ಯಡಿಯೂರಪ್ಪನ್ನ ಜೈಲಿಗೆ ಹಾಕ್ತೀವಿ ಅಂತ ಹೆದರಿಸಿ ಮುಖ್ಯಮಂತ್ರಿ ಹುದ್ದೆ ಇಂದ ಕೆಳಗಿಳಿಸಿದ್ರು, ಪಾಪ ಕಣ್ಣೀರು ಹಾಕ್ತಾ ರಾಜೀನಾಮೆ ಕೊಟ್ರು: ಸಿದ್ದರಾಮಯ್ಯ

ಹಾವೇರಿ: ಬಿಜೆಪಿ ಸರ್ಕಾರದ ಎಲ್ಲಾ ಕರ್ಮಕಾಂಡಗಳಲ್ಲಿ ಬಸವರಾಜ ಬೊಮ್ಮಾಯಿಯವರ ಪಾಲುದಾರಿಕೆ ಇದೆ. ಯಡಿಯೂರಪ್ಪ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರ ಒಂದಾ ಎರಡಾ? ಬೊಮ್ಮಾಯಿ ಈಗ ಮುಖ್ಯಮಂತ್ರಿ ಆದ ಕೂಡಲೆ ಹಿಂದೆ ಮಾಡಿದ್ದ ಕರ್ಮಗಳೆಲ್ಲಾ ಹೋಗುತ್ತಾ? ಯಡಿಯೂರಪ್ಪನ್ನ ಜೈಲಿಗೆ ಹಾಕ್ತೀವಿ ಅಂತ ಹೆದರಿಸಿ ಮುಖ್ಯಮಂತ್ರಿ ಹುದ್ದೆ ಇಂದ ಕೆಳಗಿಳಿಸಿದ್ರು, ಪಾಪ ಕಣ್ಣೀರು ಹಾಕ್ತಾ ರಾಜೀನಾಮೆ ಕೊಟ್ಟರು. ಯಡಿಯೂರಪ್ಪ ಕೆಳಗಿಳಿಯೋದನ್ನೇ ಕಾಯ್ತಾ ಇದ್ರು ಬೊಮ್ಮಾಯಿ ಎಂದು ವಿರೋಧಪಕ್ಷ ನಾಯಕ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಹಾನಗಲ್ ವಿಧಾನಸಭೆ ಕ್ಷೇತ್ರದ ಮಾಸನಕಟ್ಟೆ ಗ್ರಾಮದಲ್ಲಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ಕೊವಿಡ್ ಸಂದರ್ಭದಲ್ಲಿ ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಶ್ರೀನಿವಾಸ್ ಮಾನೆ ಮಾಡಿದ್ದಾರೆ. ಕಷ್ಟಕಾಲದಲ್ಲಿ ತಮ್ಮ ನೆರವಿಗೆ ಧಾವಿಸಿದ್ದರಿಂದ ಜನರೇ ಅವರನ್ನು ಆಪದ್ಬಾಂಧವ ಎಂದು ಕರೆಯುತ್ತಿದ್ದಾರೆ. ಈ ಬಾರಿ ಅವರನ್ನು ಗೆಲ್ಲಿಸಲೇ ಬೇಕು ಎಂದು ನಿರ್ಧಾರ ಮಾಡಿದ್ದಾರೆ ಎಂದ್ರು.

