ಡಿಸಿಪಿ ಪತ್ರ ಕಡೆಗಣಿಸಿದ ಸಿಎಂ,ಡಿಸಿಎಂ,ಹೋಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಐಪಿಎಲ್ ವಿಜಯೋತ್ಸವ ಹಮ್ಮಿಕೊಳ್ಳಲು ಹೆಚ್ಚುವರಿ ಸಮಯ, ಸಮಗ್ರ ಯೋಜನೆ ಹಾಗೂ ಸೂಕ್ತ ಭದ್ರತಾ ಸಿದ್ಧತೆಗಳು ಅಗತ್ಯವಿದೆ ಎಂದು ವಿಧಾನಸೌಧ ಡಿಸಿಪಿ ಸ್ಪಷ್ಟ ಸೂಚನೆ ನೀಡಿದ್ದರೂ ಸಹ ಎರಡು ಕಡೆ ಕಾರ್ಯಕ್ರಮ ಆಯೋಜನೆ ಮೂಲಕ ಕಾಲ್ತುಳಿತ ಘಟನೆಗೆ ಕಾರಣರಾದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಘಟನೆಯ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು,ದಿನಾಂಕ 04-06-2025 ರಂದು ವಿಧಾನಸೌಧದ ಪೊಲೀಸ್ ಉಪ ಆಯುಕ್ತರು (DCP) ರಾಜ್ಯ ಸರ್ಕಾರಕ್ಕೆ ಕಳುಹಿಸಿದ ಅಧಿಕೃತ ಪತ್ರದಲ್ಲಿ – ಐಪಿಎಲ್ ವಿಜಯೋತ್ಸವ ಹಮ್ಮಿಕೊಳ್ಳಲು ಹೆಚ್ಚುವರಿ ಸಮಯ, ಸಮಗ್ರ ಯೋಜನೆ ಹಾಗೂ ಸೂಕ್ತ ಭದ್ರತಾ ಸಿದ್ಧತೆಗಳು ಅಗತ್ಯವಿದೆ ಎಂದು ಸ್ಪಷ್ಟ ಸೂಚನೆ ನೀಡಿದ್ದರು.ಅಧಿಕಾರಪೂರ್ಣವಾಗಿ ಬಂದ ಈ ಎಚ್ಚರಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿ, ತುರ್ತು ತೀರ್ಮಾನದ ಮೂಲಕ ವಿಜಯೋತ್ಸವ ಆಯೋಜಿಸುವ ಧೃಡ ನಿರ್ಧಾರಕ್ಕೆ ಯಾರು ಮುಂದಾದರು?ಎಂದು ದೂರಿದ್ದಾರೆ.

ಪೊಲೀಸ್ ಇಲಾಖೆ ತಾವು ಎದುರಿಸುವ ಭಾರೀ ಭದ್ರತಾ ಸವಾಲುಗಳನ್ನು ಸ್ಪಷ್ಟವಾಗಿ ತಿಳಿಸಿದ್ದರೂ ಕೂಡಾ, ಈ ಜವಾಬ್ದಾರಿಯುತ ಅಭಿಪ್ರಾಯವನ್ನು ಯಾಕೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗಲಿಲ್ಲ?ಇಷ್ಟೊಂದು ಗಂಭೀರವಾದ ಎಚ್ಚರಿಕೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಲಿಖಿತ ರೂಪದಲ್ಲಿ ನೀಡಿದ್ದರೂ ಸಹ, ಸರ್ಕಾರ ಈ ಎಚ್ಚರಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಎರಡು ಕಡೆಯಲ್ಲಿ ಕಾರ್ಯಕ್ರಮವನ್ನು ನಡೆಸಲು ಅನುಮತಿಸಿದೆ ಎಂದು ಆರೋಪಿಸಿದ್ದಾರೆ.

ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಯಾವುದೇ ಸೂಕ್ತ ಭದ್ರತೆ, ಸೌಲಭ್ಯಗಳು & ವ್ಯವಸ್ಥೆಗಳಿಲ್ಲದೆ, ಸಾರ್ವಜನಿಕರ ಪ್ರಾಣದ ಮೇಲೆ ಅಪಾಯ ಒಡ್ಡುವ ರೀತಿಯಲ್ಲಿ ವಿಜಯೋತ್ಸವ ಹಮ್ಮಿಕೊಂಡವರು ಯಾರು? ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರ ಡಿ.ಕೆ ಶಿವಕುಮಾರ್ ಮತ್ತು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ರವರು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಹಾಗೂ ಈ ಘಟನೆಯ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕೆಂದು ಆಗ್ರಹಿಸಿದ್ದಾರೆ.

ಒಂದು ವಿಷಯ ಮಾತ್ರ ನಿಖರ — ಇದು ಸರ್ಕಾರದ ನಿರ್ಲಕ್ಷ್ಯದಿಂದ ಉದ್ಭವಿಸಿದ ದುರಂತ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಅಸಡ್ಡೆಯು, ಪರೋಕ್ಷವಾಗಿ ಸಾರ್ವಜನಿಕರಿಗೆ ಹಾನಿ ಉಂಟುಮಾಡುವಂತೆ ನಡೆಯುವುದು ಪ್ರಜ್ಞಾಪೂರ್ವಕ ನಿರ್ಧಾರವೆಂದು ತಿಳಿಯುತ್ತದೆ ಎಂದಿದ್ದಾರೆ ಎಂದಿದ್ದಾರೆ.

Related Articles

Comments (0)

Leave a Comment