ಕೈ ಪಕ್ಷದಲ್ಲಿ ಹೆಚ್ಚಿದ ಅಸಮಾಧಾನ; ಪರಿಹರಿಸಲು ಸಫಲವಾಗ್ತಾರಾ ಸುರ್ಜೇವಾಲಾ?!

ಬೆಂಗಳೂರು: ಸ್ವಪಕ್ಷೀಯ ಶಾಸಕರು ನೀಡುತ್ತಿರುವ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗುತ್ತಿದೆ. ಪರಿಸ್ಥಿತಿ ಕೈಮೀರುವ ಸಾಧ್ಯತೆ ಹಿನ್ನಲೆಯಲ್ಲಿ ಹೈಕಮಾಂಡ್ ರಂಗಪ್ರವೇಶ ಮಾಡಿದ್ದು, ಸಮಸ್ಯೆ ಪರಿಹಾರಕ್ಕೆ ಉಸ್ತುವಾರಿಯನ್ನು ಕಳಿಸಿಕೊಡುತ್ತಿದೆ.

ಎರಡು ವರ್ಷ ಹಿಂದೆ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಐದು ಭಾಗ್ಯಗಳನ್ನು ಈಡೇರಿಸುವುದರಲ್ಲಿಯೇ ಹೈರಾಣಾಗಿರುವ ಸರ್ಕಾರದ ಖಜಾನೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಹಣ ನೀಡಲು ಸಾಧ್ಯವಾಗುತ್ತಿಲ್ಲ. ಕೇವಲ ಶಂಕುಸ್ಥಾಪನೆಗೆ ಮಾತ್ರ ಸರ್ಕಾರದ ವಿವಿಧ ಕಾಮಗಾರಿಗಳು ಸೀಮಿತವಾಗಿದೆ. ಜನರ ಅಸಹನೆ ಮಿತಿ ಮೀರಿದ್ದು, ಸ್ವಪಕ್ಷೀಯ ಶಾಸಕರ ಮೂಲಕವೂ ಅದು ವ್ಯಕ್ತವಾಗುತ್ತಿದೆ. ಇದು ಮುಂದುವರಿದು ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ದನಿ ಎತ್ತಲು ಪ್ರೇರಣೆ ನೀಡುತ್ತಿದೆ.

ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲರು ಇದಕ್ಕೆ ತಾಜಾ ಉದಾಹರಣೆ. “ಮನೆ ಕೊಡುವ ಸಂದರ್ಭದಲ್ಲಿ ಲಂಚ ಕೊಡದೆ, ದುಡ್ಡು ಕೊಡದೆ ಏನೂ ಕೆಲಸ ಆಗುವುದಿಲ್ಲ” ಎಂಬ ಆರೋಪ ಮಾಡಿ ಸುದ್ದಿಯಾಗಿದ್ದಾರೆ. ನಿನ್ನೆಯಷ್ಟೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ನಿವಾಸಕ್ಕೆ ಪಾಟೀಲರನ್ನು ಕರೆಸಿಕೊಂಡು ಸಮಾಲೋಚಿಸಿದ್ದಾರೆ. ಮುಖ್ಯಮಂತ್ರಿಗಳು ಕರೆದರೆ ಅವರ ಮುಂದೆಯೂ ವಾಸ್ತವಿಕ ಸ್ಥಿತಿಯನ್ನು ತಿಳಿಸುವುದಾಗಿ ಹೇಳಿದ್ದ ಆಳಂದ ಶಾಸಕ ಹಾಗೂ ಹಿರಿಯ ಕಾಂಗ್ರೆಸಿಗನ ಬಾಯಿ ಮುಚ್ಚಿಸುವ ಪ್ರಯತ್ನ ನಡೆದಿದೆ. ಇದು ಸಫಲತೆ ನೀಡುತ್ತದೆಯೋ ಇಲ್ಲವೋ ಎನ್ನುವುದು ಸದ್ಯವೇ ತಿಳಿಯಲಿದೆ.

ಡಿ.ಕೆ. ಶಿವಕುಮಾರ್ ಈ ಬಗ್ಗೆ ತುಮಕೂರಿನಲ್ಲಿ ಮಾತನಾಡಿದ್ದು, “ಪಕ್ಷದ ಅಧ್ಯಕ್ಷನಾಗಿ ನಾನು ವಾಸ್ತವಿಕ ಅಂಶ ತಿಳಿದುಕೊಳ್ಳಬೇಕಾಗಿತ್ತು. ಹೀಗಾಗಿ ಅವರನ್ನು ಕರೆಸಿದ್ದೆ. ಪಾಟೀಲರು ತಮ್ಮ ವಿಚಾರ ಹೇಳಿದ್ದಾರೆ. ನಾನು ಸಿಎಂ ಜತೆ ಚರ್ಚೆ ಮಾಡುತ್ತೇನೆ. ಸಚಿವ ಜಮೀರ್ ಅವರೊಂದಿಗೂ ಸಮಾಲೋಚಿಸುತ್ತೇವೆ. ಈ ಮಧ್ಯೆ ನಮ್ಮ ಪಕ್ಷದ ವರಿಷ್ಠರೂ ಕೂಡ ಆಗಮಿಸುತ್ತಿದ್ದು, ಎಲ್ಲರ ಜೊತೆ ಮಾತನಾಡಿ ಮಾಹಿತಿ ಪಡೆಯಲಿದ್ದಾರೆ” ಎಂದಿದ್ದಾರೆ.

