ಅಭಿಮಾನಿಗಳ ಮಡಿಲಿಗೆ ಮನದಾಳದ ಮಾತು ಒಪ್ಪಿಸಿದ ಎಚ್ಡಿಕೆ
- by Suddi Team
- July 22, 2020
- 15 Views

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರ ಪತನವಾಗಿ ಇಂದಿಗೆ ಒಂದು ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ಎಚ್ಡಿಕೆ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ, ಮುಖಂಡರಿಗೆ ಸುದೀರ್ಘ ಪತ್ರವೊಂದರ ಮೂಲಕ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.
ನಾನು ಎಂದಾದರೂ ಈ ನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸನ್ನೂ ಕಂಡವನಲ್ಲ. ಈ ಮಾತನ್ನು ನಾನು ಮತ್ತೆ ಮತ್ತೆ ಹೇಳುತ್ತಲೆ ಬಂದಿದ್ದೇನೆ. ಮೊದಲ ಸಲ ಶಾಸಕನಾದ ಸಂದರ್ಭದಲ್ಲೆ ರಾಜಕೀಯ ಸನ್ನಿವೇಶವೊಂದು ನಾನು ಮುಖ್ಯಮಂತ್ರಿಯನ್ನಾಗುವ ಅವಕಾಶವನ್ನು ತಂದುಕೊಟ್ಟಿತು. ಬಹುಶಃ ಈ ರಾಜ್ಯದ ಜಡ್ಡುಗಟ್ಟಿದ ರಾಜಕೀಯ ನಿರ್ವಾತದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಹೊಸತೊಂದು ಹೊಳಹುವುಳ್ಳ, ಚಲನಶೀಲವುಳ್ಳ , ವ್ಯಕ್ತಿಗತ ನೆಲೆಯಿಂದ ಸಾಮುದಾಯಿಕ ನೆಲೆಯವರೆಗೂ ಜನರ ದುಃಖ-ದುಮ್ಮಾನಗಳಿಗೆ ಮಿಡಿಯುವ, ದುಡಿಯುವ ತಾಯ್ತನದ ಸೇವಕನನ್ನು ಕಾಣುವ ನಿಮ್ಮ ಹಂಬಲ-ಹರಕೆಯ ಫಲವೆ ನಾನು ಮುಖ್ಯಮಂತ್ರಿಯಾಗಿದ್ದು ಎಂದು ಎಲ್ಲಾ ಕಾಲಕ್ಕೂ ಭಾವಿಸಿದ್ದೇನೆ.
ಯಕಶ್ಚಿತ್ ‘ಹೆಚ್. ಡಿ ಕುಮಾರಸ್ವಾಮಿ’ ಆಗಿದ್ದ ನನ್ನನ್ನು ‘ಕುಮಾರಣ್ಣ’ ನನ್ನಾಗಿಸಿದ ನಿಮ್ಮ ಪ್ರೀತಿ,ವಿಶ್ವಾಸ ಎಂಬುದು ಎಲ್ಲಾ ಕಾಲಕ್ಕೂ ‘ರಾಜಕೀಯ’ ವನ್ನು ಮೀರಿದ್ದಾಗಿದೆ ಎಂಬುದನ್ನು ಬಲ್ಲೆ. ಅಧಿಕಾರ, ಸ್ಥಾನ-ಮಾನ , ಗೌರವಗಳು ಎಂದಿಗೂ ಶಾಶ್ವತವಲ್ಲ. ನಾನು ಅಧಿಕಾರದಲ್ಲಿದ್ದಾಗಲೂ, ಇಲ್ಲದಿದ್ದಾಗಲೂ ನೀವು ಇಟ್ಟ ಪ್ರೀತಿ-ವಿಶ್ವಾಸಗಳಿಗೆ ಎಂದಿಗೂ ದ್ರೋಹ ಬಗೆದಿಲ್ಲ. ಆದರೆ ನಾಡಿನ ಏಳಿಗೆಗೆ , ಜನರ ಹಿತ ಕಾಯುವಲ್ಲಿ ನಿರೀಕ್ಷಿತ ಗುರಿಯನ್ನು ತಲುಪಲಾಗಿಲ್ಲ ಎಂಬ ನೋವು ನನ್ನನ್ನು ಸದಾ ಕಾಡುತ್ತಲೆ ಇದೆ. ಇಂತಹ ಕಾರಣಗಳಿಗಾಗಿಯೇ ಜನರ ನೋವು-ಸಂಕಟಗಳನ್ನು ಕಂಡಾಗ ಕರುಳ ಬಳ್ಳಿಯ ನಂಟಿನ ಸಂಕಟದಂತೆ ನಾನು ಮತ್ತೆ ಮತ್ತೆ ನನ್ನ ಮಿತಿಯನ್ನೂ ಮೀರಿ ಕಣ್ಣೀರಾಗುತ್ತೇನೆ.
