ಮಲೆನಾಡಲ್ಲಿ ಸಿಎಂ ಗ್ರಾಮವಾಸ್ತವ್ಯದ ಘೋಷಣೆ: ವಿಧಾನಸಭಾ ಕಲಾಪದಲ್ಲಿ ಏನೇನಾಯ್ತು ಗೊತ್ತಾ?
- by Suddi Team
- July 10, 2018
- 329 Views
ಬೆಂಗಳೂರು:ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮಂಡಿಸಿದ ಚೊಚ್ಚಲ ಬಜೆಟ್ ನ ಅಧಿವೇಶನದ ಏಳನೇ ದಿನದ ಕಲಾಪ ಆರಂಭಗೊಂಡಿದೆ.ಅಗಲಿದ ಗಣ್ಯರಿಗೆ ಸಂತಾಪ ಸೇರಿದಂತೆ ಸದಸ್ಯರು ಕೇಳಿದ ಪ್ರಶ್ನೆಗಳೇನು? ಸರ್ಕಾರದ ನೀಡಿದ ಉತ್ತರವೇನು ಎನ್ನುವ ಸಮಗ್ರ ಮಾಹಿತಿ ಇಲ್ಲಿದೆ.
ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮೊದಲಿಗ
ಇಂದು ಮುಂಜಾನೆ ವಿಧಿವಶರಾದ ಮಾಜಿ ಸಚಿವ ಬಿ.ಎ.ಮೊಯಿದ್ದೀನ್ ಗೆ ಸಂತಾಪ ಸೂಚಿಸಲಾಯ್ತು.ಸಂತಾಪ ಸೂಚನೆ ನಿರ್ಣಯವನ್ನು ಸ್ಪೀಕರ್ ಮಂಡಿಸಿದರೆ ಸಂತಾಪ ಸೂಚನೆ ನಿರ್ಣಯ ಅನುಮೋದಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿರೋಧಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.
ನಂತರ ಗೆಳೆಯ ಮೊಯಿದ್ದೀನ್ ನನ್ನು ನೆನಸಿಕೊಂಡು ಗದ್ಗದಿತರಾದ ಸ್ಪೀಕರ್ ರಮೇಶ್ ಕುಮಾರ್, ನನ್ನನ್ನು ಯಾವುದೇ ತಪ್ಪು ಮಾಡಿದಾಗ ತಿದ್ದಿ ತೀಡುವ ಅಧಿಕಾರ ಇದ್ದದ್ದು ನನ್ನ ಸಾಕಿ ಬೆಳೆಸಿದ ದೊಡ್ಡಣ್ಣ ಹಾಗೂ ಮೊಯಿದ್ದೀನ್ ಗೆ ಮಾತ್ರ.ಇಂದು ಅವರನ್ನು ಕಳೆದುಕೊಂಡಿದ್ದೇನೆ.ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಹೋಗುತ್ತಿದ್ದೇನೆ.ಇಂದು ಮತ್ತು ನಾಳೆ ಉಪಸಭಾಧ್ಯಕ್ಷರು ಸದನ ನಿರ್ವಹಣೆ ಮಾಡುತ್ತಾರೆ.ಅವರು ಹೊಸಬರು.ಅವರಿಗೆ ದಯಮಾಡಿ ಸಹಕಾರ ನೀಡಿ ಎಂದು ಕೇಳಿಕೊಂಡರು.ಮೃತರಿಗೆ ಒಂದು ನಿಮಿಶದ ಮೌನಾಚರಣೆ ಮೂಲಕ ಶೋಕ ವ್ಯಕ್ತಪಡಿಸಲಾಯ್ತು.
ನಂತ್ರ ಪ್ರಶ್ನೋತ್ತರ ಕಲಾಪ ಆರಂಭಿಸಲಾಯ್ತು.ಆದಾಯ ತೆರಿಗೆ ಇಲಾಖೆಯು ಬೆಳಗಾವಿಯ ವಿಟಿಯು ನಲ್ಲಿದ್ದ 440 ಕೋಟಿ.ರೂ.ಗಳನ್ನು ವಶಕ್ಕೆ ಪಡೆದಿದೆ.ಹಾಗಾಗಿ ಚಿಕ್ಕಮಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಹಣವಿಲ್ಲ.ನಬಾರ್ಡ್ ನಿಂದ ಹಣ ಬಂದ ನಂತರ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದು ಬಿಜೆಪಿಯ ಸಿ.ಟಿ.ರವಿ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಉತ್ತರ ನೀಡಿದ್ರು.
