ರಾಜ್ಯದಲ್ಲಿ ಚೀನಾ ಮಾದರಿಯ ಕೈಗಾರಿಕಾ ಅಭಿವೃದ್ದಿ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು, 18: ಚೀನಾ ಮಾದರಿಯನ್ನು ಅನುಸರಿಸಿ ರಾಜ್ಯದ ವಿವಿಧ ಜಿಲ್ಲೆಗಳ ವೈವಿಧ್ಯತೆಗೆ ಅನುಗುಣಾವಾಗಿ ಕೈಗಾರಿಕಾ ಸಮೂಹದ ಅಭಿವೃದ್ಧಿಯನ್ನು ಸಾಧಿಸುವಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಈ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಅಟಿಕೆಗಳ ಉದ್ಯಮ ಮತ್ತು ಬಳ್ಳಾರಿಯಲ್ಲಿ ಜವಳಿ ಉದ್ಯಮಗಳ ಕೈಗಾರಿಕಾ ಸಮೂಹಗಳ ಸ್ಥಾಪನೆಗೆ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದರು.

ನಗರದ ಖಾಸಗಿ ಹೋಟೇಲ್ ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಪ್ಪಳದ ಆಟಿಕೆ ಮತ್ತು ಬಳ್ಳಾರಿಯ ಜವಳಿ ಉದ್ಯಮಗಳ ಕ್ಲಸ್ಟರ್ ಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಈ ಎರಡೂ ಜಿಲ್ಲೆಗಳಲ್ಲಿ ಹೂಡಿಕೆಗೆ ಮುಂದಾಗಿರುವ ಉದ್ಯಮಿಗಳಿಗೆ ಒಡಂಬಡಿಕೆಯನ್ನು ಹಸ್ತಾಂತರಿಸಿದರು.

ನಂತರ ಮಾತನಾಡಿದ ಅವರು, ಕಳೆದ ಸಾಲಿನ ಬಜೆಟ್‍ನಲ್ಲಿ ಘೋಷಿಸಿದ ಹಾಗೆ ರಾಜ್ಯದ ಒಂಬತ್ತು ಜಿಲ್ಲೆಗಳನ್ನು ಆಯ್ದು ಅವುಗಳ ವೈವಿಧ್ಯತೆ ಅನುಗುಣವಾಗಿ ಕೈಗಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಚೀನಾ ಮಾದರಿಯಲ್ಲಿ ಕೈಗಾರಿಕೆಗಳ ವೀಕೆಂದ್ರಿಕರಣ ಮಾಡುವ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಯಾಗಲಿದೆ ಹಾಗೂ ಯೋಜನೆಯಿಂದ ಪ್ರತಿ ಜಿಲ್ಲೆಯಲ್ಲಿಯೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೆ ಕೈಗಾರಿಕಾ ಹಬ್‍ಗಳ ಸ್ಥಾಪನೆಯಿಂದ ಮೂಲಸೌಕರ್ಯ ಮತ್ತು ನಗರಾಭಿವೃದ್ದಿಗೂ ಸಹಕಾರಿಯಾಗಲಿದೆ. ಇದರ ಮೊದಲ ಭಾಗವಾಗಿ ಇಂದು ಎರಡು ಜಿಲ್ಲೆಗಳ ಕೈಗಾರಿಕಾ ಸಮೂಹ ಸ್ಥಾಪನೆಗೆ ಚಾಲನೆ ದೊರೆತಿದೆ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ಮಹತ್ವದ ಯೋಜನೆಯಾಗಿದೆ. ಕರ್ನಾಟಕ ರಾಜ್ಯದ ಅಭಿವೃದ್ಧಿ ದರ ಶೇ 10 ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ಕೈಗಾರಿಕಾ ಸ್ನೇಹಿ ನೀತಿ ಮತ್ತು ಹೂಡಿಕೆದಾರ ಸ್ನೇಹಿ ಪರಿಸರ ರಾಜ್ಯದಲ್ಲಿ ಉದ್ಯಮಶೀಲ ಪರಿಸರವನ್ನು ಸೃಷ್ಟಿಸಿದೆ. ದೇಶದ ಹಲವೆಡೆಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕಾರ್ಮಿಕ ಸಂಬಂಧಿ ಸಮಸ್ಯೆಗಳಿಲ್ಲ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ (ಖ&ಆ) ರಾಜ್ಯವು ಪ್ರಪಂಚದಲ್ಲೇ ಐದನೇ ಸ್ಥಾನದಲ್ಲಿದೆ. ಹೀಗಾಗಿಯೇ ರಾಜ್ಯದಲ್ಲಿ ಹೂಡಿಕೆ ಮಾಡುವತ್ತ ಹೆಚ್ಚು ಹೆಚ್ಚು ಹೂಡಿಕೆದಾರರು ಆಸಕ್ತಿ ತೋರುತ್ತಿದ್ದಾರೆ ಎಂದು ತಿಳಿಸಿದರು.

