ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆ; ಸೋರಿಕೆ ತಡೆಗೆ ವಿಶೇಷ ಕ್ರಮವಹಿಸಲು: ಡಿಸಿಎಂ ಲಕ್ಷ್ಮಣ ಸವದಿ ಸೂಚನೆ
- by Suddi Team
- June 1, 2020
- 11 Views

ಸಂಗ್ರಹ ಚಿತ್ರ
ಬಳ್ಳಾರಿ,ಜೂ.1: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಮತ್ತು ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕ್ರಮವಹಿಸಬೇಕು ಎಂದು ಸಾರಿಗೆ ಸಚಿವರು ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಪೊಲೀಸ್ ಜಿಮ್ಖಾನಾದಲ್ಲಿ ಸೋಮವಾರ ನಡೆದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ನಮ್ಮ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಬಹುದೊಡ್ಡ ಹೊಡೆತ ನೀಡಿದ್ದು,ನಾಲ್ಕು ಸಾರಿಗೆ ನಿಗಮಗಳು ಬಹಳಷ್ಟು ನಷ್ಟ ಅನುಭವಿಸಿವೆ.
ರಾಜ್ಯದಲ್ಲಿ 4 ಕೋಟಿ ಜನರು ನಮ್ಮ ಸಾರಿಗೆ ವ್ಯವಸ್ಥೆ ನಂಬಿಕೊಂಡಿದ್ದಾರೆ. ಇದಕ್ಕೆ ಯಾವುದೇ ರೀತಿಯ ಧಕ್ಕೆ ಆಗಬಾರದು ಮತ್ತು ಕರ್ನಾಟಕ ಸಾರಿಗೆ ಸಂಸ್ಥೆಗಳಲ್ಲಿ 1.30ಲಕ್ಷ ಅಧಿಕಾರಿಗಳು ಮತ್ತು ಸಿಬ್ಬಂದಿಯಿದ್ದು, ನಾವೇ ಶ್ರಮಪಡಬೇಕು ಮತ್ತು ಆದಾಯ ಗಳಿಸಬೇಕು ಮತ್ತು ನಮ್ಮ ಸಂಬಳ ತೆಗೆದುಕೊಳ್ಳಬೇಕು ಎನ್ನುವ ಸ್ಥಿತಿ ಇದ್ದು, ನಮ್ಮವರ ಭದ್ರತೆಗೂ ಧಕ್ಕೆ ಆಗದಂತೆ ಕಾರ್ಯನಿರ್ವಹಿಸುವ ಜವಾಬ್ದಾರಿ ನಮ್ಮ ಮುಂದಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಜಾಗೂರಕತೆಯಿಂದ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಅನಧಿಕೃತ ವಾಹನಗಳ ಓಡಾಟ ಗಮನಕ್ಕೆ ತನ್ನಿ:
ಯಾವ ಮಾರ್ಗದಲ್ಲಿ ಖಾಸಗಿ ಅನಧಿಕೃತ ವಾಹನಗಳ ಓಡಾಟ ಮಾಡಲಾಗುತ್ತಿವೆಯೋ ಎಂಬುದರ ಕುರಿತು ತಮ್ಮ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಎನ್ಇಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಎನ್ಇಕೆಎಸ್ಆರ್ಟಿಸಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಆರ್ಟಿಒ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಹೇಳಿದ ಡಿಸಿಎಂ ಸವದಿ ಅವರು ಬಸ್ ನಿಲ್ದಾಣದ 500 ಮೀಟರ್ ಒಳಗಡೆ ಖಾಸಗಿ ವಾಹನಗಳು ಓಡಾಟ ನಡೆಸದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಹೊಸ್ ಬಸ್ ನಿಲ್ದಾಣ ನಿರ್ಮಾಣ ಹಾಗೂ ಹಳೆ ಬಸ್ ನಿಲ್ದಾಣಗಳ ದುರಸ್ತಿ ಸೇರಿದಂತೆ ಇನ್ನೀತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಿಲ್ಲಾ ಖನಿಜ ನಿಧಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿ ಅಡಿ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ನೀಡುವ ಕೆಲಸ ಮಾಡಿ ಎಂದು ಎನ್ಇಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಕೋವಿಡ್ ಲಾಕ್ಡೌನ್ ಅವಧಿಯಲ್ಲಿ 401ಕೋಟಿ ರೂ.ನಷ್ಟ:
ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಕೋವಿಡ್-19 ನಿಮಿತ್ತ ಸಾರಿಗೆ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ 396.46 ಕೋಟಿ ರೂ. ಸಾರಿಗೆ ಆದಾಯ ಮತ್ತು 4.48 ಕೋಟಿ ರೂ. ವಾಣಿಜ್ಯ ಆದಾಯ ಸೇರಿದಂತೆ 400.92 ಕೋಟಿ ರೂ. ನಷ್ಟವುಂಟಾಗಿದೆ ಎಂದು ಎನ್ಇಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಹೀರಾನಸೀಂ ಅವರು ಸಭೆಗೆ ತಿಳಿಸಿದರು.
