ಮುಂದೆ ಕಾಂಗ್ರೆಸ್ ಪ್ರಧಾನಿ ಕೆಂಪುಕೋಟೆ ಮೇಲೆ ಭಾಷಣ ಮಾಡುವುದನ್ನು ನೋಡಲಿದ್ದೇವೆ: ಡಿಕೆ ಶಿವಕುಮಾರ್
- by Suddi Team
- August 15, 2020
- 18 Views

ಬೆಂಗಳೂರು: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪ್ರಧಾನಿಯು ಕೆಂಪು ಕೋಟೆ ಮೇಲೆ ಭಾಷಣ ಮಾಡುವುದನ್ನು ನೋಡುತ್ತೇವೆ ಆ ದಿನ ಭಾರತದ ಶತಕೋಟಿ ಜನರು ಶಾಂತಿ ಹಾಗೂ ಸೌಹಾರ್ದತೆಯನ್ನು ಆಚರಿಸಲಿದೆ. ಇದಕ್ಕೆ ಬದ್ಧರಾಗಿ ನಾವು ನೀವೆಲ್ಲರು ಶ್ರಮಿಸೋಣ ದುಡಿಯೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದರು. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಷಣದ ಸಾರಾಂಶ:
ಇಂದು ಭಾರತದ 74ನೇ ಸ್ವಾತಂತ್ರ್ಯ ದಿನಾಚಾರಣೆಯನ್ನು ಆಚರಿಸುತ್ತಿದ್ದೇವೆ. ಪ್ರತಿಯೊಬ್ಬ ನಾಗರೀಕರಿಗೂ ವೈಯಕ್ತಿಕವಾಗಿ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಶುಭಾಷಯ ಕೋರುತ್ತೇನೆ. 74 ವರ್ಷಗಳ ಹಿಂದೆ ದೆಹಲಿಯ ಕೆಂಪುಕೋಟೆಯ ಮೇಲೆ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಭಾರತದ ಧ್ವಜವನ್ನು ಹಾರಿಸುವ ಮೂಲಕ ಈ ಐತಿಹಾಸಿಕ ಕ್ಷಣವನ್ನು ಆರಂಭಿಸಿದರು. ಬ್ರಿಟೀಷರ ಹಸ್ತಕ್ಷೇಪವಿಲ್ಲದೇ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಜೀವನ ನಡೆಸಲು ದಾರಿ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ನಾನು ಹೇಳುವುದೇನೆಂದರೆ, ಇಂದಿನ ಪೀಳಿಗೆಯ ಜನ ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಲಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಂಡು ಬೆಳೆದಿದ್ದೇವೆ. ಅವರ ನೈತಿಕತೆ, ಮೌಲ್ಯ, ದೇಶಭಕ್ತಿ, ಸಮರ್ಪಣೆ ನಮ್ಮ ದೇಶವಾಸಿಗಳು ಅದರಲ್ಲೂ ಯುವ ಜನತೆ ಅಳವಡಿಸಿಕೊಳ್ಳಬೇಕು. ಮಹಾತ್ಮ ಗಾಂಧಿಜಿ ಅವರು ಪಾಲಿಸಿದ ಅಹಿಂಸೆ ಹಾಗೂ ಸರ್ವೋದಯ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಈ ದಿನ ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಪಿಸಿಕೊಳ್ಳುವ ದಿನ. ದೇಶದ ಸ್ವಾತಂತ್ರ್ಯಕ್ಕೆ ಬೆನ್ನೆಲುಬಾದ ಈ ನಾಯಕರುಗಳ ಆದರ್ಶವನ್ನು ನಾವೆಲ್ಲರೂ ಪಾಲಿಸಲು ಬದ್ಧರಾಗಿದ್ದೇವೆ. ಭಾರತ ಸ್ವಾತಂತ್ರ್ಯ ಪಡೆದ ನಂತರ ಅಪಾರ ಭಾರತೀಯ ಸೈನಿಕರು ಗಡಿಯಲ್ಲಿ ನಮ್ಮ ರಕ್ಷಿಸುವ ವೇಳೆ ಹುತಾತ್ಮರಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ತ್ಯಾಗವನ್ನು ನಾವು ಸ್ಮರಿಸೋಣ.
