ಕೋವಿಡ್ ಸೋಂಕಿತರು ಬಳಸಿದ ಹಾಸಿಗೆಗಳನ್ನು ಹಾಸ್ಟೆಲ್ ಮಕ್ಕಳಿಗೆ ನೀಡುವುದರ ವಿರುದ್ಧ ಆಂದೋಲನ: ಡಿ.ಕೆ ಶಿವಕುಮಾರ್
- by Suddi Team
- July 20, 2020
- 16 Views

ಬೆಂಗಳೂರು, ಜು.20:ಕೋವಿಡ್ ಸೋಂಕಿತರು ಬಳಸಿದ ಹಾಸಿಗೆಗಳನ್ನು ನಂತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುವ ಸರಕಾರದ ತೀರ್ಮಾನದ ವಿರುದ್ಧ ಆಂದೋಲನ ಆರಂಭಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯ, ಕೋವಿಡ್ ಸಲಕರಣೆ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತಿತರ ವಿಚಾರಗಳ ಬಗ್ಗೆ ಸೋಮವಾರ ಹಿರಿಯ ಮುಖಂಡರ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಈ ವೇಳೆ ಅವರು ಹೇಳಿದ್ದಿಷ್ಟು:
ಸರಕಾರ 10 ಸಾವಿರವೋ 20 ಸಾವಿರವೋ ಹಾಸಿಗೆಗಳನ್ನು ಖರೀದಿಸುತ್ತಿದೆ. ಮೊದಲು ಒಂದಕ್ಕೆ ಮೂರರಷ್ಟು ದರ ನಿಗದಿ ಮಾಡಿ ಬಾಡಿಗೆಗೆ ಎಂದರು. ಈಗ ಖರೀದಿ ಮಾಡುತ್ತಾರಂತೆ. ಅವುಗಳನ್ನು ಕೋವಿಡ್ ಸೋಂಕಿತರು ಬಳಸಿದ ನಂತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊಡಲು ಅಧಿಕಾರಿಗಳು ಮಾಡಿರುವ ಸಲಹೆಯನ್ನು ಸರಕಾರ ಒಪ್ಪಿದೆ. ಅದಕ್ಕೆ ನನ್ನ ಬಳಿ ದಾಖಲೆಗಳಿವೆ.
ಈ ದೇಶದಲ್ಲಿ ವಿದ್ಯಾವಂತಿಕೆ, ಬುದ್ಧಿವಂತಿಕೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಪ್ರಜ್ಞಾವಂತಿಕೆ ಇರಬೇಕು. ಸೋಂಕಿನಿಂದ ಸತ್ತವರ ದೇಹವನ್ನು ಮುಟ್ಟಲು ಹಿಂದೆ ಮುಂದೆ ನೋಡುತ್ತಿರುವ ಈ ಸರ್ಕಾರ ಈಗ ಸೋಂಕಿತರು ಬಳಸಿದ ಹಾಸಿಗೆ ವಸ್ತುಗಳನ್ನು ಹಾಸ್ಟೆಲ್ ವಿದ್ಯಾರ್ಥಿಗಳು, ನಮ್ಮ ಹಳ್ಳಿ ಮಕ್ಕಳಿಗೆ ಹೇಗೆ ನೀಡುತ್ತಾರೆ? ಇವರಿಗೇನಾದರೂ ಬುದ್ಧಿ ಇದೆಯೇ? ಇವರು ಎಂತೆಂಥ ಸಲಹೆಗಾರರು, ಅಧಿಕಾರಿಗಳನ್ನು ಇಟ್ಟುಕೊಂಡಿದ್ದಾರೆ, ಸರಕಾರ ಹೇಗೆ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಇದು ಬಹುದೊಡ್ಡ ಸಾಕ್ಷಿ. ಯಾವುದೇ ಕಾರಣಕ್ಕೂ
ನಾವು ಇದಕ್ಕೆಅವಕಾಶ ನೀಡುವುದಿಲ್ಲ.
