ತೈವಾನ್ ಕಂಪನಿಯಿಂದ ರಾಜ್ಯದಲ್ಲಿ 3000 ಕೋಟಿ ರೂ.ಹೂಡಿಕೆ: ಕನ್ನಡಿಗರಿಗೆ ಉದ್ಯೋಗ ನೀಡಲು ಒಪ್ಪಿದಲ್ಲಿ 7 ದಿನಗಳಲ್ಲಿ ಒಡಂಬಡಿಕೆಗೆ ಸಹಿ: ದೇಶಪಾಂಡೆ

ಬೆಂಗಳೂರು: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತೈವಾನ್ನಿನ ಮೆ: ವಿಸ್ಟ್ರನ್ ಟೆಕ್ನಾಲಜೀಸ್ ಕಂಪನಿ 3000 ಕೋಟಿ ರೂ.ಗಳ ಹೂಡಿಕೆಯನ್ನು ಮಾಡಲಿದೆ.

ಮೆ: ವಿಸ್ಟ್ರನ್ ಟೆಕ್ನಾಲಜೀಸ್ ಕಂಪನಿಯ ತಂಡವು ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿತು. ರಾಜ್ಯದಲ್ಲಿ ದೊಡ್ಡ ಮಟ್ಟದ ಹೂಡಿಕೆಯನ್ನು ಮಾಡಲು ನಿರ್ಧರಿಸಿರುವುದನ್ನು ಸ್ವಾಗತಿಸಿದ ಮುಖ್ಯಮಂತ್ರಿಗಳು, ಯೋಜನೆಯ ವಿಸ್ತರಣೆಗೆ ಅಗತ್ಯವಿರುವ ಸ್ಥಳದ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದರು. ಸಂಸ್ಥೆಗೆ ವಿಶೇಷ ಉತ್ತೇಜನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಮೊಬೈಲ್ ಫೋನ್ಗಳ ದುರಸ್ತಿ ಮತ್ತು ನವೀಕರಣ ತಂತ್ರಜ್ಞಾನಕ್ಕೂ ಹೆಚ್ಚಿನ ಬೇಡಿಕೆ ಇದೆ. ಚಿಕ್ಕಬಳ್ಳಾಪುರದಲ್ಲಿ ಈ ನಿಟ್ಟಿನಲ್ಲಿ ತರಬೇತಿ ವ್ಯವಸ್ಥೆ ಕಲ್ಪಿಸಲು ಸಂಸ್ಥೆ ಗಮನಹರಿಸಬಹುದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ನರಸಾಪುರದಲ್ಲಿ 43 ಎಕರೆ ಸ್ಥಳದಲ್ಲಿ ಪ್ರಾರಂಭವಾಗಲಿರುವ ಐಫೋನ್ ತಯಾರಕ ಕಂಪನಿಯು ರಾಷ್ಟ್ರದಲ್ಲಿಯೇ ಅತಿ ದೊಡ್ಡ ಯೋಜನೆಯಾಗಿದೆ. ಪ್ರಾರಂಭದಲ್ಲಿ 10500 ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯಲಿದೆ. ಕಂಪನಿಯ ವಿಸ್ತರಣೆಯನ್ನೂ ರಾಜ್ಯದಲ್ಲಿಯೇ ಮಾಡಲು ಉದ್ದೇಶಿಸಲಾಗಿದ್ದು. ಇದಕ್ಕಾಗಿ ಸ್ಥಳದ ಅವಶ್ಯಕತೆಯಿದೆ ಎಂದು ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಗುರುರಾಜ್ ತಿಳಿಸಿದರು.

ಕನ್ನಡದವರಿಗೆ ಉದ್ಯೋಗಾವಕಾಶ ನೀಡಲು ಒಪ್ಪಿದಲ್ಲಿ 7 ದಿನಗಳಲ್ಲಿ ಒಡಂಬಡಿಕೆಗೆ ಸಹಿಮಾಡಿಕೊಳ್ಳುವುದಾಗಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

Related Articles

Comments (0)

Leave a Comment