ಕೈ ಸರ್ಕಾರದ ವಿರುದ್ಧವೇ ರಸ್ತೆಗಿಳಿದ ಪ್ರಕಾಶ್ ರಾಜ್ ನಡೆ ಹಿಂದಿರುವ ಸತ್ಯವೇನು?
- by Suddi Team
- June 26, 2025
- 10 Views

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿರುವ ಜನಪ್ರಿಯ ನಟ ಹಾಗೂ ರಾಜಕಾರಣಿ ಪ್ರಕಾಶ್ ರಾಜ್ ನಡೆ ಇದೀಗ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಈಗಾಗಲೇ ಚುನಾವಣಾ ರಾಜಕೀಯ ಪ್ರವೇಶಿಸಿ ಹಿನ್ನಡೆ ಅನುಭವಿಸಿರುವ ಅವರು ಸೆಕೆಂಡ್ ಇನ್ನಿಂಗ್ಸ್ಗೆ ಮುಂದಾದ್ರಾ ಎನ್ನುವ ಚರ್ಚೆ ಆರಂಭವಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಕಾಶ್ ರಾಜ್, ಬಹುತೇಕವಾಗಿ ಎಡಪಂಥೀಯ ವಾದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಹೇಳಿಕೆಗಳಿಂದಲೇ ಹೆಚ್ಚು ಜನಪ್ರಿಯರಾದವರು. ಇದನ್ನೇ ಬಳಸಿಕೊಂಡು ರಾಜಕೀಯದಲ್ಲಿ ಒಂದು ಛಾನ್ಸ್ ಗಿಟ್ಟಿಸಿಕೊಳ್ಳೋಣ ಎಂಬ ಪ್ರಯತ್ನಕ್ಕೆ ಮುಂದಾಗಿದ್ದರು. ಚುನಾವಣೆಯಲ್ಲಿ ಶೇ. 2.5 ಅಂದರೆ 29 ಸಾವಿರದಷ್ಟು ಮತ ಪಡೆದಿದ್ದರು. ಆದರೆ, ರಾಜಕೀಯದಲ್ಲಿ ಮುಂದುವರಿಯಲು ಅವರು ಬಯಸಿದ್ದರೂ ಅವಕಾಶಕ್ಕಾಗಿ ಎದುರುನೋಡುವ ಸ್ಥಿತಿ ಎದುರಾಗಿದೆ.
ಇದೀಗ ಇದಕ್ಕೆ ಸರಿಯಾದ ವೇದಿಕೆ ಅವರಿಗೆ ಲಭಿಸಿದೆ. ದೇವನಹಳ್ಳಿಯಲ್ಲಿ ರೈತರ ಭೂಸ್ವಾಧೀನ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆದಿದೆ. ತಾಲೂಕಿನ ಚನ್ನರಾಯಪಟ್ಟಣದ 13 ಹಳ್ಳಿಗಳ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ದೇವನಹಳ್ಳಿ ಚಲೋ ಪ್ರತಿಭಟನಾ ಸಭೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಭಾಗವಹಿಸಿದ್ದು, ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ರೈತರ ಭೂಮಿಯಲ್ಲಿ ಕಾರ್ಖಾನೆಗಳನ್ನು ನಿರ್ಮಾಣ ಮಾಡುವುದನ್ನು ಬಲವಾಗಿ ಖಂಡಿಸಿದ್ದಾರೆ.
ನಟನಾಗಿ ತಮಿಳು ಮತ್ತು ತೆಲುಗಿನಲ್ಲಿ ಜನಪ್ರಿಯರಾಗಿದ್ದರೂ, ರಾಜಕೀಯ ವೇದಿಕೆಗೆ ಅವರು ಕರುನಾಡನ್ನೇ ಅವಲಂಬಿಸಿದ್ದಾರೆ. ಇವರ ಸಿನಿ ಬದುಕಿಗೆ ಸಿಕ್ಕ ಜನ ಬೆಂಬಲ ರಾಜಕೀಯಕ್ಕೆ ಅಲ್ಲಿ ಸಿಕ್ಕಿಲ್ಲ. ಇದರಿಂದಲೇ ರೈತ ಹೋರಾಟಕ್ಕೆ ಮುಂದಾಗಿದ್ದಾರೆ. 13 ಹಳ್ಳಿಯ ರೈತರು 1,777 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ಕೆಐಎಡಿಬಿ ಮೂಲಕ ಕಾರ್ಪೋರೇಟ್ ಕಂಪನಿಗಳಿಗೆ ನೀಡಬಾರದು ಎಂದು ಒತ್ತಾಯಿಸಿ ರೈತ ಪರ ಹೋರಾಡುತ್ತೇನೆ. ಈ ಕಾರಣಕ್ಕೆ ಜೈಲಿಗೆ ಹೋದರೂ ಚಿಂತೆಯಿಲ್ಲ ಎಂದಿದ್ದಾರೆ.
