ವಿರೋಧ ಪಕ್ಷಗಳ ಬಾಯಿಗೆ ಆಹಾರವಾಗದಂತೆ ಕೆಲಸ ಮಾಡಿ: ಸಿಎಂ ಬಿಎಸ್ವೈ ಸೂಚನೆ
- by Suddi Team
- October 22, 2020
- 13 Views

ಬೆಂಗಳೂರು: ಉತ್ತರ ಕರ್ನಾಟಕದ ನೆರೆ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಕುರಿತು ಸಿಎಂ ಬಿಎಸ್ವೈಗೂ ಸಹ ಬೇಸರವಿದೆ. ಸಿಎಂ ಬಿಎಸ್ವೈ ಬೇಸರ ಇಂದು ಸಚಿವ ಸಂಪುಟ ಸಭೆಯಲ್ಲಿ ಪ್ರಕಟಗೊಂಡಿದೆ. ಸಂಪುಟ ಸಭೆಯಲ್ಲಿ ಸಚಿವರ ವಿರುದ್ಧ ರಾಜಹುಲಿ ಗರಂ ಆಗಿದ್ದಾರೆ. ವಿರೋಧ ಪಕ್ಷಗಳ ಬಾಯಿಗೆ ಆಹಾರವಾಗದಂತೆ ಕೆಲಸ ಮಾಡಿ ಅಂತಾ ಎಚ್ಚರಿಕೆಯನ್ನೂ ನೀಡಿದ್ದಾರೆ..
ಕಳೆದ ವರ್ಷದ ಪ್ರವಾಹ ಮಾಸುವ ಮುನ್ನವೇ ಉತ್ತರ ಕರ್ನಾಟಕದಲ್ಲಿ ಈ ಬಾರಿಯೂ ಭಾರೀ ಪ್ರವಾಹ ಉಂಟಾಯಿತು. ಆದ್ರೆ, ಕಳೆದ ವರ್ಷದ ಹಾನಿಯಿಂದ ಪಾಠ ಕಲಿಯದ ರಾಜ್ಯ ಸರ್ಕಾರ ಈ ವರ್ಷವೂ ಪ್ರವಾಹದಿಂದ ಜನ ನರಳುವಂತೆ ಮಾಡಿತು. ಅತೀವೃಷ್ಟಿ, ಪ್ರವಾಹದಿಂದ ಜನ್ರು ನೀರು, ನೆರಳಿಲ್ಲದಂತೆ ಪರದಾಡುವಂತಾಯ್ತು. ನೆರೆ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸ್ಥಳೀಯ ಶಾಸಕರು, ಸಚಿವರು ಕೂಡ ತಮ್ಮ ತಮ್ಮ ಕ್ಷೇತ್ರದ ಜನರ ನೆರವಿಗೆ ಧಾವಿಸದೇ ಬೇಜವಾಬ್ದಾರಿ ತೋರಿದ್ದಾರೆ.
ನೆರೆ ವಿಚಾರದಲ್ಲಿ ಸರ್ಕಾರದ ವೈಫಲ್ಯ ಸಿಎಂ ಬಿಎಸ್ವೈ ಗೆ ನಿದ್ದೆಗೆಡಿಸಿದೆ. ಈ ಕುರಿತು ಸಿಎಂ ಇಂದು ಸಚಿವ ಸಂಪುಟ ಸಭೆಯಲ್ಲಿ ಫುಲ್ ಗರಂ ಆಗಿದ್ದಾರೆ. ಸ್ಥಳೀಯ ಶಾಸಕರು, ಸಚಿವರ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. ನೆರೆ ಸಮಯದಲ್ಲಿ ಕೆಲ ಶಾಸಕರು, ಸಚಿವರು ಸಮರ್ಪಕವಾಗಿ ಕೆಲಸ ಮಾಡಿಲ್ಲ. ಇದು ವಿಪಕ್ಷಗಳ ಟೀಕೆಗೆ ಗುರಿಯಾಯ್ತು. ಮತ್ತೆ ಇಂತಹ ಟೀಕೆಯನ್ನು ನಾನು ಸಹಿಸಲ್ಲ. ಸ್ಥಳದಲ್ಲೇ ಇದ್ದು ಪರಿಹಾರ ಕೆಲಸ ಮಾಡಿ. ಆಹಾರ ಬಟ್ಟೆ ಸರಿಯಾಗಿ ಸಿಗುವಂತೆ ಕ್ರಮ ವಹಿಸಿ. ಮನೆ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಮಾಡಿ. ತಮ್ಮ ಕ್ಷೇತ್ರದ ಜವಾಬ್ದಾರಿ ಶಾಸಕರಿಗೆ ಸೇರಿದ್ದು. ಯಾರ ಬಾಯಿಗೂ ಆಹಾರವಾಗದಂತೆ ಕೆಲಸ ಮಾಡಿ ಅಂತಾ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಿಎಂ ಬಿಎಸ್ವೈ ಖಡಕ್ ಸಂದೇಶ ರವಾನಿಸಿದ್ದಾರೆ.
ಇನ್ನೂ ಸಚಿವ ಸಂಪುಟ ಸಭೆಯಲ್ಲಿ ಉಪ ಚುನಾವಣೆ ಕುರಿತು ಚರ್ಚೆ ನಡೆದಿದೆ. ಸಂಘಟಿತ ಪ್ರಚಾರ ಮಾಡುವಂತೆ ಸಿಎಂ ಸಚಿವರಿಗೆ ಸೂಚನೆ ನೀಡಿದ್ದಾರೆ. ಉಪ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ. ಶಿರಾ, ಆರ್.ಆರ್.ನಗರ ಎರಡೂ ಗೆಲ್ಲಲೇ ಬೇಕು. ವಿವಾದಕ್ಕೆ ಆಸ್ಪದ ಕೊಡದೆ ಪ್ರಚಾರ ಮಾಡಿ ಅಂತಾ ಕಿವಿ ಮಾತು ಹೇಳಿದ್ದಾರೆ.
Related Articles
Thank you for your comment. It is awaiting moderation.
Comments (0)