ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆ ಅಗತ್ಯ: ಸಿಎಂ
- by Suddi Team
- September 26, 2018
- 42 Views

ಬೆಂಗಳೂರು: ಒಂದನೇ ತರಗತಿಯಿಂದಲೇ ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಕಲಿಸಬೇಕಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರತಿಪಾದಿಸಿದ್ದು ಇಂಗ್ಲೀಷ್ ವಿರುದ್ಧ ದನಿ ಎತ್ತುತ್ತಿದ್ದವರಿಗೆ ಟಾಂಗ್ ನೀಡಿದ್ದಾರೆ.
ಬಿಬಿಎಂಪಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಮೈಕ್ರೋಸಾಫ್ಟ್ ಸಂಸ್ಥೆ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿರುವ “ರೋಷನಿ” ಕಾರ್ಯಕ್ರಮಕ್ಕೆ ನಗದ ಪುರಭವನದಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಎಂ,ಒಂದನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಸಲೇಬೇಕು.ಹಲವಾರು ಜನ ಕನ್ನಡದ ಪರವಾಗಿ ಮಾತನಾಡಲು ಬರುತ್ತಾರೆ.ಆದರೆ ನೀವು ನಿಮ್ಮ ಕುಟುಂಬದ ಮಕ್ಕಳು ಆಂಗ್ಲಭಾಷೆಯಲ್ಲಿ ಓದಲು ಕಳಿಸುತ್ತೀರಿ.ಆದರೆ ಬಡ ಕುಟುಂಬದ ಮಕ್ಕಳು ಮಾತ್ರ ಇಂಗ್ಲೀಷ್ ಕಲಿಯಬಾರದಾ.ನೀವು ಮೊದಲು ನಿಮ್ಮಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದು ಜಾಹೀರಾತು ಕೊಟ್ಟು ಬಹಿರಂಗ ಪಡಿಸಿ.ಆಗ ನಿಮ್ಮನ್ಮು ಗೌರವಿಸುತ್ತೇನೆ ಎಂದು ತಿರುಗೇಟು ನೀಡಿದರು.
ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಈ ವಿಷಯದ ಬಗ್ಗೆ ಹಲವಾರು ಬಾರಿ ಚರ್ಚಿಸಿದ್ದೇವೆ.ಬಿಬಿಎಂಪಿ ವ್ಯಾಪ್ತಿಯ ಶಾಲೆಗಳನ್ನು ಗುಣಾತ್ಮಕ ಶಾಲೆಗಳಾಗಿ ಪರಿವರ್ತಿಸಬೇಕು ಎಂಬುದು ನಮ್ಮ ಕನಸಾಗಿತ್ತು.ಈಗ ಅದು ಸಾಕಾರಗೊಳ್ಳುತ್ತಿದೆ.ಸರ್ಕಾರಿ ಶಾಲೆ,ಬಿಬಿಎಂಪಿ ಶಾಲೆಗಳ ಬಗ್ಗೆ ಇದ್ದ ಅಪನಂಬಿಕೆ ಇಂದಿನಿಂದ ಬದಲಾವಣೆಯಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಕೇವಲ ಹೆಣ್ಣುಮಕ್ಕಳೇ ಇರುವುದು ನೋಡಿ ಬಿಬಿಎಂಪಿ ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಪ್ರವೇಶವೇ ಇಲ್ಲವೇ ಎಂಬ ಅನುಮಾನ ಬಂತು.ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೇ.90ರಷ್ಟು ಹೆಣ್ಣುಮಕ್ಕಳು ಶೇ.9ರಷ್ಟು ಗಂಡು ಮಕ್ಕಳಿದ್ದಾರೆ.ಇದಕ್ಕೆ ಮೊದಲು ವಿದ್ಯಾರ್ಥಿನಿಯರನ್ನು ಅಭಿನಂದಿಸುತ್ತೇನೆ ಎಂದರು.
