ಬಿಜೆಪಿಗೆ ಮತ್ತೆ ಹತ್ಯಾ ರಾಜಕೀಯವೇ ಗತಿ ಎಂಬ ಪರಿಸ್ಥಿತಿ ಇದೆ: ಬಿಕೆ ಹರಿಪ್ರಸಾದ್
- by Suddi Team
- June 10, 2025
- 7 Views

ಬೆಂಗಳೂರು: ಜನ ಸಾಮಾನ್ಯರಿಂದ ಛೀಮಾರಿ ಹಾಕಿಸಿಕೊಂಡು ಜನಾಭಿಪ್ರಾಯ ಪಡೆಯುವಲ್ಲಿ ಸೋತ ಬಿಜೆಪಿ ಪಕ್ಷವು 2028 ರ ಚುನಾವಣೆಗೆ ಈಗಿನಿಂದಲೇ ತನ್ನ ತಯಾರಿಯನ್ನು ಆರಂಭಿಸಿದೆ ಇದನ್ನೆಲ್ಲಾ ನೋಡಿದರೆ ಬಿಜೆಪಿಗೆ ಮತ್ತೆ ಹತ್ಯಾ ರಾಜಕೀಯವೇ ಗತಿ ಎಂಬ ಪರಿಸ್ಥಿತಿ ಇದೆ ಎನಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಚುನಾವಣೆಗೆ ಇವರ ತಯಾರಿಯು ನಿಜಕ್ಕೂ ಜನಪರವಾಗಿ ಇರುವುದಾಗಲೀ ಇಲ್ಲವೇ ವಿಷಯಾಧಾರಿತ ಹೋರಾಟಗಳ ಮೂಲಕವಾಗಲೀ ಇಲ್ಲ. ಬದಲಿಗೆ ಇವರ ಹೋರಾಟವು 2018 ರ ಮಾದರಿಯಲ್ಲೇ ಹತ್ಯೆಗಳನ್ನು ಬಳಸಿಕೊಂಡು ಅದರ ಮೇಲೆ ಮಾಡುವ ರಾಜಕೀಯ ಆಗಿದೆ ಎಂದು ಟೀಕಿಸಿದರು.
2018 ರ ಸಂದರ್ಭವನ್ನೇ ಗಮನಿಸಿ. ಶಿರಸಿಯ ಪರೇಶ್ ಮೇಸ್ತಾ ಅವರಿಂದ ಆರಂಭಗೊಂಡ ಬಿಜೆಪಿಗರ ಹತ್ಯಾ ರಾಜಕೀಯವು ಬಹುತೇಕ 8 ರಿಂದ 9 ತಿಂಗಳ ಕಾಲ ಅತ್ಯಂತ ಅಗ್ರೆಸಿವ್ ಆಗಿ ನಡೆಯಿತು. ಶರತ್ ಮಡಿವಾಳ, ದೀಪಕ್ ರಾವ್ ಸೇರಿದಂತೆ ಹಲವು ವ್ಯಕ್ತಿಗಳನ್ನು ತಮ್ಮ ಶವ ರಾಜಕೀಯಕ್ಕೆ ಬಳಸಿಕೊಂಡ ಬಿಜೆಪಿಗರು ಕೊನೆಗೆ ಅವರ ಕುಟುಂಬಗಳತ್ತ ತಿರುಗಿಯೂ ನೋಡಲಿಲ್ಲ. ಇದನ್ನು ನಾನು ಹೇಳುತ್ತಿಲ್ಲ, ಬಿಜೆಪಿಗರ ಕುತಂತ್ರಗಳಿಂದ ನೊಂದ ಅವರ ಪೋಷಕರೇ ಹೇಳಿದ ಮಾತು ಎಂದಿದ್ದಾರೆ.