2012ರಲ್ಲಿ ಕಾಲೇಜು ಮಂಜೂರು ಮಾಡಿಸಿಕೊಂಡಾಗಲೇ ಕಾಲೇಜು ಕಟ್ಟಡಕ್ಕೂ ಅನುದಾನ ಪಡೆಯಬೇಕಿತ್ತು.ಆಗ ಅನುದಾನ ಪಡೆಯದೆ ಈಗ ಸರ್ಕಾರದ ಮೇಲೆ ಹರಿಹಾಯ್ದರೆ ಏನು ಪ್ರಯೋಜನ.ಈಗ ತಾನೆ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಿದ್ದಾರೆ.ಹಣ ಬಿಡುಗಡೆಗೆ ಒಪ್ಪಿದ್ದಾರೆ.ಅನುದಾನ ಬಂದ ಮೇಲೆ ಕಾಲೇಜು ಕಟ್ಟಡ ನಿರ್ಮಿಸಲಾಗುತ್ತದೆ ಎಂದ್ರು.
ಬಳಿಕ ರೈತರ ಪಂಪ್ ಸೆಟ್ ಗಳಿಗೆ ನೋಂದಣಿ ಸಂಖ್ಯೆಪಡೆಯಲು ಸರ್ವಿಸ್ ಚಾರ್ಜ್ ಎಂದು 10,000 ರೂ.ಗಳನ್ನು ಇಂಧನ ಇಲಾಖೆ ಪಡೆಯುತ್ತಿದೆ ಎಂದು ಪ್ರಶ್ನೋತ್ತರದಲ್ಲಿ ಬಿಜೆಪಿ ನರಸಿಂಹ ನಾಯಕ್ ಸರ್ಕಾರದ ಗಮನ ಸೆಳೆದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ
ಅಕ್ರಮ ಪಂಪ್ ಸೆಟ್ ಗಳ ತಡೆಗೆ ಇಂಧನ ಇಲಾಖೆ ಇಂತಹಾ ಸ್ಕೀಂ ರೂಪಿಸಿದೆ.ಇದರಿಂದ ಅರ್ಹ ರೈತರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ.ಅಧಿಕಾರಿಗಳೊಂದಿಗೆ ಚರ್ಚಿಸಿ ಸರಿಪಡಿಸುವುದಾಗಿ ಭರವಸೆ ನೀಡಿದರು.
ನಂತರ ಮಲೆನಾಡು ಭಾಗದಲ್ಲಿ ಬೇಸಿಗೆಯಲ್ಲಿ ಪವರ್ ಕಟ್, ಮಳೆಗಾಲದಲ್ಲಿ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಇರುವುದಿಲ್ಲ.ಪರಿಣಾಮ ವರ್ಷಪೂರ್ತಿ ಮಲೆನಾಡಿಗೆ ಕರೆಂಟ್ ಇರೋದಿಲ್ಲ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅಳಲು ತೋಡಿಕೊಂಡ್ರು.ವಿದ್ಯುತ್ ಲೈನ್ ಮೇಲೆ ಬೀಳುವ ಮರಗಳ ತೆರವುಗೊಳಿಸಲು ಅರಣ್ಯ ಇಲಾಖೆ ಅಡ್ಡಿ ಮಾಡುತ್ತದೆ ಹಾಗಾಗಿ ಮಲೆನಾಡಿಗೆ ಕರೆಂಟ್ ಇಲ್ಲ ಎಂದ ಶೃಂಗೇರಿ ಶಾಸಕರಿಗೆ ಬಿಜೆಪಿಯ ಸಿ.ಟಿ.ರವಿ ಮತ್ತು ಅರಗಜ್ಞಾನೇಂದ್ರ ಸಾತ್ ನೀಡಿದ್ರು.
