ಕಾವೇರಿ ಆರತಿಯಿಂದ ಅಣೆಕಟ್ಟಿಗೆ ತೊಂದರೆಯಾಗಲ್ಲ, ತಪ್ಪುಗ್ರಹಿಕೆಯಿಂದ ವಿರೋಧ; ಡಿಸಿಎಂ
- by Suddi Team
- June 25, 2025
- 9 Views

ಬೆಂಗಳೂರು:ಕಾವೇರಿ ಆರತಿ ಕಾರ್ಯಕ್ರಮದಿಂದ ಅಣೆಕಟ್ಟಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕೆ ರೈತರು ಕಾವೇರಿ ಆರತಿ ವಿರೋಧಿಸುತ್ತಿದ್ದಾರೆ ಆದರೆ ಆ ರೀತಿ ಏನೂ ಆಗುವುದಿಲ್ಲ, ನಮಗೂ ಜವಾಬ್ದಾರಿ ಇದೆ, ಎಲ್ಲರೊಂದಿಗೆ ಮತ್ತೆ ಸಭೆ ನಡೆಸಿ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮ ಸಂಬಂಧ ಮಂಡ್ಯ ಜಿಲ್ಲೆ ರೈತ ಹಾಗೂ ಇತರೆ ಸಂಘಟನೆ ಮುಖಂಡರು ಹಾಗೂ ಜನಪ್ರತಿನಿಧಿಗಳ ಜೊತೆ ಡಿಸಿಎಂ ಸಭೆ ನಡೆಸಿದರು. ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಮುಂದಿನ ಎರಡು ಮೂರು ದಿನಗಳಲ್ಲಿ ಕಾವೇರಿ ಆರತಿ ಕಾರ್ಯಕ್ರಮದ ಸ್ವರೂಪ ಪ್ರಕಟಿಸಲಾಗುವುದು ಎಂದರು.
ಕಾವೇರಿ ಆರತಿ ಕಾರ್ಯಕ್ರಮದಿಂದ ಅಣೆಕಟ್ಟೆಗೆ ಏನಾದರೂ ತೊಂದರೆ ಆಗಬಹುದು ಎಂಬ ಕಾರಣಕ್ಕೆ ರೈತರು ಅಪಸ್ವರ ಎತ್ತಿದ್ದರು. ಈ ಕಾರ್ಯಕ್ರಮ ನಡೆಯುವ ಜಾಗ ಅಣೆಕಟ್ಟಿನಿಂದ ಸಾಕಷ್ಟು ದೂರದಲ್ಲಿದೆ. ಬೆಂಗಳೂರಿಗೆ ನೀರು ಹರಿದು ಹೋಗುವ ಜಾಗದಲ್ಲಿ ಸ್ಥಳವನ್ನು ಸೌಂದರ್ಯೀಕರಣಗೊಳಿಸಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಕೆಲವರಿಗೆ ಈ ವಿಚಾರಗಳು ತಿಳಿದಿಲ್ಲ. ಹೀಗಾಗಿ ಅಣೆಕಟ್ಟಿಗೆ ಹೆಚ್ಚುಕಮ್ಮಿ ಆಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದು ಅವರ ತಪ್ಪಲ್ಲ. ಅಣೆಕಟ್ಟು ವಿಚಾರದಲ್ಲಿ ನಮಗೂ ಜವಾಬ್ದಾರಿ ಇದೆ. ಈ ಕಾರ್ಯಕ್ರಮ ಕಾವೇರಿ ತಾಯಿಗೆ ಪ್ರಾರ್ಥಿಸುವ ಕಾರ್ಯಕ್ರಮ. ಕೊಡಗು, ಮಂಗಳೂರು, ಮೈಸೂರು, ಮಂಡ್ಯ ಸಂಸ್ಕೃತಿ ಈ ಕಾರ್ಯಕ್ರಮದಲ್ಲಿರಲಿದೆ ಎಂದರು.
ಸುಮಾರು 2 ಸಾವಿರ ಜನರಿಗೆ ನೇರ ಉದ್ಯೋಗ ಸಿಗಲಿದೆ,ಈ ಉದ್ಯೋಗ ಕೇವಲ ಮಂಡ್ಯ ಮೈಸೂರು ಭಾಗದವರಿಗೆ ಸಿಗಬೇಕು ಎಂದು ಸೂಚನೆ ನೀಡಲಾಗಿದೆ. ಸ್ಥಳೀಯ ಪುರೋಹಿತರು, ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು. ಆದಿ ಚುಂಚನಗಿರಿ ಮಠದಲ್ಲಿ ಪುರೋಹಿತರಿಗೆ ತರಬೇತಿ ನೀಡಲಾಗುವುದು. 300ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಕಾವೇರಿ ಹುಟ್ಟುವ ಕೊಡಗಿನಿಂದ ಕಾವೇರಿ ಸಮುದ್ರಕ್ಕೆ ಸೇರುವವರೆಗೂ ಎಷ್ಟು ಪ್ರದೇಶಗಳಲ್ಲಿ ವಿಭಿನ್ನ ಸಂಸ್ಕೃತಿ ಇದೆಯೋ ಅವುಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಳಗೊಳ್ಳಬೇಕು ಎಂದು ತಿಳಿಸಿದರು.
“ಸಧ್ಯಕ್ಕೆ ವಾರಕ್ಕೆ ಮೂರು ದಿನ ಈ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಇನ್ನು ಕಾರ್ಯಕ್ರಮದ ಬಳಿ 10 ಸಾವಿರ ಜನರಿಗೆ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಸುಮಾರು 30% ಪಾವತಿ ಪ್ರವೇಶವಿರುತ್ತದೆ. 70% ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಕಾರ್ಯಕ್ರಮದ ವೇಳೆ ವಾಹನ ನಿಲುಗಡೆಗಾಗಿ 70-80 ಎಕರೆ ಜಾಗವನ್ನು ಮೀಸಲಿಡಲಾಗಿದೆ. ರಸ್ತೆಗಳನ್ನು ಉನ್ನತೀಕರಣಗೊಳಿಸಲಾಗುವುದು”ಎಂದು ವಿವರಿಸಿದರು.
Related Articles
Thank you for your comment. It is awaiting moderation.
Comments (0)