ಬೇಕಾದರೆ ಆ ಹಾಸಿಗೆಗಳನ್ನು ಮುಖ್ಯಮಂತ್ರಿಗಳು, ಸಚಿವರು ಹಾಗೂ ಅಧಿಕಾರಿಗಳ ಮನೆಗೆ ತೆಗೆದುಕೊಂಡು ಹೋಗಿ ಬಳಸಿಕೊಳ್ಳಲಿ. ಅವರ ಮಕ್ಕಳಿಗೆ ಕೊಡಲಿ. ಆದರೆ ಹಳ್ಳಿ ಮಕ್ಕಳು ಹಾಗೂ ವಿದ್ಯಾರ್ಥಿ ಹಾಸ್ಟೆಲ್ ಗಳಲ್ಲಿ ಇವುಗಳನ್ನು ಬಳಸಲು ನಾವು ಅವಕಾಶ ನೀಡುವುದಿಲ್ಲ. ನಮ್ಮ ಮಕ್ಕಳನ್ನು ಸೋಂಕಿನ ಅಪಾಯಕ್ಕೆ ದೂಡಲು ಬಿಡಲ್ಲ. ವಿದ್ಯಾರ್ಥಿಗಳು, ಪೋಷಕರು, ಯುವಕರು, ಹೆಣ್ಣುಮಕ್ಕಳು ಇದರ ವಿರುದ್ಧ ಧ್ವನಿ ಎತ್ತಬೇಕು, ಹೋರಾಡಬೇಕು. ಹಳ್ಳಿ ಮಕ್ಕಳು, ಬಡವರ ಮಕ್ಕಳ ಜೀವದ ಜತೆ ಸರಕಾರ ಚೆಲ್ಲಾಟವಾಡಲು ನಾವು ಬಿಡಲ್ಲ. ಇದರ ವಿರುದ್ಧ ಆಂದೋಲನ ಆರಂಭಿಸುತ್ತೇವೆ.
ಜನರನ್ನು ತಲುಪಲು ಕಾರ್ಯಕ್ರಮ:
ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಧೈರ್ಯ ತುಂಬಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಆದರೆ ಈ ಸಮಯದಲ್ಲಿ ಯಾವುದೇ ರಾಜಕೀಯ ಸಭೆ ನಡೆಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಹಾಗಂತ ನಾವು ಸುಮ್ಮನೆ ಕೂರಲು ಆಗುವುದಿಲ್ಲ. ಕಷ್ಟದಲ್ಲಿರುವವರ ನೆರವಿಗೆ ಧಾವಿಸಬೇಕಾದದ್ದು ನಮ್ಮ ಧರ್ಮ. ನಮಗೇನೂ ಇದರಲ್ಲಿ ರಾಜಕೀಯ ಬೇಕಿಲ್ಲ. ಹಿರಿಯ ಮುಖಂಡರ ಜತೆ ಚರ್ಚಿಸಿ ಶೀಘ್ರದಲ್ಲೇ ಕಾರ್ಯಕ್ರಮ ರೂಪಿಸುತ್ತೇವೆ. ಅದರ ಸ್ವರೂಪವನ್ನು ನಿರ್ಧರಿಸುತ್ತೇವೆ.
ಗುರುವಾರ ಪತ್ರಿಕಾಗೋಷ್ಠಿ ಕರೆದು ಕಾರ್ಯಕ್ರಮದ ಬಗ್ಗೆ ವಿವರಿಸಲಾಗುವುದು. ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇನ್ನು ಚಿಕಿತ್ಸಾ ಸಲಕರಣೆ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಈ ಎಲ್ಲ ವಿಚಾರವನ್ನು ನಾವು ಜನರಿಗೆ ಮುಟ್ಟಿಸಬೇಕಿದೆ. ಅದು ನಮ್ಮ ಜವಾಬ್ದಾರಿಯೂ ಹೌದು.