ನಮ್ಮ ಈ ಪ್ರಯತ್ನದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳವರು ನಿಮ್ಮ ಹಿಂದೆ ಬರುವಂತೆ ಆಗುತ್ತದೆ.ಆದರೆ ಬಿಬಿಎಂಪಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ಉಪನ್ಯಾಸಕರ ಸಂಖ್ಯೆ ತೀರಾ ಕಮ್ಮಿ ಇದೆ.ಇದರಿಂದ ನಮಗೆ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ.ಈ ಬಗ್ಗೆ ಇಷ್ಟರಲ್ಲೇ ಇದರ ಬಗ್ಗೆ ಒಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಬಿಬಿಎಂಪಿ ಶಾಲೆಗಳಿಗೆ ನಾನು ಮತ್ತು ಡಿಸಿಎಂ ಖುದ್ದಾಗಿ ಭೇಟಿ ನೀಡುತ್ತೇವೆ.ನಿಮ್ಮ ಸಮಸ್ಯೆಗಳೇನು ಎಂದು ಅರಿಯುವ ಪ್ರಯತ್ನ ಮಾಡುತ್ತೇವೆ.ಈ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಕೊಡಲು ಅಂತಾರಾಷ್ಟ್ರೀಯ ಮಟ್ಡಕ್ಜೆ ಏರಿಸಲು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ 500 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ.ಇಂದಿನ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತದೆ ಎಂದರು.
ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳು ಕೋರ್ಟ್ ಗಳಿಂದ ಹೇಳಿಸಿಕೊಂಡು ಕೆಲಸ ಮಾಡುವ ಸ್ಥಿತಿಗೆ ತಲುಪಿದ್ದಾರೆ.ಈ ಸಂಬಂಧ ಬಿಬಿಎಂಪಿ ಕಮೀಷನರ್ ಗೆ ಸೂಚನೆ ನೀಡುತ್ತೇನೆ.ಇಂಜಿನಿಯರ್ ಗಳೇ ಇರಲಿ ,ಬೇರೆ ಅಧಿಕಾರಿಗಳೇ ಇರಲಿ ಕೋರ್ಟ್ ಗಳಿಂದ ಛೀ ಮಾರಿ ಹಾಕಿಸಿಕೊಳ್ಳುವ ಮೊದಲು ನಿಮ್ಮ ಕೆಲಸ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದರು.
ನಂತರ ಮಾತನಾಡಿದ ಡಿಸಿಎಂ ಡಾ.ಜಿ.ಪರಮೇಶ್ವರ್, ಬಿಬಿಎಂಪಿಯ 800 ಚ ಕಿಮೀ ವ್ಯಾಪ್ತಿಯಲ್ಲಿ ನಮ್ಮ ಬಿಬಿಎಂಪಿ ಶಾಲೆಗಳಿವೆ.ಈ ಶಾಲೆಗಳನ್ನು ನೋಡಿದರೆ ನಮ್ಮ ಬಾಲ್ಯ ನೆನಪಾಗುತ್ತದೆ.ನಾನು ಹಳ್ಳಿಯಿಂದ ಬಂದವನು.ಚಾವಡಿಯಲ್ಲಿ ಓದಿ ಬಂದವನು.ನಾನು ಬಿಬಿಎಂಪಿ ಯ ಒಂದೆರಡು ಶಾಲೆಗಳಿಗೆ ಭೇಟಿ ಕೊಟ್ಟಿದ್ದೇನೆ.ಕಾನ್ವೆಂಟ್ ಗಳಿಗೆ ಹೋಗಲಾರದ ಬಡವರ ಮಕ್ಕಳು ಈ ಶಾಲೆಗಳಿಗೆ ಬರುತ್ತಾರೆ.