ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಚರ್ಚೆ ಆರಂಭಿಸಿದ ಡಿಸಿಎಂ
- by Suddi Team
- July 30, 2020
- 16 Views

ಬೆಂಗಳೂರು: ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಕ್ತಕಂಠದಿಂದ ಸ್ವಾಗತ ಮಾಡಿರುವ ರಾಜ್ಯ ಸರಕಾರವು ಅದನ್ನು ಹಂತ ಹಂತವಾಗಿ ಜಾರಿ ಮಾಡಲು ನಿರ್ಧರಿಸಿದೆ. ಆ ನಿಟ್ಟಿನಲ್ಲಿ ತಜ್ಞರ ಜತೆ ಮೊದಲ ಸಭೆ ನಡೆಸಿದೆ.
ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ನೇತೃತ್ವದಲ್ಲಿ ಈಗಾಗಲೇ ರಚನೆ ಮಾಡಲಾಗಿರುವ ಉನ್ನತ ಶಿಕ್ಷಣ ಕಾರ್ಯಪಡೆಯ ಸದಸ್ಯರ ಜತೆ ಮಹತ್ವದ ಮಾತುಕತೆ ನಡೆಸಿದರು. ಹಾಗೆ ನೋಡಿದರೆ, ರಾಜ್ಯ ಸರಕಾರವು ಈ ಶಿಕ್ಷಣ ನೀತಿಯ ಬಗ್ಗೆ ಕ್ಷಿಪ್ರವಾಗಿ ಸ್ಪಂದಿಸಿದ್ದು, ಅಷ್ಟೇ ಕ್ಷಿಪ್ರವಾಗಿ ಜಾರಿ ಮಾಡುವ ಬಗ್ಗೆಯೂ ತನ್ನ ಬದ್ಧತೆಯನ್ನು ತೋರಿದೆ.
ಈ ನೀತಿಯನ್ನು ಹೇಗೆ ಜಾರಿ ಮಾಡಬೇಕು? ಎಷ್ಟು ಹಂತಗಳಲ್ಲಿ ಮಾಡಬೇಕು? ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆ ಮತ್ತಿತರೆ ಅಂಶಗಳ ಬಗ್ಗೆ ಚರ್ಚೆ ನಡೆಸಿದ ಡಿಸಿಎಂ ಅವರು, ದೇಶದಲ್ಲಿಯೇ ಈ ನೀತಿಯನ್ನು ಕರ್ನಾಟಕದಲ್ಲಿಯೇ ಮೊದಲು ಜಾರಿ ಮಾಡುವಂತಾಗಬೇಕು ಎಂದು ಸಭೆಯಲ್ಲಿ ಹೇಳಿದರು.
ಈ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಸಲಹೆಗಳನ್ನು ನೀಡಿದರಲ್ಲದೆ, ಅಗಸ್ಟ್ 16ರಂದು ಶಿಕ್ಷಣ ನೀತಿಯನ್ನು ಜಾರಿ ಮಾಡುವ ಬಗ್ಗೆ ಒಂದು ಪ್ರೆಸೆಂಟೇಷನ್ ನೀಡುವುದು ಹಾಗೂ ಅದೇ ತಿಂಗಳ 20ರಂದು ಕಾರ್ಯಪಡೆ ಒಂದು ಸಮಗ್ರ ವರದಿ ನೀಡಬೇಕು ಎಂಬುದಾಗಿ ಸಭೆಯಲ್ಲಿ ತೀರ್ಮಾನವಾಗಿದೆ. 3 ತಿಂಗಳ ಹಿಂದೆಯೇ ಕೇಂದ್ರ ಸರಕಾರದಿಂದ ಈ ನೀತಿಯ ಕರಡು ಬಂದಾಗಲೇ ಅದನ್ನು ಸೂಕ್ತ ರೀತಿಯಲ್ಲಿ ಪರಾಮರ್ಶಿಸಿ ಜಾರಿ ಮಾಡುವ ಬಗ್ಗೆ ಎಸ್.ವಿ. ರಂಗನಾಥ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿತ್ತು.
