ರಾಜಕೀಯ ರೀ ಎಂಟ್ರಿಗೆ ಉಪ್ಪಿ ಸಜ್ಜು

 

ಬೆಂಗಳೂರು: ಕೆಪಿಜೆಪಿ ಪಕ್ಷವನ್ನು ಕಟ್ಟಿ ಕಣ್ಮರೆಯಾಗಿದ್ದ ನಟ ಕಮ್ ರಾಜಕಾರಣಿ ಉಪೇಂದ್ರ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ರಾಜಕಾರಣಿಗಳು ಮಾಡಬೇಕಿರುವ ಕೆಲಸವೇನು,ಮಾಧ್ಯಮಗಳ ಪಾತ್ರವೇನು ಎನ್ನುವುದನ್ನು ತಮ್ಮ ಫೇಸ್ ಬುಕ್ ವಾಲ್ ಮೂಲಕ ಹೇಳಿದ್ದಾರೆ.

ಯಸ್,ಪ್ರಜಾಕೀಯ ಕಲ್ಪನೆಯನ್ನು ಹುಟ್ಟುಹಾಕಿ ರಾಜಕೀಯದ ಮೊದಲ ಹೆಜ್ಜೆಯಲ್ಲೇ ಹಿನ್ನಡೆ ಅನುಭವಿಸಿದ್ದ ರಿಯಲ್‌ ಸ್ಟಾರ್ ಉಪೇಂದ್ರ ಮತ್ತೆ ರೀ ಎಂಟ್ರಿಗೆ ಸಜ್ಜಾಗಿದ್ದಾರೆ.ಹೊಸ ಪಕ್ಷವನ್ನು ನೋಂದಣಿ ಮಾಡಿಸಿದ್ದು ಮತ್ತೆ ಪ್ರಜಾಕೀಯದ ಗೆಟಪ್ ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಅದಕ್ಕೆ ಪೂರ್ವಭಾವಿ ಎನ್ನುವಂತೆ ಸಾಮಾಜಿಕ ಜಾಲತಾಣದ ಮುಂದೆ ಪ್ರತ್ಯಕ್ಷರಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಆ ಮೂಲಕ ಜನರನ್ನು ತಲುಪುವ ಯತ್ನ ನಡೆಸುತ್ತಿದ್ದಾರೆ.

ಉಪ್ಪಿ ಬರೆದುಕೊಂಡಿರುವುದೇನು?

ಹೊಟ್ಟೆ ತುಂಬಿದವಗೆ, ಕೈ ತುಂಬಾ ಸಂಬಳ ಬರುವವಗೆ, ಮನೆ ತುಂಬಾ ಸೌಕರ್ಯವಿರುವವಗೆ, ಬ್ಯಾಂಕ್ ಬ್ಯಾಲೆನ್ಸ್ ಇದ್ದವಗೆ, ತನ್ನ ಸ್ವಂತ ವಾಹನದಲ್ಲಿ ಚಲಿಸುವವಗೆ ಈ ದೇಶದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಕಂಡು ಬರುವುದು ಸಹಜ. ಅದು ಕೇವಲ ಶೇ.20 ರಿಂದ 30 ಮಾತ್ರ.

ಆದರೆ ಉಳಿದ ಶೇ.70 ಎರಡು ಹೊತ್ತು ಸರಿಯಾಗಿ ಊಟವಿಲ್ಲದೆ, ತೊಡಲು ಸರಿಯಾದ ಬಟ್ಟೆಯಿಲ್ಲದೆ, ತಲೆಯ ಮೇಲೆ ಚಪ್ಪರವಿಲ್ಲದ, ಮಕ್ಕಳನ್ನು ಸರಿಯಾದ ಶಾಲೆಗೆ ಕಳಿಸಲಾಗದ, ಸಾಲದಿಂದ ಮರುಗಿ ಹೋದ ರೈತ, ಕುಡಿಯಲು ನೀರಿಲ್ಲದೆ ಭವಣೆ ಪಡುತ್ತಿರುವ ಜನ, ಕೆಲಸವಿಲ್ಲದೆ ಪರದಾಡುವ ಯುವಕ- ಯುವತಿಯರು, ಇವರ ಕಷ್ಟ-ಕಾರ್ಪಣ್ಯವನ್ನು ಹೋಗಲಾಡಿಸುವುದು ಸರ್ಕಾರದ ಪ್ರಾಮುಖ್ಯತೆಯಾಗಿರ ಬೇಕೆ ವಿನಹ ದೇಶ ಭಕ್ತಿ ಭೊಧಿಸುವುದಲ್ಲ.

ಹಸಿದ ಹೊಟ್ಟೆಗೆ ಇದು ಎಲ್ಲಷ್ಟೂ ಅರ್ಥವಿಲ್ಲ. ಆದ್ದರಿಂದ ಎಲ್ಲಾ ರಾಜಕಾರಣಿಗಳಲ್ಲಿ ನನ್ನ ವಿನಂತಿಯೆಂದರೆ ಜಾತಿ, ಧರ್ಮ, ರಾಜಕೀಯ ಹಾಗೂ ಸ್ವಂತ ಪ್ರತಿಷ್ಟೆಯಿಂದ ಹೊರ ಬಂದು ಈ ಶೇ.70 ಬಡ ಜನರ ಸೇವೆಗಾಗಿ ನಮ್ಮ ದೇಶದ ಹಾಗೂ ರಾಜ್ಯದ ತೆರಿಗೆ ಹಣವನ್ನು ಯಾವುದೆ ಲಂಚ ವ್ಯವಹಾರಕ್ಕೆ ಆಸ್ಪದ ಕೊಡದೆ ಜನರ ಸೇವೆಗೆ ಉಪಯೊಗಿಸುವ ವಿಧಾನದ ಬಗ್ಗೆ ಚರ್ಚೆ ಮಾಡಿ.

ಮಾಧ್ಯಮದವರು ಕೂಡ ಈ ವಿಷಯ ಚರ್ಚೆ ಮಾಡ ಬೇಕೆ ವಿನಹ, TRP ಗಾಗಿ ರಾಜಕಾರಣಿಗಳ ಡೊಂಬರಾಟವಲ್ಲ.

Related Articles

Comments (0)

Leave a Comment