ನಿನ್ನೆ ಸಂಗೂರು ಸಕ್ಕರೆ ಕಾರ್ಖಾನೆ ಬಗ್ಗೆ ಮಾತಾಡಿದ್ದೆ. ಈ ಕಾರ್ಖಾನೆಯ ಆಡಳಿತ ಮಂಡಳಿಗೆ ಉದಾಸಿ ಅವರು ಅಧ್ಯಕ್ಷ ಮತ್ತು ಸಜ್ಜನರ್ ಉಪಾಧ್ಯಕ್ಷ ಆಗಿದ್ದರು. ಕಾರ್ಖಾನೆ ದಿವಾಳಿಯಾಗಿದ್ದು ನಮ್ಮಿಂದಲೋ? ಸಜ್ಜನರ್ ಮತ್ತು ಉದಾಸಿ ಇಂದಲೋ? ಇಂಥವರು ಸಜ್ಜನರಲ್ಲ ದುರ್ಜನರು. ಭ್ರಷ್ಟಾಚಾರದ ಆರೋಪ ಇರುವ ವ್ಯಕ್ತಿಯನ್ನು ಶಾಸಕರಾಗಿ ಆಯ್ಕೆ ಮಾಡ್ತೀರಾ? ಸಜ್ಜನರ್ ಮೇಲೆ ನನಗೆ ವೈಯಕ್ತಿಕ ದ್ವೇಷ ಇಲ್ಲ. ಆದರೆ ಸತ್ಯ ಜನರಿಗೆ ಗೊತ್ತಾಗಬೇಕಲ್ವಾ? ಇವತ್ತು ಸಕ್ಕರೆ ಕಾರ್ಖಾನೆಯನ್ನು ಸಿದ್ದೇಶ್ವರ ಅವರಿಗೆ ಕೊಟ್ಟಿರೋದು ಯಾರು? ಎಂದ್ರು.

ರಾಜ್ಯದಲ್ಲಿ ಬಿಜೆಪಿ ಬಂದು ಎರಡೂ ಕಾಲು ವರ್ಷ ಆಯ್ತು? ಈ ಸರ್ಕಾರ ಜನರಿಗಾಗಿ ಏನಾದ್ರೂ ಮಾಡಿದೆಯಾ? ನಾನು ಏಳು ಕೆ.ಜಿ ಅಕ್ಕಿ ಉಚಿತವಾಗಿ ಕೊಡ್ತಿದ್ದೆ. ಈಗಿನ ಬಿಜೆಪಿ ಸರ್ಕಾರ ಅದನ್ನು ಐದು ಕೆ.ಜಿ ಗೆ ಇಳಿಸಿದೆ. ಅದಕ್ಕೆ ನಾನು ಕೊರೊನಾ ಇದೆ, ಲಾಕ್ ಡೌನ್ ಇದೆ, ಜನರಿಗೆ ದುಡಿಮೆ ಇಲ್ಲ ಹತ್ತು ಕೆ.ಜಿ ಅಕ್ಕಿ ಕೊಡಿ, ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ಧನಸಹಾಯ ಮಾಡಿ ಎಂದು ಸದನದಲ್ಲಿ ಹೇಳಿದೆ, ನನ್ನ ಮಾತನ್ನು ಕಿವಿಗೆ ಹಾಕೊಂಡಿಲ್ಲ. ಜನರ ತೆರಿಗೆ ಹಣವನ್ನು ಜನರಿಗೆ ಖರ್ಚು ಮಾಡಲು ಏನು ರೋಗ ಸರ್ಕಾರಕ್ಕೆ? ಮುಂದಿನ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಆಗ ಬಡವರಿಗೆ ಹತ್ತು ಕೆ.ಜಿ ಉಚಿತ ಅಕ್ಕಿ ಕೊಡುತ್ತೇವೆ ಎಂದ್ರು.

ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಭಾಗ್ಯ, ಸಾಲ ಮನ್ನಾ, ಶಾದಿ ಭಾಗ್ಯ, ಪಶು ಭಾಗ್ಯ, ಇಂದಿರಾ ಕ್ಯಾಂಟೀನ್, ಅನುಗ್ರಹ ಮುಂತಾದ ಯೋಜನೆಗಳನ್ನು ಕೈಬಿಟ್ಟಿದ್ದಾರೆ. ಕೇಳಿದ್ರೆ ಕೊರೊನಾಗೆ ಖರ್ಚು ಮಾಡಿದೀವಿ , ನಮ್ಮ ಬಳಿ ದುಡ್ಡಿಲ್ಲ ಎನ್ನುತ್ತಾರೆ. ಈ ಸರ್ಕಾರ ಕೊರೊನಾ ಕಾಲದಲ್ಲೂ ಲೂಟಿ ಮಾಡಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಇಂದಿರಾ ಕ್ಯಾಂಟೀನ್ ಆರಂಭ ಮಾಡುತ್ತೇವೆ ಎಂದ್ರು.

