ಜೋಯಿಡಾ ದೇಶದ ಮೊದಲ ಸಾವಯವ ತಾಲ್ಲೂಕು : ಸಚಿವ ಚಲುವರಾಯ ಸ್ವಾಮಿ

ಉತ್ತರಕನ್ನಡ: ರಾಜ್ಯದ ರೈತರು ರಸಾಯನಿಕ ಗೊಬ್ಬರ ಬಳಸುವುದನ್ನು ನಿಲ್ಲಿಸಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಸಿರಿಧ್ಯಾನದ  ಬೆಳೆಗಳನ್ನು ಬೆಳೆಯುವ ಮೂಲಕ ರಸಾಯನಿಕದಿಂದ ಹೊರಬರಬೇಕು ಎಂದು ಕೃಷಿ  ಸಚಿವ ಎನ್ ಚಲುವರಾಯಸ್ವಾಮಿ ಕರೆ ನೀಡಿದರು.

ಜೋಯಿಡಾದಲ್ಲಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಸಂಬoಧಿತ ಇಲಾಖೆಗಳು ಹಾಗೂ ಶಿರಸಿಯ ಐ.ಸಿ.ಎ ಆರ್- ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಜೋಯಿಡಾ ತಾಲ್ಲೂಕನ್ನು ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸುವ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದ ಸಚಿವರು,ಜೋಯಿಡಾ ತಾಲೂಕಿನಲ್ಲಿರುವ ಭೂಮಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ,  ಸಾವಯವ ರೀತಿಯಲ್ಲಿ  ಬಳಕೆ ಮಾಡುವ ಮೂಲಕ  ದೇಶದ ಮೊದಲ‌ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲಾಗುವುದು ಎಂದರು.

ಜೋಯಿಡಾ ತಾಲೂಕು 70% ಅರಣ್ಯದಿಂದ ಕೂಡಿದ್ದು ಇಲ್ಲಿನ ವಾತಾವರಣ ಬೇರೆ ಕಡೆ ಎಲ್ಲೂ ನೋಡಲು ಸಾಧ್ಯವಿಲ್ಲ,  ನೈಸರ್ಗಿಕವಾದ ಭೂಮಿ, ಅರಣ್ಯ ಪ್ರದೇಶ, ಪರಿಸರ ನೈಸರ್ಗಿಕ ಸಂಪತ್ತಿನಿoದ ಕೂಡಿದ್ದು, ಇಲ್ಲಿನ ಭೂಮಿಯಲ್ಲಿ ರಾಸಾಯನಿಕವಲ್ಲದ ಕೃಷಿ ಚಟುವಟಿಯಲ್ಲಿ ತೊಡಗಿಸಿಕೊಂಡು, ಸಂಪೂರ್ಣ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲು ರೈತರ ಸಹಕಾರವು ಅಗತ್ಯವಾಗಿದೆ ಎಂದರು.

ಹಿಂದೆ ಸಾವಯವ ಗೊಬ್ಬರಗಳನ್ನು ಬಳಸಿಕೊಂಡು ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿತ್ತು, ನಂತರ ರಸಾಯನಿಕ ಗೊಬ್ಬರಗಳಿಗೆ ಮಾರು ಹೋಗಲಾಗಿದೆ.  ಇದರ ದುಷ್ಪರಿಣಾಮಗಳ ಬಗ್ಗೆ ಕೃಷಿ ತಜ್ಞರು ಮತ್ತು ರೈತರು ಎಚ್ಚರಿಸುತ್ತಲೇ ಇದ್ದಾರೆ. ರೈತರು ರಸಾಯನಿಕ ಗೊಬ್ಬರ ಬಳಸುವುದನ್ನು ನಿಲ್ಲಿಸಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಸಿರಿಧ್ಯಾನದ  ಬೆಳೆಗಳನ್ನು ಬೆಳೆಯುವ ಮೂಲಕ ರಸಾಯನಿಕದಿಂದ ಹೊರಬರಬೇಕು ಎಂದರು.

ರಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತೆ, ಕಡಿಮೆ  ಇಳುವರಿ,ಬೆಳೆ ನಾಶ ಮತ್ತು ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಇದನ್ನು ತಪ್ಪಿಸಲು ಕೃಷಿ ಪದ್ದತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಾವಯವ ಬದಲಾವಣೆ ಮಾಡಿಕೊಳ್ಳುವ ಅಗತ್ಯವಾಗಿದೆ ಎಂದರು.

ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರದಲ್ಲೂ   ಕೃಷಿ ಹೊಂಡ ನಿರ್ಮಿಸಲು ತೀರ್ಮಾನಿಸಲಾಗಿದ್ದು ಈಗಾಗಲೇ 24000 ಕೃಷಿ ಹೊಂಡ ಮಾಡಲಾಗಿದೆ ಇನ್ನೂ ಮುಂದೆ ಹೆಚ್ಚಿನ ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು.  ಕಬ್ಬು ಬೆಳೆಗಾರರಿಗೆ ಕಬ್ಬು ಕಟ್ಟಾವು ಮಾಡಲು  ಯoತ್ರೋಪಕರಣಕ್ಕೆ ಖರೀದಿಸಲು  50 ಲಕ್ಷದ ವರೆಗೂ ಸಬ್ಸಿಡಿ ನೀಡಲಾಗುತ್ತಿದೆ ಎಂದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ  ಹಾಗೂ ಹಳಿಯಾಳ ಶಾಸಕರ ಆರ್.ವಿ. ದೇಶಪಾಂಡೆ ಮಾತನಾಡಿ, ಜೊಯಿಡಾ ತಾಲೂಕಿನಲ್ಲಿ 2779 ಕೃಷಿ ಜಮೀನಿನ ಪೈಕಿ ಎರಡು ಸಾವಿರ ಹೆಕ್ಟೇರ್ ಅಲ್ಲಿ ಭತ್ತ, 60 ಹೆಕ್ಟೇರ್ ಅಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ವರ್ಷಕ್ಕೆ ಆರು ಸಾವಿರ ಕೆ.ಜಿ. ಜೇನು ಉತ್ಪಾದನೆ ಆಗುತ್ತಿದೆ. ತಾಲೂಕಿನಲ್ಲಿ ಕೇವಲ ಶೇ. 6.7 ಅಷ್ಟೇ ರಾಸಾಯನಿಕ ಬಳಕೆ ಆಗುತ್ತಿದೆ. ಅದೂ ಕಡಿಮೆ ಮಾಡಬೇಕು ಎಲ್ಲರೂ ಸಾವಯವ ತಾಲೂಕು ಮಾಡಲು ಸಿದ್ಧರಾಗಬೇಕು,  ಯೋಜನೆ ಯಶಸ್ವಿಗೊಳಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದರು.

 

Related Articles

Comments (0)

Leave a Comment