ಈ ಕಾರ್ಯಕ್ರಮ ಸ್ವರೂಪ ಹೇಗಿರುತ್ತದೆ, ಹಿರಿಯ ಮುಖಂಡರು, ಮಾಜಿ ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಯಾವ, ಯಾವ ನಾಯಕರು ಎಲ್ಲಿಗೆ ಹೋಗುತ್ತಾರೆ ಎಂಬುದರ ವಿವರವನ್ನು ಶೀಘ್ರದಲ್ಲೇ ತಿಳಿಸುತ್ತೇವೆ.
ಕೋವಿಡ್ ಪರಿಸ್ಥಿತಿ, ಸರಕಾರದ ವೈಫಲ್ಯ, ಭ್ರಷ್ಟಾಚಾರವನ್ನು ಬಯಲಿಗೆಳೆದು, ಯಥಾಸ್ಥಿತಿಯನ್ನು ಜನರಿಗೆ ಮುಟ್ಟಿಸುವಲ್ಲಿ ಮಾಧ್ಯಮಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿವೆ. ಇದಕ್ಕಾಗಿ ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು.
ದೊಡ್ಡ ಅಣ್ಣಂದಿರೆಲ್ಲ ಬೇಕಾದ್ದು ಮಾತನಾಡಲಿ:
ಕಾಂಗ್ರೆಸ್ ನವರು ಜೆಡಿಎಸ್ ಅವರನ್ನು ನೋಡಿ ಕಲಿಯಲಿ ಎಂದು ಸಚಿವ ಅಶೋಕ್ ನೀಡಿರುವ ಹೇಳಿಕೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅವರು ಅಧಿಕಾರದಲ್ಲಿದ್ದಾರೆ. ಅವರು ದೊಡ್ಡವರು, ಏನು ಬೇಕಾದರೂ ಹೇಳಲಿ. ಅಶೋಕ್ ಅಣ್ಣನಷ್ಟೇ ಅಲ್ಲ, ಶ್ರೀರಾಮುಲು ಅಣ್ಣಾ, ಸುಧಾಕರಣ್ಣಾ, ಯಡಿಯೂರಪ್ಪನವರು ಸೇರಿದಂತೆ ಮಂತ್ರಿ ಮಂಡಲದ ಯಾರು ಬೇಕಾದರೂ ಏನನ್ನಾದರೂ ಹೇಳಲಿ. ಅವರಿಗೆ ಅನಿಸಿದ್ದು ಅವರು ಮಾಡಲಿ. ಮಾಧ್ಯಮದವರು ಜನರ ಸಮಸ್ಯೆಗಳನ್ನು ಹೊರಗೆ ತರುತ್ತಿದ್ದೀರಿ. ನಾವು ಜನರ ಜತೆ ಇರಲು ಬಯಸುತ್ತೇವೆ. ನಾವಿಬ್ಬರೂ ಸೇರಿ ಒಟ್ಟಿಗೆ ಕೆಲಸ ಮಾಡೋಣ.
ಕೋವಿಡ್ ಸಲಕರಣೆಗಳ ಖರೀದಿ ಅಕ್ರಮ ಆರೋಪಕ್ಕೆ ಸಚಿವರು ನೀಡಿರುವ ಸ್ಷಷ್ಟನೆ, ವಿವರಣೆ ಕುರಿತು ಮಾತನಾಡಿದ ಶಿವಕುಮಾರ್ ಅವರು, ನಮ್ಮ ಬಳಿ ದಾಖಲೆಗಳಿವೆ. ಯಾರು, ಯಾರು ಏನು ಮಾಡಿದ್ದಾರೆಂಬ ಬಗ್ಗೆ ವಿವರಗಳಿವೆ. ಒಂದೇ ವಸ್ತುವಿಗೆ ತಮಿಳುನಾಡಿನಲ್ಲಿ ಎಷ್ಟು, ಇಲ್ಲೆಷ್ಟು ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಅವರು ಹೇಳುವುದನ್ನು ಅವರು ಹೇಳಲಿ. ನಮ್ಮ ಬಳಿ ಇರುವ ದಾಖಲೆಗಳನ್ನು ಜನರ ಬಳಿ ಇಡುತ್ತೇವೆ.
Related Articles
Thank you for your comment. It is awaiting moderation.
Comments (0)