ಈ ಯೋಜನೆಯು ರಾಜ್ಯದ ಅಭಿವೃದ್ಧಿಯ ದೃಷ್ಟಿಯಲ್ಲಿ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು. ರಾಜ್ಯ ಸರ್ಕಾರ ಕೈಗಾರಿಕಾಭಿವೃದ್ಧಿಯ ಮಹತ್ವವನ್ನು ಅರಿತಿದ್ದು ಸುಸ್ಥಿರ ಬೆಳವಣಿಗೆಯ ಪರಿಸರದ ಮೂಲಕ ಉದ್ಯೋಗ ಸೃಷ್ಟಿ ಮತ್ತು ಮಹಿಳಾ ಸಬಲೀಕರಣ ಸಾಧಿಸುವುದು ನಮ್ಮ ಗುರಿಯಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಈಗಾಗಲೇ ಹಲವಾರು ಪೂರಕ ಕಾರ್ಯಕ್ರಮಗಳಿಗೆ ಮುಂದಡಿಯಿಟ್ಟಿದೆ. ರಾಜ್ಯದಲ್ಲಿ 7940 ಕಿಲೋಮೀಟರ್ ಗಳ ರಸ್ತೆ ಮತ್ತು ಸೇತುವೆಗಳ ನಿರ್ಮಾಣದ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆ. ಬಳ್ಳಾರಿ, ಮೈಸೂರು, ಕಲಬುರ್ಗಿ, ಚಿತ್ರದುರ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಕೌಶಲ್ಯಾಭಿವೃದ್ದಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಮುಂತಾದ ಪೂರಕ ಕಾರ್ಯಕ್ರಮಗಳು ಅಭಿವೃದ್ದಿಗೆ ವೇಗ ನೀಡಲಿವೆ ಎಂದರು.
ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ್ ಮಾತನಾಡಿ, ರಾಜ್ಯದ ನಗರಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಸರಕಾರ ಒತ್ತು ನೀಡುತ್ತಿದೆ. ಸಬ್ ಅರ್ಬನ್ ರೈಲು, ಸಮರ್ಪಕ ರಸ್ತೆ ಸೌಲಭ್ಯ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮಾಡುತ್ತಿದೆ. ಈ ಹೂಡಿಕೆ ಸ್ನೇಹಿ ಪರಿಸರ ಸಾಕಷ್ಟು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಸರಕಾರ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಮೂಲಕ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಚೀನಾ ಮಾದರಿಯ ಕೈಗಾರಿಕಾ ಕ್ಲಸ್ಟರ್ ಗಳನ್ನು ನಿರ್ಮಿಸುವ ಮೂಲಕ ಬೆಂಗಳೂರಿನಂತೆಯೇ ಇನ್ನಿತರ ಜಿಲ್ಲೆಗಳನ್ನೂ ಕೂಡಾ ಅಭಿವೃದ್ದಿಗೊಳಿಸುವ ಗುರಿಯನ್ನು ಹೊಂದಿದೆ ಎಂದರು.
ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ್ ಮಾತನಾಡಿ, ರಾಜ್ಯದ ನಗರಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಸರಕಾರ ಒತ್ತು ನೀಡುತ್ತಿದೆ. ಸಬ್ ಅರ್ಬನ್ ರೈಲು, ಸಮರ್ಪಕ ರಸ್ತೆ ಸೌಲಭ್ಯ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮಾಡುತ್ತಿದೆ. ಈ ಹೂಡಿಕೆ ಸ್ನೇಹಿ ಪರಿಸರ ಸಾಕಷ್ಟು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಸರಕಾರ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಮೂಲಕ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಚೀನಾ ಮಾದರಿಯ ಕೈಗಾರಿಕಾ ಕ್ಲಸ್ಟರ್ ಗಳನ್ನು ನಿರ್ಮಿಸುವ ಮೂಲಕ ಬೆಂಗಳೂರಿನಂತೆಯೇ ಇನ್ನಿತರ ಜಿಲ್ಲೆಗಳನ್ನೂ ಕೂಡಾ ಅಭಿವೃದ್ದಿಗೊಳಿಸುವ ಗುರಿಯನ್ನು ಹೊಂದಿದೆ ಎಂದರು.
ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಸ್ಟಾರ್ಟಪ್‍ಗಳ ಪ್ರಗತಿಗೆ ಪೂರಕವಾಗಿ ರಾಜ್ಯ ಸರ್ಕಾರ ಪ್ರತ್ಯೇಕ ನಿತಿಗಳನ್ನು ತರುತ್ತಿದ್ದು, ಈ ಮೂಲಕ ಉದ್ದಿಮೆಗಳ ಬೆಳವಣಿಗೆಗೆ ಸಂಕಲ್ಪ ಮಾಡಿದೆ. ದೇಶದಲ್ಲಿ ಸ್ಟಾರ್ಟಪ್‍ಗಳು ಹೆಚ್ಚು ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿರುವ 13 ಸಾವಿರ ಸ್ಟಾರ್ಟಪ್‍ಗಳ ಪೈಕಿ ಬೆಂಗಳೂರು ಒಂದರಲ್ಲೇ 8 ಸಾವಿರ ಸ್ಟಾರ್ಟಪ್‍ಗಳಿವೆ. ಇದಕ್ಕೆ ಪೂರಕವಾಗಿ ಇಡೀ ದೇಶದಲ್ಲಿ ಸ್ಟಾರ್ಟಪ್ ನೀತಿಯನ್ನು ತಂದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಉತ್ತಮ ಆಡಳಿತ ನೀಡುತ್ತಿರುವುದರ ಜತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಈ ಗುರಿ ಇಟ್ಟುಕೊಂಡೇ ಸರ್ಕಾರ ಸ್ಟಾರ್ಟಪ್, ಕೈಗಾರಿಕೆ, ಐಟಿ-ಬಿಟಿ ಬೆಳವಣಿಗೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಈ ಕೈಗಾರಿಕೆ ಕ್ಷೇತ್ರಗಳು ಯುವಜನತೆಗೆ ಉದ್ಯೋಗ ನೀಡುವ ಕೆಲಸವನ್ನು ಮಾಡಬೇಕೆಂದು ಕಿವಿಮಾತು ಹೇಳಿದರು.
ಕಳೆದ 20 ವರ್ಷಗಳಲ್ಲಿ ಬೆಂಗಳೂರು ನಗರ ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿಯಾಗಿ ಬೆಳೆದು ನಿಂತಿದ್ದು, ಇಡೀ ವಿಶ್ವವೆಲ್ಲಾ ಈ ನಗರದ ಕಡೆ ನೋಡುವಂತಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ನಗರ ಬೆಳೆದಿರುವುದರ ಹಿಂದೆ ಸರ್ಕಾರ ಮತ್ತು ರಾಜಕೀಯದ ಬೆಂಬಲವೂ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಕೈಗಾರಿಕೆ ಕ್ಷೇತ್ರದಲ್ಲಿ ರಾಜ್ಯವು ಶೇ.17 ರಷ್ಟು ಜಿಡಿಪಿಯನ್ನು ಹೊಂದಿದ್ದು, ದೇಶದ 4 ನೇ ಅತಿದೊಡ್ಡ ಕ್ಲಸ್ಟರ್ ಎನಿಸಿದೆ. 2010-11 ನೇ ಸಾಲಿನಲ್ಲಿ 8.2 ಬಿಲಿಯನ್ ಡಾಲರ್‍ನಷ್ಟಿದ್ದ ವಿದೇಶಿ ಹೂಡಿಕೆ ಪ್ರಮಾಣ ಪ್ರಸಕ್ತ ಸಾಲಿನಲ್ಲಿ 32.7 ಬಿಲಿಯನ್ ಡಾಲರ್‍ಗೆ ಏರಿರುವುದು ಸಂತಸದ ವಿಚಾರವಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಈ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್.ಸುಬ್ರಮಣ್ಯ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಏಕಸ್ ಸಮೂಹ ಸಂಸ್ಥೆಯ ಸಿಇಒ ಮತ್ತು ಅಧ್ಯಕ್ಷ ಅರವಿಂದ ಮೆಳ್ಳಿಗೇರಿ, ಆನಂದ್ ಪದ್ಮನಾಭ್ ಮತ್ತಿತರರು ಇದ್ದರು.

ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಕೆ.ಜೆ ಜಾರ್ಜ್ ಮಾತನಾಡಿ, ಕಳೆದ ಸಾಲಿನ ಬಜೆಟ್‍ನಲ್ಲಿ ಚೀನಾ ಮಾದರಿಯಲ್ಲಿ ಕೈಗಾರಿಕಾ ಸಮೂಹಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಘೋಷಿಸಲಾಗಿತ್ತು. ಈ ಯೋಜನೆಯ ಅನ್ವಯ ರಾಜ್ಯದ ವಿವಿಧ ಭಾಗಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಒಂಭತ್ತು ಕೈಗಾರಿಕಾ ಪ್ರವರ್ಗಗಳನ್ನು ಸ್ಥಾಪಿಸಲಾಗುವುದು. ಉತ್ಪಾದನಾ ಸ್ಪರ್ಧಾತ್ಮಕತೆಯ ಮೂಲಕ ಆರ್ಥಿಕ ಜೀಗಿತ ಸಾಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಗುರುತಿಸುವುದು ಇದರ ಉದ್ದೇಶವಾಗಿದೆ ಎಂದರು. ಅಲ್ಲದೇ ಈ ಮಹಾತ್ವಕಾಂಕ್ಷಿ ಯೋಜನೆಯಿಂದ ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಉದ್ಯೋಗಾವಕಾಶ ಒದಗಿಸುವ ಮೂಲಕ ರಾಜ್ಯದ ಯುವ ಜನತೆಗೆ ಸಾಕಷ್ಟು ಅವಕಾಶಗಳನ್ನು ನೀಡುವುದು ನಮ್ಮ ಗುರಿಯಾಗಿದೆ. ಈಗಾಗಲೇ ಚೀನಾ ಮಾದರಿಯ ಕೈಗಾರಿಕಾ ಅಭಿವೃದ್ದಿ ಯೋಜನೆಯ ಅಡಿಯಲ್ಲಿ ಸಾಕಷ್ಟು ಬಂಡವಾಳ ಹರಿದು ಬರುತ್ತಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಬಲ ನೀಡಲಿದೆ ಎಂದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಡಾ ಎಸ್ ಸುಬ್ರಮಣ್ಯ ಮಾತನಾಡಿ, ರಾಜ್ಯದ ಕೈಗಾರಿಕಾ ಇಲಾಖೆ “ಕೈಗಾರಿಕಾ 4.0” – ಎಂಬ ಹೊಸ ಉತ್ಪಾದನಾ ಮಾದರಿಯನ್ನು ಅಳವಡಿಸಿಕೊಂಡಿದೆ. 2011 ರಲ್ಲಿ ಜರ್ಮನಿ ಈ ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ದಿಯನ್ನು ಸುಸ್ಥಿರಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಚೈನಾ, ಜಪಾನ್, ಸೌಥ್ ಕೊರಿಯ ಮತ್ತು ಅಮೇರಿಕಾ ದೇಶಗಳು ಈ ಮಾದರಿಯನ್ನು ತಮ್ಮ ದೇಶಕ್ಕೆ ಅಳವಡಿಸಿಕೊಳ್ಳುವ ಮೂಲಕ ಮಹತ್ತರವಾದ ಅಭಿವೃದ್ದಿಯನ್ನು ಕಂಡುಕೊಂಡಿವೆ. ಮಾರುಕಟ್ಟೆಯ ಟ್ರೆಂಡಿನ ಅನುಗುಣವಾಗಿ ರಾಜ್ಯದ ಕೈಗಾರಿಕಾ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಹಾಗೂ ರಾಜ್ಯವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸಲು ಚೈನಾ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದರು. ಕೈಗಾರಿಕಾ ಸ್ನೇಹಿ ಗುರಿಯನ್ನು ಹೊಂದುವ ಮೂಲಕ ಮಧ್ಯಮ ವರ್ಗದ ಜನರ ಅಭಿವೃದ್ದಿಯನ್ನು ತೀವ್ರಗೊಳಿಸುವುದು ಸರಕಾರದ ಗುರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಆರ್ ರೋಷನ್ ಬೇಗ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಗಣಿ ಮತ್ತು ಎಂಎಸ್‍ಎಂಇ ಕಾರ್ಯದರ್ಶಿ ರಾಜೇಂಧರ್ ಕುಮಾರ್ ಕಟಾರಿಯಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Comments (0)

Leave a Comment