ಈ ಹಿಂದೆಯೂ ಇಂತಹದ್ದೇ ಕೂಗು ಕೇಳಿಬಂದಿತ್ತು. 2023ರ ಸೆಪ್ಟೆಂಬರ್‌ನಲ್ಲಿ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸರ್ಕಾರದ ವಿರುದ್ಧ ಬೇಸರ ಹೊರಹಾಕಿದ್ದರು. ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಅರಸೀಕೆರೆ ತಾಲೂಕನ್ನು ಕೈಬಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಸಂದರ್ಭದಲ್ಲಿ ಇನ್ನೂ ಕೆಲ ವಿಚಾರ ಮುಂದಿಟ್ಟು ಹರಿಹಾಯ್ದಿದ್ದರು.

ಈಗ ಪಾಟೀಲರ ಜತೆ ಬೆಳಗಾವಿ ಜಿಲ್ಲೆ ಕಾಗವಾಡ ಶಾಸಕ ರಾಜು ಕಾಗೆ ಅಸಮಾಧಾನ ಹೊರ ಹಾಕಿದ್ದಾರೆ. ಅಭಿವೃದ್ಧಿ ಯೋಜನೆಗಳಗೆ ಸರ್ಕಾರದಿಂದ ಬಿಡುಗಡೆಯಾಗುವ ಹಣ ವಿಳಂಬವಾಗುತ್ತಿದೆ. ಎರಡು ವರ್ಷದ ಬಳಿಕವೂ ಆಡಳಿತ ಯಂತ್ರ ಚುರುಕುಗೊಂಡಿಲ್ಲ. ಹೀಗೆಯೇ ಮುಂದುವರಿದರೆ ನಾನು ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದೂ ಹೇಳಿದ್ದಾರೆ.

ಸುರ್ಜೇವಾಲಾ ಆಗಮನ:

ರಾಜ್ಯ ಕಾಂಗ್ರೆಸ್ ನಾಯಕರ ಅಸಮಾಧಾನ ಶಮನಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‍ ಸಿಂಗ್ ಸುರ್ಜೇವಾಲಾ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಅಸಮಾಧಾನ ಇದ್ದರೆ ಪಕ್ಷದ ವರಿಷ್ಠರ ಮುಂದೆ ಹೇಳಿಕೊಳ್ಳಿ ಎಂದಿದ್ದಾರೆ. ಅನುದಾನದ ವಿಚಾರದಲ್ಲಿ ತಾರತಮ್ಯ, ಸಚಿವರ ಅಸಹಕಾರ ಹೆಚ್ಚಾಗಿದೆ ಎಂಬ ಆರೋಪವನ್ನು ಶಾಸಕರು ಮಾಡುತ್ತಿದ್ದಾರೆ. ಇದಲ್ಲದೇ ಬೇಳೂರು ಗೋಪಾಲ ಕೃಷ್ಣ, ಆರ್.ವಿ. ದೇಶಪಾಂಡೆ, ಎನ್‍.ವೈ. ಗೋಪಾಲಕೃಷ್ಣ ಮತ್ತಿತರರು ಸಹ ಬೇಸರ ಹೊರಹಾಕಿದ್ದಾರೆ. ಸದ್ಯ ಸಚಿವರಾದ ಎಸ್.ಎಸ್‍. ಮಲ್ಲಿಕಾರ್ಜುನ್, ಬೈರತಿ ಸುರೇಶ್‍, ಜಮೀರ್ ಅಹ್ಮದ್ ಖಾನ್, ಮಧು ಬಂಗಾರಪ್ಪ, ದಿನೇಶ್‍ ಗುಂಡೂರಾವ್ ವಿರುದ್ಧ ಶಾಸಕರು ಹೆಚ್ಚಾಗಿ ಬೇಸರ ಹೊರಹಾಕುತ್ತಿದ್ದಾರೆ. ಅಸಮಾಧಾನಿತ ಎಲ್ಲ ಶಾಸಕರೂ ಸಚಿವ ಸ್ಥಾನ ಆಕಾಂಕ್ಷಿಗಳು. ತಮಗೆ ಅವಕಾಶ ಸಿಗಲಿಲ್ಲ ಎಂಬ ಬೇಸರಕ್ಕೆ ಈ ಮಾತನ್ನಾಡುತ್ತಿದ್ದಾರೆ ಎಂದು ಸಂಪುಟದ ಕೆಲ ಪ್ರಮುಖರು ಅಭಿಪ್ರಾಯ ಪಡುತ್ತಿದ್ದಾರೆ.

ಒಟ್ಟಾರೆ ಪಕ್ಷದಲ್ಲಿನ ಆಂತರಿಕ ಅಸಮಾಧಾನಕ್ಕೆ ಪಕ್ಷದ ಹೈಕಮಾಂಡ್, ಸಿಎಂ, ಡಿಸಿಎಂ ಹಾಗೂ ಇತರ ನಾಯಕರು ಯಾವ ರೀತಿ ಪರಿಹಾರ ಹುಡುಕುತ್ತಾರೆ, ಯಾವ ರೀತಿ ಅಮಸಧಾನ ಶಮನ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Related Articles

Comments (0)

Leave a Comment