ಆರೋಗ್ಯಕರ ಸಮಾಜ ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯ: ಜೆಪಿ ನಡ್ಡಾ

ಬೆಂಗಳೂರು: ಆರೋಗ್ಯಕರ ಸಮಾಜವು ಬಲವಾದ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಒತ್ತಿ ಹೇಳಿದ್ದಾರೆ.

ನಿಮ್ಹಾನ್ಸ್‌ನಲ್ಲಿ ಇಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಯೋಜಿಸಿದ್ದ ವಿಶ್ವ ಆಹಾರ ಸುರಕ್ಷತಾ ದಿನದ ಕಾರ್ಯಕ್ರಮದಲ್ಲಿ  ದಿಕ್ಸೂಚಿ ಭಾಷಣ ಮಾಡಿದ ಸಚಿವರು, ತೈಲದಲ್ಲಿ ಕರಿದ ಆಹಾರಗಳ  ಸೇವನೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡಲು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ  ಕರೆಯನ್ನು ನೆನಪಿಸಿಕೊಂಡರು.

ಎಚ್ಚರಿಕೆಯಿಂದ ತಿನ್ನುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ನಡ್ಡಾ, ಜನರು ತಮ್ಮ ಕ್ಯಾಲೋರಿ ಸೇವನೆಯ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಮತೋಲಿತ ಆಹಾರ ಸೇವನೆಯ ಪದ್ಧತಿಯನ್ನು ಕಾಪಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿದ ಅವರು, ಇದು 2008 ಮತ್ತು 2020ರ ನಡುವೆ ಭಾರತದಲ್ಲಿ ಬೊಜ್ಜು ಪ್ರಮಾಣವು ನಗರ ಪ್ರದೇಶಗಳಲ್ಲಿ 39.6% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 23.1%ಕ್ಕೆ ಏರಿದೆ ಎಂಬುದನ್ನು ಬಹಿರಂಗಪಡಿಸಿದೆ. ಈಗಲೇ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, 2050ರ ವೇಳೆಗೆ ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಬೊಜ್ಜು ಸಮಸ್ಯೆ ಎದುರಿಸುವ  ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ನವೀನ ವರ್ತನೆ ಬದಲಾವಣೆ ತಂತ್ರವನ್ನು ಅಂದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಎಫ್‌ಎಸ್‌ಎಸ್‌ಎಐ ಅಭಿವೃದ್ಧಿಪಡಿಸಿದ ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಕ್ಕರೆ ಮತ್ತು ತೈಲ ಬೋರ್ಡ್ ಗಳ  ವ್ಯಾಪಕ ಪ್ರಚಾರವನ್ನು ಶ್ಲಾಘಿಸಿದರು, ಇದು ಪ್ರಬಲ ದೃಶ್ಯ ಪ್ರಚಾರ ಸಾಧನವಾಗಿ  ಕಾರ್ಯನಿರ್ವಹಿಸುತ್ತದೆ, ದೈನಂದಿನ ಆಹಾರ ಪದಾರ್ಥಗಳಲ್ಲಿ ಅಡಗಿರುವ ಸಕ್ಕರೆ ಮತ್ತು ಕೊಬ್ಬಿನ ಬಗ್ಗೆ ಸ್ಪಷ್ಟ, ಸಂಬಂಧಿತ ಮಾಹಿತಿಯನ್ನು ಪ್ರದರ್ಶಿಸುತ್ತದೆ.ಎನ್‌ಸಿಇಆರ್‌ಟಿ ಶಾಲಾ ಪಠ್ಯಕ್ರಮದಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಒಂದು ವಿಷಯವಾಗಿ ಸೇರಿಸಿದೆ ಎಂದೂ  ಅವರು ಮಾಹಿತಿ ನೀಡಿದರು.

ಜಾಗೃತಿ ಅಭಿಯಾನದ ಭಾಗವಾಗಿ, ಸಚಿವರು “ಈಟ್ ರೈಟ್ ಆಕ್ಟಿವಿಟಿ ಪುಸ್ತಕ”ವನ್ನು ಬಿಡುಗಡೆ ಮಾಡಿದರು, ಇದನ್ನು ಶಿಕ್ಷಣ ಇಲಾಖೆಯ ಮೂಲಕ ಶಾಲಾ ಮಕ್ಕಳಿಗೆ ಮತ್ತು ರೈಲ್ವೆ ಮಂಡಳಿಯಿಂದ ಪ್ರಯಾಣಿಕರಿಗೆ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದರು.

Related Articles

Comments (0)

Leave a Comment