ್ಲಿ ಕೈಗೊಂಡಿರುವ ಪರಿಣಾಮಕಾರಿ ಕ್ರಮಗಳು ಕಾರಣವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್ಡಿಎಲ್ ಅಧ್ಯಕ್ಷ ನಾಡಗೌಡ, ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು.
ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಸುಭಾಷ್ ಮಲ್ಕೇಡ್, ಕುಮಾರ್ ಪುಷ್ಕರ್ ಮತ್ತಿತರರು ಇದ್ಧರು. ಕೆಎಸ್ ಡಿ ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಸ್ವಾಗತಿಸಿದರು. ಧ್ರುವ ಪಾಟೀಲ ಅವರು ವಂದಿಸಿದರು.
Related Articles
Thank you for your comment. It is awaiting moderation.
Comments (0)