ಪ್ರಮುಖ ನಿಗಮ ಮಂಡಳಿಗೆ ಇಬ್ಬರು ಶಾಸಕರ ಲಾಬಿ!

ಬೆಂಗಳೂರು: ಸಚಿವ ಸ್ಥಾನ ಸಿಗುವುದಿಲ್ಲ ಎನ್ನುವುದು ಅರಿವಾದ ಬಳಿಕ ಇದೀಗ ಇಬ್ಬರು ಕೈ ಶಾಸಕರು ಪ್ರಮುಖ ನಿಗಮ ಮಂಡಳಿಗಳಿಗೆ ಲಾಬಿ ಆರಂಭಿಸಿದ್ದಾರೆ.

ನಿಮಗ ಮಂಡಳಿಗಳ ಪೈಕಿ ಅತ್ಯಂತ ಪ್ರಮುಖವಾದವುಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಒಂದು. ಇದರ ಅಧ್ಯಕ್ಷರಾಗಲು ಇಬ್ಬರು ಶಾಸಕರು ತೀವ್ರ ಪೈಪೋಟಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅತ್ಯಾಪ್ತರಾಗಿರುವ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಹಾಗೂ ಇತ್ತೀಚಿನವರೆಗೂ ಸಿದ್ದರಾಮಯ್ಯರಿಗೆ ಆಪ್ತರಾಗಿದ್ದು ಇತ್ತೀಚೆಗೆ ಮುನಿಸಿಕೊಂಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಬಿಡಿಎ ಅಧ್ಯಕ್ಷ ಗಿರಿಯ ರೇಸ್‌ನಲ್ಲಿದ್ದಾರೆ.

ಸಿದ್ದರಾಮಯ್ಯ ಲಾಬಿ

ಬೈರತಿ ಸುರೇಶ್ ಗೆ ಸಿದ್ದರಾಮಯ್ಯ ಸಾಥ್ ನೀಡುತಿದ್ದು, ಹೈಕಮಾಂಡ್ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ. ಅಲ್ಲದೇ ಒಂದು ಮಾಹಿತಿ ಪ್ರಕಾರ ತಮ್ಮ ವಿರುದ್ಧ ಮುನಿಸಿಕೊಂಡಿರುವ ಆಪ್ತ ಎಂಟಿಬಿ ನಾಗರಾಜ್ ಗೆ ಕೂಡ ಒಂದು ಉತ್ತಮ ಸ್ಥಾನ ಕಲ್ಪಿಸಿ ಮತ್ತೆ ಆತ್ಮೀಯತೆ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ. ಇದರಿಂದ ತಮ್ಮವರ ಪರ ಸಿದ್ದರಾಮಯ್ಯ ಅದಾಗಲೇ ಹೈಕಮಾಂಡ್ ಮಟ್ಟದಲ್ಲಿ ಕೂಡ ಲಾಬಿ ನಡೆಸಿದ್ದಾರೆ. ಬಿಡಿಎ ಕೈವಶಮಾಡಿಕೊಳ್ಳಲು ಇಬ್ಬರೂ ಶಾಸಕರು ಪ್ರಯತ್ನಿಸಿದ್ದು, ಇವರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಪರಮೇಶ್ವರ್ ಅಡ್ಡಗಾಲು?
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರೇ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವುದರಿಂದ ಬಿಡಿಎ ತಮ್ಮ ಹಿಡಿತದಲ್ಲಿಯೇ ಇರಲಿ ಎಂಬ ಕಾರಣಕ್ಕೆ ತಮ್ಮ ಆಪ್ತರಿಗೆ ಕೊಡಿಸಲು ಪ್ರಯತ್ನ ಮುಂದುವರಿಸಿದ್ದಾರೆ. ಅದಾಗಲೇ ವಿಧಾನ ಪರಿಷತ್ ಸಭಾಪತಿ ವಿಚಾರದಲ್ಲಿ ಎಸ್.ಆರ್. ಪಾಟೀಲ್ ಹೆಸರು ಬಹುತೇಕ ಅಂತಿಮವಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅಧಿಕಾರ ವಹಿಸಿಕೊಂಡಿದ್ದಾರೆ. ಇಲ್ಲೆಲ್ಲೂ ಪರಮೇಶ್ವರ್ ಗೆ ತಮ್ಮವರನ್ನು ಅಧಿಕಾರಕ್ಕೇರಿಸಲು ಸಾಧ್ಯವಾಗಿಲ್ಲ. ಕನಿಷ್ಠ ನಿಗಮ ಮಂಡಳಿಗಳ ವಿಚಾರದಲ್ಲಾದರೂ, ಸಿದ್ದರಾಮಯ್ಯರನ್ನು ಓವರ್ ಟೇಕ್ ಮಾಡಿ ತಮ್ಮ ಸ್ಥಾನದ ಹಿರಿತನ ಮೆರೆಯುವ ಯತ್ನದಲ್ಲಿದ್ದಾರೆ ಎನ್ನಲಾಗಿದೆ. ಸದ್ಯ ತಮ್ಮ ಕಡೆಯವರು ಎಂದು ಯಾವೊಬ್ಬ ಶಾಸಕರನ್ನು ಇವರು ಸೂಚಿಸದಿದ್ದರೂ, ತಮ್ಮವರಿಗೆ ಕೊಡಿಸುವ ನಿಟ್ಟಿಯಲ್ಲಿ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.

ನಿಗಮ ಮಂಡಳಿ ಮೊದಲು
ಅದಾಗಲೇ ಹೈಕಮಂಡ್ ಮಟ್ಟದಲ್ಲಿ ನಡೆದ ಮಾತುಕತೆಯ ಫಲವೆಂದರೆ, ಅಧಿವೇಶನ ಮುಗಿದ ಕೂಡಲೇ ನಿಗಮ ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗಿಬಿಡಬೇಕು. ಅದಾದ ನಂತರ ಸಚಿವ ಸಂಪುಟ ವಿಸ್ತರಣೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ. ಇದರ ಪ್ರಕಾರ ಸದ್ಯ ರಾಜ್ಯದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಆಕಾಂಕ್ಷಿಗಳು ತೀವ್ರ ಲಾಬಿ ಆರಂಭಿಸಿದ್ದಾರೆ.

Related Articles

Comments (0)

Leave a Comment