ನಾನು ಮುಖ್ಯಮಂತ್ರಿ ಆಗುವಾಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನ ಕೇವಲ 400 ಕೋಟಿ ರೂಪಾಯಿ ಇತ್ತು, ನನ್ನ ಕಡೇ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದ ಅನುದಾನ 3,100 ಕೋಟಿ. ಬಡವರಿಗೆ ಅಕ್ಕಿ ಕೊಟ್ಟು ಜನರನ್ನು ಸೋಮಾರಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳ್ತಾರೆ. ಹಸಿವಿನ ಸಂಕಟ ಗೊತ್ತಿಲ್ಲದವರು ಮಾತ್ರ ಇಂಥಾ ಹೇಳಿಕೆ ಕೊಡಲು ಸಾಧ್ಯ ಎಂದ್ರು.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಏಳು ವರ್ಷ ತುಂಬಿದೆ. ಸುಳ್ಳು ಭರವಸೆ ನೀಡೋದು ಬಿಟ್ಟು ಜನರಿಗೆ ಬೇರೇನೂ ಮಾಡಿಲ್ಲ. ಅಚ್ಚೇ ದಿನ್ ಬರುತ್ತೆ ಅಂತ ಹೇಳಿದ್ರು, ಬಂತಾ? ಸಬ್ ಕ ಸಾಥ್, ಸಬ್ ಕ ವಿಕಾಸ್ ಅಂತ ಬಾಯಲ್ಲಿ ಹೇಳ್ತಾರೆ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡ್ತಾರೆ. ಎಲ್ಲಾ ಧರ್ಮದ, ಜಾತಿಯ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಏಕೈಕ ಪಕ್ಷ ಕಾಂಗ್ರೆಸ್. ಕಾರಣ ನಾವು ಸಂವಿಧಾನದ ಹಾದಿಯಲ್ಲಿ ನಡೆಯುವವರು. ಸಂಪತ್ತಿನ ಸಮಾನ ಹಂಚಿಕೆ, ಸರ್ವರಿಗೂ ಸಮಾನ ಅವಕಾಶ, ಪರಸ್ಪರ ಪ್ರೀತಿ ವಿಶ್ವಾಸ ದಿಂದ ಬದುಕಬೇಕು ಎಂದು ನಂಬಿದವರು ನಾವು. ಮಹಾತ್ಮ ಗಾಂಧಿಯವರ ಚಿಂತನೆಗಳು ನಮಗೆ ಪ್ರೇರಣೆ ಎಂದ್ರು.

ದೇಶದ ಸುಮಾರು 14% ಜನಸಂಖ್ಯೆ ಇರುವ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಒಬ್ಬನೇ ಒಬ್ಬ ಶಾಸಕನಾಗಲೀ, ಸಂಸದನಾಗಲೀ, ಮಂತ್ರಿಯಾಗಲೀ ಬಿಜೆಪಿ ಪಕ್ಷದಲ್ಲಿ ಇಲ್ಲ. ಯಾಕೆ ಅವರು ದೇಶದ ನಾಗರಿಕರಲ್ಲವೇ? ಯಡಿಯೂರಪ್ಪ ಅವರ ಸರ್ಕಾರ ಹಾವೇರಿಯಲ್ಲಿ ರೈತರ ಮೇಲೆ ಗುಂಡು ಹಾರಿಸಿ ಕೊಲ್ಲಿಸಿತ್ತು. ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರ ಮಗ ಕಾರು ಹತ್ತಿಸಿ, ನಾಲ್ವರು ರೈತರನ್ನು ಹತ್ಯೆ ಮಾಡಿದ್ದಾನೆ. ಇವರನ್ನು ಕೊಲೆಗಡುಕರು, ಗೂಂಡಾಗಳ ಸರ್ಕಾರ ಅನ್ನದೆ ಇನ್ನೇನು ಹೇಳಬೇಕು? ಎಂದ್ರು.

