ಕೊರೋನಾ ಸೋಂಕಿತರ ಹೆಣದ ಮೇಲೆ ಸರ್ಕಾರ ಹಣ ಮಾಡಲು ಮುಂದಾಗಿದೆ: ಡಿ.ಕೆ ಶಿವಕುಮಾರ್ ವಾಗ್ದಾಳಿ
- by Suddi Team
- July 23, 2020
- 14 Views

ಬೆಂಗಳೂರು:ಕೋವಿಡ್ 19ರ ಪಿಡುಗನ್ನು ನಿರ್ವಹಣೆ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಜನರನ್ನು ರಕ್ಷಿಸುವ ಬದಲು ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೊರೋನಾ ಸೋಂಕಿತರ ಹೆಣದ ಮೇಲೆ ಹಣ ಮಾಡಲು ಸರ್ಕಾರ ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರ ಕುರಿತು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಸರ್ಕಾರದ ವಿರುದ್ಧ ಹರಿಹಾಯ್ದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು:
‘ನಮ್ಮ ವಿರೋಧ ಪಕ್ಷದ ನಾಯಕರು ಲೆಕ್ಕ ಕೊಡಿ ಅಂತಾ ಕೇಳಿದ್ದಾರೆ. ನಾನು ಉತ್ತರ ಕೊಡಿ ಅಂತಾ ಕೇಳಿದ್ದೇನೆ. ಸರ್ಕಾರ ಜನರಿಗಾಗಿ ಮಾಡಿರುವ ಖರ್ಚಿನ ಲೆಕ್ಕ ಕೇಳಿದ್ದಾರೆ. ಈಗಾಗರಲೇ ಸರ್ಕಾರ 4 ಸಾವಿರ ಕೋಟಿ ರು. ಖರ್ಚು ಮಾಡಿದ್ದು, ಅದರಲ್ಲಿ 2 ಸಾವಿರ ಕೋಟಿಯಷ್ಟು ಅವ್ಯವಹಾರ ನಡೆದಿರುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇಡೀ ಕಾಂಗ್ರೆಸ್ ಒಮ್ಮತದಿಂದ ಇದನ್ನು ಅನುಮೋದಿಸುತ್ತದೆ.
ಮುಖ್ಯಮಂತ್ರಿಗಳು ನಾವೆಲ್ಲ ಸಹಕಾರ ನೀಡಬೇಕು ಅಂತಾ ಕೇಳಿದ್ದಾರೆ. ಕೋವಿಡ್ ವಿಚಾರದಲ್ಲಿ ನಾವು ನಿಮಗೆ ಯಾವಾಗ ಸಹಕಾರ ಕೊಟ್ಟಿಲ್ಲ ಹೇಳಿ? ಪಕ್ಷವನ್ನು ಮರೆತು ಜನರ ಜೀವನ, ಜನರ ಬದುಕಿಗಾಗಿ ನಾವು ಎಲ್ಲ ಹಂತದಲ್ಲೂ ಸಹಕಾರ ನೀಡಿದ್ದೇವೆ. ಕೇವಲ ನಾಲ್ಕು ಗಂಟೆ ಅಂತರದಲ್ಲಿ ಲಾಕ್ ಡೌನ್ ಮಾಡಿದಿರಿ. ನಾವು 120 ದಿನ ಅದಕ್ಕೆ ಸಹಕಾರ ಕೊಟ್ಟಿದ್ದೇವೆ. ಆದರೆ ನೀವು ಕೊರೋನಾ ಪರಿಸ್ಥಿತಿಯಲ್ಲಿ ಹೆಣದ ಮೇಲೆ ಹಣ ಮಾಡಲು ಹೊರಟಿದ್ದೀರಲ್ಲಾ, ಇದನ್ನು ನೋಡಿಕೊಂಡು ನಾವು ಸುಮ್ಮನಿರಬೇಕೇ ಮುಖ್ಯಮಂತ್ರಿಗಳೇ?