ಬಿಬಿಎಂಪಿ ಶಾಲೆಗಳಲ್ಲಿ ಓದಿದವರು ಇಂದು ಉತ್ತಮ ಸ್ಥಿತಿಯಲ್ಲಿದ್ದಾರೆ,ಉನ್ನತ ಹುದ್ದೆಗಳಲ್ಲಿದ್ದಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿ ಶಾಲೆಗಳು ನಿರ್ಲಕ್ಷಿತವಾದವು ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೆ ಶಿಕ್ಷಣ ಬಹಳ ಜನರಿಗೆ ಸಿಗುತ್ತಿರಲಿಲ್ಲ.ಹಾಗಾಗಿ ಅವರು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಂಡಿದ್ದರು.ಈಗ ಅವೆಲ್ಲವೂ ಸಿಗುತ್ತಿದೆ.ಶಿಕ್ಷಿತರ ಪ್ರಮಾಣ ಶೇ.80 ಕ್ಕೇರಿದೆ.ಈ ದೇಶದಲ್ಲಿ ಕಳೆದ 70 ವರ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿದೆ.ವಿಶ್ವದ ಯಾವುದೇ ದೇಶಕ್ಕೆ ಹೋದರೂ ಒಬ್ಬ ಭಾರತೀಯ ಸಾಫ್ಟ್ ವೇರ್ ತಂತ್ರಜ್ಞ,ವೈದ್ಯ ಸಿಗುತ್ತಾನೆ.ಆದರೂ ಒಂದು ವರ್ಗದ ಜನ ಶಿಕ್ಷಣದಿಂದ ಅಲಭ್ಯರಾಗಿದ್ದಾರೆ.ಅವರಿಗಾಗಿ ಮೈಕ್ರೋಸಾಫ್ಟ್ ಪ್ರಪಂಚದಲ್ಲೇ ಮೊದಲ ಬಾರಿಗೆ ಈ ಪ್ರಯೋಗಕ್ಕೆ ಮುಂದಾಗಿದೆ.ಈ ಪ್ರಯೋಗ ಯಶಸ್ವಿಯಾಗುವ ವಿಶ್ವಾಸ ನಮಗಿದೆ ಎಂದರು.
ಸಮ್ಮಿಶ್ರ ಸರ್ಕಾರದ ಬಗ್ಗೆ ಬಹಳಷ್ಟು ಜನ ಟೀಕೆ ಮಾಡಬಹುದು.ಆದರೆ ಜನ ಸಾಮಾನ್ಯರು,ಬಡವರು ಹಾಗೂ ಹಿಂದುಳಿದವರಿಗೆ ಅನುಕೂಲವಾಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದರು.
ನ್ಯಾಯಾಧೀಶರು ಗುಂಡಿ ಮುಚ್ಚಲು,ಚರಂಡಿ ಮುಚ್ಚಲು ಆದೇಶ ಮಾಡಿದರೆ ಅದು ನಮ್ಮ ಆಡಳಿತ ಹೇಗಿದೆ ಎಂದು ತೋರಿಸುತ್ತದೆ.ಹಾಗೆ ಆಗಬಾರದು.ಅದಕ್ಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ಬೆಂಗಳೂರಿನಲ್ಲಿ 380ಕ್ಕೂ ಹೆಚ್ಚು ಕೆರೆಗಳಿವೆ.ಈ ಕೆರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಉದ್ದೇಶಿಸಿದ್ದೇವೆ.ಇನ್ನು ಐದಾರು ವರ್ಷದಲ್ಲಿ ಬಿಎಂಟಿಸಿಯಲ್ಲಿ ಡೀಸೆಲ್ ಬಸ್ ಗಳನ್ನು ಬದಲಾಯಿಸಿ ಸಂಪೂರ್ಣ ಎಲೆಕ್ಟ್ರಿಕ್ ಚಾಲಿತ ಬಸ್ ಗಳನ್ನು ಬಳಕೆ ಮಾಡಲಾಗುತ್ತದೆ. ಇನ್ನು ಎರಡು ಮೂರು ತಿಂಗಳಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಬಸ್ ಗಳು ರಸ್ತೆಗಳಿಯಲಿವೆ ಎಂದರು.
Related Articles
Thank you for your comment. It is awaiting moderation.
Comments (0)