ದಿವ್ಯಾ, ಶ್ರೀದೇವಿಗೆ ಮಿಸೆಸ್ ಸೌತ್ ಇಂಡಿಯಾ ಕಿರೀಟ

ಬೆಂಗಳೂರು: ದಿವ್ಯಾ ನವೀನ್ ಅವರು ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್‍ಫುಲ್ ಕಿರೀಟ ಧರಿಸಿದರು. ಶ್ರೀದೇವಿ ಅಪ್ಪಾಚ ಅವರು ಮಿಸೆಸ್ ಕರ್ನಾಟಕ ಕರ್ವಿ ಸ್ಪರ್ಧೆಯಲ್ಲಿ ವಿಜೇತರಾದರು.

ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿಯುವ “ಎಥ್‍ನಿಕ್’ ಸುತ್ತಿನಲ್ಲಿ ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆಹಾಕಿದರು. ವಿಭಿನ್ನ ರೀತಿಯಲ್ಲಿ ಸೀರೆಯನ್ನು ಉಟ್ಟು ವಿನೂತನ ಫ್ಯಾಷನ್ ಮಂತ್ರ ಜಪಿಸಿದರು.

ಹೋಟೆಲ್ ಲಲಿತ್ ಅಶೋಕ್‍ನಲ್ಲಿ ನಡೆದ ಮೂರನೇ ಆವೃತ್ತಿಯ ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್‍ಫುಲ್‍ನಲ್ಲಿ ಒಟ್ಟು 21 ಸ್ಪರ್ಧಿಗಳು ಭಾಗಿಯಾಗಿದ್ದರು.

“ಕಲರ್ಸ್’ ತಂಡದ ನೃತ್ಯ ಕಾರ್ಯಕ್ರಮಕ್ಕೆ ರಂಗು ಹೆಚ್ಚಿಸಿತು. ಈ ನಡುವೆ ಗೌನ್ ಸುತ್ತಿಗೆ ಸಿದ್ಧತೆ ನಡೆಸಿದ ಸ್ಪರ್ಧಿಗಳು ಮತ್ತೊಮ್ಮೆ ರ್ಯಾಂಪ್ ವಾಕ್ ನಡೆಸಿದರು.

ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್ ಫುಲ್ ಕಾರ್ಯಕ್ರಮ ಕೇವಲ ಸೌಂದರ್ಯದ ಆಧಾರದ ಮೇಲೆ ಸ್ಪರ್ಧಿಗಳನ್ನು ಆಯ್ಕೆ ಮಾಡುವುದಿಲ್ಲ. ಸ್ಪರ್ಧಿಗಳು ಪ್ರಶ್ನೋತ್ತರ ಸುತ್ತಿನಲ್ಲೂ ಉತ್ಸಾಹದಿಂದ ಪಾಲ್ಗೊಂಡರು.

ತೆಳ್ಳಗೆ ಬೆಳ್ಳಗೆ ಇದ್ದರಷ್ಟೇ ಅದು ಸೌಂದರ್ಯ ಎನ್ನುವ ಮಾತು ಇವತ್ತಿಗೆ ಅನ್ವಯಿಸುವುದಿಲ್ಲ. ಮಿಸೆಸ್ ಕರ್ವಿ ಕರ್ನಾಟಕ ಸುತ್ತಿನಲ್ಲಿ ರೂಪದರ್ಶಿಯರು ಈ ಎಲ್ಲಾ ಸಿದ್ಧಮಾದರಿಯನ್ನು ಮೀರಿದಂತೆ ತಮ್ಮ ರ್ಯಾಂಪ್ ವಾಕ್‍ನಲ್ಲಿ ಭಾಗಿಯಾದರು.

ಮಿಸೆಸ್ ಕರ್ನಾಟಕ, ಮಿಸೆಸ್ ತಮಿಳುನಾಡು, ಮಿಸೆಸ್ ಆಂಧ್ರಪ್ರದೇಶ ಸುತ್ತಿನಲ್ಲಿ ಬೆಡಗಿಯರು ತಮ್ಮ ತಮ್ಮ ರಾಜ್ಯವನ್ನು ಪ್ರತಿನಿಧಿಸಿದರು.

ಕಾರ್ಯಕ್ರಮವನ್ನು ಚೆಂದಗಾಣಿಸಲು ಓಡಾಡಿದ ಆಯೋಜಕಿ ನಂದಿನಿ ನಾಗರಾಜ್ ಸ್ಪರ್ಧೆಯ ಕುರಿತು ಮಾತನಾಡಿದರು. “ಇಲ್ಲಿ ಗೆದ್ದವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಗೋವಾದಲ್ಲಿ ನಡೆಯುವ ಮಿಸೆಸ್ ಇಂಡಿಯಾ ಆಮ್ ಪವರ್‍ಫುಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿ ಆಯ್ಕೆಯಾದ ಸ್ಪರ್ಧಿಗಳು ಸಿಂಗಪುರದಲ್ಲಿ ನಡೆಯುವ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಜಯರಾಮ್ ಕಾರ್ತಿಕ್(ಜೆಕೆ), “ಸೌಂದರ್ಯವನ್ನು ಅಳೆಯುವುದಕ್ಕೆ ಯಾವುದೇ ಸಾಧನ ಇಲ್ಲ. ಆದರೆ ಮಿಸೆಸ್ ಸೌತ್ ಇಂಡಿಯಾದಂತಹ ಸ್ಪರ್ಧೆಗಳು ಬದುಕಿಗೆ ಭರವಸೆ ಮೂಡಿಸುತ್ತವೆ. ಉತ್ಸಾಹ ತುಂಬುತ್ತವೆ. ಇಲ್ಲಿ ಭಾಗವಹಿಸಿ ನನಗೆ ಖುಷಿಯಾಯಿತು’ ಎಂದು ಹೇಳಿದರು.

ವಿಜೇತರಾದವರಿಗೆ ನಂದಿನಿ ನಾಗರಾಜ್ ಅವರು ಕ್ರೌನ್ ತೊಡಿಸಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಪ್ನಾ ಸಾವಂತ್, ಶ್ವೇತಾ ನಿರಂಜನ್, ಸವಿತಾ ದೇವರಾಜ್ ರೆಡ್ಡಿ, ಗಾಯತ್ರಿ ಮೊಹಂತಿ ಭಾಗವಹಿಸಿದ್ದರು.

Related Articles

Comments (0)

Leave a Comment