ನಾಳೆ ಅಂಬರೀಶ್ ಅಂತ್ಯ ಸಂಸ್ಕಾರ: ತವರಿನಲ್ಲಿ ಅಂತಿಮ ದರ್ಶನ
- by Suddi Team
- November 25, 2018
- 618 Views

ಬೆಂಗಳೂರು: ಅಗಲಿದ ಹಿರಿಯ ನಟ ಹಾಗೂ ರಾಜಕಾರಣಿ ಅಂಬರೀಶ್ ಅವರ ಪಾರ್ಥೀವ ಶರೀರವನ್ನು ರಾಜಧಾನಿ ಜನರು ವೀಕ್ಷಿಸಿ ಕಂಬನಿ ಮಿಡಿದ ನಂತರ ತವರು ಜಿಲ್ಲೆಗೆ ರವಾನಿಸಲಾಗಿದೆ ನಾಳೆ ಮತ್ತೆ ನಗರಕ್ಕೆ ಪಾರ್ಥೀವ ಶರೀರವನ್ನು ಮರಳಿ ಬೆಂಗಳೂರಿಗೆ ತರಲಿದ್ದು ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.
ಜೆ.ಪಿ ನಿವಾಸದಿಂದ ಬೆಳಗ್ಗೆ 7.30 ಕ್ಕೆ ಕಂಠೀರವ ಕ್ರೀಡಾಂಗಣಕ್ಕೆ ಅಂಬರೀಶ್ ಪಾರ್ಥೀವ ಶರೀರವನ್ನು ತರಲಾಯಿತು.ಬೆಳಗ್ಗೆ 8 ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಂಬಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿ ನೆಚ್ಚಿನ ನಟನಿಗೆ ಅಂತಿಮ ನಮನ ಸಲ್ಲಿಸಿದರು.
ಡಾ.ರಾಜ್ ಕುಮಾರ್ ಕುಟುಂಬದಿಂದ ರಾಘವೇಂದ್ರ ರಾಜ್ ಕುಮಾರ್,ಶಿವರಾಜ್ ಕುಮಾರ್,ಪುನೀತ್ ರಾಜ್ ಕುಮಾರ್ ದಂಪತಿ, ರವಿಚಂದ್ರನ್, ಸುದೀಪ್,ಯಶ್,ರಮೇಶ್,ಪ್ರಕಾಶ್ ರಾಜ್ ಸೇರಿದಂತೆ ಕನ್ನಡ ಚಿತ್ರರಂಗದ ನಟ ನಟಿಯರು ಅಂಬರೀಶ್ ಅಂತಿಮದರ್ಶನ ಪಡೆದುಕೊಂಡರು.
ರಜನೀಕಾಂತ್, ಚಿರಂಜೀವಿ,ಸುಹಾಸಿನಿ ಸೇರಿದಂತೆ ಹಲವು ಬಹುಭಾಷಾ ತಾರೆಯರು ಕೂಡ ಅಂಬರೀಶ್ ಅಂತಿಮದರ್ಶನ ಪಡೆದುಕೊಂಡರು, ದರ್ಶನ್ ವಿದೇಶದಲ್ಲಿರುವ ಕಾರಣ ನಾಳೆ ಆಗಮಿಸಲಿದ್ದಾರೆ.
ಸಿಎಂ ಕುಮಾರಸ್ವಾಮಿ, ದೇವೇಗೌಡ ದಂಪತಿ,ಯಡಿಯೂರಪ್ಪ, ಸಿದ್ದರಾಮಯ್ಯ,ಪರಮೇಶ್ವರ್,ಡಿ.ಕೆ ಶಿವಕುಮಾರ್ ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯದ ರಾಜಕಾರಣಿಗಳು ಪಕ್ಷಬೇಧವಿಲ್ಲದೇ ಆಗಮಿಸಿ ಅಂತಿಮದರ್ಶನ ಪಡೆದರು.ಆದಿಚುಂಚನಗಿರಿ ಶ್ರೀಗಳು,ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡ ಆಗಮಿಸಿದ್ದರು.
ಸಂಜೆ 4 ಗಂಟೆಗೆ ಪಾರ್ಥೀವ ಶರೀರವನ್ನು ಕಂಠೀರವ ಕ್ರೀಡಾಂಗಣದಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ರಕ್ಷಣಾ ಇಲಾಖೆಯ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಮಂಡ್ಯಕ್ಕೆ ಕೊಂಡೊಯ್ಯಲಾಗಿದ್ದು ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.
ರಾತ್ರಿಯಿಡೀ ಅಂತಿಮದರ್ಶನ ನಡೆಯಲಿದ್ದು ನಾಳೆ ಬೆಳಗದಗೆ ಬೆಂಗಳೂರಿನ ಎಚ್ಎಎಕ್ ವಿಮಾನ ನಿಲ್ದಾಣಕ್ಕೆ ಪಾರ್ಥೀವ ಶರೀರವನ್ನು ಮರಳಿ ತರಲಾಗುತ್ತದೆ, ಭವ್ಯ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ಸಾಗಿ ಸಕಲ ಸರಕಾರಿ ಗೌರವದೊಂದಿಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.
Related Articles
Thank you for your comment. It is awaiting moderation.
Comments (0)