ಸಾಲಮನ್ನಾಗೆ ಸಮನ್ವಯ ಸಮಿತಿ ಸಮ್ಮತಿ:ಹಿಂದಿನ ಸರ್ಕಾರದ ಯೋಜನೆಗಿಲ್ಲ ತಡೆ

ಬೆಂಗಳೂರು:ರೈತರ ಸಾಲಮನ್ನಾ,ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳ ಮುಂದುವರಿಕೆ ಸೇರಿದಂತೆ ಉಭಯ ಪಕ್ಷಗಳ ಪ್ರಣಾಳಕೆಯ ಕೆಲ ಭರವಸೆಗಳನ್ನು ಬಜೆಟ್ ನಲ್ಲಿ ಪ್ರಕಟಿಸಲು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ನಾಳೆಯಿಂದ ಬಜೆಟ್ ಅಧಿವೇಶನ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಸಲಾಯಿತು. ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಉಪಸ್ಥಿತರಿದ್ದರು.

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಹಾಗೂ ಹಂಚಿಕೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬಜೆಟ್, ಸಚಿವ ಸಂಪುಟ ವಿಸ್ತರಣೆ, ರೈತರ ಸಾಲ ಮನ್ನಾ ವಿಚಾರ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯಲ್ಲಿ ಶಿಫಾರಸ್ಸಾಗಿರುವ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಚರ್ಚೆ ನಡೆಸಿ ಕೆಲಸ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯ್ತು.

ಸಭೆ ಕೈಗೊಂಡ ನಿರ್ಧಾರಗಳ ಹೈಲೈಟ್ಸ್:

*ರೈತರ ಸಾಲಾ ಮನ್ನಾ ಗೆ ಸಮ್ಮತಿ..ಬಜೆಟ್ ನಲ್ಲಿ ಸಾಲ‌ಮನ್ನಾ ವಿವರಗಳ‌ ಪ್ರಕಟ
*1,25000 ಕೋಟಿ ನೀರಾವರಿಗೆ ನಿಗದಿ.
* ವಸತಿ ರಹಿತರಿಗೆ 20 ಲಕ್ಷ ಮನೆಗಳ ನಿರ್ಮಾಣ
*ನೂತನ ಕ್ರೀಡಾ ನೀತಿ ಪ್ರಕಟ
*ಮುಂದಿನ‌ಐದು ವರ್ಷಗಳಲ್ಲಿ ಐದು ಕೋಟಿ ಉದ್ಯೋಗ ಸೃಷ್ಟಿ
*ಯೂನಿರ್ವಸಲ್ ಹೆಲ್ತ್ ಕಾರ್ಡ್ ಜಾರಿ
*ಹಿಂದಿನ‌ಕಾಂಗ್ರೆಸ್ ಸರ್ಕಾರದ ಎಲ್ಲ ಪ್ರಮುಖ ಯೋಜನೆಗಳ ಮುಂದುವರಿಕೆ.

ಸಮನ್ವಯ ಸಮಿತಿ ಸಭೆಯ ವಿವರ ನೀಡಿದ ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ, ಕೆಲವು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಸಾಮಾನ್ಯ ಕನಿಷ್ಟ ಕಾರ್ಯಕ್ರಮ‌ ಜಾರಿಗೆ ಸಮನ್ವಯ ಸಮಿತಿ ಸಮ್ಮತಿಸಿದೆ ಎಂದರು.

ವಿಧಾನ ಮಂಡಳ ಅಧಿವೇಶನದ ತರವಾಯು ಸಚಿವ ಸಂಪುಟ ವಿಸ್ತರಣೆಗೆ ನಿರ್ಧರಿಸಲಾಗಿದೆ.ನಿಗಮ ಮಂಡಳಿ ಹಂಚಿಕೆಗೆ ಎರಡೂ ಪಕ್ಷಗಳ ಪಟ್ಟಿ ವಿನಿಮಯ ಮಾಡಿಕೊಳ್ಳಲಾಗಿದೆ.ನಾಳೆ ಒಟ್ಟು ಸ್ಥಾನಗಳ ಹಂಚಿಕೆ ಪ್ರಕಟಿಸಲಾಗುತ್ತದೆ ಎಂದರು.

