‘ಅತೀಂದ್ರಯವಾದ  ಪರಮಾತ್ಮನ ಅನುಭೂತಿಯೇ ಅನುಭಾವ’: ಕಾಶಿ ಪೀಠದ ಜಗದ್ಗುರುಗಳು

ಸೊಲ್ಲಾಪುರ : ಅನುಭವ ಇಂದ್ರಿಯಗಳಿಗೆ ಗೋಚರವಾಗುತ್ತಿದ್ದು ಅದನ್ನು ವ್ಯಕ್ತಪಡಿಸಬಹುದು. ಆದರೆ ಅಂತರಂಗದಲ್ಲಿ ಸ್ಥಾಪಿತಗೊಂಡ ಅತೀಂದ್ರಿಯವಾದ ಪರಮಾತ್ಮನ ಅನುಭೂತಿಯೇ ಅನುಭಾವ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಕರ್ನಾಟಕದ ಗಡಿ ಮಹಾರಾಷ್ಟ್ರದ ಸೊಲ್ಲಾಪೂರ ನಗರದಲ್ಲಿ ನೂತನವಾಗಿ ಅಸ್ತತ್ವಕ್ಕೆ ಬಂದ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ‘ಶ್ರೀಕಾಶಿ ವಿಶ್ವಾರಾಧ್ಯ ಸಂತ ಸಾಹಿತ್ಯ ಸಂಶೋಧನಾ ಕೇಂದ್ರ’ದ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಅನುಭಾವವೆಂಬುದು ಸಾಧಕನು ತನ್ನ ಸಾಧನೆಯ ಸಿದ್ಧಿಯ ಶಿಖರದಲ್ಲಿ ಅವನ ಅನುಭವಕ್ಕೆ ಮಾತ್ರ ವೇದ್ಯವಾಗುವ ಒಂದು ಬಗೆಯ ಮಾನಸಿಕ ಸ್ಥಿತಿ ಎಂದರು.

ಉನ್ನತ ಅನುಭಾವದ ಮೂಲಕ ಲಭಿಸುವ ವಿಶಿಷ್ಟ ಆನಂದವನ್ನು ಆನಂದಾನುಭೂತಿ ಎಂದೂ ಕರೆಯುತ್ತಾರೆ. ಅನುಭಾವದ ಮೇರು ಸ್ಥಿತಿಗೆ ತಲುಪಿದ ಮಾನವನು ಯುಕ್ತ ಚಿಂತನೆಯೊ0ದಿಗೆ ಹುಟ್ಟು-ಸಾವುಗಳ ಗತಿಚಕ್ರದ ದ್ವಂದ್ವತೆಯಿಂದ ಮುಕ್ತಗೊಂಡು ಮುಕ್ತಿಯ ತನ್ಮಯತೆಯಲ್ಲಿ ಬಯಲ ಬೆಳಗನ್ನು ದರ್ಶಿಸಿ ಧನ್ಯತೆಯನ್ನು ಹೊಂದುತ್ತಾನೆ. ಇಂದ್ರಿಯಾತೀತವಾದ ಈ ವಿಶಿಷ್ಟ ಅನುಭಾವದ ಮೂಲಕವೇ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ ಎಂದೂ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಸಂಶೋಧನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ದೇವಭೂಮಿಯಾಗಿರುವ ಭಾರತದಲ್ಲಿರುವ ಹಲವಾರು ಭಾಷೆಗಳ ವಿಭಿನ್ನ ಸಂಪ್ರದಾಯ ಪರಂಪರೆಗಳ ಅನೇಕ ಆಚಾರ್ಯರು, ಸಂತರು, ಮಹಾಂತರು, ಶರಣರು, ಶಿವಯೋಗಿ ವರೇಣ್ಯರು, ಮಹಾತ್ಮರು ಉಲಿದು ದಾಖಲಿಸಿದ ಅನಂತ ಅನುಭಾವದ ನುಡಿಸಿಂಚನದ ವ್ಯಾಪಕ ಸಂಶೋಧನೆಗೆ ಈ ಕೇಂದ್ರ ತೆರೆದುಕೊಳ್ಳುತ್ತಿರುವುದು ಅಖಂಡ ವಿಶ್ವದಲ್ಲಿಯೇ ಹೊಸ ದಾಖಲೆಯಾಗಿ ಗಮನಸೆಳೆದಿದೆ. ಅತಿ ಹೆಚ್ಚು ಕಾಲ ಸೊಲ್ಲಾಪುರದಲ್ಲಿದ್ದುಕೊಂಡೇ ನಿರಂತರ ಅಧ್ಯಯನದ ಮೂಲಕ ಅಪಾರ ಪಾಂಡಿತ್ಯವನ್ನು ಸಂಪಾದಿಸಿರುವ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರಸ್ತುತ ತಮ್ಮ 36ನೆಯ  ಪೀಠಾರೋಹಣದ ಸ್ಮಾರಕವಾಗಿ ಈ ವಿಶಿಷ್ಟ ಸಂಶೋಧನಾ ಕೇಂದ್ರ ಆರಂಭಸಿರುವುದು ಭಾರತದ ಸಮಸ್ತ ಅನುಭಾವಿಗಳ ಗಮನಸೆಳೆದಿದೆ ಎಂದರು.