1947ರ ಆಗಸ್ಟ್ 14ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಮಾಡಿದ ಭಾಷಣದಲ್ಲಿ (Tryst with Destiny) ಆಡಿರುವ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಅದೇನೆಂದರೆ ‘ಭಾರತದ ಸೇವೆ ಎಂದರೆ, ಕೋಟ್ಯಾಂತರ ಜನರ ಸೇವೆಯಾಗಿದೆ. ಇದರಂತೆ ಬಡತನ, ಅಜ್ಞಾನ, ರೋಗ, ಅಸಮಾನತೆ ಹೋಗಲಾಡಿಸುವುದಾಗಿದೆ.’
74 ವರ್ಷಗಳ ನಂತರವೂ ನಾವು ದೇಶವನ್ನು ನಿಭಾಯಿಸುವ ಪ್ರಯತ್ನದಲ್ಲಿದ್ದೇವೆ. 2020ರಲ್ಲಿ ಕೊರೋನಾ ವೈರಸ್ ಪರಿಸ್ಥಿತಿ, ಆರ್ಥಿಕ ಕುಸಿತವನ್ನು ನಿಭಾಯಿಸಲು ಕಷ್ಟಕರವಾಗಿದೆ. ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿರುವವರನ್ನು ಉತ್ತೇಜಿಸಬೇಕಾಗಿದೆ. ಇಂತಹ ಅಸಮಾನತೆಯನ್ನುನಿರ್ಮೂಲನೆ ಮಾಡುವುದಾಗಿ ನಾವೆಲ್ಲ ಇಂದು ಪ್ರತಿಜ್ಞೆ ಮಾಡುತ್ತಿದ್ದೇವೆ. ನಮ್ಮ ಸ್ವಾತಂತ್ರ್ಯ ಹೋರಾಟ ಇಲ್ಲಿಗೆ ಮುಗಿದಿಲ್ಲ.
ನಮ್ಮ ಪೂರ್ವಜರು ಬ್ರಿಟೀಷರ ವಿರುದ್ಧ ಹೋರಾಡಿದರು. ಆದರೆ ನಾವೆಲ್ಲರೂ ಇಂದು ದೇಶದ ಸಂವಿಧಾನ ಹಾಗೂ ಅದರಲ್ಲಿರುವ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ಸ್ವಾತಂತ್ರ್ಯದ ಹೊರತಾಗಿಯೂ 74 ವರ್ಷಗಳ ನಂತರ ಇನ್ನು ನಾವು ಸ್ವಾತಂತ್ರ್ಯವನ್ನು ಹುಡುಕಾಡುತ್ತಿರುವುದು ದುರಾದೃಷ್ಟಕರ. ಹೀಗಾಗಿ ನಮ್ಮ ಸಂವಿಧಾನಕ್ಕೆ ಹಾನಿಯಾಗುವ ಯಾವುದೇ ನಿರ್ಧಾರವನ್ನು ಖಂಡಿಸಬೇಕು. ಭಾರತದ ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸಲು ಎಲ್ಲರೂ ಪ್ರತಿಜ್ಞೆ ಮಾಡಬೇಕೆಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ.
ಭಾರತದ ಸ್ವಾತಂತ್ರ್ಯ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು.ಒಂದನ್ನು ಬಿಟ್ಟು ಮತ್ತೊಂದನ್ನು ಯೋಚನೆ ಮಾಡಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಜನ್ಮ ತಳೆದಿದ್ದೇ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಹೋರಾಟಕ್ಕಾಗಿ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದೇ ಕಾಂಗ್ರೆಸ್ ಹೋರಾಟದಿಂದಾಗಿ. ಹಲವಾರು ಮಹನೀಯರ ಹೋರಾಟ, ತ್ಯಾಗ, ಬಲಿದಾನದಿಂದ ಈ ದೇಶಕ್ಕೆ ಸ್ವಾತಂತ್ರ ಬಂತು. ಅವರೆಲ್ಲರೂ ಕಾಂಗ್ರೆಸ್ ಬೇರಿನವರು ಎಂಬುದೇ ಹೆಮ್ಮೆಯ ವಿಚಾರ. ಸ್ವಾತಂತ್ರ್ಯ ಸಂಗ್ರಾಮದ ಧ್ವಜ ಕಾಂಗ್ರೆಸ್ ಧ್ವಜ. ಅನಿಬೆಸೆಂಟ್, ಮಹಾತ್ಮ ಗಾಂಧೀಜಿ, ಮೌಲಾನಾ ಅಬ್ದುಲ್ ಕಲಾಂ ಅಜಾದ್, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕರು, ದಾದಾ ಬಾಯಿ ನವರೂಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ನೆಹರೂ ಅವರಂಥ ಮಹನೀಯರು ಹಿಡಿದ ಧ್ವಜ ಕಾಂಗ್ರೆಸ್ ಧ್ವಜ.ಈ ದೇಶದ ಧ್ವಜ ಕಾಂಗ್ರೆಸ್ ಧ್ವಜ. ಅಂತಹ ಕಾಂಗ್ರೆಸ್ ಧ್ವಜ ಹಿಡಿದಿರುವ ನಾವೆಲ್ಲರೂ ಧನ್ಯರು.