ಜುಲೈ 4ರ ಬೆಳಗ್ಗೆ 11 ಗಂಟೆಗೆ ರೈತರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಮಗ್ರ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ. ಇದರಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಪ್ರಕಾಶ್ ರಾಜ್, ಫೈನಲ್ ನೋಟಿಫಿಕೇಷನ್ ಆಗಿದೆ. ಡಿನೋಟಿಫಿಕೇಷನ್ ಹೊರಡಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿ ನಮ್ಮ ಮಾತನ್ನು ಸಹಾನುಭೂತಿಯಿಂದ ಕೇಳಿಸಿಕೊಂಡಿದ್ದಾರೆ. ಜನರ ಹೋರಾಟಕ್ಕೆ ಸ್ಪಂದಿಸುವುದು ಮುಖ್ಯ. ಜುಲೈ 4 ರವರೆಗೂ ಹೋರಾಟ ಮುಂದುವರೆಸುತ್ತೇವೆ. 13 ಹಳ್ಳಿಗಳಲ್ಲಿ ಕುಟುಂಬದ ಜನರು ಸರ್ಕಾರದ ಮುಂದೆ ಕೈ ಚಾಚಿಲ್ಲ, ಕೈಗಾರಿಕೆಗಳಿಂದ ಏನಾಗಿದೆ ಎಂಬುದು ನಮಗೆ ತಿಳಿದಿದೆ ಎಂದಿದ್ದಾರೆ.
ದೇವನಹಳ್ಳಿಯಲ್ಲಿ ರೈತರು ಪ್ರತಿಭಟನೆ ಆರಂಭಿಸಿದ ಮೂರೂವರೆ ವರ್ಷದ ಬಳಿಕ ಪ್ರಕಾಶ್ ರಾಜ್ ಹೋರಾಟದ ಕಣಕ್ಕಿಳಿದಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿಯೂ ರಾಜಕೀಯ ಪ್ರವೇಶದ ವೇದಿಕೆ ಸೃಷ್ಟಿಯ ಪ್ರಯತ್ನ ಇದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಏಕೆಂದರೆ, ಮೊದಲೇ ದೇವನಹಳ್ಳಿ ಬಹುಭಾಷಿಕರ ನೆಲ. ಇಲ್ಲಿ ತೆಲುಗು ಭಾಷಿಕರು ಹೆಚ್ಚು. ಈ ಭಾಷೆಯಲ್ಲಿ ಸಾಕಷ್ಟು ಸಿನಿ ಅಭಿಮಾನಿಗಳನ್ನು ಹೊಂದಿರುವ ತಾವು ರಾಜಕೀಯ ಪ್ರವೇಶಕ್ಕೆ ಹೊಸ ವೇದಿಕೆ ಏಕೆ ಸೃಷ್ಟಿಸಿಕೊಳ್ಳಬಾರದು ಎಂಬ ಚಿಂತನೆಗೆ ಪ್ರಕಾಶ್ ಬಂದಂತಿದೆ.
ಕಳೆದ ಹತ್ತಾರು ವರ್ಷದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ನೇರ ಹೋರಾಟ ಇರುವ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜತೆ ಸೇರಿ ಕಣಕ್ಕಿಳಿದರೆ ಜನ ಪೂರಕ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಮಧ್ಯೆ ಮತವಿಭಜನೆ ಆಗಿ ತಾವು ಪಕ್ಷೇತರವಾಗಿ ನಿಂತು ಗೆಲುವು ಸಾಧಿಸಬಹುದು. ರೈತಪರ ಹೋರಾಟ ತಮಗೆ ಬೆಂಬಲ ಆಗಬಹುದು. ಎಡಪಂಥೀಯ ನಾಯಕರ ಬೆಂಬಲವೂ ಸಿಗಲಿದೆ ಎನ್ನುವ ಆಸೆಯಲ್ಲಿ ಪ್ರಕಾಶ್ ಇದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಬೆಂಬಲ ಹೇಗೆ ಸಿಗಲಿದೆ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.
Related Articles
Thank you for your comment. It is awaiting moderation.
Comments (0)