ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಶ್ರೀ ಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿ ಪ್ರದಾನ

ಬೆಂಗಳೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡ ಅವರಿಗೆ  ಶ್ರೀ ಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ಡಾ.ಬಾಬು ಜಗಜೀವನ್ ರಾಮ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಸೇರಿದಂತೆ  ನಾಡಿನ ಸಂತಶ್ರೇಷ್ಟರ ಸಾನ್ನಿಧ್ಯದಲ್ಲಿ  ದೇವೇಗೌಡರಿಗೆ ಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ತೀವ್ರ ಭಾವೋದ್ವೇಗಕ್ಕೆ ಒಳಗಾದ ದೇವೇಗೌಡರು, ಬದುಕಿನುದ್ದಕ್ಕೂ ನನ್ನ ಪಾಲಿನ ಶಕ್ತಿಯಾಗಿ ಉಳಿದಿರುವ ನನ್ನ ಶ್ರೀಮತಿ ಚನ್ನಮ್ಮ ಅವರಿಗೆ ನನ್ನ ಯಶಸ್ಸಿನ ಶ್ರೇಯಸ್ಸು ಸಲ್ಲಬೇಕು, ಅವರು ಎಲ್ಲಾ ಹಂತದಲ್ಲಿ ನನ್ನ ಜೊತೆ ನಿಂತಿದ್ದಾರೆ. ಅನೇಕ ಕಷ್ಟಗಳ ಜೊತೆಗೆ ನನ್ನ ಗೌರವ ಉಳಿಸಿದ್ದಾರೆ. ಅವರ ಕೊಡುಗೆ ನೆನೆಸಿಕೊಳ್ಳುತ್ತೇನೆ ಎಂದು ಪತ್ನಿಯನ್ನು ನೆನೆದು ಕಣ್ಣೀರು ಹಾಕಿದರು.

ನನ್ನನ್ನು ಎಲ್ಲಾ ಸಮಾಜದವರು ಬೆಳೆಸಿದ್ದಾರೆ. ಯಾವುದೇ ಒಂದು ಸಮಾಜ ಅಲ್ಲ, ಎಲ್ಲರೂ ನನ್ನನ್ನು ಎತ್ತಿ ಆಡಿಸಿಕೊಂಡಿ ಬಂದಿದ್ದಾರೆ. ಪ್ರಧಾನಿಯಾಗಿ ರೈತನ ಮಗ ಕೆಲಸ ಮಾಡಿದ್ದಾನೆ. ನಾಲ್ಕು ಎಕರೆ ಜಮೀನು ಇಟ್ಟುಕೊಂಡಿದ್ದ ರೈತನ ಮಗ ಆ ಸ್ಥಾನಕ್ಕೆ ಹೋಗಬೇಕಾದರೆ ಈ ರಾಜ್ಯದ ಎಲ್ಲ ಸಮಾಜಗಳು ಸಹಾಯ ಮಾಡಿದ್ದಾರೆ. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಮಾಜಿ ಪ್ರಧಾನಿಗಳು ಭಾವುಕರಾಗಿ ನುಡಿದರು.

ರಾಮಕೃಷ್ಣ ಹೆಗಡೆ ಅವರಿಗೆ ಒಮ್ಮೆ ಕಾಲಿಗೆ ನಮಸ್ಕಾರ ಮಾಡಿ, ಪಕ್ಷ ಉಳಿಸೋಣ. ನಡೆಯಿರಿ ಎಂದು ಹೇಳಿದ್ದೆ. ಆದರೆ ಅವರು, “ನೀನು ಶತ್ರುಗಳನ್ನು ಸೃಷ್ಟಿ ಮಾಡಿಕೊಳ್ತೀಯಾ. ನೀನು ಸತ್ಯ ಹೇಳ್ತೀಯಾ, ಅದರ ಜೊತೆಗ ನಗ್ನಸತ್ಯಗಳನ್ನ ಹೇಳ್ತೀಯಾ. ಅದಕ್ಕೆ ನಿನಗೆ ಹೆಚ್ಚು ಶತ್ರುಗಳು ಹುಟ್ಟಿಕೊಳ್ಳತ್ತಾರೆ” ಎಂದು ಹೇಳಿದ್ದರು. ಅವರ ಮಾತು ನನಗೆ ಚೆನ್ನಾಗಿ ನೆನಪಿದೆ. ಆದರೆ ಸತ್ಯಕ್ಕೆ ನಾನು ಯಾವತ್ತೂ ಬೆನ್ನು ತೋರಿಸಿದವನಲ್ಲ ಎಂದು ದೇವೇಗೌಡರು ಹಳೆಯ ರಾಜಕಾರಣವನ್ನು ನೆನಪು ಮಾಡಿಕೊಂಡರು.

Related Articles

Comments (0)

Leave a Comment