ಕಲಬುರಗಿಯಲ್ಲಿ ಕಿದ್ವಾಯಿ, ಜಯದೇವ ಮಾದರಿ ಅಂಗಾಂಗ ಕಸಿ ಕೇಂದ್ರ ಸ್ಥಾಪನೆಗೆ ಬೇಡಿಕೆ..!

ಬೆಂಗಳೂರು: ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಮಾದರಿಯಲ್ಲಿಯೇ ಕಲಬುರಗಿ ವಿಭಾಗದಲ್ಲಿ ಉಚಿತ ಕಿಡ್ನಿ ಮತ್ತು ಲಿವರ್ ಕಸಿ ಕೇಂದ್ರಗಳನ್ನು ಸ್ಥಾಪಿಸುವಂತೆ ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ಸದಸ್ಯರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ಸದಸ್ಯರು ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಅಂಗಾಂಗ ದಾನ ಹೆಚ್ಚಿಸುವ ಕುರಿತಂತೆ ಚರ್ಚೆ ನಡೆಸಿದರು.‌ ರಾಜ್ಯಾದ್ಯಂತ ಅಂಗಾಂಗ ದಾನ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಸಚಿವರಲ್ಲಿ ಮನವಿ ಮಾಡಿದ ಅವರು, ರಾಜ್ಯದ ಎಲ್ಲ ವೈದ್ಯಕಿಯ ಕಾಲೇಜು/ಆಸ್ಪತ್ರೆಗಳಲ್ಲಿ ಆರ್ಗನ್ ರೀಟ್ರೇವಲ್ ಸೆಂಟರ್ ಪ್ರಾರಂಬಿಸಿ ಯಶಸ್ವಿಯಾಗಿ ನಡೆಸುವಂತೆ ಸೂಚಿಸಬೇಕು ಎಂದು ಕೋರಿದರು. ಆಸ್ಪತ್ರೆಯಲ್ಲಿ ಮೆದುಳುಸಾವು ಸಂಬವಿಸಿದರೆ ತಕ್ಷಣವೆ ವೈದ್ಯರು ಕುಟುಂಬಕ್ಕೆ ಅಂಗಾಂಗ ದಾನದ ಮಾಹಿತಿ ನೀಡಿ ಪ್ರೇರೆಪಿಸುವತ್ತ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸುವಂತೆ ಸಲಹೆ ನೀಡಿದರು.‌

ಕಿಡ್ನಿ ಮತ್ತು ಲಿವರ್ ವೈಪಲ್ಯದಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ರೋಗಿಗಳಿಗೆ ದುಬಾರಿ ಅಂಗಕಸಿ ಕೈಗೆಟಕದಂತಾಗಿದೆ.  ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಮಾದರಿಯಲ್ಲಿಯೇ ಕಲಬುರಗಿ ವಿಭಾಗದಲ್ಲಿ ಉಚಿತ ಕಿಡ್ನಿ ಮತ್ತು ಲಿವರ್ ಕಸಿ ಕೇಂದ್ರಗಳಾದ ನೆಪ್ರೋ-ಯುರೋಲಜಿ (INU) ಹಾಗೂ ಇನ್ಸಿಟ್ಯೂಟ್ ಆಫ್ ಗ್ಯಾಸ್ಕೋ ಎಂಟ್ರಾಲಜಿ ಸೈನ್ಸ್, ಆರ್ಗನ್ ಟ್ರಾನ್ಸ್ಪ್ಲಾಂಟ್ (IGOT) ಕೇಂದ್ರಗಳನ್ನು ಸ್ಥಾಪಿಸುವಂತೆ ಇದೇ ವೇಳೆ ಸಮಿತಿಯ ಸದಸ್ಯರು ಸಚಿವರಿಗೆ ಬೇಡಿಕೆ ಸಲ್ಲಿಸಿದರು.

ಸಮಿತಿಯ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅಂಗಾಂಗ ದಾನ ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.‌ ರಾಜ್ಯದಲ್ಲಿ ಅಂಗ ದಾನ ಹೆಚ್ಚಳಕ್ಕೆ ಅಗತ್ಯ ಕ್ರಮ ವಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಇದೇ ವೇಳೆ ಸೂಚನೆ ನೀಡಿದರು.

Related Articles

Comments (0)

Leave a Comment