ಆಲಮಟ್ಟಿ ಎತ್ತರದ ಬಗ್ಗೆ ಮಹಾರಾಷ್ಟ್ರ ಸಿಎಂ ತಕರಾರು ರಾಜಕೀಯ ಪ್ರೇರಿತ: ಬಸವರಾಜ ಬೊಮ್ಮಾಯಿ
- by Suddi Team
- June 5, 2025
- 8 Views

ಬೆಂಗಳೂರು: ಮಹಾರಾಷ್ಟ್ರ ಸಿಎಂ ಆಲಮಟ್ಟಿ ಜಲಾಶಯದ ಎತ್ತರದ ಬಗ್ಗೆ ತಕರಾರು ಮಾಡಿರುವುದು ಅಸಮಂಜಸ ಮತ್ತು ರಾಜಕೀಯ ಪ್ರೇರಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ಆಲಮಟ್ಟಿ ಸಂಪೂರ್ಣ ಕೃಷ್ಣಾ ಜಲಾನಯನ ಪ್ರದೇಶದ ಒಂದು ಪ್ರಮುಖ ನೀರು ಸಂಗ್ರಹ ಮತ್ತು ವಿತರಣೆಯ ವಾಟರ್ ಗ್ರಿಡ್ ಆಗಿದೆ. ಉತ್ತರ ಕರ್ನಾಟಕದ ಜೀವನದಿಗೆ ಹೃದಯ ಭಾಗವಾಗಿದೆ. ಆಲಮಟ್ಟಿ ಎತ್ತರದ ಬಗ್ಗೆ ಕರ್ನಾಟಕದ ಮೂಲ ಕೃಷ್ಣಾ ಜಲಾನಯನ ಯೋಜನೆಯಲ್ಲಿ ಅಳವಡಿಸಿದೆ. ಮತ್ತು ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಕೊಟ್ಟಿದೆ. ಅದರ ಪ್ರಕಾರ 524.25 ಮೀಟರ್ ಎಂಬುದು ಮೂಲ ಯೋಜನೆಯಲ್ಲಿ ಇದ್ದು ತದ ನಂತರ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ತಕರಾರು ಆದಮೇಲೆ ಕೆಡಬ್ಲುಟಿ 1 ನೀರನ್ನು ಉಪಯೋಗ ಮಾಡಲು 519.6 ಮೀಟರ್ ಗೆ ಸೀಮಿತಗೊಳಿಸಿ ಉಪಯೋಗಿಸಲು ಸುಪ್ರೀಂ ಕೂಡ ಒಪ್ಪಿದೆ. ಮತ್ತು ಸ್ಕಿಂ ಬಿ.ಯಲ್ಲಿ ಕೆಡಬ್ಲುಡಿಟಿ 2 ( ಕೃಷ್ಣಾ ವಾಟರ್ ಡಿಸ್ಪ್ಯೂಟ್ ಟ್ರಿಬ್ಯುನಲ್ 2) ನಲ್ಲಿ ನಮಗೆ ನೀರು ಹಂಚಿಕೆಯಾಗಿರುವ 173 ಟಿಎಂಸಿಯನ್ನು 519 ರಿಂದ 524 ರಲ್ಲಿ ಪಡೆದುಕೊಳ್ಳಬಹುದೆಂದು ಕೆಡಬ್ಲುಡಿಟಿ 2 ಅಂತಿಮ ಟ್ರಿಬ್ಯುನಲ್ ಆದೇಶದಲ್ಲಿದೆ ಎಂದು ತಿಳಿಸಿದ್ದಾರೆ.
