ಲೀಡ್ ತಂದರೆ ಸಚಿವ ಸ್ಥಾನ, ಇಲ್ಲದಿದ್ದರೆ ನಿಗಮ ಮಂಡಳಿಯೂ ಇಲ್ಲ: ಬಳ್ಳಾರಿ ಶಾಸಕರಿಗೆ ಶಾಕ್ ನೀಡಿದ ಸಿದ್ಧು

ಬಳ್ಳಾರಿ: ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಎರಡೂ ಸಹ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿವೆ. ಅದರಲ್ಲೂ ಕಾಂಗ್ರೆಸ್ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಗಿಂತ 30 ಸಾವಿರ ಲೀಡ್ ತಂದು ಕೊಡುವಂತೆ ತನ್ನ ಶಾಸಕರಿಗೆ ಟಾರ್ಗೆಟ್ ನೀಡಿದೆ. ಲೀಡ್ ತಂದ ಶಾಸಕರಿಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಆದ್ಯತೆ ನೀಡಲಾಗುವುದು. ಇಲ್ಲದಿದ್ದರೆ ನಿಗಮ ಮಂಡಳಿಯ ನಿರೀಕ್ಷೆಯನ್ನು ಇಟ್ಟುಕೊಳ್ಳ ಬೇಡಿ ಎನ್ನುವ ಮೂಲಕ ಶಾಸಕರಿಗೆ ಶಾಕ್ ನೀಡಿದೆ.

ನಿನ್ನೆಯೆ ಪ್ರಚಾರ ಕಾರ್ಯ ಮುಗಿದರು ಹೊಸಪೇಟೆಯಲ್ಲೆ ಉಳಿದುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ರಾತ್ರಿ ಬಳ್ಳಾರಿಯ ಆರು ಕಾಂಗ್ರೆಸ್ ಶಾಸಕರ ಸಭೆ ನಡೆಸಿ ಶಾಸಕರಿಗೆ ಟಾರ್ಗೆಟ್ ನೀಡಿದ್ದಾರೆ. ಈ ವೇಳೆ ಬಳ್ಳಾರಿ ಚುನಾವಣೆ ಉಸ್ತುವಾರಿ ಡಿ.ಕೆ.ಶಿವಕುಮಾರ್ ಸಹ ಸಿದ್ಧರಾಮಯ್ಯ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಪ್ರತಿ ಶಾಸಕರಿಗು ತಮ್ಮ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಕನಿಷ್ಟ 30 ಸಾವಿರ ಮತಗಳ ಲೀಡ್ ತಂದು ಕೊಡಬೇಕು. ಯಾರು ಹೆಚ್ಚು ಲೀಡ್ ಕೊಡ್ತಾರೋ ಅವರ ಹೆಸರನ್ನು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪರಿಗಣಿಸುವುದಾಗಿ ಶಾಕ್ ನೀಡಿದ್ದಾರೆ. ಮೊದಲ ಬಾರಿ ಗೆದ್ದ ಗಣೇಶ್ ಇರಬಹುದು. ನಾಲ್ಕನೆ ಬಾರಿ ಗೆದ್ದ ಪರಮೇಶ್ವರ್ ನಾಯಕ್ ಇರಬಹುದು ಎಲ್ಲರು ಒಂದೇ. ಚುನಾವಣೆಯನ್ನ ಪ್ರತಿಷ್ಟೆಯಾಗಿ ತಗೆದುಕೊಂಡು ಲೀಡ್ ಕೊಡಿ ಅಷ್ಟೆ ಎಂದು ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ.

ಬೇರೆ ಸಂದರ್ಭವಾಗಿದ್ದರೆ ಸೀನಿಯಾರಿಟಿ ಹಾಗೂ ಸಾಮರ್ಥ್ಯ ನೋಡಿ ಸಂಪುಟಕ್ಕೆ ಸೇರಿಸುವ ಪ್ರಯತ್ನ ಮಾಡಬಹುದಿತ್ತು. ಆದ್ರೆ, ಪರಿಸ್ಥಿತಿ ಈಗ ಹಾಗಿಲ್ಲ. ಮುಂದಿನ ಲೋಕಸಭಾ ಚುಬಾವಣಾ ದೃಷ್ಟಿಯಿಂದ ಈ ಉಪ ಚುನಾವಣೆ ಗೆಲ್ಲಲೇಬೇಕು. ನೀವುಗಳು ಒಗ್ಗಟ್ಟಿನಿಂದ ಇದ್ದಿದ್ದರೆ ಅಭ್ಯರ್ಥಿಯು ಬೇರೆಯವರಾಗಿರುತ್ತಿದ್ದರು. ನಿಮ್ಮ ಒಳ ಜಗಳದಿಂದಾಗಿ ಉಗ್ರಪ್ಪ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಸೋತರೆ ರಾಷ್ಟ್ರ ಮಟ್ಟದಲ್ಲು ಬೇರೆ ಸಂದೇಶ ರವಾನೆಯಾಗಲಿದೆ. ಹಾಗಾಗಿ ಈ ಚುನಾವಣೆ ಗೆಲ್ಲಲೇಬೇಕು ಎಂದು ಕಡಕ್ಕಾಗಿ ಹೇಳಿದ್ದಾರೆ.

ಯಾರು ಹೆಚ್ಚು ಲೀಡ್ ಕೊಡ್ತಾರೋ ಎಲ್ಲಾ ಹೆಸರನ್ನು ಸಂಪುಟ ವಿದ್ತರಣೆಯಲ್ಲಿ ಪರಿಗಣಿಸಿ ಆದ್ಯತೆ ನೀಡುತ್ತೇವೆ. ಯಾರ ಕ್ಷೇತ್ರದಲ್ಲಿ ಬಿಜೆಪಿ ಲೀಡ್ ತಗೆದುಕೊಳ್ಳುತ್ತೋ ಅವರು ನಿಗಮ ಮಂಡಳಿ ಬಗ್ಗೆಯು ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ ಎಂದಿದ್ದಾರೆ. ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ಕಂಡು ಬಳ್ಳಾರಿ ಶಾಸಕರು ಫುಲ್ ಶಾಕ್‌ಗೆ ಒಳಗಾಗಿದ್ದಾರೆ. ಇಲ್ಲಾ ಸಾರ್ ಎಲ್ರೂ ಲೀಡ್ ಕೊಡ್ತಿವಿ ಎಂದಿದ್ದಾರೆ. ಏನಾಗುತ್ತೆ ಅನ್ನೋದು ರಿಸೆಲ್ಟ್ ಬಂದಮೇಲೆ‌ ಗೊತ್ತಾಗುತ್ತೆ ಆಮೇಲೆ ಮಾತಾಡ್ತೀನಿ. ಲೀಡ್ ಇಲ್ಲದಿದ್ರೆ ಯಾವ ಸ್ಥಾನಮಾನದ ಬಗ್ಗೆಯು ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಹೇಳಿ ಕಳುಹಿಸಿದ್ದಾರೆ. ಇದೀಗ ತಮ್ಮ ತಮ್ಮ ಕ್ಷೇತ್ರದಲ್ಲಿ ಲೀಡ್ ಕೊಡಲೇಬೇಕಾದ ಅನಿವಾರ್ಯತೆಗೆ ಬಳ್ಳಾರಿ ಕಾಂಗ್ರೆಸ್ ಶಾಸಕರು ಸಿಲುಕಿದ್ದಾರೆ.

Related Articles

Comments (0)

Leave a Comment