ಇನ್ನು ಈ ಸಾವುಗಳ ಕುರಿತು ಹೊರಬಿದ್ದ ಸಿಬಿಐ ತನಿಖೆಯ ವರದಿಗಳೂ ಸಹ ಇದು ಹತ್ಯೆಯಲ್ಲ ಎಂದು ಹೇಳಿರುವುದು ಬಿಜೆಪಿಗರ ಕೆಟ್ಟ ಪ್ರಯತ್ನಗಳಿಗೆ ಬೀಸಿದ ಛಾಟಿ ಆಗಿದೆ.2018 ರ ಸಂದರ್ಭದಲ್ಲಿ ಬೇರೆ ಬೇರೆ ಕಾರಣಕ್ಕೆ ಜರುಗಿದ ಸಾವುಗಳನ್ನು ಬಿಜೆಪಿಗರು ಹಿಂದೂ ಹತ್ಯೆ ಎಂಬ ಶೀರ್ಷಿಕೆಯಡಿ ಬಿಂಬಿಸಲು ಆರಂಭಿಸಿದ್ದವು.ಆಗ ಅಂದರೆ 2013 ರಿಂದ 2018 ರ ವರೆಗೆ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದು, ಜನಪ್ರಿಯತೆಯ ಉತ್ತುಂಗದಲ್ಲಿತ್ತು.ಅಂತಹ ಸ್ಥಿರ ಸರ್ಕಾರದ ಯಶಸ್ಸನ್ನು ಸಹಿಸಲಾಗದೇ ಮನುವಾದಿಗಳು ಮತ್ತು ಫ್ಯೂಡಲ್ ಶಕ್ತಿಗಳು ಒಂದಾಗಿ ಹತ್ಯಾ ರಾಜಕೀಯವನ್ನು ಅತಿ ಹೆಚ್ಚಾಗಿ ಮಾಡಿದವು ಎಂದಿದ್ದಾರೆ.
ವಿಷಯಾಧಾರಿತ ಹೋರಾಟಗಳನ್ನು ಮಾಡುವ ಮನಸ್ಸಿದ್ದರೆ ಇಂತಹ ಕೆಟ್ಟ ಪ್ರಯತ್ನಗಳನ್ನು ಯಾವುದೇ ವಿಪಕ್ಷಗಳು ಮಾಡುವುದಿಲ್ಲ. ಆದರೆ ತಾನೊಂದು ವಿಪಕ್ಷ ಎಂಬ ಜವಾಬ್ದಾರಿಯನ್ನು ಮರೆತ ಬಿಜೆಪಿಗರು ಅತ್ಯಂತ ಕೆಳ ಮಟ್ಟದ ರಾಜಕೀಯ ನಡೆಸಿದರು. ಆ ಸಂದರ್ಭದಲ್ಲಿ ಶವ ರಾಜಕೀಯ ಮಾಡಲು ಬಿಜೆಪಿಯ ಘಟಾನುಘಟಿ ನಾಯಕರೇ ಬೀದಿಗೆ ಇಳಿದಿದ್ದನ್ನು ನಾವು ಮರೆಯುವಂತಿಲ್ಲ ಎಂದಿದ್ದಾರೆ.
ಇದೀಗ ಮತ್ತೊಮ್ಮೆ ಜನರಿಂದ ಪೂರ್ಣ ಆಶೀರ್ವಾದ ಪಡೆದು ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿಗರಿಗೆ ಟೀಕಿಸಲು ಅಥವಾ ಹೋರಾಟ ನಡೆಸಲು ಯಾವುದೇ ರೀತಿಯ ವಿಷಯಗಳು ಇಲ್ಲದೇ ಇರುವ ಕಾರಣದಿಂದ ಮತ್ತೊಮ್ಮೆ ಹತ್ಯಾ ರಾಜಕೀಯ ನಡೆಸಬೇಕಾದ ಅನಿವಾರ್ಯತೆ ಅವರಿಗೆ ಸೃಷ್ಟಿ ಆಗಿದ್ದು ಇದು ಪ್ರಜಾಪ್ರಭುತ್ವದ ನಾಡಾದ ಕರುನಾಡಿಗೆ ಮಾರಕವಾದ ಸಂಗತಿಯಾಗಿದೆ ಎಂದಿದ್ದಾರೆ.
ಜನರ ಸಮಸ್ಯೆಗಳಿಗೆ ದನಿಯಾಗಿ ಅಧಿಕಾರ ಪಡೆಯಬೇಕಾದ ಜನರು, ಈ ದಿನ ಗಲಭೆಗಳನ್ನು ಎಬ್ಬಿಸುವ ಮೂಲಕ ಅರಾಜಕತೆಯನ್ನು ಸೃಷ್ಟಿಸಲು ಹೊರಟಿದ್ದು ಇದು ನಿಜಕ್ಕೂ ಖಂಡನೀಯವಾದ ಸಂಗತಿಯಾಗಿದೆ.ಬಸವಣ್ಣನವರ ಶಾಂತಿಯ ನಾಡಾದ ಕರ್ನಾಟಕವನ್ನು ಹತ್ಯಾ ರಾಜಕೀಯದ ನಾಡಾಗಿ ಬದಲಿಸಲು ಹೊರಟಿರುವ ಬಿಜೆಪಿಗರು ಸಾರ್ವಜನಿಕ ಜೀವನದ ಮಹತ್ವವನ್ನು ಕಳೆದಿದ್ದು ಈ ಕಾರಣಕ್ಕಾಗಿ ಅವರು ನಾಡಿನ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
Related Articles
Thank you for your comment. It is awaiting moderation.
Comments (0)