ಬೆಂಗಳೂರು ನಗರಕ್ಕೆ ನಿಮ್ಮ 8 ಸಚಿವರುಗಳು ಅಂದರೆ ಅಷ್ಟದಿಕ್ಪಾಲಕರು, ಜತೆಗೆ ಮತ್ತೊಬ್ಬರು. ಒಟ್ಟು ಒಂಬತ್ತು ಜನ. ಇವರೆಲ್ಲ ಸೇರಿ ಬೆಂಗಳೂರನ್ನ ಏನು ಮಾಡುತ್ತಿದ್ದಾರೆ? ಒಬ್ಬ ಮಂತ್ರಿ ಒಂದು ಆಸ್ಪತ್ರೆಗೆ ಹೋಗಿ ಅಲ್ಲಿ ರೋಗಿಯ ಜತೆ ಮಾತನಾಡಿ ಅವರಿಗೆ ಧೈರ್ಯ ತುಂಬಲಿಲ್ಲ. ಒಬ್ಬ ವೈದ್ಯರಿಗೆ ಆತ್ಮಸ್ಥೈರ್ಯ ತುಂಬಲಿಲ್ಲ. ಸೋಂಕಿತರು ತಾವೇ ಕಾಯಿಲೆ ತಂದುಕೊಂಡರೇ? ನೀವು ಅವರಿಗೆ ಕಾಯಿಲೆ ತಂದಿರಿ.
ಹೆಣಗಳನ್ನು ಯಾವ ರೀತಿ ಸಂಸ್ಕಾರ ಮಾಡಿದಿರಿ? ಈ ದೇಶದ ಆಸ್ತಿ ಸಂಸ್ಕೃತಿ. ಇದೇನಾ ನಿಮ್ಮ ಸಂಸ್ಕೃತಿ? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನರಿಗೆ ಸೋಂಕು ಹಂಚಿದ್ದಲ್ಲದೇ ಭ್ರಷ್ಟಾಚಾರವನ್ನು ಹಂಚಿದೆ. ಈ ಸರ್ಕಾರಕ್ಕೆ ಪರಿಸ್ಥಿತಿ ಹೇಗೆ ನಿಭಾಯಿಸಬೇಕು, ಯುವಕರ ಸಮಸ್ಯೆ, ಮಕ್ಕಳ ಸ್ಥಿತಿ, ಆರ್ಥಿಕವಾಗಿ ಹೇಗೆ ರಾಜ್ಯವನ್ನು ಮುಂದೆ ತೆಗೆದುಕೊಂಡು ಹೋಗಬೇಕು ಎಂಬುದರ ಬಗ್ಗೆ ಒಂದು ಸ್ಪಷ್ಟ ದೂರದೃಷ್ಟಿ ಇಲ್ಲವಾಗಿದೆ. ಈ ಸರ್ಕಾರಕ್ಕೆ ದೂರದೃಷ್ಟಿ ಇಲ್ಲ, ಇರುವುದೆಲ್ಲ ಬರೀ ಭ್ರಷ್ಟಾಚಾರದ ದೃಷ್ಟಿ.
ಆಹಾರ ಕಿಟ್ ಮೇಲೆ, ಬಾಣಂತಿಯರು, ಮಕ್ಕಳ ಆಹಾರ ಪ್ಯಾಕ್ ಮೇಲೆ ನಿಮ್ಮ ನಾಯಕರ ಫೋಟೋ ಹಾಕಿ ಅಕ್ರಮ ಮಾಡಿದರಲ್ಲ, ಅವರ ವಿರುದ್ಧ ಒಂದು ಕೇಸ್ ಹಾಕಿದ್ದೀರಾ? ಒಬ್ಬರನ್ನಾದರೂ ಬಂಧಿಸಿದ್ದೀರಾ? ಆದರೂ ನಮ್ಮ ಸಹಕಾರ ಕೇಳುತ್ತಿದ್ದೀರಿ, ನಿಮಗೆ ನಾಚಿಕೆಯಾಗುವುದಿಲ್ಲವೇ?
ಕಾರ್ಮಿಕರಿಗೆ ನೀವು 1200 ರೂಪಾಯಿಯ ಊಟ ಕೊಟ್ಟಿರುವುದಾಗಿ ಹೇಳುತ್ತೀರಲ್ಲಾ, ಯಾವ ಪಂಚತಾರಾ ಹೋಟೆಲ್ ನಿಂದ ತಂದು ಊಟ ಕೊಟ್ಟಿದ್ದೀರಿ ಅವರಿಗೆ? ಎಷ್ಟು ಜನಕ್ಕೆ ಊಟ, ಮಾಸ್ಕ್, ಆಹಾರ ಕಿಟ್ ಕೊಟ್ಟಿದ್ದೀರಾ ಅಂತಾ ನೀವು ಲೆಕ್ಕ ಇಟ್ಟಿದ್ದೀರಾ? ಬರೀ ಲೂಟಿ ಮಾಡುವುದು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ. ಕಾರ್ಮಿಕರನ್ನು ನೀವು ನಡೆಸಿಕೊಂಡ ರೀತಿ ಹೇಗಿತ್ತು? ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ರಾ?
