ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಖಂಡಿಸಿ ಬಿಜೆಪಿಯಿಂದ ಮೌನ ಪ್ರತಿಭಟನೆ..!
- by Suddi Team
- May 30, 2025
- 5 Views
ಬೆಂಗಳೂರು: ಜನೌಷಧಿ ಕೇಂದ್ರಗಳನ್ನು ಮುಚ್ಚುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ವತಿಯಿಂದ ಇಂದು ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧಿ ಕೇಂದ್ರ ಮಳಿಗೆಯ ಮುಂಭಾಗದಲ್ಲಿ ಬಿಜೆಪಿ ಮೌನ ಪ್ರತಿಭಟನೆಯನ್ನು ನಡೆಸಿತು.
ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರದಿಂದ ಹಿಂದಕ್ಕೆ ಸರಿಯುವಂತೆ ಒತ್ತಾಯಿಸಿ ಮುಖಂಡರು ಪತ್ರಿಭಟನೆಯಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್ ಅಶ್ವತ್ಥನಾರಾಯಣ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬಿಜೆಪಿ ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೆಡೆಂಜಿ, ಪಕ್ಷದ ಮುಖಂಡರು, ಮಹಿಳಾ ಕಾರ್ಯಕರ್ತರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ, ಆರೋಗ್ಯ ಕೊಡಿ ಎಂದು ಆಸ್ಪತ್ರೆಗೆ ಬಂದರೆ ಇವರು ಜೀವ ತೆಗೆಯುವ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ರಾಜಕೀಯ ಪ್ರೇರಿತವಾಗಿ, ನೈತಿಕತೆ ಇಲ್ಲದೆ ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತಿದ್ದಾರೆ, ಉಚಿತವಾಗಿ ಔಷಧಿ ಒದಗಿಸಲು ಸರಕಾರದಿಂದ ಆಗುತ್ತಿಲ್ಲ; ಉಚಿತ ಔಷಧಿ ನೀಡದೆ ಐವಿ ಫ್ಲೂಯಿಡ್ ಕೊಟ್ಟು ಬಾಣಂತಿಯರನ್ನು ಕೊಂದ ಕೀರ್ತಿ ಪಡೆದ ಸರಕಾರ ರಾಜ್ಯದಲ್ಲಿದೆ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯಡಿ ಜನೌಷಧಿ ಕೇಂದ್ರಗಳಲ್ಲಿ ಶೇ 80ರಷ್ಟು ಕಡಿಮೆ ದರದಲ್ಲಿ ಔಷಧಿ ಸಿಗುತ್ತಿತ್ತು.ಆದರೆ ಸರಕಾರಿ ಆಸ್ಪತ್ರೆಗಳಲ್ಲಿನ ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತಿರುವ ಸರಕಾರವು ಜನವಿರೋಧಿ ಮತ್ತು ಆರೋಗ್ಯ ವ್ಯವಸ್ಥೆಗೆ ವಿರೋಧಿಯಾಗಿದೆ. ಇದನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಸರಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಆರೋಗ್ಯ ಸಚಿವರು ಸಂಪೂರ್ಣ ವಿಫಲವಾಗಿದ್ದಾರೆ. ಕಳಪೆ ಔಷಧಿ, ನಕಲಿ ಔಷಧಿ ಕುರಿತು ತಿಳಿಸಿದರೆ ನಾನೇನೂ ಮಾಡಲಾಗದು ಎನ್ನುತ್ತಾರೆ ಎಂದು ದೂರಿದರು. ಔಷಧಿ, ಮಾತ್ರೆ ಇಲ್ಲ ಎಂದರೆ ನಾನೇನೂ ಮಾಡಲಾಗದು ಎನ್ನುತ್ತಾರೆ; ಈ ಥರ ಏನೂ ಮಾಡಲಾಗದೆ ಇದ್ದರೆ ಯಾಕೆ ಆರೋಗ್ಯ ಸಚಿವರಾಗಿದ್ದೀರಿ ಎಂದು ಕೇಳಿದರು.
ಆರೋಗ್ಯ ಸಚಿವರಿಗೆ ಮತ್ತು ಈ ಕೊಲೆಗಡುಕ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯಲು ಯಾವ ನೈತಿಕತೆಯೂ ಇಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಮೌನಿಯಾಗಿದ್ದಾರೆ. ಸಾವುಗಳಿಗೆ ಉತ್ತರ ಕೊಡದ ಸರಕಾರವು ಜನರನ್ನು ಅಸಹಾಯಕರನ್ನಾಗಿ ಮಾಡಿದೆ. ಆಸ್ಪತ್ರೆಯಲ್ಲಿ ವೈದ್ಯರೂ ಇಲ್ಲ; ಔಷಧಿ, ವ್ಯವಸ್ಥೆಗಳೂ ಇಲ್ಲ ಎಂದು ಆಕ್ಷೇಪಿಸಿದರು.
Related Articles
Thank you for your comment. It is awaiting moderation.
Comments (0)