ಎಸ್‍ಡಿಪಿ ಅನುದಾನ ಬಳಕೆ ಮಾಡದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ- ಸಚಿವ ಡಾ. ನಾರಾಯಣಗೌಡ

ಚಿಕ್ಕಮಗಳೂರು, ಜು. 05– ಎಸ್‍ಡಿಪಿ ಅನುದಾನ ಬಳಕೆ ಮಾಡದೆ ಲ್ಯಾಪ್ಸ್ ಮಾಡಿರುವ ಅಧಿಕಾರಿಗಳ ಮೇಲೆ ತಕ್ಷಣವೇ ಶಿಸ್ತು ಕ್ರಮ ತೆಗೆದುಕೊಳ್ಳಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅನುದಾನ ಸದ್ಬಳಕೆ ಮಾಡದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿಶೇಷ ಅಭಿವೃದ್ಧಿ ಯೋಜನೆಯ (SDP) ಅನುದಾನವನ್ನು ಬಳಸದೆ ಲ್ಯಾಪ್ಸ್ ಮಾಡಿರುವ ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳ ಕಾರ್ಯವೈಖರಿಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ತಕ್ಷಣವೆ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದರು. ಸಂಸದರ ನಿಧಿ ರೂ. 8.32 ಕೋಟಿ, ಶಾಸಕರ ನಿಧಿ ರೂ. 14.79 ಕೋಟಿ ಅನುದಾನ ಬಾಕಿ ಇದ್ದು, ಕೂಡಲೆ ವೆಚ್ಚಭರಿಸಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು ರೂ. 21.05 ಕೋಟಿ ಅನುದಾನದಲ್ಲಿ ಕ್ರೀಡಾ ಇಲಾಖೆಯ ಕಾಮಗಾರಿಗಳು ನಡೆಯುತ್ತಿವೆ. ಕ್ರೀಡೆಗೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಯೋಜನೆಗಳನ್ನು ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ. ಐಯ್ಯನಕೆರೆಯಲ್ಲಿ ರೂ. 4.84 ಕೋಟಿ ವೆಚ್ಚದಲ್ಲಿ ಸಾಹಸ ಕ್ರೀಡಾ ಚಟುವಟಿಕೆ ಕೇಂದ್ರ ಮಂಜೂರು ಮಾಡಲಾಗಿದೆ. ಬಾಲಕಿಯರ ಕ್ರೀಡಾ ವಸತಿನಿಲಯ ಮಂಜೂರು ಮಾಡಲಾಗಿದ್ದು, ರೂ. 1.50 ಕೋಟಿ ವೆಚ್ಚದಲ್ಲಿ ಶ್ರೀಘ್ರದಲ್ಲೇ ನಿರ್ಮಾಣವಾಗಲಿದೆ. ಹಾಲಿ ಇರುವ 7 ನೇ ತರಗತಿಯವರೆಗಿನ ಕ್ರೀಡಾ ವಸತಿ ನಿಲಯದಲ್ಲಿ ದ್ವಿತೀಯ ಪಿಯುಸಿ ವರೆಗೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು. ರೈತರಿಗೆ ಅನುಕೂಲವಾಗಲಿ ಎಂದು ಬೆಳೆ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಆದರೆ ರೈತರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಬೆಳೆ ವಿಮೆ ನೋಂದಣಿ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಬೆಳೆ ವಿಮೆ ನೋಂದಣಿ ಹೆಚ್ಚಾಗುವಂತೆ ಮಾಡಬೇಕು. ಆ ಮೂಲಕ ರೈತರಿಗೆ ಆಗುವ ನಷ್ಟವನ್ನು ಭರಿಸುವ ಕೆಲಸ ಮಾಡಬೇಕು ಎಂದು ಸಚಿವರು ಸೂಚಿಸಿದರು.

ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ನೀಡಲಾಗಿದೆ. ಅನುದಾನದ ಸದ್ಬಳಕೆ ಮಾಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದು. ಶಾಸಕರಿಂದ ಕ್ರಿಯಾಯೋಜನೆ ಪಡೆದು ಜನರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಬೇಕು. ಯಾವುದೇ ಕಾರಣಕ್ಕು ಸರ್ಕಾರದಿಂದ ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆಗಬಾರದು, ಯಾವುದೆ ಕಾಮಗಾರಿ ನೆನೆಗುದಿಗೆ ಬೀಳಬಾರದು. ಆ ರೀತಿ ಆಗದಂತೆ ನೋಡಿಕೊಂಡು ಗುಣಮಟ್ಟದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಚಿವ ಡಾ. ನಾರಾಯಣಗೌಡ ಎಚ್ಚರಿಕೆ ನೀಡಿದರು.

Related Articles

Comments (0)

Leave a Comment