ಅವತ್ತು ದೇಶದ ವಿಮುಕ್ತಿಗಾಗಿ ಜಾತಿ, ಧರ್ಮ, ಪಂಥ ಎಲ್ಲವನ್ನೂ ಬದಿಗಿಟ್ಟು ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂಬಂತೆ ಕಾಂಗ್ರೆಸ್ ಧ್ವಜ ಹಿಡಿದು ಎಲ್ಲರೂ ಹೋರಾಡಿದ್ದರು. ದೇಶದ ಐಕ್ಯತೆ, ಭಾವಕೈತೆ, ಭ್ರಾತೃತ್ವ, ಸೌಹಾರ್ಧತೆ ಅವರೆಲ್ಲರ ಮೂಲಮಂತ್ರವಾಗಿತ್ತು. ಅಂದು ಜವಾಹರ್ ಲಾಲ್ ನೆಹರೂ ಅವರು ದೇಶದ ಜನರ ಸೇವೆ, ಮಾನವೀಯತೆ ಕೊಡುಗೆಗಾಗಿ ನೀಡಿದ್ದ ಪ್ರತಿಜ್ಞೆ ಕರೆಯನ್ನು ನಾವು ಇಂದು ಪುನಃ ಸ್ವೀಕರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
Earth provides enough to satisfy every man’s needs, but not every man’s greed. ‘ಭೂಮಿ ತಾಯಿ ಮನುಷ್ಯನ ಎಲ್ಲ ಆಸೆಗಳನ್ನು ತೃಪ್ತಿಪಡಿಸುವಷ್ಟು ಸಂಪತ್ತು ಕೊಟ್ಟಿದ್ದಾಳೆ. ಆದರೆ ಮನುಷ್ಯನ ದುರಾಸೆಯನ್ನು ತೃಪ್ತಿಪಡಿಸಲು ಅಲ್ಲ’ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ.
ಆದರೆ, ಪ್ರಜಾಪ್ರಭುತ್ವದ ಸೌಧ ನಿರ್ಮಿಸಲು, ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟ ಸಂವಿಧಾನಕ್ಕೇ ಇಂದು ಅಪಚಾರವಾಗುತ್ತಿದೆ. ಸಂವಿಧಾನ, ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಅಧಿಕಾರದ ಮೇಲಾಟ ನಡೆಯುತ್ತಿದೆ. ಇದು ದುರಂತ ಭಾರತದ ಮೊದಲ ಅಧ್ಯಾಯವಾಗಲಿದೆ. ಇದನ್ನು ಉಳಿಸಿ, ರಕ್ಷಿಸುವ ಹೊಣೆ ನಮ್ಮೆಲ್ಲರದಾಗಿದೆ.
ದಲಿತ ಸಮುದಾಯದಲ್ಲಿ ಹುಟ್ಟಿ ಸಮಾಜದಲ್ಲಿ ಎಲ್ಲ ಶೋಷಣೆಗಳನ್ನು ಮಟ್ಟಿನಿಂತು ಸಂವಿಧಾನ ಶಿಲ್ಪಿಯಾಗಿ ಬೆಳೆದು ನಿಂತ ಅಂಬೇಡ್ಕರ್ ಅವರ ಬಗೆಗೂ ಈ ಬಿಜೆಪಿಯವರಿಗೆ ಕನಿಷ್ಠ ಗೌರವವಿಲ್ಲ. ಅಂಬೇಡ್ಕರ್ ಅವರ ಸಂವಿಧಾನವನ್ನು ನಾವ್ಯಾಕೆ ಒಪ್ಪಬೇಕು ಎಂಬ ಅಹಂಭಾವದಿಂದ ಈಗ ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರೆ. ಅವರ ಸಂವಿಧಾನವನ್ನು ಸುಟ್ಟುಹಾಕುವ ಮಾತಾಡಿದ್ದಾರೆ.
