ಅಮ್ಮಿನಬಾವಿಗೆ ಆಗಮಿಸಿದ ಮೈಸೂರು ಸುತ್ತೂರು ಮಠದ ಜಾತ್ರಾ ಮಹೋತ್ಸವ ಜನಜಾಗೃತಿ ರಥಯಾತ್ರೆ ಸಂಚಾರ

ಧಾರವಾಡ: ಮೈಸೂರಿನಲ್ಲಿ 2026ರ ಜನವರಿ 15-20ರವರೆಗೆ ಜರುಗಲಿರುವ ಶ್ರೀಸುತ್ತೂರುಮಠದ ಶ್ರೀಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಚಾರಾರ್ಥವಾಗಿ ಹಮ್ಮಿಕೊಂಡಿರುವ ಜನಜಾಗೃತಿ ರಥಯಾತ್ರೆಯ ಸಂಚಾರ ಸೋಮವಾರ ತಾಲೂಕಿನ ಅಮ್ಮಿನಬಾವಿ ಗ್ರಾಮಕ್ಕೆ ಆಗಮಿಸಿತು.

ಜನಪದ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಆವರಣದಲ್ಲಿ ಸಂಪನ್ನಗೊಂಡಿತು. ಶ್ರೀಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ತಮ್ಮ ಶ್ರೀಮಠಕ್ಕೆ ಆಗಮಿಸಿದ ರಥಯಾತ್ರೆಯನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಸ್ವಾಗತಿಸಿದರು. ಶಿವಯೋಗಿಗಳ ಮೂರ್ತಿಗೆ ಸೋಮಲಿಂಗಶಾಸ್ತ್ರಿ ಗುಡ್ಡದಮಠ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಮೈಸೂರು ಶ್ರೀಸುತ್ತೂರುಮಠದ ಶ್ರೀಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ, ಕುಸ್ತಿ ಪಂದ್ಯಾವಳಿ, ಭಜನೆ, ಚಿತ್ರಕಲೆ, ರಂಗೋಲಿ, ಗಾಳಿಪಟ ಹಾರಾಟ ಸೇರಿದಂತೆ ಹಲವಾರು ವಿಶೇಷ ಸ್ಪರ್ಧೆಗಳು, ವೈವಿಧ್ಯಪೂರ್ಣ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದ್ದು ಜಾತ್ರಾ ಮಹೋತ್ಸವ ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತದೆ ಎಂದರು.

ರಥಯಾತ್ರೆಯ ಸಂಚಾಲಕ ಪಂಚಾಕ್ಷರಿ, ರವಿ, ಬಸವರಾಜ ಬಿಜಾಪೂರ, ನಿವೃತ್ತ ಎಂಜನೀಯರ್ ಶಂಕರ ರಾಘೂನವರ, ವ್ಹಿ.ಬಿ.ಕೆಂಚನಗೌಡರ, ಗುರುಮೂರ್ತಿ ಯರಗಂಬಳಿಮಠ, ಪರಮೇಶ್ವರ ಅಕ್ಕಿ, ಡಾ.ಈರಣ್ಣ ಬಾವಿಕಟ್ಟಿ, ರಾಮಣ್ಣ ಹುಲ್ಲೂರ, ಪ್ರಕಾಶ ಗುಡಿ, ಚೆಂಬಣ್ಣ ಪೂಜಾರ, ಮಲ್ಲಪ್ಪ ಮೇಟಿ, ಈರಣ್ಣ ದೊಡವಾಡ, ಉಮೇಶ ಶಿರಕೋಳ, ಈರಯ್ಯ ಹಿರೇಮಠ, ನಿಂಗಪ್ಪ ಹೊಟ್ಟಿ, ಮಂಜುನಾಥ ಸವದತ್ತಿ ಇತರರು ಇದ್ದರು.

Related Articles

Comments (0)

Leave a Comment