ಈಗ ಪೆಟ್ರೋಲ್ ಬೆಲೆ 110, ಡೀಸೆಲ್ ಬೆಲೆ 100, ಗ್ಯಾಸ್ ಬೆಲೆ 950 ರೂಪಾಯಿ ಆಗಿದೆ. ಬಡವರು ಹೇಗೆ ಬದುಕಬೇಕು? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದು ಯುವಕರಿಗೆ ಮೋದಿ ಭರವಸೆ ನೀಡಿದ್ರು, ಪಾಪ ಯುವಕರು ನಂಬಿ ಓಟು ಹಾಕಿ ಗೆಲ್ಲಿಸಿದ್ರು, ಈಗ ಉದ್ಯೋಗ ಕೇಳಿದ್ರೆ ಪಕೋಡ ಮಾರಿ ಎಂದು ಬಿಟ್ಟಿಸಲಹೆ ಕೊಡ್ತಾರೆ. ಹೋಗಲಿ ಪಕೋಡಾ ಆದ್ರೂ ಮಾರಲು ಸಾಧ್ಯವಿದೆಯಾ? ಅಡುಗೆ ಎಣ್ಣೆ ಬೆಲೆ 200 ರೂಪಾಯಿ ಆಗಿದೆ. ಮೋದಿ ಮೋದಿ ಎಂದವರಿಗೆ ತಿರುಪತಿ ನಾಮ ಹಾಕಿದ್ದಾರೆ. ಅದಕ್ಕೆ ಈಗ ಯಾರೂ ಸಾರ್ವಜನಿಕ ಸಭೆಗಳಲ್ಲಿ ಮೋದಿ ಮೋದಿ ಅಂತ ಕೂಗಾಡ್ತಿಲ್ಲ ಎಂದ್ರು.

ಕೊರೊನಾ ಓಡಿಸಲು ಲಸಿಕೆ ನೀಡುವ ಬದಲು ಜನರಿಗೆ ದೀಪ ಹಚ್ಚಿ, ಗಂಟೆ ಬಾರಿಸಿ ಎಂದು ದಾರಿ ತಪ್ಪಿಸಿದರು. ಮೋದಿ ತಮಗೆ 56 ಇಂಚಿನ ಎದೆ ಇದೆ ಎನ್ನುತ್ತಿದ್ದರು, ಎದೆ ಎಷ್ಟು ಇಂಚಿದೆ ಎಂಬುದು ಮುಖ್ಯವಲ್ಲ. ಆದ್ರೆ ಆ ಎದೆಯೊಳಗೆ ಬಡವರಿಗಾಗಿ, ಶೋಷಿತರಿಗಾಗಿ ಮಿಡಿಯುವ ತಾಯಿ ಹೃದಯ ಇದೆಯಾ? ಎಂಬುದು ಮುಖ್ಯ. ಮೋದಿಯನ್ನು, ಆರ್.ಎಸ್.ಎಸ್ ಅನ್ನು ಹೊಗಳಿ ಹೊಗಳಿ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾರೆ. ಇವರು ರಿಮೋಟ್ ಮುಖ್ಯಮಂತ್ರಿ, ಇವರನ್ನು ಬಿಜೆಪಿ ಕಂಟ್ರೋಲ್ ಮಾಡುತ್ತಿದೆ ಎಂದ್ರು.

ಒಂದು ಸಾವಿರ ಕೋಟಿ ಬೆಲೆಬಾಳುವ ಜಮೀನನ್ನು ಕೇವಲ 50 ಕೋಟಿಗೆ ಆರ್.ಎಸ್.ಎಸ್ ಮೂಲದ ಶಿಕ್ಷಣ ಸಂಸ್ಥೆಗೆ ನೀಡಿದ್ದಾರೆ. ಇದು ಬಹುದೊಡ್ಡ ಹಗರಣ. ಇದನ್ನು ಕೇಳಿದ್ರೆ ಸಂಘಪರಿವಾರದವರು ದೇಶಭಕ್ತರು ಎನ್ನುತ್ತಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಒಬ್ಬನೇ ಒಬ್ಬ ಆರ್.ಎಸ್.ಎಸ್ ನಾಯಕನ ಹೆಸರು ಹೇಳಲಿ ನೋಡೋಣ. ಇಂಥವರು ಬೇರೆಯವರಿಗೆ ದೇಶಭಕ್ತಿ ಪಾಠ ಮಾಡ್ತಾರೆ ಎಂದ್ರು.

ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರಿಗೆ ಮತ ನೀಡಿ, ವಿಧಾನಸಭೆಗೆ ಅವರನ್ನು ಕಳಿಸಿಕೊಡಿ ಎಂದು ಕ್ಷೇತ್ರದ ಮತದಾರರಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ ಎಂದ್ರು.

Related Articles

Comments (0)

Leave a Comment