ಕೆಡಬ್ಲ್ಯುಡಿ ಟ್ರಿಬ್ಯುನಲ್ ಸ್ವತಂತ್ರವಾಗಿ ಹೈಡ್ರಾಲಾಜಿಕಲ್ ಸ್ಟಡಿ ಮಾಡಿಸಿ 524 ಮೀಟರ್ ಗೆ ಏರಿಸಿದರೂ ಕೂಡ ಕೊಲ್ಲಾಪುರ ಸಾಂಗ್ಲಿ ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಯಾವುದೇ ಭಾಗ ಮುಳುಗಡೆಯಾವುದಿಲ್ಲ ಎಂದು ಅಂತಿಮವಾಗಿ ಟ್ರಿಬ್ಯುನಲ್ ತೀರ್ಪು ಕೊಟ್ಟಾಗಿದೆ. ಇದನ್ನು ಮಹಾರಾಷ್ಟ್ರ ಎಲ್ಲಿಯೂ ಕೂಡ ಕಾನೂನಾತ್ಮಕವಾಗಿ ಪ್ರಶ್ನಿಸಿಲ್ಲ. ಅಲ್ಲದೇ ಕೆಡಬ್ಲುಡಿಟಿ 2 ನೊಟಿಫಿಕೇಶನ್ ಮಾಡಬೇಕೆಂದು ಕರ್ನಾಟಕಕ್ಕಿಂತ ಮೊದಲೇ ಸುಪ್ರೀಂ ಕೊರ್ಟ್ ಗೆ ಮಹಾರಾಷ್ಟ್ರ ಹೋಗಿದೆ. ಅಲ್ಲದೆ 2005 ರಲ್ಲಿ ಪ್ರವಾಹ ಆದಾಗ ಅದು ಆಲಮಟ್ಟಿ ಹಿನ್ನೀರಿನಿಂದ ಆಗಿಲ್ಲ ಎಂದು ಅವತ್ತಿನ ಕೇಂದ್ರ ಜಲ ಆಯೋಗ ಕೂಡ ತೀರ್ಪು ನೀಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆಲಮಟ್ಟಿ ಡ್ಯಾಂ ನಿರ್ಮಾಣ ಆಗುವ ಮುಂಚೆಯೇ 1960-70 ರ ದಶಕದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಸಾಂಗ್ಲಿಯಲ್ಲಿ ಪ್ರವಾಹ ಆಗಿರುವುದು ಗಮನಾರ್ಹ ಎಂದು ತಿಳಿಸಿದ್ದಾರೆ.
ಇಷ್ಟೆಲ್ಲಾ ಪ್ರಕ್ರಿಯೆ ಆದ ಮೇಲೆ ಈಗ ಮತ್ತೆ ಆಲಮಟ್ಟಿ ಎತ್ತರದ ಬಗ್ಗೆ ಮಹಾರಾಷ್ಟ್ರ ಸಿಎಂ ತಕರಾರು ತೆಗೆದಿರುವುದು ಅಸಮಂಜಸ ಮತ್ತು ಅಲ್ಲಿಯ ಎರಡು ಜಿಲ್ಲೆಯ ರಾಜಕೀಯ ಒತ್ತಡಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಈ ನಿಲುವು ತೆಗೆದುಕೊಳ್ಳಲು ಸಾದ್ಯವಿದೆ. ಹೀಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಂಪೂರ್ಣ ಸತ್ಯವನ್ನು ತಿಳಿಸಬೇಕು. ಅಲ್ಲದೆ ರಾಜ್ಯ ಸರ್ಕಾರ ಪುನರ್ ವಸತಿ ಮತ್ತು ಪುನರ್ ನಿರ್ಮಾಣ (ಆರ್ ಆಂಡ್ ಆರ್) ಕೆಲಸ ತ್ವರಿತಗತಿಯಲ್ಲಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ 173 ಟಿಎಂಸಿ ನಮ್ಮ ನೀರಿನ ಹಕ್ಕನ್ನು ನಾವೇ ಗಂಡಾಂತರಕ್ಕೆ ನೂಕಿದಂತೆ ಆಗುತ್ತದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಬೆರೆಸದೆ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ ಕೇಂದ್ರ ಸರ್ಕಾರವೂ ಕೂಡ ನಡೆದಿರುವ ಎಲ್ಲ ಘಟನಾವಳಿಗಳನ್ನು, ಆದೇಶಗಳನ್ನು ಪರಿಸಿಲಿಸಿ ಕರ್ನಾಟಕದ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.
Related Articles
Thank you for your comment. It is awaiting moderation.
Comments (0)