ಪಕ್ಕಾ ಸಿದ್ಧತೆಯೊಂದಿಗೆ ಜಾರಿ:
ಸಭೆಯ ನಂತರ ಆನ್’ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬುಧವಾರ ಹೊಸ ನೀತಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದ್ದು, ನಮ್ಮ ಹೆಮ್ಮೆಯ ಕನ್ನಡಿಗರಾದ ಡಾ. ಕಸ್ತೂರಿ ರಂಗನ್ ಅಧ್ಯಕ್ಷತೆಯ, ಡಾ. ಎಂ.ಕೆ. ಶ್ರೀಧರ್ ಸದಸ್ಯರಾಗಿದ್ದ ಸಮಿತಿ ಈ ನೀತಿಯನ್ನು ರೂಪಿಸಿದೆ. ಅತ್ಯಂತ ಸುಸ್ಥಿರ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಪೂಕವಾಗಿರುವ ನೀತಿಯನ್ನು ಸ್ವಾಗತಿಸಿ ಕಾರ್ಯಪಡೆ ಸಭೆಯಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ನಮ್ಮ ದೇಶದ ಹಿರಿಮೆ, ಗರಿಮೆಯನ್ನು ಎತ್ತಿ ಹಿಡಿಯುವ, ವಿಶ್ವಮಾನವ ಪರಿಕಲ್ಪನೆಗೆ ಪೂರಕವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯೂ ಬಲಿಷ್ಠ ಹಾಗೂ ಭವ್ಯ ಭಾರತ ಕಟ್ಟುವಲ್ಲಿ ಖಂಡಿತವಾಗಿಯೂ ಮಹತ್ವದ ಪಾತ್ರ ವಹಿಸಲಿದೆ. ಅದರಲ್ಲೂ ಶೈಕ್ಷಣಿಕವಾಗಿ ಸದಾ ಹೊಸತನಕ್ಕೆ ತುಡಿಯುವ ಕರ್ನಾಟಕಕ್ಕೆ ಹೊಸ ನೀತಿಯೂ ಮತ್ತಷ್ಟು ಶಕ್ತಿ ತುಂಬಲಿದೆ ಎಂಬ ವಿಶ್ವಾಸವನ್ನು ಡಿಸಿಎಂ ವ್ಯಕ್ತಪಡಿಸಿದರು.
ಮೊದಲಿದ್ದ ಶಿಕ್ಷಣ ಪದ್ಧತಿಯೂ ಕೇವಲ ಅಕಾಡೆಮಿಕ್ ಕಡೆಗೇ ಹೆಚ್ಚು ಫೋಕಸ್ ಆಗಿತ್ತು. ಆದರೆ ಹೊಸ ಶಿಕ್ಷಣ ನೀತಿ 360 ಡಿಗ್ರಿ ಕೋನದಲ್ಲಿ ವಿಶಾಲ ದೃಷ್ಟಿಕೋನದಲ್ಲಿದೆ. ಎಲ್ಲ ರೀತಿಯ ಶೈಕ್ಷಣಿಕ ಪರಿಹಾರಗಳೂ ಅದರಲ್ಲಿವೆ. ಹೀಗಾಗಿ ಭಾರತದ ಮುಂದಿನ ಬೆಳವಣಿಗೆಯಲ್ಲಿ ಇದು ಅತ್ಯಂತ ಗುರುತರ ಪಾತ್ರ ವಹಿಸಲಿದೆ. 34 ವರ್ಷಗಳ ನಂತರ ಆಗಿರುವ ಅತಿ ಮಹತ್ವದ ಸುಧಾರಣೆ ಇದು. ಈ ಸುಧಾರಣೆಗಾಗಿ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಸಭೆಯಲ್ಲಿ ಸ್.ವಿ. ರಂಗನಾಥ್, ಪ್ರೊ. ತಿಮ್ಮೇಗೌಡ, ಶಾಸಕ ಅರುಣ್ ಶಹಾಪುರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಮಣ ರೆಡ್ಡಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಹಾಲ್ಗೊಂಡಿದ್ದರು. ಪ್ರೊ. ಎಂ.ಕೆ. ಶ್ರೀಧರ್ ಅವರು ಆನ್’ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.
Related Articles
Thank you for your comment. It is awaiting moderation.
Comments (0)