ಉನ್ನತ ಶಿಕ್ಷಣ ಇಲಾಖೆಯಿಂದ ಯೋಗ ದಿನಾಚರಣೆ

ಬೆಂಗಳೂರು: ವಿಶ್ವ ಯೋಗ ದಿನದ ಅಂಗವಾಗಿ ಉನ್ನತ ಶಿಕ್ಷಣ ಇಲಾಖೆಯ ವಿಜಯೀಭವ ಯುಟ್ಯೂಬ್ ಚಾನೆಲ್ ವತಿಯಿಂದ ವಿಶೇಷ ಯೋಗ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಭಾನುವಾರ ಏರ್ಪಡಿಸಲಾಗಿತ್ತು.

ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಹಾಗೂ ಯೂತ್ ಯೋಗ ಐಕಾನ್ ಮಧುಶ್ರೀ ಸಂದರ್ಶ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಅವರು ಉಪಸ್ಥಿತರಿದ್ದರು.

ಆರೋಗ್ಯ, ಶಾಂತಿ, ಸಂತೋಷ ಎಂಬ ಪರಕಲ್ಪನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಧುಶ್ರೀ ಅವರು, ದೇಹವನ್ನು ಸಡಿಲಗೊಳಿಸುವುದು ಹಾಗೂ ಸೂರ್ಯ ನಮಸ್ಕಾರ ಮಾಡುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರಲ್ಲದೆ ಯೋಗ ಮಾಡುವಾಗ ಉಸಿರಾಟ ಬಹಳ ಮುಖ್ಯವಾಗುತ್ತದೆ ಎಂದು ತಿಳಿಸಿದರು. ಇದರ ಜತೆಗೆ ತಾಡಾಸನ, ಪಾದ ಹಸ್ತಾಸನ, ತ್ರಿಕೋನಾಸನ, ಭುಜಂಗಾಸನವನ್ನು ಪ್ರದರ್ಶಿಸಿ ತದನಂತರ ಪ್ರಾಣಾಯಾಮ ಮಾಡಿ ಆದರ ಬಗ್ಗೆ ಸರಳವಾಗಿ ಮಾಹಿತಿ ನೀಡಿದರು. ಮಧುಶ್ರೀ ಅವರೊಂದಿಗೆ ವೆಂಕೇಶ್ ಪ್ರಸಾದ್ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಅವರು ಆಸನಗಳನ್ನು ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಮಣರೆಡ್ಡಿ ಅವರು, ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಯೋಗವು ಕೋವಿಡ್ ನಂತಹ ಬಿಕ್ಕಟ್ಟನ್ನು ಮಾನಸಿಕ ಹಾಗೂ ದೈಹಿಕವಾಗಿ ಎದುರಿಸಲು ಪ್ರತಿಯೊಬ್ಬರಿಗೂ ಶಕ್ತಿಯನ್ನು ನೀಡುತ್ತದೆ. ಇನ್ನು ಮುಂದೆ ನಾವೆಲ್ಲರೂ ಭಾರತೀಯ ಪರಂಪರೆಯಲ್ಲಿ ನಡೆದುಬಂದಿರುವ ಆರೋಗ್ಯ ಪದ್ಧತಿಗಳನ್ನೇ ಅನುಸರಿಸಿ ಉತ್ತಮ ಆರೋಗ್ಯ ಹೊಂದೋಣ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೂ ಮಾನಸಿಕ ಸ್ಥೈರ್ಯವನ್ನು ಮೂಡಿಸುತ್ತಿದ್ದೇವೆ. ನಮ್ಮ ಯುಟ್ಯೂಬ್ ಚಾನೆಲ್ ಪ್ರಸ್ತುಪಡಿಸುತ್ತಿರುವ ಈ ಕಾರ್ಯಕ್ರಮಲ್ಲಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆಂದು ಹೇಳಿದರು.

Related Articles

Comments (0)

Leave a Comment