ತುರ್ತುಪರಿಸ್ಥಿತಿ ಮೂಲಕ ಪ್ರಜಾಪ್ರಭುತ್ವದ ಕತ್ತು ಹಿಸುಕಿ ಕಾಂಗ್ರೆಸ್ ಅಟ್ಟಹಾಸ ಮೆರೆಯಿತು: ಯಡಿಯೂರಪ್ಪ
- by Suddi Team
- June 24, 2025
- 34 Views

ಬೆಂಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷವು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅಧಿಕಾರಕ್ಕಾಗಿ ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವದ ಕತ್ತು ಹಿಸುಕಿ ಅಟ್ಟಹಾಸ ಮೆರೆಯಿತು ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
“ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಬೆಂಗಳೂರು” ಇವರ ವತಿಯಿಂದ ಇಂದು ಟೌನ್ ಹಾಲ್ ನಲ್ಲಿ “1975ರ ತುರ್ತು ಪರಿಸ್ಥಿತಿ 50ನೇ ವರ್ಷ-ಕರಾಳ ದಿನಗಳು” ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಇಂದಿರಾ ಗಾಂಧಿಯ 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಕೇವಲ ತಮ್ಮ ಅಧಿಕಾರಕ್ಕಾಗಿ ನಮ್ಮ ಪವಿತ್ರ ಸಂವಿಧಾನವನ್ನೇ ಆಗ ಬಲಿ ಕೊಡಲಾಗಿತ್ತು. ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ತಮ್ಮ ನಿರಂಕುಶ ಅಧಿಕಾರಕ್ಕಾಗಿ ಸ್ವಾತಂತ್ರ್ಯದ ಧ್ವನಿಗಳ ಕೊರಳನ್ನು ಹಿಸುಕಿ ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಂಗದ ಸ್ವಾಯತ್ತತೆ, ಸಾರ್ವಜನಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು,ಅಧಿಕಾರ ಲಾಲಸೆಯ ಹಿಟ್ಲರ್ಶಾಹಿ ದುರಾಡಳಿತವು ಇಂದಿಗೂ ಆಕ್ರೋಶದ ಕಿಚ್ಚು ಹಚ್ಚುವಂತಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ವ್ಯವಸ್ಥೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಅಧಿಕಾರದಲ್ಲಿ ಉಳಿಯಬೇಕೆಂಬ ಒಂದೇ ಕಾರಣವು ತುರ್ತು ಪರಿಸ್ಥಿತಿ ಹೇರುವಿಕೆಯ ಹಿಂದೆ ಇತ್ತು ಎಂದು ಹೇಳಿದರು.
ಪ್ರಧಾನ ಭಾಷಣ ಮಾಡಿದ ಅಂಕಣಕಾರ ಮತ್ತು ಆರ್ಥಿಕ ಚಿಂತಕ ಎಸ್.ಗುರುಮೂರ್ತಿ, 2024ರಲ್ಲಿ ರಾಹುಲ್ ಗಾಂಧಿ ಗೆದ್ದ ಬಳಿಕ ಸಂವಿಧಾನದ ಪುಸ್ತಕ ಪ್ರದರ್ಶಿಸಲು ಆರಂಭಿಸಿದರು, ಸಂವಿಧಾನವನ್ನು ತಾವು ರಕ್ಷಿಸಲು ಬಯಸುವುದಾಗಿ ಹೇಳಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅದೇ ಸಂವಿಧಾನವನ್ನು ಅವರ ಅಜ್ಜಿ ಕಡೆಗಣಿಸಿದ್ದು ಅವರಿಗೆ ಗೊತ್ತಿರಲಿಲ್ಲ? ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ, ಸಾಂವಿಧಾನಿಕ ಹಕ್ಕು, ಸ್ವಾತಂತ್ರ್ಯದ ಬಗ್ಗೆ ಮಾತನಾಡಲು ನೈತಿಕ- ಕಾನೂನಾತ್ಮಕ ಹಕ್ಕಿದೆಯೇ ಎಂದು ಅವರು ಪ್ರಶ್ನಿಸಿದರು.
ಹೊಸದಾಗಿ ಚುನಾಯಿತರಾದ ಕಾಂಗ್ರೆಸ್ಸೇತರ ರಾಜಕೀಯ ನೇತಾರರು ತುರ್ತು ಪರಿಸ್ಥಿತಿಗೆ ಕಾರಣಕರ್ತರಾದ ಕಾಂಗ್ರೆಸ್ ಮುಖಂಡರನ್ನು ಶಿಕ್ಷಿಸುವ ನಿರೀಕ್ಷೆ ಹುಸಿಯಾಯಿತು. ಬಳಿಕ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂತು. ನಂತರದ 34 ವರ್ಷಗಳಲ್ಲಿ 28 ವರ್ಷಗಳ ಕಾಲ ತುರ್ತುಪರಿಸ್ಥಿತಿಗೆ ಕಾರಣಕರ್ತರೇ ದೇಶವನ್ನಾಳಿದರು. ಅವರು ಜನರ ಮತ್ತು ಸಂಸ್ಥೆಗಳ ಕಹಿ ನೆನಪನ್ನು ಅಳಿಸಲು ಶಕ್ತರಾದರು.ನಂತರದ ದಿನಗಳಲ್ಲಿ ರಾಜೀವ್ ಗಾಂಧಿಯವರು 415 ಸಂಸದರೊಂದಿಗೆ ಅಧಿಕಾರಕ್ಕೆ ಬಂದಿದ್ದರು. ಬಿಜೆಪಿ ಕೇವಲ ಇಬ್ಬರು ಸಂಸದರನ್ನು ಹೊಂದಿತ್ತು. ಬಿಜೆಪಿ ಮೃತಪಟ್ಟಿದ್ದು, ಅದನ್ನು ಒಯ್ಯಲು 4 ಜನ ಬೇಕಿದೆ. ಆದರೆ, ಇಬ್ಬರೇ ಇದ್ದಾರೆ ಎಂದು ವ್ಯಂಗ್ಯವಾಡಿದ್ದ ಕಾಲವದು, ಅಗತ್ಯವಿದ್ದರೆ ಮತ್ತೆ ತುರ್ತು ಪರಿಸ್ಥಿತಿ ಹೇರಲು ಸಿದ್ಧವೆಂದು ರಾಜೀವ್ ಗಾಂಧಿಯವರು ಹೇಳಿದ್ದರೆಂದು ನೆನಪಿಸಿದರು.
Related Articles
Thank you for your comment. It is awaiting moderation.
Comments (0)