ಪ್ರಧಾನಿ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್: 4 ಸಾವಿರ ಕೋಟಿ ಪ್ರಾಥಮಿಕ ಪರಿಹಾರಕ್ಕೆ ಬೇಡಿಕೆ ಇಟ್ಟ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ನಷ್ಟಗಳ ಕುರಿತು ರಾಜ್ಯ ಸರ್ಕಾರ ಪ್ರಧಾನಿ ಮೋದಿಗೆ ಮಾಹಿತಿ ನೀಡಿದೆ. ಪ್ರಾಥಮಿಕ ಹಂತವಾಗಿ 4 ಸಾವಿರ ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಿದೆ. ಅಲ್ಲದೆ, ಕೇಂದ್ರ ಸರ್ಕಾರದ ಮುಂದೆ ರಾಜ್ಯ ಸರ್ಕಾರ ಐದು ಬೇಡಿಕೆಗಳನ್ನು ಇಟ್ಟಿದೆ.

ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಕಳೆದ ವರ್ಷದ ಪ್ರವಾಹದಿಂದ ಚೇತರಿಸಿಕೊಳ್ಳದ ಜನರು ಈ ವರ್ಷವೂ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಗುಡ್ಡ ಕುಸಿತ, ಕಡಲ ಕೊರೆತ, ಬೆಳೆ ನಾಶದಿಂದ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಕೊರೋನಾ ಮಧ್ಯದಲ್ಲಿ ಸರ್ಕಾರ ಹೇಗೆ ಈ ಪರಿಸ್ಥಿತಿ ನಿಭಾಯಿಸುತ್ತದೆ ಅನ್ನೋ ಭಯದಲ್ಲಿ ಜನರಿದ್ದಾರೆ.

ನೆರೆ ಹಾವಳಿ ಸಂಬಂಧ ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿತು. ಸಿಎಂ ಬಿಎಸ್ವೈ ಅನುಪಸ್ಥಿತಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಯಿ, ಕಂದಾಯ ಸಚಿವ ಆರ್. ಅಶೋಕ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ರಾಜ್ಯದ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ್ರು. 56 ತಾಲ್ಲೂಕುಗಳು ಮಳೆಯಿಂದ ಹಾನಿಗೊಳಗಾಗಿವೆ. 885 ಗ್ರಾಮಗಳು ಪ್ರವಾಹ ಪೀಡಿತವಾಗಿವೆ. 3500 ಕಿ.ಮೀ.ರಸ್ತೆ ಹಾಳಾಗಿದೆ. 3 ಸಾವಿರ ಮನೆಗಳು, 250 ಸೇತುವೆಗಳು ಮಳೆಯಿಂದ ಹಾನಿಗೊಳಗಾಗಿವೆ. 85 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು ರಾಜ್ಯದಲ್ಲಿ 4 ಸಾವಿರ ಕೋಟಿ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ ಪರಿಸ್ಥಿತಿ ಅವಲೋಕನಕ್ಕೆ ಶೀಘ್ರವೇ ಕೇಂದ್ರದ ತಂಡವನ್ನು ರಾಜ್ಯಕ್ಕೆ ಕಳುಹಿಸಿಕೊಡಬೇಕು. ಪಶ್ಚಿಮ ಘಟ್ಟ ಮತ್ತು ಕೃಷ್ಣ ಜಲಾನಯನ ಪ್ರದೇಶಗಳಿಗೆ 2 ಅಧ್ಯಯನ ತಂಡಗಳನ್ನು ಕಳುಹಿಸಿಕೊಡಬೇಕು. ಕೂಡಲೇ ನೆರೆ ಪರಿಸ್ಥಿತಿ ಎದುರಿಸಲು ಮುಂಗಡ ಪರಿಹಾರ ನೀಡುವುದು, 4 ಎನ್ ಡಿಆರ್ ಎಫ್ ತಂಡಗಳನ್ನು ಕಳುಹಿಸಿಕೊಡುವುದು ಸೇರಿದಂತೆ 5 ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೇಂದ್ರದ ಮುಂದಿಟ್ಟಿದೆ. ಇನ್ನೂ ಕಳೆದ ವರ್ಷದ ನಷ್ಟಕ್ಕೆ ಪರಿಹಾರ ಕೊಡಿ ಅನ್ನೋ ಮನವಿಯನ್ನು ಕೇಂದ್ರದ ಮುಂದಿಟ್ಟಿದೆ.

ರಾಜ್ಯ ಸರ್ಕಾರ ಮಳೆ ಹಾನಿಯ ಮಾಹಿತಿಯನ್ನೇನೋ ಕೇಂದ್ರಕ್ಕೆ ನೀಡಿದೆ. ಆದ್ರೆ, ಕಳೆದ ಬಾರಿಯ ಪರಿಹಾರವನ್ನೆ ಕೇಂದ್ರ ಸರ್ಕಾರ ಇನ್ನೂ ನೀಡಿಲ್ಲ ಇನ್ನೂ ಈ ವರ್ಷದಪರಿಹಾರ ನೀಡೋದು ಯಾವಾಗ ಅನ್ನೋ ಪ್ರಶ್ನೆ ಉಧ್ಬವವಾಗಿದೆ.

Related Articles

Comments (0)

Leave a Comment