ಕಲಬುರಗಿ ವಿಭಾಗ-1 ಮತ್ತು ವಿಭಾಗ-2ಗೆ 81.80 ಕೋಟಿ ರೂ.,ಯಾದಗಿರಿ-31.86 ಕೋಟಿ ರೂ.,ರಾಯಚೂರು-54.76 ಕೋಟಿ ರೂ.,ಬೀದರ್-52.38 ಕೋಟಿ ರೂ.,ಕೊಪ್ಪಳ-37.94ಕೋಟಿ ರೂ.,ಬಳ್ಳಾರಿ-33.35ಕೋಟಿ ರೂ.,ವಿಜಯಪುರ-66.78ಕೋಟಿ ರೂ.,ಹೊಸಪೇಟೆ-41.29ಕೋಟಿ ರೂ.ಹಾಗೂ ಕೇಂದ್ರ ಕಚೇರಿ-0.76ಕೋಟಿ ರೂ ನಷ್ಟವುಂಟಾಗಿದೆ ಎಂದು ಅವರು ಹೇಳಿದರು.
ನಾಲ್ಕು ಗ್ರಾಮಗಳಿಗೆ ಸಿಟಿಬಸ್ ಓಡಿಸಿ:
ಬಳ್ಳಾರಿ ನಗರಕ್ಕೆ ಹತ್ತಿರವಿರುವ ಮೋಕಾ,ರೂಪನಗುಡಿ,ಕೋಳಗಲ್ಲು ಮತ್ತು ಬೆಳಗಲ್ಲು ಗ್ರಾಮಗಳಿಗೆ ಬಳ್ಳಾರಿಯಿಂದ ಸಿಟಿ ಬಸ್ ಓಡಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಡಿಸಿಎಂ ಸವದಿ ಅವರಲ್ಲಿ ಕೋರಿದರು.
ಶಾಸಕರ ಅಹವಾಲು ಆಲಿಸಿದ ಡಿಸಿಎಂ ಸವದಿ ಅವರು ಕೂಡಲೇ ಆ ಗ್ರಾಮಗಳಿಗೆ ಸಿಟಿ ಬಸ್ ಓಡಿಸುವುದಕ್ಕೆ ವ್ಯವಸ್ಥೆ ಮಾಡಿ ಎಂದು ಎನ್ಇಕೆಎಸ್ಆರ್ಟಿಸಿ ಡಿಸಿ ಚಂದ್ರಶೇಖರ ಅವರಿಗೆ ಸೂಚಿಸಿದರು.
ಬಳ್ಳಾರಿ ತಾಲೂಕಿನ 3 ಮತ್ತು ಸಿರಗುಪ್ಪ ತಾಲೂಕಿನ 2 ಗ್ರಾಮಗಳಿಗೆ ಜನವಸತಿ ಇಲ್ಲದ ಗ್ರಾಮಗಳಿಗೆ ಬಸ್ ಸೇವೆ ಒದಗಿಸಲಾಗಿಲ್ಲ. ಹೊಸಪೇಟೆ ವಿಭಾಗದ ಕೂಡ್ಲಿಗಿ ಗ್ರಾಮದ 1,ಸಂಡೂರು ತಾಲೂಕಿನ 02 ಮತ್ತು ಹರಪನಳ್ಳಿ ತಾಲೂಕಿನ 5 ಗ್ರಾಮಗಳಿಗೆ ಬಸ್ ಸೇವೆ ಒದಗಿಸಬೇಕಾಗಿದೆ ಎಂದು ಹೊಸಪೇಟೆ ಎನ್ಇಕೆಎಸ್ಆರ್ಟಿಸಿ ವಿಭಾಗೀಯ ಅಧಿಕಾರಿ ಶೀನಯ್ಯ ಅವರು ಡಿಸಿಎಂ ಅವರ ಗಮನಕ್ಕೆ ತಂದರು.