ಇಡೀ ವಿಶ್ವದ ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಆರಂಭದ ಮೂರು ತಿಂಗಳುಗಳ ಒಂದು ಖಾಸಗಿ ಆಸ್ಪತ್ರೆಯವರನ್ನು ಕರೆದು ಮಾತನಾಡಲಿಲ್ಲ. ಪ್ರಕರಣ ಹೆಚ್ಚಾದ ಮೇಲೆ ಅವರನ್ನು ಕರೆದು ಮಾತನಾಡುತ್ತಿದ್ದೀರಿ. ಈಗ ನಿಮಗೆ ಕಾನೂನಿನ ಅರಿವಾಗಿ ಅವರನ್ನು ಬೆದರಿಸುತ್ತಿದ್ದೀರಿ. ಸರ್ವಪಕ್ಷ ಸಭೆಯಲ್ಲೇ ಖಾಸಗಿ ಆಸ್ಪತ್ರೆಗಳ ಜತೆ ಮಾತನಾಡಿ ಎಂದು ನಾವು ಹೇಳಿರಲಿಲ್ಲವೇ?
ಸರಿಯಾದ ತನಿಖೆ ಅಥವಾ ಮಾಹಿತಿ ಇಲ್ಲದೇ ಮಾಧ್ಯಮಗಳು ವರದಿ ಪ್ರಕಟಿಸುವುದಿಲ್ಲ. ಕೊರೊನಾ ರೋಗಕ್ಕಿಂತ ರಾಜ್ಯಕ್ಕೆ ಬಿಜೆಪಿ ಭ್ರಷ್ಟಾಚಾರವೇ ದೊಡ್ಡ ರೋಗವಾಗಿದೆ. ರಾಜ್ಯದ ಪಾಲಿಗೆ ಬಿಜೆಪಿ ಸರ್ಕಾರ ದೊಡ್ಡ ಶಾಪವಾಗಿದೆ.
ಮುಖ್ಯಮಂತ್ರಿಗಳು ಲಾಕ್ ಡೌನ್ ಬೇಕಾಗಿಲ್ಲ ಅಂತಾ ಹೇಳುತ್ತಿದ್ದಾರೆ. ಮತ್ಯಾಕೆ ಲಾಕ್ ಡೌನ್ ಮಾಡಿದ್ರಿ? ಲಾಕ್ ಡೌನ್ ಮಾಡಿ ಯಾವ ತಯಾರಿ ಮಾಡಿಕೊಂಡಿರಿ? ನಿಮ್ಮ ಕಾರ್ಯಯೋಜನೆ ಏನು? ಈ ಪರಿಸ್ಥಿತಿಯನ್ನು ನಿಭಾಯಿಸಲು ಯಾವ ಕಾರ್ಯತಂತ್ರ ಮಾಡುತ್ತೀರಿ ಅಂತಾ ಇಂದಿನವರೆಗೂ ಹೇಳಿಲ್ಲ. ಸರ್ಕಾರದ ನೀತಿಗಳು ನಿಶ್ಯಕ್ತವಾಗಿವೆ.
ಸರ್ಕಾರಿ ಸಿಬ್ಬಂದಿಗೆ ವೇತನ ನೀಡಿಲ್ಲ. ಕೋಟ್ಯಂತರ ರೂಪಾಯಿ ಸಾಲ ತೆಗೆದುಕೊಂಡಿದ್ದೀರಿ. ಹಾಗಾದ್ರೆ ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರು. ಪ್ಯಾಕೇಜ್ ಏನಾಯ್ತು? ರಾಜ್ಯಕ್ಕೆ ಕೇಂದ್ರದ ಕೊಡುಗೆ ಏನು? ನೀವು 1600 ಕೋಟಿ ಪ್ಯಾಕೇಜ್ ಘೋಷಿಸಿದರಲ್ಲಾ ಯಾರಿಗೆ ಎಷ್ಟು ಕೊಟ್ಟಿರಿ? ಲೆಕ್ಕ ಕೊಡಿ. ಎಲ್ಲವನ್ನು ಸಾರ್ವಜನಿಕವಾಗಿ ತಿಳಿಸಿ.
