ಗ್ರಾಪಂ ಚುನಾವಣೆ; ಕನಕಪುರದಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಕರ್ತವ್ಯದ ಪಾಠ ಮಾಡಿದ ಡಿಸಿಎಂ
- by Suddi Team
- January 6, 2021
- 12 Views

ಬೆಂಗಳೂರು: ಅದೊಂದು ಅಪರೂಪದ ಸನ್ನಿವೇಶ. ಗ್ರಾಮಗಳಲ್ಲಿ ವಿಜಯ ಪತಾಕೆಯನ್ನು ಹಾರಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದ ಕನಕಪುರ ತಾಲ್ಲೂಕಿನ ಹಳ್ಳಿಹೈದರೆಲ್ಲರೂ ತಮ್ಮ ಗೆಲುವಿನ ರೂವಾರಿಯನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ಸಂದರ್ಭವದು.
ಹೌದು, ರಾಮನಗರ ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳ ಪೈಕಿ ಜಿದ್ದಾಜಿದ್ದಿನ ಕಣವಾಗಿದ್ದ ಕನಕಪುರದಲ್ಲಿ ಕೇಸರಿ ಬಾವುಟ ಹಾರಿಸಿದ ಬಿಜೆಪಿ ಬೆಂಬಲಿತ 52 ಗ್ರಾಪಂ ಸದಸ್ಯರು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದರಲ್ಲದೆ, ಡಿಕೆ ಸಹೋದರರ ಪ್ರಬಲ ಪೈಪೋಟಿಯನ್ನು ಎದುರಿಸಿ ಗೆದ್ದಿದ್ದಕ್ಕೆ ಸಾರ್ಥಕ ಭಾವ ಮೂಡಿದೆ ಎಂದು ಹೇಳಿಕೊಂಡರು.
ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರ ಸಹೋದರ ಡಿ.ಕೆ.ಸುರೇಶ್ ಹಾಗೂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷಗಳನ್ನು ಬಲವಾಗಿ ಎದುರಿಸಿದ ಬಿಜೆಪಿ ಬೆಂಬಲಿಗರು ಕನಕಪುರ ತಾಲ್ಲೂಕು ಒಂದರಲ್ಲೇ ಎರಡಂಕಿಯನ್ನು ಮೀರಿ ಜಯ ಸಾಧಿಸಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ ಎಂದು ಡಿಸಿಎಂ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಶ್ವತ್ಥನಾರಾಯಣ ಅವರು ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರನ್ನು ಗೌರವಿಸಿದರು. ಬಳಿಕ ಆ ಸದಸ್ಯರೆಲ್ಲರೂ ಡಿಸಿಎಂ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಧೈರ್ಯ ತುಂಬಿದ ಡಿಸಿಎಂ
ಇದೇ ವೇಳೆ ಎಲ್ಲ ಸದಸ್ಯರಿಗೂ ಮುಂದಿನ ದಿನಗಳಲ್ಲಿ ಉತ್ತಮವಾಗಿ ಜನಸೇವೆ ಮಾಡುವಂತೆ ಕಿವಿಮಾತು ಹೇಳಿದರಲ್ಲದೆ, ಯಾವುದೇ ಕಾರಣಕ್ಕೂ ಗೆಲ್ಲಿಸಿದ ಮತದಾರರ ನಿರೀಕ್ಷೆಗಳನ್ನು ಹುಸಿ ಮಾಡಬೇಡಿ ಎಂದರು.
ಹೊಸದಾಗಿ ಚುನಾವಣೆಯಲ್ಲಿ ಗೆದ್ದ ಎಲ್ಲ ಸದಸ್ಯರು ಕೆಲಸ ಮಾಡುವುದನ್ನು ಕಲಿಯಬೇಕು. ಯಾವುದಕ್ಕೂ ದುಡುಕುವುದು ಬೇಡ. ನಾಲ್ಕು ಜನರ ಜತೆ ಸೇರಿ ಕೆಲಸ ಮಾಡಿ. ನಾನು ಎನ್ನುವುದು ಬೇಡ. ಪಕ್ಷದ ವರಿಷ್ಠರು ಹೇಳಿದ ಹಾಗೆ ಕೆಲಸ ಮಾಡಬೇಕು. ಯಾರೂ ಸೂಪರ್ʼಮ್ಯಾನ್ ಅಲ್ಲ. ಎಲ್ಲರೂ ಒಗ್ಗಟ್ಟಿನಿಂದ ಜನ ಮೆಚ್ಚುವ ಕೆಲಸ ಮಾಡೋಣ. ಶಕ್ತಿಮೀರಿ ಕೆಲಸ ಮಾಡಿ. ಎಲ್ಲರನ್ನೂ ಸಚಿವರನ್ನೇ ಭೇಟಿ ಮಾಡಬೇಕಿಲ್ಲ. ನಿಮ್ಮ ಶಕ್ತಿ ಕೇಂದ್ರದವರನ್ನು ಭೇಟಿ ಮಾಡಿ ಮಾಹಿತಿ ಕೊಡಿ. ಒಳ್ಳೆಯ ಕೆಲಸ ಮಾಡಿ. ನ್ಯಾಯಬದ್ಧವಾಗಿ ಕೆಲಸ ಮಾಡಿ ಉತ್ತಮ ಹೆಸರು ಗಳಿಸಿ ಎಂದು ಡಾ.ಅಶ್ವತ್ಥನಾರಾಯಣ ಹುರಿದುಂಬಿಸಿದರು.
ನಿಮ್ಮ ಜತೆ ಸದಾ ನಾನು ಮತ್ತು ಪಕ್ಷ ಇರುತ್ತದೆ ಎಂಬುದನ್ನು ಮರೆಯಬೇಡಿ. ಯಾವುದೇ ಕಾರಣಕ್ಕೂ ಅಸಹಾಯಕತೆ ಬೇಡ. ಎಲ್ಲ ಸಹಕಾರ ಸಿಗುತ್ತದೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಧೈರ್ಯವಾಗಿ ಕೆಲಸ ಮಾಡಿ. ಮೀಸಲಾತಿಯನ್ನು ನಿಮ್ಮ ಪಂಚಾಯತಿ ಮಟ್ಟದಲ್ಲಿ ಸಮಾಲೋಚನೆ ಮಾಡಿ ಮಾಡಲಾಗುತ್ತದೆ ಎಂದು ಸದಸ್ಯರಿಗೆ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಮನಗರ ಜಿಲ್ಲೆಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜ, ರಾಮನಗರ ಜಿಲ್ಲಾ ಬಿಜೆಪಿ ಅದ್ಯಕ್ಷ ದೇವರಾಜ್ ಇದ್ದರು.
Related Articles
Thank you for your comment. It is awaiting moderation.
Comments (0)