ಸ್ವಾತಂತ್ರ್ಯ ಫಲವಾಗಿ ನಮಗೆ ಸಿಕ್ಕ ಸಂವಿಧಾನವನ್ನು ಕೊಲ್ಲಲು ಹೊರಟಿರುವವರಿಂದ ಸ್ವಾತಂತ್ರ್ಯ ಸಿಗಬೇಕಿದೆ. ಇವತ್ತು ದೇಶಕ್ಕೆ ಕೋಮುವಾದಿಗಳಿಂದ ಸ್ವಾತಂತ್ರ್ಯ ಸಿಗಬೇಕಿದೆ. ಮತಾಂಧರಿಂದ ಸ್ವಾತಂತ್ರ್ಯ ಸಿಗಬೇಕಿದೆ. ಜನರಲ್ಲಿ ಕೋಮುದ್ವೇಷ ಭಿತ್ತಿ, ಅದರ ಜ್ವಾಲೆಯಲ್ಲೇ ಮೈ ಕಾಯಿಸಿಕೊಳ್ಳುತ್ತಿರುವ ದುಷ್ಟಶಕ್ತಿಗಳಿಂದ ಸ್ವಾತಂತ್ರ್ಯ ಸಿಗಬೇಕಿದೆ. ಇಂದು ಜಾತಿ, ಧರ್ಮವನ್ನು ಮುಂದಿಟ್ಟು ದೇಶವನ್ನು ತುಂಡು ತುಂಡು ಮಾಡುವ ಹುನ್ನಾರ ನಡೆಯುತ್ತಿದೆ. ಕೋಮುದ್ವೇಷದ ವಿಷಬೀಜ ಭಿತ್ತಿ ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಹೈಜಾಕ್ ಮಾಡಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಕೋಮುವಾದಿಗಳಿಂದ ದೇಶವನ್ನು ರಕ್ಷಿಸಲು ಮತ್ತೊಂದು ಸುತ್ತಿನ ಹೋರಾಟಕ್ಕೆ ಕಾಂಗ್ರೆಸ್ ನ ಎಲ್ಲರು ಸಜ್ಜಾಗಬೇಕಾಗಿದೆ. ಈ ಹೋರಾಟ ಸ್ವಾತಂತ್ರ್ಯದ ಹೋರಾಟದ ಸ್ವರೂಪದಲ್ಲೇ ನಡೆಯಬೇಕಿದೆ. ಯಾವುದೇ ಯುದ್ಧ ಗೆಲ್ಲಬೇಕಾದರೆ ಸೈನಿಕರು ಕಾರ್ಯಕರ್ತರು ಬಹಳ ಮುಖ್ಯ.
ಇಂದು ನಮ್ಮ ಮುಖ್ಯ ಧ್ಯೇಯ ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಮುಕ್ತಗೊಳಿಸಬೇಕು. ದೇಶದಲ್ಲಿ ಶಾಂತಿ, ಸೌಹಾರ್ದತೆ, ಐಕ್ಯತೆಯನ್ನು ಕಾಪಾಡಬೇಕಾಗಿದೆ. ಪ್ರತಿ ಮನೆಯ ಯುವಕರಿಗೂ ಉದ್ಯೋಗ ಸಿಗುವಂತೆ ಮಾಡಬೇಕು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ನಮ್ಮ ತತ್ವ ಸಿದ್ಧಾಂತವನ್ನು ಕಾಪಾಡಬೇಕಾಗಿದೆ.
ಈ ದೇಶವನ್ನು ಉಳಿಸಿ, ರಾಜ್ಯದಲ್ಲಿ ಸೌಹಾರ್ದತೆ ವಾತಾವರಣ ನಿರ್ಮಾಣ ಮಾಡಲು ಎಲ್ಲ ಜಾತಿ, ಧರ್ಮದವರನ್ನು ಒಟ್ಟಾಗಿ ಕರೆದೊಯ್ಯಬೇಕಿದೆ. ಇಂದು ನಮ್ಮೆಲ್ಲರ ಬದುಕನ್ನು ದೇಶಕ್ಕೋಸ್ಕರ ಮೀಸಲಿಡೋಣ. ನಮ್ಮ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಹೆಜ್ಜೆ ಹಾಕೋಣ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಈ ದೇಶವನ್ನು ಕಟ್ಟಲು, ಈ ಪೀಳಿಗೆಯನ್ನು ಉಳಿಸುವುದಕ್ಕಾಗಿ. ಇದಕ್ಕೆ ಬದ್ಧರಾಗಿ ನಾವೆಲ್ಲರೂ ದುಡಿಯೋಣ.
Related Articles
Thank you for your comment. It is awaiting moderation.
Comments (0)