ನಾವು ಕೇಳುತ್ತಿರುವ ಪ್ರಶ್ನೆಗಳಿಗೆ ಸರ್ಕಾರ ಮಾಧ್ಯಮಗಳಿಗೆ, ರಾಜ್ಯದ ಜನರಿಗೆ, ಕಾರ್ಮಿಕರಿಗೆ ಉತ್ತರ ನೀಡಲಿ. ಉದ್ಯಮಿಗಳು, ಹೋಟೆಲ್ ಉದ್ಯಮಕ್ಕೆ ನೀವು ನಯಾಪೈಸೆ ಸಹಾಯ ನೀಡಿದ್ದೀರಾ? ಬೆಂಗಳೂರಿನಲ್ಲೇ 11 ಸಾವಿರ ಹೋಟೆಲ್ ಗಳಿವೆ. ನೀವು 3 ತಿಂಗಳು ಬಾಗಿಲು ಮುಚ್ಚಿಸಿದ್ದರಿಂದ ಇವರಿಗಾದ ನಷ್ಟದಿಂದ ಚೇತರಿಸಿಕೊಳ್ಳಲು ಅವರಿಗೆ ಇನೇಷ್ಟು ಕಾಲ ಬೇಕೋ ಗೊತ್ತಿಲ್ಲ.
ಸಿದ್ದರಾಮಯ್ಯ ಅವರಿಗೆ ಬಂದು ಲೆಕ್ಕ ನೋಡಿ ಅಂತಿರಲ್ಲಾ, ಸಾರ್ವಜನಿಕ ಲೆಕ್ಕ ಸಮಿತಿಯಲ್ಲಿ ಎಲ್ಲ ಪಕ್ಷದವರೂ ಇದ್ದಾರೆ ತಾನೆ? ಅವರು ಈ ಬಗ್ಗೆ ಪರಿಶೀಲಿಸಲು ಅವಕಾಶ ನೀಡಿ. ನೀವು ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿದ್ದರೆ ಇವರಿಗೆ ತನಿಖೆಗೆ ಅವಕಾಶ ನೀಡಿ.
ಆಶಾ ಕಾರ್ಯಕರ್ತೆಯರು 16 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದು, ಅವರನ್ನು ಕರೆದು ಮಾತನಾಡಿಸಲು ನಿಮಗೆ ಸಾಧ್ಯವಾಗಿಲ್ಲವಲ್ಲ. ಇವರಿಗೆ 3 ಸಾವಿರ ರು. ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದ್ದಿರಿ, 42 ಸಾವಿರ ಆಶಾ ಕಾರ್ಯಕರ್ತರಲ್ಲಿ ಶೇ.10 ರಷ್ಟು ಮಂದಿಗೆ ಪರಿಹಾರ ಕೊಟ್ಟಿಲ್ಲ. ಮೂರು ತಿಂಗಳು ಇವರು ತಮ್ಮ ಪ್ರಾಣ ಪಣಕ್ಕಿಟ್ಟು ಮನೆ ಮನೆಗೆ ಹೋಗಿ ನಿಮಗೆ ಮಾಹಿತಿ ಸಂಗ್ರಹಿಸಿಕೊಟ್ಟಿದ್ದರಲ್ಲ. ಅವರಿಗೆ ಚೆಕ್ ಬರೆದು ಕೊಡಲು ಏನು ಸಮಸ್ಯೆ? ಪೌರ ಕಾರ್ಮಿಕರಿಗೆ ವಿಮೆ ಕೊಟ್ಟಿದ್ದೀರಾ? ರೈತರಿಗೆ ಯಾವ ಮಾರುಕಟ್ಟೆ ಒದಗಿಸಿಕೊಟ್ಟಿರಿ? ಎಷ್ಟು ಬೆಳೆ ಖರೀದಿಸಿದಿರಿ? ಯಾರಿಗೆ ಕೊಟ್ಟಿದ್ದೀರಿ?
