ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ವರ್ಸೆಸ್ ನಂದಿನಿ..!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಭಾರಿ ಸದ್ದು ಮಾಡಿದ್ದ ಅಮುಲ್ ವರ್ಸೆಸ್ ನಂದಿನಿ ವಿಷಯ ಮತ್ತೆ ಮುನ್ನಲೆಗೆ ಬಂದಿದೆ. ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಮಳಿಗೆ ತೆರೆದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು‌ ಚರ್ಚೆಯಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ನಂದಿನಿ ಮಳಿಗೆಗಳ ಆರಂಭಕ್ಕೆ ಸೂಚಿಸುವ ಮೂಲಕ ಟೀಕಾಸ್ತ್ರಗಳಿಂದ ಪಾರಾಗುವ ತಂತ್ರ ಅನುಸರಿಸಿದೆ.

ರಾಜ್ಯ ರಾಜಧಾನಿಯಲ್ಲಿರುವ ನಮ್ಮ ಮೆಟ್ರೋದ 10 ನಿಲ್ದಾಣಗಳಲ್ಲಿ ವಾಣಿಜ್ಯ ಮಳಿಗೆ ಆರಂಭಕ್ಕೆ ಕರೆಯಲಾಗಿದ್ದ ಜಾಗತಿಕ ಟೆಂಡರ್‌ನಲ್ಲಿ ಕೇವಲ ಗುಜರಾತ್‌ನ ಅಮುಲ್ ಸಂಸ್ಥೆ ಮಾತ್ರ ಬಿಡ್ ಮಾಡಿ‌ ಎರಡು ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆಯನ್ನು ತೆರೆಯಲಾಗಿದೆ. ಮಳಿಗೆ ಆರಂಭವಾಗುವವರೆಗೂ ಇದು ಸುದ್ದಿಯೇ ಆಗಿರಲಿಲ್ಲ, ಕೆಎಂಎಫ್ ಕೂಡ ಬಿಡ್‌ನಲ್ಲಿ ಭಾಗಿಯಾಗಿರಲಿಲ್ಲ. ಆದರೆ, ಅಮುಲ್ ಮಳಿಗೆ ಆರಂಭವಾಗುತ್ತಿದ್ದಂತೆ ನೆಟ್ಟಿಗರು ಮಳಿಗೆ ಫೋಟೋ ಹಂಚಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣೆ ವೇಳೆ ಕಾಂಗ್ರೆಸ್ ನಾಯಕರು ಅಮುಲ್ ವಿರುದ್ಧ ಮತ್ತು ನಂದಿನಿ ಪರ ನೀಡಿದ್ದ ಹೇಳಿಕೆಗಳನ್ನು ನೆನಪಿಸಿದರು. ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಕೂಡ ಸರ್ಕಾರದ ವಿರುದ್ಧ ಟೀಕೆಯ ಸುರಿಮಳೆ ಸುರಿಸಿತು.

ಅಮುಲ್ ವಿವಾದ ಮುನ್ನಲೆಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ತೆರೆಯುವಂತೆ ಸೂಚಿಸಿದೆ. ಈ ಕುರಿತು ಅಧಿಕೃತ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, “ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆ ತೆರೆಯಲು ಬಿಎಂಆರ್‌ಸಿಎಲ್‌ಗೆ ಅರ್ಜಿ ಹಾಕಲು ಕೆಎಂಎಫ್‌ಗೆ ಸೂಚನೆ ನೀಡಿದ್ದು, 10 ಸ್ಥಳಗಳ ಪೈಕಿ 8 ಕಡೆಗಳಲ್ಲಿ ನಂದಿನಿ ಮಳಿಗೆ ತೆರೆಯಲು ಅವಕಾಶ ನೀಡುವಂತೆ ನಿರ್ದೇಶನ ನೀಡಿದ್ದೇನೆ” ಎಂದು ತಿಳಿಸಿದರು.

“ಬಿಎಂಆರ್‌ಸಿಎಲ್ ಅವರು ಟೆಂಡರ್ ಕರೆದಿದ್ದು, ಅಮುಲ್ ಹೊರತಾಗಿ ಬೇರೆ ಯಾರೂ ಮಳಿಗೆಗಳಿಗೆ ಅರ್ಜಿ ಹಾಕಿಲ್ಲ. ಕೆಎಂಎಫ್ ಕೂಡ ಅರ್ಜಿ ಹಾಕಿರಲಿಲ್ಲ. ಈಗ ಕೆಎಂಎಫ್‌ನವರಿಗೆ ನಾವು ಅರ್ಜಿ ಹಾಕುವಂತೆ ಸೂಚಿಸಿದ್ದು, ಟೆಂಡರ್ ಕರೆಯಲಾಗಿದ್ದ 10 ಕಡೆಗಳ ಪೈಕಿ ಎರಡು ಕಡೆ ಅಮುಲ್ ಅವರು ಜಾಗತಿಕ ಟೆಂಡರ್‌ನಲ್ಲಿ ಅರ್ಜಿ ಹಾಕಿ ಮಳಿಗೆ ತೆರೆದಿದ್ದಾರೆ. ತೆರೆಯಲಾಗಿರುವ ಮಳಿಗೆ ಮುಚ್ಚಿಸುವುದು ಸರಿಯಲ್ಲ. ಉಳಿದ 8 ಸ್ಥಳಗಳಲ್ಲಿ ಕೆಎಂಎಫ್ ಮಳಿಗೆಗೆ ಅವಕಾಶ ನೀಡಿ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.

ಅಮುಲ್ ಟೀಕಾಸ್ತ್ರಕ್ಕೆ ಪ್ರತ್ಯಸ್ತ್ರವಾಗಿ ನಂದಿನಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ಬಳಸಿಕೊಂಡು ಟೀಕಾಕಾರರು ಮತ್ತು ಪ್ರತಿಪಕ್ಷಗಳ ವಾಗ್ದಾಳಿಯಿಂದ ಪಾರಾಗುವ ತಂತ್ರ ಅನುಸರಿಸಿದೆ.

Related Articles

Comments (0)

Leave a Comment