ಬಜೆಟ್ ಮಂಡನೆ ಸಂಬಂಧ ಎರಡೂ ಪಕ್ಷಗಳಲ್ಲಿ ಯಾವುದೇ ಗೊಂದಲವಿಲ್ಲ.ದೃಷ್ಯ ಬಿಡುಗಡೆ ಕೆಲವು ಕಿಡಿಗೇಡಿಗಳ ಕೃತ್ಯ ಹಾಗಾಗಿ ಎಚ್.ಡಿ.ಕುಮಾರಸ್ವಾಮಿಯವರ ಬಜೆಟ್ ಮಂಡನೆಗೆ ಯಾವುದೇ ಅಡ್ಡಿಯಿಲ್ಲ.ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ.ಸಿದ್ದರಾಮಯ್ಯ ಅವರಿಗೆ ಕ್ಯಾಬಿನೆಟ್ ಸ್ಥಾನ ಮಾನ ನೀಡಲು ಯಾವುದೇ ಆಕ್ಷೇಪಣೆ ಇಲ್ಲ ಎಂದರು.

ಸಿಎಂ ಕುಮಾರಸ್ವಾಮಿ ಮಾತನಾಡಿ, ಸರ್ಕಾರದಲ್ಲಿ ಯಾವ ಗೊಂದಲಗಳು ಇಲ್ಲ.ಸಾಮಾನ್ಯ ಕನಿಷ್ಟ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತೇವೆ.ಹಂತ ಹಂತವಾಗಿ ಕಾರ್ಯಕ್ರಮಗಳ ಪಟ್ಟಿ ರೆಡಿ ಮಾಡುತ್ತೇವೆ.ರೈತರ ಸಾಲಮನ್ನಾ ವಿಚಾರದ ಬಗ್ಗೆ ಬಜೆಟ್ ಮಂಡನೆವರೆಗೂ ಕಾಯಿರಿ. ಎಲ್ಲವನ್ನೂ ಸಹಿತ ಈವಾಗ್ಲೆ ಹೇಳಲಿಕ್ಕೆ ಆಗಲ್ಲ ಎಂದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮಾತನಾಡಿ, ಯಾವುದೇ ಗೊಂದಲವಿಲ್ಲ.ಎಲ್ಲವೂ ಬಗೆ ಹರಿದಿದೆ.ರೈತರ ಸಾಲ ಮನ್ನಾವನ್ನು ಕಾಂಗ್ರೆಸ್ ಎಂದೂ ವಿರೋಧಿಸಿಲ್ಲ.ಜತೆಗೆ ಸಚಿವರೂ ಸಹ ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಬಹುದು.ಎರಡೂ ಪಕ್ಷಗಳ ಮಾಹಿತಿ ನೀಡಲು ಎರಡೂ ಪಕ್ಷಗಳಿಂದ ಇಬ್ಬರು ವಕ್ತಾರರನ್ನು ನೇಮಕ ಮಾಡಲಾಗುತ್ತದೆ.ಪಕ್ಷಗಳ ಸಮನ್ವಯತೆಗೆ ಸಂಬಂಧಿಸಿದಂತೆ ಸಚಿವರು ಮಾಧ್ಯಮಗಳಿಗೆ ಹೇಳಿಕೆ ನೀಡುವುದನ್ನು ನಿರ್ಬಂಧಿಸಲಾಗುತ್ತದೆ.ಎರಡೂ ಪಕ್ಷಗಳಿಗೆ ಸೇರಿದಂತೆ ಸರ್ಕಾರದ ಪರವಾಗಿ ಒಬ್ಬರೇ ಮುಖ್ಯ ಸಚೇತಕರು ಇರುತ್ತಾರೆ.ಈ ಬಾರಿ ವಿಧಾನಸಭೆ ಕಲಾಪ ಕಡಿಮೆ ಅವಧಿಯದ್ದಾದರಿಂದ ಜಂಟಿ ಶಾಸಕಾಂಗ ಸಭೆ ಕರೆಯಲು ಸಾಧ್ಯವಾಗಿಲ್ಲ.ನಂತರದ ದಿನಗಳಲ್ಲಿ ಜಂಟಿ ಶಾಸಕಾಂಗ ಸಭೆ ನಡೆಸಲಾಗುತ್ತದೆ ಎಂದರು.

Related Articles

Comments (0)

Leave a Comment