ಭೂ ಸುಧಾರಣೆ ಕಾಯಿದೆ : ಜನ ಕಲಾ ಮೇಳದ ರೀತಿ ಹೋರಾಟಕ್ಕೆ ನಿರ್ಧಾರ

ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ತಿದ್ದುಪಡಿ ಕಾಯಿದೆ ವಿರೋಧಿಸಿ ರೈತ ಸಂಘಟನೆಗಳ ಬೆಂಬಲದೊಂದಿಗೆ ರಾಜ್ಯಾದ್ಯಂತ ಜನ ಕಲಾ ಮೇಳದ ರೀತಿ ಹೋರಾಟ ರೂಪಿಸಲು. ಸಂಘಟನೆಗಳು ನಿರ್ಧರಿಸಿವೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇದು ನಡೆದ ದಲಿತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಭೂ ಸುಧಾರಣೆ ಕಾಯಿದೆಗೆ ಸರ್ಕಾರ ತಂದಿರುವ ತಿದ್ದುಪಡಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕೆ ಜನ ಕಲಾಮೇಳದ ರೀತಿಯ ಹೋರಾಟವೇ ಸೂಕ್ತ. ಇದಕ್ಕಾಗಿ ರೈತ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಬೇಕು. ಆಗಸ್ಟ್ 15ರ ವೇಳೆಗೆ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕು ಎಂದು ಪ್ರಮುಖರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಮಾನಾಡಿದ ಮುಖಂಡರು, ತಿದ್ದುಪಡಿಯ ಹಿಂದೆ ಇರುವ ಹುನ್ನಾರದ ಬಗ್ಗೆ ಜನರಿಗೆ ತಿಳಿ ಹೇಳಬೇಕು. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತಂಡಗಳನ್ನು ರಚನೆ ಮಾಡಬೇಕು. ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೆ ತಂದಿರುವ ಮಾರ್ಗಸೂಚಿ ಅನ್ವಯವೇ ಹೋರಾಟ ನಡೆಯಬೇಕು ಎಂದು ಹೇಳಿದರು.

ಇದು ಕೇವಲ ರಾಜಕೀಯ ವಿಷಯ ಅಲ್ಲ. ಇದರಲ್ಲಿ ಗ್ರಾಮೀಣ ಜನರ ಬದುಕು ಅಡಗಿದೆ. ಆವರ ಆರ್ಥಿಕತೆ, ಉದ್ಯೋಗ, ಉತ್ಪಾದನೆ ವಿಚಾರವಿದೆ. ಭೂ ಸುಧಾರಣೆ ಕಾಯಿದೆ ಜೊತೆಗೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರ ಹಾಗೂ ಇತರ ಕಾಯಿದೆಗಳಿಗೆ ತಂದಿರುವ ತಿದ್ದುಪಡಿ ವಿಚಾರದಲ್ಲಿಯೂ ಹೋರಾಟ ನಡೆಸಬೇಕು.

ನಿಮ್ಮೊಂದಿಗೆ ನಾವಿದ್ದೇವೆ :
ಈ ಚಳವಳಿಯಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ ಮುಖಂಡರು, ಭೂ ಸುಧಾರಣೆ ಕಾಯಿದೆ ತಿದ್ದುಪಡಿ ವಿರೋಧಿಸಿ ಆಂದೋಲನ ರೂಪುಗೊಳ್ಳುವ ಅಗತ್ಯವಿದೆ ಎಂದರು.

ಈ ತಿದ್ದುಪಡಿ ಜೀವ ಸಂಕುಲದ ವಿರೋಧಿಯಾಗಿದೆ. ಸಾಮಾಜಿಕ, ಸಾಂಸ್ಕøತಿಕ ಮತ್ತು ಪಾಕೃತಿಕವಾದ ವಿಚಾರಗಳು ಇದರಲ್ಲಿ ಅಡಗಿವೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು.

