ಜೂನ್ 21ರಂದು 11ನೇ ಅಂತರರಾಷ್ಟ್ರೀಯ ರಾಜ್ಯ ಮಟ್ಟದ ಯೋಗ ದಿನಾಚರಣೆ: ದಿನೇಶ್ ಗುಂಡೂರಾವ್
- by Suddi Team
- June 17, 2025
- 22 Views

ಬೆಂಗಳೂರು: 11ನೇ ಅಂತರರಾಷ್ಟ್ರೀಯ ರಾಜ್ಯ ಮಟ್ಟದ ಯೋಗ ದಿನಾಚರಣೆಯನ್ನು ಜೂನ್ 21ರಂದು ವಿಧಾನಸೌಧದ ಆವರಣದಲ್ಲಿ ಮುಂಜಾನೆ 6 ಗಂಟೆಯಿಂದ 8 ಗಂಟೆಯವರೆಗೆ 3 ಸಾವಿರ ಯೋಗ ಬಂಧುಗಳ ಯೋಗಾಭ್ಯಾಸ ಕಾರ್ಯಕ್ರಮಗಳ ಮೂಲಕ ಯೋಗ ಶಿಷ್ಟಾಚಾರದಂತೆ ಆಯೋಜಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ಆರೋಗ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ-2025 ರ ರಾಜ್ಯ ಮಟ್ಟದ ಕಾರ್ಯಕ್ರಮ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನೆರವೇರಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನಪರಿಷತ್ ಮತ್ತು ವಿಧಾನಸಭಾ ಸದಸ್ಯರುಗಳು ಹಾಗೂ ರಾಜ್ಯದ ಶ್ರೇಷ್ಠ ಯೋಗ ಗುರುಗಳು ಭಾಗವಹಿಸುವರು ಎಂದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 21ರಲ್ಲಿ ಆಚರಿಸಲಾಗುವುದು. ಈ ವರ್ಷದ ಘೋಷವಾಕ್ಯ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ವಿಶಾಲವಾದ ದೃಷ್ಟಿಕೋನದ ಆಚರಣೆಯಾಗಿದ್ದು,ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯು ಕಳೆದ 10 ವರ್ಷದ ಯೋಗ ದಿನಾಚರಣೆಯ ಅಂಗವಾಗಿ 10 ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.
ಯೋಗದಿಂದ ಆರೋಗ್ಯಕರ ಜೀವನ ಸಾಧ್ಯ. ನಿರಂತರವಾಗಿ ಯೋಗ ಮಾಡಿದರೆ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯಕ್ಕೆ ಯೋಗ ಅವಶ್ಯವಿರುವ ಚಟುವಟಿಕೆಯಾಗಿರುವುದರಿಂದ ಪ್ರತಿ ಜಿಲ್ಲಾ ಮತ್ತು ತಾಲ್ಲೂಕ್ ಮಟ್ಟದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿರುವ 300 ಕ್ಕೂ ಹೆಚ್ಚು ಆಯುಷ್ ಆರೋಗ್ಯ ಕೇಂದ್ರಗಳಲ್ಲಿ ‘ಯೋಗ ಸಂಗಮ’ ಕಾರ್ಯಕ್ರಮವನ್ನು ಆಯೋಜಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯುಷ್ ಮಂತ್ರಾಲಯವು ‘ಯೋಗ ಸಂಗಮ’ ಕಾರ್ಯಕ್ರಮವೆಂದು ನಾಮಕರಣ ಮಾಡಿದ್ದು, ಜೂನ್ ಕೊನೆ ವಾರದಲ್ಲಿ ‘ಒಂದು ವಿಶ್ವ ಒಂದು ಆರೋಗ್ಯದಲ್ಲಿ ಯೋಗದ ಪಾತ್ರ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದು, ಇದರಲ್ಲಿ ರಾಷ್ಟ್ರೀಯ ಯೋಗ ತಜ್ಞರುಗಳು ತಮ್ಮ ವಿಚಾರವನ್ನು ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಜುಲೈ ಮೊದಲನೆಯ ವಾರದಲ್ಲಿ ಬೆಂಗಳೂರಿನ ಪ್ರಸಿದ್ಧ ನಿಮ್ಹಾನ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಮಾನಸ ಯೋಗ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕಾರ್ಡಿಯೋ ಯೋಗ ಹಾಗೂ ಬೆಂಗಳೂರಿನ ಕಿದ್ವಾಯಿ ಗ್ರಂಥಿ ಸಂಸ್ಥೆಯಲ್ಲಿ ಕಾರ್ಸಿನೋ ಯೋಗ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದರು.
ಯೋಗ ಧನುಷ್ ಎಂಬ ಕಾರ್ಯಕ್ರಮದ ಮೂಲಕ ರಾಜ್ಯದಾದ್ಯಂತ ಈಗಾಗಲೇ 5 ಲಕ್ಷ ಜನರಿಗೆ ಯೋಗ ಪ್ರೋಟೋಕಾಲ್ ಅನ್ನು ಹೇಳಿ ಕೊಡಲಾಗಿದೆ. 5 ಸಾವಿರ ಶಾಲೆಗಳಲ್ಲಿ ಯೋಗ ಪ್ರೋಟೋಕಾಲ್ ಅನ್ನು ಮಾಡಲು ಕ್ರಮಕೈಗೊಳ್ಳಲಾಗಿದೆ. ಯೋಗ ಮಹಾಕುಂಭ ಎಂಬ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರತ ಸರ್ಕಾರವು ಒಂದು ಲಕ್ಷ ಸ್ಥಳಗಳಲ್ಲಿ ಯೋಗ ಸಂಗಮ ಕಾರ್ಯಕ್ರಮವನ್ನು ಆಚರಿಸಲು ಸಂಕಲ್ಪವನ್ನು ಹೊಂದಿದ್ದು, ಇದರ ಅಡಿಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಜಾಗದಲ್ಲಿ ಸುಮಾರು 10 ಸಾವಿರ ಯೋಗ ಸಂಗಮ ಕಾರ್ಯಕ್ರಮ ನಡೆಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಹಸಿರು ಯೋಗ ಕಾರ್ಯಕ್ರಮದಡಿಯಲ್ಲಿ ರಾಜ್ಯದಾದ್ಯಂತ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಯೋಗ ಜಾಗೃತಿಯನ್ನು ಮೂಡಿಸಲು ಹಸಿರೀಕರಣ ಕಾರ್ಯಕ್ರಮ, ಸ್ವಚ್ಚಭಾರತ ಕಾರ್ಯಕ್ರಮ ಮತ್ತ ಪರಿಸರ ಸಂರಕ್ಷಣಾ ಕಾರ್ಯಕ್ರಮದೊಂದಿಗೆ ಒಂದು ಲಕ್ಷ ಗಿಡಗಳನ್ನು ನೆಡುವ ಗುರಿಯನ್ನ ಹೊಂದಲಾಗಿದೆ. ಪ್ರತಿಯೊಂದು ಮನೆ- ಮನಗಳಲ್ಲಿ ಯೋಗವನ್ನು ಪಸರಿಸುವ ಉದ್ದೇಶವನ್ನು ಹೊಂದಿದ್ದು ಇದರಿಂದ ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ ಎಂಬ ಸಂಕಲ್ಪದ ಕನಸು ನನಸಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಯೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಡಿಜಿಟಲ್ ಪೋಸ್ಟರ್ ಬಿಡುಗಡೆ ಮಾಡಲಾಯಿತು.
Related Articles
Thank you for your comment. It is awaiting moderation.
Comments (0)