ರಾಜಕಾರಣವೆಂದರೆ ಕೊಟ್ಟ ಕುದುರೆಯನ್ನು ಏರಲಾಗದೆ ಬಸವಳಿದವರೂ ಇದ್ದಾರೆ. ಕುಂಟ ಕುದುರೆಯನ್ನು ಏರಿ ಜನರ ದುಃಖ ದುಮ್ಮಾನಗಳಿಗೆ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದವರು ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಯಶಸ್ಸು ಮತ್ತು ಸೋಲು ಕಂಡವರ ಸೋದಾಹರಣ ಉದಾಹರಣೆಗಳು ಬಹಳಷ್ಟಿವೆ. ಇದು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ದುರಂತವೂ ಹೌದು. ರಾಜ, ಮಹಾರಾಜರುಗಳು, ಪಾಳೇಗಾರರ ಆಡಳಿತದಲ್ಲಿಯೂ ಇತಿಹಾಸದುದ್ದಕ್ಕೂ ಇಂತಹ ನೂರಾರು ತಾಜಾ ನಿದರ್ಶನಗಳು ಅನುಚಾನವಾಗಿ ನಡೆದಿವೆ. ಹಾಗೆ ಎಂದ ಮಾತ್ರಕ್ಕೆ ನಾನು ಗೆಲುವುಗಳಿಂದ ಬೀಗಿಲ್ಲ. ಸೋಲುಗಳಿಂದ ಧೃತಿಗೆಟ್ಟಿಲ್ಲ. ಇಂತಹ ಮನೋಬಲಕ್ಕೆ ಜನರಿಟ್ಟಿರುವ ಪ್ರೀತಿ, ನಂಬಿಕೆಗಳೇ ಕಾರಣ.