ಇದಕ್ಕೆ ಸ್ಪಂಧಿಸಿದ ಸಿಎಂ, ಶೃಂಗೇರಿ-ಕೊಪ್ಪ-ನರಸಿಂಹರಾಜಪುರ ಮಾರ್ಗದಲ್ಲಿ ಅತಿವೃಷ್ಟಿಯಿಂದ 721ವಿದ್ಯುತ್ ಕಂಬಗಳು ಉರುಳಿಬಿದ್ದಿವೆ.72.1ಕಿ.ಮೀ ವಿದ್ಯುತ್ ತಂತಿ ಹಾಳಾಗಿದೆ.682ವಿದ್ಯುತ್ ಕಂಭ ಹಾಗೂ 68.2 ಕೀಮಿ ಉದ್ದದ ತಂತಿ ಬದಲಾಯಿಸಲಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮರ ತೆರವು ಸಮಸ್ಯೆ ಪರಿಹಾರಕ್ಕೆ ಯತ್ನಿಸುವುದಾಗಿ ಭರವಸೆ ನೀಡಿದರು
ಮಲೆಮಹದೇಶ್ವರ ಬೆಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಗಿರಿತಾಣ ಭತ್ಯೆ ನೀಡುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಹೇಶ್ ಸದನಕ್ಕೆ ಮಾಹಿತಿ ನೀಡಿದರು.ಆದರೆ ಅರಣ್ಯ ಪ್ರದೇಶದಲ್ಲಿ,ಬೆಟ್ಟಗುಡ್ಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸರ್ಕಾರಿ ನೌಕರರಿಗೂ ವಿಸ್ತರಿಸುವಂತೆ ಹನೂರು ಶಾಸಕ ಆರ್.ನರೇಂದ್ರ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಒತ್ತಾಯಿಸಿದರು.ಸಿಎಂ ಜತೆ ಚರ್ಚಿಸಿ ಪರಿಶೀಲಿಸುವ ಭರವಸೆ ನೀಡಿದ ಶಿಕ್ಷಣ ಸಚಿವ ಮಹೇಶ್ ಬೇಡಿಕೆಗ ಸ್ಪಂಧಿಸಿದ್ರು.
ಮಂಡ್ಯ ತಾಲೂಕು ಬಸರಾಳುವಿನಲ್ಲಿ ಪದವಿ ಕಾಲೇಜು ಸ್ಥಾಪನೆಗೆ ಸರ್ಕಾರ ಸಮ್ಮತಿ.ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಉತ್ತರಿಸಿ ಬಸರಾಳು ಹೋಬಳಿ ವ್ಯಾಪ್ತಿಗೆ 76ಹಳ್ಳಿಗಳು ಬರುತ್ತವೆ.20 ಕಿ.ಮೀ ಅಂತರದಲ್ಲಿ 02ಸರ್ಕಾರಿ ಪದವಿಪೂರ್ವ ಹಾಗೂ 02ಅನುದಾನ ರಹಿತ ಪದವಿ ಕಾಲೇಜುಗಳಿವೆ.ಬಸರಾಳಿನ ಸರ್ಕಾರಿ ಪ್ರೌಢಶಾಲೆಯ ಖಾಲಿ ಕಟ್ಟಡ ಹಾಗೂ ನೀರಾವರಿ ಇಲಾಖೆಯ ಖಾಲಿ ಕಟ್ಟಡದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಉದ್ದೇಶಿಸಿರುವುದಾಗಿ ಮಾಹಿತಿ ನೀಡಿದ್ರು.
ಇಡೀ ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸಿಕೊಡುವ ಸಾಗರ ತಾಲೂಕಿಗೇ ಕರೆಂಟ್ ಇಲ್ಲ.ಬಿಜೆಪಿಯ ಹರತಾಳು ಹಾಲಪ್ಪ ಅಳಲು ತೋಡಿಕೊಂಡ್ರು.ಮಲೆನಾಡು ಭಾಗದಲ್ಲಿನ ವಿದ್ಯುತ್ ಸಮಸ್ಯೆ ಬಗೆ ಹರಿಸಿ ಶಾಶ್ವತ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ರು.
ರಾಜ್ಯದಲ್ಲಿ 25600 ಶಿಕ್ಷಕರ ಹುದ್ದೆಗಳು ಖಾಲಿ ಇದ್ದ ಇನ್ನು 10-15ದಿನಗಳಲ್ಲಿ 10,000 ಪದವೀಧರ ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತೆ.12,500 ಪ್ರಾಥಮಿಕ ಶಾಲೆಗಳು ಮತ್ತು 3100ಪ್ರೌಢ ಶಾಲೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ಶಿಕ್ಷಕರ ಕೊರತೆ ನೀಗಿಸಲು ಯತ್ನಿಸಲಾಗುತ್ತಿದೆ ಎಂದು ಆಳಂದ ಶಾಸಕ ಗುತ್ತೇದಾರ್ ಸುಭಾಶ್ ರುಕ್ಮಯ್ಯ ಪ್ರಶ್ನೆಗೆ ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಉತ್ತರ ನೀಡಿದ್ರು.
ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಯಾರು?ಎನ್ .ಮಹೇಶ್ ಅವರೋ ತನ್ವೀರ್ ಸೇಠ್ ಅವರೋ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಮುಂದಾದ ತನ್ವೀರ್ ಸೇಠ್.ರಾಜ್ಯದ ,2500 ಶಾಲೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದರು.ಈ ವೇಳ ಬಿಜೆಪಿಯ ಅರವಿಂದ ಲಿಂಬಾವಳಿ ಆಕ್ಷೇಪ ವ್ಯಕ್ತಪಡಿಸಿದ್ರು.ಸರ್ಕಾರ ಬದಲಾಗಿದೆ ಸಮ್ಮಿಶ್ರ ಸರ್ಕಾರ ಬಂದಿದೆ ಎಂಬುದನ್ನು ತನ್ವೀರ್ ಸೇಠ್ ಮರೆತಿದ್ದಾರೆ ಎಂದು ಟೀಕಿಸಿದ್ರು.ಅವರನ್ನು ಮಂತ್ರಿ ಮಾಡಿಲ್ಲ ಎಂಬ ನೋವನ್ನು ಈ ರೀತಿ ಉತ್ತರ ಹೇಳುವ ಮೂಲಕ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿ.ಟಿ ರವಿ ವ್ಯಂಗ್ಯವಾಡಿದ್ರು.ಆಗ ಸದನದ ಶಾಸಕನಾಗಿ ಮಾಹಿತಿ ನೀಡುವ ಜವಾಬ್ದಾರಿ ತಮಗೂ ಇದೆ.ಅದಕ್ಕೆ ಮಂತ್ರಿಯೇ ಆಗಬೇಕು ಎಂದೇನಿಲ್ಲ ಎಂದು ತನ್ವೀರ್ ಸೇಠ್ ವಾದಿಸಿದ್ರು.ಕೊನೆಗೆ ಶಾಸಕರ ಪ್ರಶ್ನೆಗೆ ತಾವೇ ಉತ್ತರಿಸುತ್ತೇವೆ.ಸುಖಾಸುಮ್ಮನೆ ಆ ಪಕ್ಷ ಈ ಪಕ್ಷ ಎಂದು ವ್ಯತ್ಯಾಸ ಬೇಡ ಎಂದು ಸ್ಪಷ್ಟನೆ ನೀಡಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಹೇಶ್ ಉತ್ತರ ನೀಡಿದ್ರು.
ವಿಧಾನಸಭೆ ಅಧಿವೇಶನ ಮುಕ್ತಾಯವಾದ ಬಳಿಕ ಮಲೆನಾಡಿನಲ್ಲಿ ಒಂದೆರಡು ದಿನ ಕ್ಯಾಂಪ್ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಧಾರಿಸಿದ್ರು.ನಿನ್ನೆ ತೀರ್ಥಹಳ್ಳಿಯಲ್ಲಿ ಕಾಲು ಸಂಕದಿಂದ ಜಾರಿಬಿದ್ದು ಹಳ್ಳದ ನೀರಿನಲ್ಲಿ ವಿದ್ಯಾರ್ಥಿನಿ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಪ್ರಸ್ತಾಪಿಸಿದ ಬಿಜೆಪಿಯ ಅರಗಜ್ಞಾನೇಂದ್ರ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.ಇದಕ್ಕ ಉತ್ತರಿಸಿದ ಸಿಎಂ ಎಚ್.ಡಿ.ಕುಮಾರಸ್ವಾಮಿ ನಿನ್ನೆ ತೀರ್ಥಹಳ್ಳಿಯಲ್ಲಿ ಮೃತಪಟ್ಟ ಬಾಲಕಿ ಕುಟುಂಬಕ್ಕೆ ಹತ್ತು ಲಕ್ಷ ರೂ ಪರಿಹಾರ ನೀಡುವ ಜತೆಗೆ,ಇಂತಹಾ ಘಟನೆ ಮರುಕಳಿಸದಂತೆ ಕಾಲು ಸಂಕ ದುರಸ್ಥಿ ಹಾಗೂ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗೆ ಆದೇಶಿಸಿರುವುದಾಗಿ ಉತ್ತರಿಸಿದರು. ಇದಲ್ಲದೆ ಮಲೆನಾಡಿನ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಲು ಮಲೆನಾಡು ಪ್ರದೇಶದಲ್ಲಿ ಎರಡು ದಿನ ಗ್ರಾಮವಾಸ್ತವ್ಯ ಮಾಡಲು ಉದ್ದೇಶಿಸಿರುವುದಾಗಿ ಸಿಎಂ ಪ್ರಕಟಿಸಿದರು.
Related Articles
Thank you for your comment. It is awaiting moderation.
Comments (0)