ಚಳವಳಿಗೆ ಶಕ್ತಿ : ಸಿದ್ದರಾಮಯ್ಯ
ಪಕ್ಷದ ವೇದಿಕೆಯಲ್ಲೂ ಈ ಕುರಿತು ಚರ್ಚಿಸುತ್ತೇವೆ. ರೈತ ಹಾಗೂ ದಲಿತ ಸಂಘಟನೆಗಳು ಕೈ ಜೋಡಿಸಿದರೆ ಚಳವಳಿಗೆ ಶಕ್ತಿ ಬರುತ್ತದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿರುವುದರಿಂದ ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಸೇರಿದಂತೆ ರೈತರಲ್ಲದವರು ಯಾರು ಬೇಕಾದರೂ ಈಗ ಜಮೀನು ಖರೀದಿಸಬಹುದು. ಇಡೀ ಕಾಯಿದೆಯೇ ಈಗ ಹಲ್ಲು ಕಿತ್ತ ಹಾವಿನಂತೆ ಆಗಿದೆ. ಕಾಯಿದೆಯ ಹೃದಯವನ್ನೇ ಸರ್ಕಾರ ಕಸಿದುಕೊಂಡಿದೆ.
ರೈತ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಲು ಒಪ್ಪಿವೆ. ಈ ಸಂಬಂಧ ಆಗಸ್ಟ್ ಮೊದಲ ವಾರದಲ್ಲಿ ಉಭಯ ಸಂಘಟನೆಗಳ ಪ್ರಮುಖರ ಸಭೆ ಕರೆಯಲಾಗುವುದು. ಜೊತೆಗೆ ಕಾರ್ಯಾಗಾರ ಆಯೋಜಿಸುವ ಕುರಿತಂತೆಯೂ ಚರ್ಚಿಸಲಾಗುವುದು ಎಂದು ಹೇಳಿದರು.

ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದಿರುವುದರ ಹಿಂದೆ ಷಡ್ಯಂತ್ರ ಇದೆ. ಇದರಿಂದ ತಳ ಸಮುದಾಯಕ್ಕೆ ಹೊಡೆತ ಬಿದ್ದು ಅವರು ನಿರ್ಗತಿಕರಾಗುವ ಅಪಾಯವಿದೆ. ಇದನ್ನು ಜನರ ಮುಂದೆ ಎಳೆ ಎಳೆಯಾಗಿ ಬಿಡಿಸಿ ಇಡಬೇಕು. ಕೊರೊನಾದಂಥ ಸಂಕಷ್ಟದ ಸಮಯದಲ್ಲೂ ಇಂಥ ಜನವಿರೋಧಿ ಕಾಯಿದೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಮುಖಂಡರ ಸಲಹೆ ಮೇರೆಗೆ ಈ ಹಿಂದೆ ನಾವು ಭೂ ಸುಧಾರಣೆ ಕಾಯಿದೆ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಹಳ್ಳಿ, ಹಳ್ಳಿಗಳಲ್ಲಿಯೂ ಹೋರಾಟ ನಡೆಸುವ ಕುರಿತು ಮುಂದೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಾಜಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಗುರುಪ್ರಸಾದ್ ಕೆರಗೋಡು, ಬಸವರಾಜ ನಾಯಕ, ಜನಾರ್ದನ (ಜೆನ್ನಿ), ಎಂ. ವೆಂಕಟೇಶ್, ಅಣ್ಣಯ್ಯ, ಗಂಗಾಧರಮೂರ್ತಿ, ಮುನಿಕೃಷ್ಣಪ್ಪ, ಬೆನ್ನಿಗಾನಹಳ್ಳಿ ರಾಮಚಂದ್ರ, ಕೆ.ಆರ್. ಗೋಪಾಲಕೃಷ್ಣ, ಆಲಂಗೂಡು ಶಿವಕುಮಾರ್, ವೈ.ಸಿ. ಮಯೂರ, ಜವರಯ್ಯ, ಕಾರಳ್ಳಿ ಶ್ರೀನಿವಾಸ, ಶಿವಲಿಂಗಯ್ಯ, ಜಂಬೂದ್ವೀಪ ಸಿದ್ದರಾಜು, ಜೀವನಹಳ್ಳಿ ಆರ್. ವೆಂಕಟೇಶ್, ರವಿಕುಮಾರ್, ಕಾಂತರಾಜು, ಜಯರಾಮಯ್ಯ ಮತ್ತಿತರರು ಭಾಗವಹಿಸಿದ್ದರು. ವಾಲ್ಮೀಕಿ ನಾಯಕ ಪರಿಷತ್ತು, ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಸಭೆಯಲ್ಲಿ ಪಾಲ್ಗೊಂಡಿದ್ದವು.

Related Articles

Comments (0)

Leave a Comment