೨೦೧೮ ರಲ್ಲಿ ಜಾತ್ಯತೀತ ಜನತಾದಳ ಪಕ್ಷ ಗಳಿಸಿದ್ದು ಕೇವಲ ೩೭ ಸ್ಥಾನಗಳಷ್ಟೇ. ಯಾವ ಪಕ್ಷಗಳಿಗೂ ಮತದಾರ ಬಹುಮತದ ಸ್ಪಷ್ಟ ಆದೇಶ ಕೊಟ್ಟಿರಲಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯುವ ಅತೀವ ನಿರೀಕ್ಷೆ ಹೊಂದಿದ್ದ ಭಾರತೀಯ ಜನತಾ ಪಕ್ಷ ಗದ್ದುಗೆಯ ಸನಿಹದಲ್ಲಿ ಮುಗ್ಗರಿಸಿ ಬಿತ್ತು. ಆನಂತರದ ಸ್ಥಾನ ಪಡೆದಿದ್ದ ಕಾಂಗ್ರೆಸ್ ಬಿಜೆಪಿಗೆ ಅಧಿಕಾರ ತಪ್ಪಿಸಲು ಜೆಡಿಎಸ್ ನೊಂದಿಗೆ ದೋಸ್ತಿಗೆ ಮುಂದಾಗಿ ಬೇಷರತ್ ಬೆಂಬಲವನ್ನು ವ್ಯಕ್ತಪಡಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಮುಖ್ಯಮಂತ್ರಿ ಗಾದಿಯನ್ನೇ ಬಿಟ್ಟುಕೊಟ್ಟಿತು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಅಧಿಕಾರದ ಕನಸು ಭಗ್ನಗೊಂಡಿದ್ದ ಬಿಜೆಪಿ ಆ ಕ್ಷಣದಿಂದಲೆ ನನ್ನ ನೇತೃತ್ವದ ದೋಸ್ತಿ ಸರ್ಕಾರ ‘ಅಸಮರ್ಥ ಸರ್ಕಾರ’ ಎಂದು ಬೊಬ್ಬೆ ಹೊಡೆಯತೊಡಗಿತು. ನಾನು ಪ್ರಮಾಣವಚನ ಸ್ವೀಕರಿಸಿದ ಮರುಕ್ಷಣದಿಂದಲೇ ನಮ್ಮ ದೋಸ್ತಿ ಸರ್ಕಾರವನ್ನು ಕೆಡವಲು ಬಿಜೆಪಿ ಹತ್ತಾರು ಬಾರಿ ಕುಟಿಲ ರಾಜಕೀಯ ತಂತ್ರಗಳನ್ನು ಬಳಸಿ, ಮುಖಭಂಗವನ್ನೂ ಅನುಭವಿಸಿತು. ೧೪ ತಿಂಗಳು ನನ್ನ ಅಧಿಕಾರಾವಧಿ ಮುಗಿಯುವ ಬೆನ್ನಲೇ ವಾಮಮಾರ್ಗವನ್ನು ಅನುಸರಿಸಿ ಜನಪರ ಸರ್ಕಾರವನ್ನು ಕೆಡವಲು ಆಪರೇಷನ್ ಕಮಲದ ಮೂಲಕ ಮತ್ತೊಮ್ಮೆ ಪ್ರಜಾಪ್ರಭುತ್ವದ ಬುಡಕ್ಕೆ ಕೊಡಲಿ ಪೆಟ್ಟು ಹಾಕುವಲ್ಲಿ ಬಿಜೆಪಿ ಕೈ ಮೇಲಾಯಿತು. ಕುದುರೆ ವ್ಯಾಪಾರ ರಾಜಾರೋಷವಾಗಿ ನಡೆಯಿತು. ರಾಜ್ಯದ ಪ್ರಜ್ಞಾವಂತ ಜನರು ಇವೆಲ್ಲಾ ಅಪಸವ್ಯದ ಪ್ರಹಸನಗಳಿಗೆ ಮೂಕಸಾಕ್ಷಿಯಾದರು. ಅದು ಒತ್ತಟ್ಟಿಗಿರಲಿ.
ಇದು ಬಿಜೆಪಿಯ ಕಥೆಯಾದರೆ , ರಾಜ್ಯ ಕಾಂಗ್ರೆಸ್ ನಾಯಕರ ಒಂದು ವರ್ಗ ಹೈಕಮಾಂಡ್ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಗೆ ಮುಖ್ಯಮಂತ್ರಿ ಹುದ್ದೆ ನೀಡಿದ್ದನ್ನು ಸಹಿಸಿಕೊಳ್ಳಲಾಗದೆ ನಾನು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಅಸಹನೆಯ ಕೆಂಡದುಂಡೆ ಉಗುಳುತ್ತಿತ್ತು.