ಪತ್ರಿಕಾಗೋಷ್ಠಿ ನಡೆಸಿದ ಉಪಮುಖ್ಯಮಂತ್ರಿಗಳು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೆದ್ ಅಕ್ತರ್ ಅವರಿಗೆ ಬಿಟ್ಟರು. ಹಾಗಿದ್ದರೆ ಅಖ್ತರ್ ಅವರೇ ಪತ್ರಿಕಾಗೋಷ್ಠಿ ನಡೆಸಬಹುದಿತ್ತಲ್ಲವೇ? ನೀವು ವಿದ್ಯಾವಂತರಲ್ಲವೇ ನಿಮಗೆ ಟೆಕ್ನಿಕಲ್ ವಿಚಾರ ಗೊತ್ತಿಲ್ಲವೇ? ಕಾರ್ಯದರ್ಶಿಗಳು ಪ್ರಶ್ನೆ ಎದುರಿಸುವುದಾದರೇ ನೀವು ಮಂತ್ರಿ ಆಗಿ ಯಾಕಿದ್ದೀರಿ?
ಹಾಸಿಗೆ ಬಾಡಿಗೆ ವಿಚಾರದಿಂದ ಹಿಡಿದು ಯಾವುದೇ ನಿರ್ಧಾರವನ್ನು ಮಂತ್ರಿಗಳು, ಸರ್ಕಾರದ ಅನುಮತಿ ಇಲ್ಲದೇ ಅಧಿಕಾರಿಗಳು ಮಾಡಲು ಸಾಧ್ಯವೇ? ಅಧಿಕಾರಿಗಳು ಖರೀದಿಸಲು ಸಾಧ್ಯವಾ? ಮಾಧ್ಯಮಗಳ ತನಿಖಾ ವರದಿ, ಅಧಿಕಾರಿಗಳು, ಮಂತ್ರಿಗಳ ದಾಖಲೆಗಳನ್ನು ಇಟ್ಟುಕೊಂಡು ನಾವಿಂದು ಮಾತನಾಡುತ್ತಿದ್ದೇವೆಯೇ ಹೊರತು, ನಮ್ಮ ಗ್ರಹಿಕೆಯಿಂದ ಅಲ್ಲ.
ಬಿಜೆಪಿ ಸರ್ಕಾರ 21 ದಿನಗಳಲ್ಲಿ ಕೊರೋನಾ ವಿರುದ್ಧದ ಯುದ್ಧ ಗೆಲ್ಲುತ್ತೇವೆ ಎಂದಿದ್ದರು. ನಾವು ಕೂಡ ಅವರಿಗೆ ಸಹಕಾರ ಕೊಟ್ಟಿದ್ದೇವೆ. 121 ದಿನವಾಗಿದೆ, ಆದರೆ ಪರಿಹಾರ ಸಿಕ್ಕಿದೆಯೇ? ಪಿಪಿಇ ಕಿಟ್, ವೆಂಟಲೇಟರ್ ಸೇರಿ ಎಲ್ಲದರಲ್ಲೂ ಹಣ ಮಾಡಿದ ಸರ್ಕಾರ, ಈಗ ಹೆಣದ ಹೆಸರಲ್ಲೂ ಹಣ ಮಾಡಲು ನಿಂತಿದೆ. ದೇಶದಲ್ಲೇ ಕರ್ನಾಟಕವನ್ನು ಕಪ್ಪು ಚುಕ್ಕೆಯನ್ನಾಗಿ ಮಾಡಿದ್ದಾರೆ. ನೀವು ಇಟ್ಟಿರುವ ಈ ಕಪ್ಪು ಚುಕ್ಕೆ ಕಳಚಲು ಇನ್ನು ಎಷ್ಟು ವರ್ಷ ಬೇಕಾಗುತ್ತದೊ ಗೊತ್ತಿಲ್ಲ.
ಸರ್ಕಾರ ರಚನೆಯಾಗಿ ಒಂದು ವರ್ಷದ ಪೂರೈಸಿದ ಸಂದರ್ಭವನ್ನು ಆಚರಿಸಲು ಮುಂದಾಗಿದ್ದೀರಿ. ಆಚರಿಸಿಕೊಳ್ಳಿ, ನಾವು ಪ್ರಶ್ನಿಸುವುದಿಲ್ಲ. ಆದರೆ ಸಂಕಷ್ಟದಲ್ಲಿ ಸಿಲುಕಿರುವ ಜನರ ಬಳಿ ಹೋಗಿ ಅವರ ಸಮಸ್ಯೆ ಆಲಿಸುವ ಕೆಲಸವನ್ನು ನಾವು ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ನೋಂದ ಜನರ ಧ್ವನಿಯಾಗಿ ಕೆಲಸ ಮಾಡಲಿದೆ.’
Related Articles
Thank you for your comment. It is awaiting moderation.
Comments (0)