ಬಸ್ ನಿಲ್ದಾಣದಲ್ಲಿ ಕೋವಿಡ್ ಸಾಕಷ್ಟು ಮುಂಜಾಗ್ರತೆ:
ಕೋವಿಡ್ ಅವಧಿಯಲ್ಲಿ ಬಸ್ ನಿಲ್ದಾಣಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಳ್ಳಾರಿ ಮತ್ತು ಹೊಸಪೇಟೆ ವಿಭಾಗೀಯ ಅಧಿಕಾರಿಗಳಾದ ಚಂದ್ರಶೇಖರ ಮತ್ತು ಶೀನಯ್ಯ ಅವರು ಸಭೆಗೆ ತಿಳಿಸಿದರು.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಿಂಗಲ್ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡಲಾಗುತ್ತಿದ್ದು, ಮಾಸ್ಕ್ ಧರಿಸಿದ ಪ್ರಯಾಣಿಕರಿಗೆ ಅನುಮತಿಸಲಾಗುತತಿದೆ. ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಬಸ್ಗಳಲ್ಲಿ ಗರಿಷ್ಠ 30 ಜನರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ಘಟಕಗಳಲ್ಲಿ ಎಲ್ಲ ಸಿಬ್ಬಂದಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಡಿಸ್ಇನ್ಫೆಕ್ಟ್ ಮಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡುವಿಕೆ ಮತ್ತು ಕಡ್ಡಾಯ ಮಾಸ್ಕ್ ಧರಿಸಲಾಗುತ್ತಿದೆ ಎಂದರು.
ಜಿಲ್ಲಾ ವ್ಯಾಪ್ತಿಯಲ್ಲಿ 61778 ವಲಸೆ ಕಾರ್ಮಿಕರ ಕಾರ್ಯಾಚರಣೆ:
ಏ.23ರಿಂದ ಮೇ 31ರವರೆಗೆ ವಲಸೆ ಕಾರ್ಮಿಕರಿಗಾಗಿ ಜಿಲ್ಲಾ ವ್ಯಾಪ್ತಿಯಲ್ಲಿ 2239 ಬಸ್ಗಳು ಕಾರ್ಯಾಚರಣೆ ಮಾಡಿಸಲಾಗಿದ್ದು,ಎನ್ಇಕೆಎಸ್ಆರ್ಟಿಸಿ ವ್ಯಾಪ್ತಿಯ ಜಿಲ್ಲೆಗಳಲ್ಲಿ 61778 ವಲಸೆ ಕಾರ್ಮಿಕರನ್ನು ಕಾರ್ಯಚರಣೆ ಮಾಡಲಾಗಿದೆ ಎಂದು ಎನ್ಇಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸಭೆಗೆ ತಿಳಿಸಿದರು. ಅಂತರರಾಜ್ಯ ವ್ಯಾಪ್ತಿಯಲ್ಲಿ 311 ಬಸ್ಗಳು ಕಾರ್ಯಚರಣೆ ಮಾಡಲಾಗಿದ್ದು,8762 ಪ್ರಯಾಣಿಕರನ್ನು ಕಾರ್ಯಚರಣೆ ಮಾಡಲಾಗಿದೆ ಎಂದರು.
ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಕರೆದುಕೊಂಡು ಬರಲು 3570 ಬಸ್ಗಳನ್ನು ಒದಗಿಸಲಾಗಿದ್ದು,70540 ಪ್ರಯಾಣಿಕರನ್ನು ಕರೆದುಕೊಂಡು ಬರಲಾಗಿದೆ. ಕರಾರು ಒಪ್ಪಂದದ ಅನ್ವಯ 10.07ಕೋಟಿ ರೂ. ಬರಬೇಕಾಗಿದೆ ಎಂದರು.
ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಆನಂದಸಿಂಗ್, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕ ನಾಗೇಂದ್ರ, ಎನ್ಇಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಹೀರಾನಸಿಂ,ಜಿಲ್ಲಾಧಿಕಾರಿ ಎಸ್.ಎಸ್.ನಕುಲ್,ಜಿಪಂ ಸಿಇಒ ಕೆ.ನಿತೀಶ್, ಎಸ್ಪಿ ಸಿ.ಕೆ.ಬಾಬಾ ಮತ್ತಿತರರು ಇದ್ದರು.
Related Articles
Thank you for your comment. It is awaiting moderation.
Comments (0)