ಕಾಂಗ್ರೇಸ್ ನ ಆ ಗುಂಪು ಒಂದಷ್ಟು ಕಾಲಾವಕಾಶವನ್ನು ಹೈಕಮಾಂಡ್ ಕೊಟ್ಟಿದ್ದರೆ ಜೆಡಿಎಸ್ ಪಕ್ಷವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದೆವು. ನಾವೇ ಅಧಿಕಾರದ ಮುಂಚೂಣಿಯಲ್ಲಿ ಇರುತ್ತಿದ್ದೆವು ಎಂದು ನನ್ನ ಸರ್ಕಾರವನ್ನು ಕೆಡವಲು ರಹಸ್ಯ ಕಾರ್ಯಸೂಚಿಯ ಒಳ ತಂತ್ರಗಳಿಗೆ ಮೊರೆಹೋಗಿದ್ದು ಇನ್ನು ಹಚ್ಚಹಸಿರಾಗಿದೆ.
ಸಿದ್ದರಾಮಯ್ಯ ಸರ್ಕಾರದ ಬಜೆಟ್ ನ ಲೇಖಾನುದಾನ ಪಡೆದು ಸರ್ಕಾರ ಮುಂದುವರಿಸಿದರೆ ಸಾಕು. ಹೊಸದಾಗಿ ಬಜೆಟ್ ಬೇಡ ಎಂದು ಕಾಂಗ್ರೆಸ್ ನ ಕೆಲವರು ಒತ್ತಡ ತಂದರು. ಆದರೆ ರೈತರ ಸಾಲ ಮನ್ನಾ ಮಾಡುವ ಸಲುವಾಗಿ ಹೊಸದಾಗಿ ಎರಡು ಬಾರಿ ಬಜೆಟ್ ಮಂಡಿಸಿ 25 ಸಾವಿರ ಕೋಟಿ ರೂಪಾಯಿಗಳ ರೈತರ ಸಾಲ ಮನ್ನಾ ಹಣ ಹಂಚಿಕೆಾಡಿದೆ. ಹಾಗಂತ ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಗಳನ್ನು ನಿಲ್ಲಿಸಿರಲಿಲ್ಲ. ಮುಂದುವರಿಸಿಕೊಂಡು ಬಂದೆ. ಆದಾಗ್ಯೂ ಅವರಿಗೆ ತೃಪ್ತಿ ಆಗಿರಲಿಲ್ಲ. 14 ತಿಂಗಳ ಅವಧಿಯಲ್ಲಿ ಯಾವುದೇ ಲೋಪವನ್ನು ಮಾಡಲಿಲ್ಲ. ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುವಂತೆ ಲೋಕಸಭಾ ಚುನಾವಣೆ ಮುಗಿಯಲಿ, ಅಲ್ಲಿಯವರಿಗೆ ತಡೆಯಿರಿ ಎಂಬ ‘ಸಿದ್ಧೌಷಧ’ ಮಂತ್ರ ಜಪಿಸುತ್ತಲೇ ಕಾಂಗ್ರೆಸ್ಸಿಗರು ಬಂದರು. ಅದು ಜಗಜ್ಜಾಹೀರಾಯಿತು.
ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ನನ್ನ ಸರ್ಕಾರ ತೆಗೆಯುವ ವಿಷಯದಲ್ಲಿ ಎಷ್ಟೊಂದು ಒಳ ಮತ್ತು ಕುಟಿಲ ತಂತ್ರಗಳ ಮೊರೆಹೋದರು ಎಂಬುದನ್ನು ಆ ದೊಡ್ಡ ನಾಯಕರೇ ಆತ್ಮಾವಲೋಕನ ಮಾಡಿಕೊಳ್ಳಲಿ.
ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಜೆಡಿಎಸ್ ಎಂದೂ ಮುಂದಾಗಿರಲಿಲ್ಲ. ಮುಂದೆಯೂ ಕೂಡ ಮೈತ್ರಿಗೆ ನಾವು ಹಪಾಹಪಿಸುತ್ತಿಲ್ಲ.
Related Articles
Thank you for your comment. It is awaiting moderation.
Comments (0)