ಈ ಸಂಶೋಧನಾ ಕೇಂದ್ರದ ಆರಂಭಕ್ಕೆ ಸೊಲ್ಲಾಪೂರ ನಗರದ ಸ್ವಂತದ 3-ಬಿಎಚ್‌ಕೆ ಕಟ್ಟಡವನ್ನೇ ಕಾಶಿ ಪೀಠಕ್ಕೆ ದಾನಮಾಡಿರುವ ಖ್ಯಾತ ಹೃದಯ ರೋಗ ತಜ್ಞ ಡಾ. ಶೈಲೇಶ್ ಜಗದೀಶ ಪಾಟೀಲ ಮಾತನಾಡಿ, ಈಗಾಗಲೇ ಭಾರತದ ಮೇಧಾವಿ ಸಂಶೋಧಕರ 2 ಸಾವಿರ ಗ್ರಂಥಗಳನ್ನು ಕೇಂದ್ರ‍ದಲ್ಲಿ ಸಂಗ್ರಹಿಸಲಾಗಿದ್ದು, ಕಾಶಿ ಪೀಠದ ಜ್ಞಾನ ಮಂದಿರ ಗ್ರಂಥಾಲಯದ 10 ಸಾವಿರ ಡಿಸಿಟಲ್ ಗ್ರಂಥಗಳನ್ನು ಅವಲೋಕನ ಮಾಡಲೂ ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಸೊಲ್ಲಾಪೂರ ಜೋಡಭಾವಿ ಪೇಟೆ ಪಾಟೀಲ ಪ್ಲಾಜಾದ 4 ಮಹಡಿಯಲ್ಲಿರುವ ಈ ಸಂಶೋಧನಾ ಕೇಂದ್ರದ ಮಾಹಿತಿಗಾಗಿ ಡಾ.ಅನಿಲ ಸರ್ಜೆ (ಮೊ.7038199911) ಅವರನ್ನು ಸಂಪರ್ಕಿಸಬಹುದು ಎಂದರು.

ಬೀದರ ಜಿಲ್ಲೆ ವಿಮಲಖೇಡದ ಡಾ. ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ನಾಗಣಸೂರ ಹಿರೇಮಠದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಕಡಬಗಾಂವ ಹಿರೇಮಠದ ಶ್ರೀಓಂಕಾರಸಿದ್ಧ ಶಿವಾಚಾರ್ಯ ಸ್ವಾಮೀಜಿ, ಬಾರ್ಸಿಯ  ಶ್ರೀಗುರುಸಿದ್ಧ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ, ಸೊಲ್ಲಾಪೂರದ ಅಹಿಲಾದೇವಿ ಹೋಳಕರ ವಿಶ್ವವಿದ್ಯಾಲಯದ ಸಹ ಉಪಕುಲಪತಿ ಡಾ.ಲಕ್ಷ್ಮೀಕಾಂತ ದಾಮಾ, ವಿಶ್ರಾಂತ ಉಪಕುಲಪತಿ ಡಾ. ಈರೇಶಸ್ವಾಮಿ, ವಿದ್ವಾಂಸ ಡಾ. ರೇವಣಸಿದ್ಧ ಸಾಬಾದೆ, ಮರಾಠಿ ಸಂಶೋಧಕ ಡಾ. ಬಿ.ಸಿ. ಸ್ವಾಮಿ, ಡಾ. ಅನಿಲ ಸರ್ಜೆ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

Related Articles

Comments (0)

Leave a Comment